ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕು ಸಾಗಿಸಲು ವಿವಿಧ ಹಕ್ಕುಗಳನ್ನು
ಸಂವಿಧಾನಾತ್ಮಕವಾಗಿ ನೀಡಲಾಗಿದೆ. ಈ ಮೂಲಭೂತ ಹಕ್ಕುಗಳಲ್ಲಿ ವ್ಯಕ್ತಿಯೊಬ್ಬನು
ಇತರರಿಗಿಂತ ಯಾವುದೇ ರೀತಿಯಲ್ಲೂ ಮೇಲಲ್ಲ ಅಥವ ಕೀಳಲ್ಲ ಎಂಬ ಸಮಾನತೆಯ ತತ್ವ ಸಿದ್ದಾಂತದಡಿ ಈ ಹಕ್ಕುಗಳನ್ನು ರೂಪಿಸಲಾಗಿದ್ದು ಈ ಹಕ್ಕುಗಳನ್ನು ಎತ್ತಿ ಹಿಡಿಯುವ ಸಂಬಂಧ ನೂರಾರು ಬಾರಿ ಈಗಿನ ಕಾಲಘಟ್ಟಕ್ಕೆ ಹೊಂದುವಂತೆ ಸಂವಿಧಾನದ ತಿದ್ದುಪಡಿಗಳನ್ನೂ ಮಾಡಿಕೊಂಡು ಬರಲಾಗಿದೆ. ಅದರೆ ನಮ್ಮ ಸಂವಿಧಾನದಲ್ಲಿ ವ್ಯಕ್ತಿಯೊಬ್ಬನ ಅರೋಗ್ಯದ ಹಕ್ಕನ್ನು ಮೂಲಭೂತ ಹಕ್ಕು ಎಂದು ಸೇರಿಸಲಾಗಿಲ್ಲ. ಇದೀಗ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಸಂವಿಧಾನದ 21 ನೇ ಪರಿಚ್ಚೇದದ ಪ್ರಕಾರ ಈ ಹಕ್ಕನ್ನೂ ಪ್ರಜೆಗಳಿಗೆ ನೀಡಲು ಸಾಧ್ಯವೂ ಇದೆ.
ದೇಶದಲ್ಲಿ ಕೋವಿಡ್ 19 ಸೋಂಕಿನ ಭೀತಿಯು ದಿನೇ ದಿನೇ ಪ್ರಬಲವಾಗುತ್ತಿರುವಂತೆಯೇ
ಹಕ್ಕುಗಳ ಹೋರಾಟಗಾರರು ಅರೋಗ್ಯದ ಹಕ್ಕನ್ನೂ ಕೂಡ ಮೂಲಭೂತ ಹಕ್ಕಿನಲ್ಲಿ
ಸೇರಿಸುವಂತೆ ಒತ್ತಾಯಿಸುತಿದ್ದಾರೆ. ದೇಶದ ನ್ಯಾಯಾಂಗವೇ ಇಂತಹ ಸಲಹೆಯನ್ನೂ
ನೀಡಿದ್ದು ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇಗೆ ಸ್ಪಂದಿಸುತ್ತವೆಯೋ ಕಾದು
ನೋಡಬೇಕಿದೆ.
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಏಡ್ಸ್ ರೋಗವು ತೀವ್ರವಾಗಿ ಭಾದಿಸುತಿದ್ದಾಗ
ಅಲ್ಲಿನ ಸರ್ಕಾರವು ನಾಗರಿಕರಿಗೆ ಅನೇಕ ನಿರ್ಭಂಧಗಳನ್ನು ಹೇರಿತು. ಆ ಸಮಯದಲ್ಲಿ ಈ ನಿರ್ಭಂದಗಳು ಜನರ ಆರೋಗ್ಯದ ಹಕ್ಕನ್ನು ಉಲ್ಲಂಘಿಸುತ್ತಿವೆ ಎಂದು ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋದವು. ಆಗ ಜನರ ಅರೋಗ್ಯದ ಹಿತದೃಷ್ಟಿಯಿಂದ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನವನ್ನು ನೀಡಿ ಗರ್ಭಿಣಿ ಮಹಿಳೆಯರಿಗೆ ಎಚ್ಐವಿ ಪೀಡಿತರಿಗೆ ಕೌನ್ಸೆಲಿಂಗ್ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಈ ಸೌಲಭ್ಯಗಳನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಾದ್ಯಂತ ಲಭ್ಯಗೊಳಿಸಬೇಕಾಗಿದೆ ಎಂದು ನ್ಯಾಯಾಲಯವು ಆದೇಶಿಸಿತ್ತು.
ಈ ಹಿಂದೆ ಯೇ ನಮ್ಮ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಸಾಂವಿಧಾನಿಕ
ಪೀಠವು ಸಲಿಂಗಕಾಮವನ್ನು ಕಾನೂನುಬದ್ದಗೊಳಿಸಿದಾಗ ನೀಡಿರುವ ತೀರ್ಪಿನಲ್ಲಿ ಸಂವಿಧಾನದ 21 ನೇ ವಿಧಿಯು ಆರೋಗ್ಯದ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ. ಅಲ್ಲದೆ ಸರ್ಕಾರಗಳು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡದೆ ಕಾರ್ಯನಿರ್ವಹಿಸಲು ಸಾದ್ಯವಾಗುವ ಕುರಿತೂ ಪರಿಶೀಲನೆಗೆ ಅವಕಾಶವಿದೆ. ಅಲ್ಲದೆ ಆರೋಗ್ಯದ ಹಕ್ಕನ್ನು ಪ್ರಜೆಗಳಿಗೆ ನೀಡುವ ಕುರಿತು ಸಂಪನ್ಮೂಲಗಳನ್ನು ಒದಗಿಸಲು ಅಥವಾ ಚಿಕಿತ್ಸಾ ಸೌಲಭ್ಯಗಳಿಗೆ ಪ್ರವೇಶವನ್ನು ನೀಡುವ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಕ್ಕೆ ಸಕಾರಾತ್ಮಕ ಕಟ್ಟುಪಾಡುಗಳನ್ನು ವಿಧಿಸುವ ಅಧಿಕಾರವೂ ಈ ನ್ಯಾಯಾಲಯಕ್ಕೆ ಇದೆ ಎಂದೇ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಇದಲ್ಲದೆ, ವೈದ್ಯಕೀಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲು ಆರ್ಥಿಕ ಕೊರತೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ರಾಜ್ಯದ ಸಾಂವಿಧಾನಿಕ ಬಾಧ್ಯತೆಯಾಗಿರುವುದರಿಂದ, ಈ ನಿಟ್ಟಿನಲ್ಲಿ ಅಗತ್ಯವಾದದ್ದನ್ನು ಮಾಡಬೇಕಾಗಿದೆ. ಕೋವಿಡ್ 19 ನ ಪ್ರಕರಣಗಳನ್ನು ಎದುರಿಸಲು ಹೆಚ್ಚು ವೈರಸ್ ಪ್ರಯೋಗಾಲಯಗಳು ಮತ್ತು ಸಂಪರ್ಕ ತಡೆಯ ಕೇಂದ್ರಗಳು ಸೋಂಕಿತರಿಗೆ ಲಭ್ಯವಾಗುವಂತೆ ಮಾಡಲು ಕಳೆದ ಸೋಮವಾರ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಕೋರ್ಟಿನ ನಿರ್ದೇಶನಕ್ಕೆ ಸರ್ಕಾರವು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಆರೋಗ್ಯದ ಹಕ್ಕನ್ನು ನ್ಯಾಯಾಲಯವು ಸಾಂವಿಧಾನಾತ್ಮಕವಾಗಿಯೇ ಪ್ರತಿಪಾದಿಸಲು ಅವಕಾಶವಿದೆ.
ದೇಶಾದ್ಯಂತ ಸರ್ಕಾರವು ಕೋವಿಡ್ 19 ಪರೀಕ್ಷಾ ಸಾಮರ್ಥ್ಯವನ್ನು ಗಮನಾರ್ಹವಾಗಿ
ಹೆಚ್ಚಿಸುತ್ತಿದ್ದರೂ, ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಅರ್ಹತೆಯ ಮಾನದಂಡಗಳು
ಇನ್ನೂ ಕೂಡ ಬಹಳ ನಿರ್ಬಂಧಿತವಾಗಿವೆ. ಪರೀಕ್ಷೆಗೆ ಅರ್ಹರಾಗಲು, ಒಬ್ಬ ವ್ಯಕ್ತಿಯು
ಈ ಕೆಳಗಿನವುಗಳನ್ನು ಹೊಂದಿರಬೇಕು: (ಎ) ವಿದೇಶದಿಂದ ಮರಳಿದ ಅಥವಾ ಕೋವಿಡ್
ಸಕಾರಾತ್ಮಕ ರೋಗಿಯೊಂದಿಗೆ ಸಂಪರ್ಕದಲ್ಲಿದ್ದರೆ ಮತ್ತು (ಬಿ) ರೋಗದ ಲಕ್ಷಣಗಳನ್ನು
ಹೊಂದಿರಬೇಕು . ಭಾರತವು ಪ್ರಸ್ತುತ ಸಮುದಾಯ ಹರಡುವಿಕೆಯ ಹಂತದಲ್ಲಿದೆ
ಎಂದು ವ್ಯಾಪಕವಾಗಿ ಹೇಳಲಾಗುತ್ತಿದೆ. ಆದ್ದರಿಂದ ಪರೀಕ್ಷೆಯನ್ನು ನಡೆಸಲು ರೋಗ
ಲಕ್ಷಣಗಳನ್ನು ಹೊಂದಿದ್ದರೆ ಸಾಕಾಗುತ್ತದೆಯೇ? ಆದ್ದರಿಂದ, ಈ ನಿರ್ಬಂಧಿತ ಪರೀಕ್ಷಾ
ಮಾನದಂಡಗಳು ಆರೋಗ್ಯದ ದೃಷ್ಟಿಕೋನದಿಂದ ಶಂಕಾಸ್ಪದವಾಗಿ ಕಂಡುಬರುತ್ತವೆ.
ಅಲ್ಲದೆ ಕೋವಿಡ್ 19 ಪರೀಕ್ಷೆಗಳನ್ನು ನಡೆಸಲು 4,500 ರೂ.ಗಳ ಮೇಲಿನ ಮಿತಿಯನ್ನು
ವಿಧಿಸಲಾಗಿದೆ ಎಂದು ಅದು ಉಲ್ಲೇಖಿಸುತ್ತದೆ. ದೆಹಲಿ ಹೈಕೋರ್ಟ್ ಹೇಳಿದಂತೆ, ಯಾರಾದರೂ ಬಡವರಾಗಿರುವುದರಿಂದ ಸರ್ಕಾರವು ಅವನನ್ನು ಸಾಯಲು ಬಿಡುವುದಿಲ್ಲ ಏಕೆಂದರೆ ದೇಶದಲ್ಲಿ ಅರೋಗ್ಯವು ಮೂಲಭೂತ ಅವಶ್ಯಕತೆ ಆಗಿದ್ದು ಐಷಾರಾಮಿ ಅಲ್ಲ. ಆರೋಗ್ಯವು ಸವಲತ್ತು ಪಡೆದ ಕೆಲವರ ಏಕೈಕ ಸ್ವಾಮ್ಯವಾಗಿರಬಾರದು. ಇದರ ಪರಿಣಾಮವಾಗಿ, ಈ ಬೆಲೆಯು ಎಷ್ಟರ ಮಟ್ಟಿಗೆ ಸಮಂಜಸವಾಗಿದೆ ಎಂಬುದನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ, ಮತ್ತು ಸಾಮಾನ್ಯ ವ್ಯಕ್ತಿಯೊಬ್ಬ ಕೋವಿಡ್ 19 ಪರೀಕ್ಷೆಗಳನ್ನು ಮಾಡಿಸಲು ಈ ದರವು ಅಡ್ಡಿಯಾಗುತ್ತಿದೆ ಎಂದು ಕಂಡು ಬಂದಲ್ಲಿ ಕೋರ್ಟುಗಳು ಸರ್ಕಾರಕ್ಕೆ ಸೂಕ್ತ ನಿರ್ದೇಶನವನ್ನು ನೀಡಲು ಅವಕಾಶವಿದೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ, ಎರಡು ಮೂಲಭೂತ ಹಕ್ಕುಗಳ ನಡುವೆ ಸಂಘರ್ಷ ಉಂಟಾಗಿದೆ. ಅವೆಂದರೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಮತ್ತು ಆರೋಗ್ಯದ ಹಕ್ಕು. ಇತ್ತೀಚಿನ ಕೋರ್ಟುಗಳ ತೀರ್ಪಿನಲ್ಲಿ, ಅಂತಹ ಸಂದರ್ಭಗಳಲ್ಲಿ ಪ್ರಮಾಣಾನುಗುಣ ವಿಶ್ಲೇಷಣೆಯನ್ನು ಅನ್ವಯಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದಕ್ಕೆ ಮೂಲಭೂತವಾಗಿ ಎರಡು ಹಕ್ಕುಗಳನ್ನು ಸಮತೋಲನದ ದೃಷ್ಟಿಯಿಂದ ನೀಡಬೇಕಾಗಿದೆ. ಈ ಎರಡೂ ಹಕ್ಕುಗಳು ಕನಿಷ್ಠ ಪ್ರಮಾಣದ ಉಲ್ಲಂಘನೆಯನ್ನು ಹೊಂದಿರಬೇಕಾಗುತ್ತದೆ.
ಈ ಸಂದರ್ಭದಲ್ಲಿ ಕೋವಿಡ್ 19 ಶಂಕಿತ ಸೋಂಕಿತರನ್ನು ಪ್ರತ್ಯೇಕವಾಗಿ ಸಂಪರ್ಕ
ತಡೆಯಂತಹ ವಾರ್ಡ್ ಗಳಲ್ಲಿ ಇರಿಸುವುದು ಸೂಕ್ತವಾದ ಸೋಂಕು ಹರಡದಂತೆ ತಡೆಗಟ್ಟುವ ನಿವಾರಣೋಪಾಯವಾಗಿದೆ. ಇದರಿಂದಾಗಿ ಸೋಂಕು ಶಂಕಿತರ ಕುಟುಂಬದವರು, ನೆರೆ ಹೊರೆಯವರೂ ಸೋಂಕಿನಿಂದ ರಕ್ಷಿಸಿಕೊಳ್ಳಬಹುದಾಗಿದೆ. ಅಲ್ಲದೆ ಜನರು ಮನೆಗಳಿಂದ ಹೊರ ಬಾರದಂತೆ ಸಂಪೂರ್ಣ ಲಾಕ್ ಔಟ್ ಘೋಷಿಸಲಾಗಿದೆ ಇದರಿಂದಾಗಿ ವ್ಯಕ್ತಿಯೊಬ್ಬನ ಆರೋಗ್ಯದ ಅಥವಾ ಮೂಲಭೂತ ಹಕ್ಕಿಗೆ ಧಕ್ಕೆ ಆಗುವುದಿಲ್ಲ. ಆದರೆ ಈ ಲಾಕ್ ಔಟ್ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಅಡೆತಡೆಯಿಲ್ಲದೆ ಪೂರೈಸಲು ವಿನಾಯಿತಿಗಳನ್ನು ನೀಡುವುದು ನಿರ್ಣಾಯಕವಾದರೂ, ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಸರಬರಾಜು ಮಾಡುವ ಮತ್ತು ಖರೀದಿಸುವ ವ್ಯಕ್ತಿಗಳ ವಿರುದ್ಧ ಪೋಲೀಸರು ತೆಗೆದುಕೊಂಡಿರುವ ಕಾನೂನು ಕ್ರಮವು ಅಸಾಂವಿಧಾನಿಕವಾಗಿ ಕಂಡುಬರುತ್ತದೆ.
ಮೇಲಿನ ವಿಶ್ಲೇಷಣೆಯು ಸ್ಪಷ್ಟಪಡಿಸಿದಂತೆ, ಭಾರತವು ಆರೋಗ್ಯದ ಹಕ್ಕನ್ನು
ಸಾಂವಿಧಾನಿಕವಾಗಿ ಖಾತರಿಪಡಿಸುವ ರಾಷ್ಟ್ರವಾಗಿರುವುದರಿಂದ, ಈ ಬಿಕ್ಕಟ್ಟಿಗೆ ದೃಢವಾದ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಂವಿಧಾನಿಕವಾಗಿ ಬಾಧ್ಯವಾಗಿವೆ. ಈ ದಿಸೆಯಲ್ಲಿ ಇನ್ನೂ ಹೆಚ್ಚಿನ
ಚರ್ಚೆಗಳು ಉನ್ನತ ಮಟ್ಟದಲ್ಲಿ ನಡೆಯಬೇಕಿದೆ. ಈಗ ಜಗತ್ತನ್ನೇ ಭೀತಿಯಲ್ಲಿರಿಸಿರುವ
ಕೋವಿಡ್ 19 ಸೋಂಕಿನ ಕಾರಣದಿಂದಾಗಿ ಜನರ ಆರೋಗ್ಯದ ಹಕ್ಕನ್ನು ಜಾರಿಗೊಳಿಸುವ ಅವಶ್ಯಕತೆ ಹೆಚ್ಚಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.