2018ರಲ್ಲಿ ಜೆಡಿಎಸ್ ರಾಜ್ಯಾದ್ಯಾದ್ಯಂತ ಗೆಲುವು ಸಾಧಿಸಲು ಸಾಧ್ಯವಾಗಿದ್ದು ಕೇವಲ 37 ಸ್ಥಾನಗಳನ್ನು ಮಾತ್ರ. ಅದರಲ್ಲಿ ಹುಣಸೂರಿನಿಂದ ಗೆಲುವು ಸಾಧಿಸಿದ್ದ ಹೆಚ್ ವಿಶ್ವನಾಥ್, ಮಹಾಲಕ್ಷ್ಮೀ ಲೇಔಟ್ನ ಕೆ. ಗೋಪಾಲಯ್ಯ, ಕೆ.ಆರ್ ಪೇಟೆ ಕ್ಷೇತ್ರದ ನಾರಾಯಣಗೌಡ ಆಪರೇಷನ್ ಕಮಲಕ್ಕೆ ಒಳಗಾದ ಬಳಿಕ ಇದೀಗ ಉಳಿದಿರುವುದು ಕೇವಲ 34 ಕೇತ್ರಗಳು ಮಾತ್ರ. ಅದರಲ್ಲಿ ತಮಕೂರು ಗ್ರಾಮಾಂತರ ಕ್ಷೇತ್ರವೂ ಒಂದು. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರ ಪುತ್ರ ಗೌರಿಶಂಕರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ 77,100 ಮತಗಳನ್ನು ಪಡೆದುಕೊಂಡರೆ, ಗೌರಿಶಂಕರ್ ಬರೋಬ್ಬರಿ 82,740 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಆದರೀಗ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುವ ಆಪತ್ತು ಎದುರಾಗಿದೆ.
ವಿಧಾನಸಭಾ ಚುನಾವಣೆ ಗೆಲುವಿಗಾಗಿ ಅಭ್ಯರ್ಥಿಗಳು ಸಾಕಷ್ಟು ಹಣವನ್ನು ನೀರಿನಂತೆ ಚೆಲ್ಲುತ್ತಾರೆ. ಸಾಕಷ್ಟು ರೀತಿಯಲ್ಲಿ ಜನರ ಮನಸ್ಸು ಗೆಲ್ಲುವ ಕಸರತ್ತು ಮಾಡುತ್ತಾರೆ. ಅದೇ ರೀತಿ ಗೌರಿಶಂಕರ್ ಕೂಡ ಜನರಿಗೆ ಆಮೀಷ ತೋರಿಸಿದ್ದಾರೆ ಎನ್ನುವ ಆರೋಪ ಎದುರಾಗಿದೆ. ಚುನಾವಣೆ ಗೆಲ್ಲುವುದಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಮಾಡಿಸಿಕೊಡುವ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಎದುರಾಗಿದೆ. ಆದರೆ ಇನ್ಶುರೆನ್ಸ್ ಮಾಡಿಸುವುದಾಗಿ ಮತ ಪಡೆದು ಆ ಬಳಿಕ ಜನರನ್ನೇ ಯಾಮಾರಿಸಿದ್ದಾರೆ ಎನ್ನುವ ದೂರು ದಾಖಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ J D S ಶಾಸಕ ಗೌರಿಶಂಕರ್ ವಿರುದ್ಧ ಪರಾಜಯಗೊಂಡಿದ್ದ ಸುರೇಶ್ ಗೌಡ ಅವರ ಸಹೋದರ ರಮೇಶ್ ಬೆಟ್ಟಯ್ಯ ಎಂಬುವರು ದೂರು ನೀಡಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು ಗ್ರಾಮಾಂತರ ಕ್ಷೇತ್ರದ ಮಕ್ಕಳಿಗೆ ಗ್ರೂಪ್ ಇನ್ಶುರೆನ್ಸ್ ಮಾಡಿಸುತ್ತೇನೆ ಎಂದು ತಿಳಿಸಿ, ನಕಲಿ ಇನ್ಶುರೆನ್ಸ್ ಮಾಡಿಸಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಜೊತೆಗೆ ರಮೇಶ್ ಬೆಟ್ಟಯ್ಯ ಮುಖ್ಯ ಚುನಾವಣಾ ಆಯುಕ್ತ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗೂ ದೂರು ಸಲ್ಲಿಸಿದ್ದರು. ಹೈಕೋರ್ಟ್ನಲ್ಲಿ ಪ್ರಕರಣ ಖುಲಾಸೆಯಾಗಿತ್ತು. ಅದೇ ಕೇಸ್ಗೆ ಹೊಸ ಜೀವ ಕೊಟ್ಟಿರುವ ರಮೇಶ್ ಬೆಟ್ಟಯ್ಯ, ಬಿಜೆಪಿ ಸರ್ಕಾರದಲ್ಲಿ ತನಿಖೆಗೆ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಇನ್ಶುರೆನ್ಸ್ ಮಾಡಿಸಿ ಒಂದೇ ವಾರದಲ್ಲಿ ಜನರಿಗೆ ಯಾಮಾರಿಸಿದ್ದಾರೆ. ಇನ್ಶುರೆನ್ಸ್ ಕಂಪನಿ ಜೊತೆ ಸೇರಿಕೊಂಡು ಈ ರೀತಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಗುಂಪು ವಿಮೆ ಪಾಲಿಸಿಗಳು ನಕಲಿಯಾಗಿವೆ. ಇವು ವಂಚನೆಯ ಉದ್ದೇಶ ಹೊಂದಿವೆ ಎಂದು ಆರೋಪಿಸಲಾಗಿದೆ. 50 ಶಾಲೆಗಳ 16,000 ಮಕ್ಕಳಿಗೆ ವಿಮೆ ಪಾಲಿಸಿ ಕೊಡುವಾಗ ಐಆರ್ಡಿಎಐ ಕಾಯ್ದೆ ಅನ್ವಯ ನಕಲಿಯಾಗಿವೆ ಎನ್ನಲಾಗಿದೆ. ಒಂದೇ ರೀತಿಯ ಪಾಲಿಸಿ ನಂಬರ್ ಹೊಂದಿವೆ. ಹಾಗಾಗಿ ಗುಂಪು ವಿಮೆಯನ್ನು ಎಆರ್ಡಿಎ ರದ್ದು ಮಾಡಿದೆ ಎನ್ನಲಾಗಿದೆ. ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ನಕಲಿ ಮಾಡಿ ವಿತರಿಸಿದ್ದಾರೆ ಎಂದು ದೂರಲಾಗಿದೆ.
ಪ್ರಕರಣದ ಕುರಿತು ಶಾಸಕರು ಹೇಳುವುದು ಏನು..?
ಚುನಾವಣಾ ಅಕ್ರಮದ ದೂರು ಈಗಾಗಲೇ ಹೈಕೋರ್ಟ್ನಲ್ಲಿ ರದ್ದಾಗಿದೆ. ಹೈಕೋರ್ಟ್ ತೀರ್ಪು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ದೂರುದಾರರಿಗೆ ಅವಕಾಶವಿತ್ತು. ಆದರೆ, ಇದೀಗ ಹೊಸದಾಗಿ ದೂರು ದಾಖಲಿಸಿರುವ ಉದ್ದೇಶ ಏನು ಎನ್ನುವುದು ಅರ್ಥವಾಗದ ವಿಚಾರವಾಗಿದೆ. ಗೌರಿಶಂಕರ್ ಹೇಳುವ ಪ್ರಕಾರ, “ನನಗೂ ಇನ್ಶುರೆನ್ಸ್ ಪಾಲಿಸಿ ಕೊಟ್ಟವರಿಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಬಿಟ್ಟು ಬೇರ್ಯಾವ ಉದ್ದೇಶವೂ ಇಲ್ಲ. ಈಗಾಗಲೇ ಹೈಕೋರ್ಟ್ನಲ್ಲಿ ಕೇಸ್ ಖುಲಾಸೆಯಾಗಿದೆ. ಆದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗ್ತಿದೆ. ಆದರೆ ನಾನು ಎಲ್ಲಾ ರೀತಿಯ ತನಿಖೆಗೂ ಸಿದ್ಧವಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸ್ವತಂತ್ರವಾಗಿ ತನಿಖೆ ನಡೆಯಲಿ, ಬಿಜೆಪಿಯವರು ಸುಳ್ಳು ಹೇಳಿಕೊಂಡೇ ದೇಶವನ್ನು ಆಳುತ್ತಿದ್ದಾರೆ, ಇದರಲ್ಲೂ ಇರುವುದು ಕೇವಲ ಸುಳ್ಳು. ಮಾಜಿ ಶಾಸಕರಿಗೆ ಜವಾಬ್ದಾರಿ ಇದ್ದಿದ್ದರೆ ಕೋವಿಡ್ 19 ಸಾಂಕ್ರಾಮಿಕಿ ಕಾಯಿಲೆ ವಿರುದ್ಧ ಕೆಲಸ ಮಾಡುತ್ತಿರುವ ನಮ್ಮ ಜೊತೆಗೆ ಕೈ ಜೋಡಿಸಬೇಕಿತ್ತು. ಆದರೆ ತಮ್ಮನ ಮೂಲಕ ಕೇಸ್ ಹಾಕಿಸಕೊಂಡು ಕ್ಷೇತ್ರದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಿದರೂ ನಾನು ಹೆದರುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.

ಒಂದು ವೇಳೆ ದಿ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳು ನಕಲಿ ಬಾಂಡ್ ಕೊಟ್ಟಿದ್ದರೆ ಅವರು ಅಪರಾಧ ಮಾಡಿದಂತಾಗುತ್ತದೆ. ಅವರಿಗೆ ಶಿಕ್ಷೆಯಾಗಲೇ ಬೇಕು. ಆದರೇ 16000 ಸಾವಿರ ಮಕ್ಕಳಿಗೆ ಒಂದೇ ಪಾಲಿಸಿ ಸಂಖ್ಯೆಯಲ್ಲಿ ಬಾಂಡ್ ಕೊಟ್ಟಿದ್ದಾರೆ ಎನ್ನುವುದು ಮಹಾ ಅಪರಾಧವೇನಲ್ಲ. ಒಂದು ಗುಂಪಿಗೆ ಪಾಲಿಸಿ ಮಾಡುವಾಗ ಒಂದೇ ಪಾಲಿಸಿ ಸಂಖ್ಯೆ ಇರುತ್ತದೆ ಎನ್ನುತ್ತಾರೆ ಹೆಲ್ತ್ ಇನ್ಶುರೆನ್ಸ್ ಏಜೆಂಟ್. ಶಾಸಕ ಗೌರಿಶಂಕರ್ ನಕಲಿ ಮಾಡಿ ಮತ ಪಡೆಯುವ ಹುನ್ನಾರ ಮಾಡಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಆರೋಪದ ಮೇಲೆ ಸಲ್ಲಿಕೆಯಾಗಿದ್ದ ದೂರು ಈಗಾಗಲೇ ಹೈಕೋರ್ಟ್ನಲ್ಲಿ ಸಾಬೀತಾಗಲು ವಿಫಲವಾಗಿದೆ. ಅದೂ ಅಲ್ಲದೆ ಒಬ್ಬ ಶಾಸಕನ ಮೇಲೆ ಆತನ ಶಾಸಕತ್ವ ಪ್ರಶ್ನಿಸಿ ಎದುರಾಳಿ ಅಭ್ಯರ್ಥಿ ಅಥವಾ ಕ್ಷೇತ್ರದ ಮತದಾರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಅದಕ್ಕೆ ಸೂಕ್ತ ಸಾಕ್ಷಿ ಕೊಡಬೇಕಿದೆ. ಆದರೆ ಸಾಕ್ಷಿಯಾಗಿ ಪೋಸ್ಟರ್ ಸಲ್ಲಿಕೆಯಾದರೆ ಅದನ್ನು ಕೋರ್ಟ್ ಒಪ್ಪುವ ಸಾಧ್ಯತೆ ತೀರಾ ಕಡಿಮೆ. ಪೋಸ್ಟರ್ ಯಾರು ಬೇಕಾದರೂ ಸೃಷ್ಟಿಸಬಹುದಾಗಿದೆ. ಹಾಗಾಗಿ ಶಾಸಕ ಗೌರಿಶಂಕರ್ಗೆ ಸಮಸ್ಯೆ ಆಗಲಾರದು ಎನ್ನುತ್ತಾರೆ ಕಾನೂನು ತಜ್ಞರು.
ಇದು ರಾಜಕೀಯ ಪ್ರೇರಿತ ಎನ್ನುವುದಕ್ಕೆ ಸಣ್ಣದೊಂದು ಅನುಮಾನ ಕಾಡುತ್ತಿದೆ. ಪ್ರಕರಣ ದಾಖಲಾಗಿದೆ ಎಂದು ಹೇಳಿದ ಬಳಿಕ ದೂರುದಾರ ರಮೇಶ್ ಬೆಟ್ಟಯ್ಯ ಇಲ್ಲೀವರೆಗೂ ಮಾಧ್ಯಮಗಳಿಗೆ ಸಿಕ್ಕಿಲ್ಲ. ಮಾಜಿ ಶಾಸಕ ಸುರೇಶ್ ಗೌಡ ಅವರನ್ನು ಪ್ರತಿಧ್ವನಿ ಡಾಟ್ ಕಾಂ ಕೂಡ ಸಂಪರ್ಕ ಮಾಡಿತ್ತು. ಅವರೂ ಕೂಡ ಸೂಕ್ತ ಮಾಹಿತಿ ಕೊಡದೆ ಜಾರಿಕೊಂಡರು. ಒಟ್ಟಾರೆ, ಮಂಡ್ಯ ರಾಜಕಾರಣದ ಬಳಿಕ ತುಮಕೂರಿನ ಗ್ರಾಮಾಂತರ ಕ್ಷೇತ್ರ ರಾಜಕೀಯ ರಣಾಂಗಣವಾಗುತ್ತಿದೆ ಎನ್ನುವುದು ಮಾತ್ರ ಸತ್ಯ.