ಸಂಸದೀಯ ಪಟುಗಳು ವಿಧಾನಸಭೆಯಲ್ಲಿ ಮಾಡಿದ ಮಹತ್ವದ ಭಾಷಣಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದು ಹೊಸದೇನಲ್ಲ. ಆದರೆ ಅಂತಹ ಕೃತಿಗಳು ಎರಡನೇ ಮುದ್ರಣ ಕಾಣುವುದು ಅಪರೂಪ. ಭಾರೀ ಪ್ರಚಾರ ಪಡೆದ ಪುಸ್ತಕಗಳೂ ಎರಡನೇ ಮುದ್ರಣ ಕಾಣಲು ಹರಸಾಹಸ ಪಡಬೇಕಾದ ಇಂದಿನ ಕಾಲದಲ್ಲಿ, ನಾನು ಸಂಪಾದಿಸಿರುವ ಹಾಗೂ ಅಭಿರುಚಿ ಪ್ರಕಾಶನ ಪ್ರಕಟಿಸಿರುವ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿ ಎರಡನೇ ಮುದ್ರಣ ಕಾಣುತ್ತಿದೆ.

ಸಿಪಿಐ(ಎಂ) ಶಾಸಕರಾಗಿ ಶ್ರೀರಾಮರೆಡ್ಡಿಯವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳು ಕೇವಲ ಅಂದಿನ ರಾಜಕೀಯ ಸಂದರ್ಭಗಳಿಗೆ ಸೀಮಿತವಾಗಿರಲಿಲ್ಲ. ಜನಸಾಮಾನ್ಯರ ಬದುಕು, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಜನಪರ ಆಡಳಿತಕ್ಕೆ ಸಂಬಂಧಿಸಿದ ಅವರ ಪ್ರಶ್ನೆಗಳು ಹಾಗೂ ವಿಚಾರಗಳು ಸಾರ್ವಕಾಲಿಕ ಮಹತ್ವವನ್ನು ಹೊಂದಿವೆ. ಅದಕ್ಕಾಗಿಯೇ ಮೂರು ದಶಕಗಳ ಹಿಂದೆ ವಿಧಾನಸಭೆಯಲ್ಲಿ ಅವರು ಮಾಡಿದ ಭಾಷಣಗಳನ್ನು ಇಂದಿಗೂ ಓದುಗರು ಆಸಕ್ತಿಯಿಂದ ಓದುತ್ತಿದ್ದಾರೆ.

ವಾರದ ಹಿಂದೆ ನಡೆದ ಭಾಷಣವೂ ಇಂದು ಅಪ್ರಸ್ತುತವೆನಿಸುವ ವೇಗದ ರಾಜಕೀಯ ಕಾಲಘಟ್ಟದಲ್ಲಿ, ಮೂರು ದಶಕಗಳ ಹಿಂದಿನ ವಿಧಾನಸಭಾ ಭಾಷಣಗಳು ಇಂದಿಗೂ ಓದಿಸಿಕೊಳ್ಳುತ್ತಿವೆ ಎಂಬುದೇ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ಪ್ರಸ್ತುತತೆಯನ್ನು ಹೇಳುತ್ತದೆ.
ಈ ಕೃತಿಯನ್ನು ಓದುಗರಿಗೆ ತಲುಪಿಸಿ, ಎರಡನೇ ಮುದ್ರಣದ ಹಂತಕ್ಕೆ ಕೊಂಡೊಯ್ದ ಓದುಗ ಬಳಗಕ್ಕೆ ಹೃದಯ ತುಂಬಿದ ಕೃತಜ್ಞತೆಗಳು. ಪುಸ್ತಕವನ್ನು ಕೇವಲ ಪ್ರಕಟಿಸುವುದಷ್ಟೇ ಅಲ್ಲದೆ, ಅದನ್ನು ಆಕರ್ಷಕವಾಗಿ ರೂಪಿಸಿ ಓದುಗರ ನಡುವೆ ಕೊಂಡೊಯ್ಯುತ್ತಿರುವ ಅಭಿರುಚಿ ಪ್ರಕಾಶನದ ಗಣೇಶ್ ಅವರಿಗೆ ವಿಶೇಷ ಧನ್ಯವಾದಗಳು.

ಈ ಕೃತಿಯ ಎರಡನೇ ಮುದ್ರಣ ನನಗೆ ವೈಯಕ್ತಿಕವಾಗಿ ಒಂದು ಸಂತೋಷದ ಕ್ಷಣ ಮಾತ್ರವಲ್ಲ, ಜನಪರ ರಾಜಕಾರಣದ ದಾಖಲೆಗಳಿಗೆ ಇಂದಿಗೂ ಓದುಗರಲ್ಲಿ ಇರುವ ಜೀವಂತ ಆಸಕ್ತಿಯ ಸಾಕ್ಷಿಯೂ ಹೌದು.
-ನವೀನ್ ಸೂರಿಂಜೆ






