ಪರಿಷತ್ ಚುನಾವಣೆಯ ಅಡ್ಡಮತದಾನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್, ಜೂನ್ 25ರೊಳಗೆ ಸಂಪೂರ್ಣ ವರದಿ ನೀಡಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಇನ್ನು, ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸುತ್ತಿದೆಯಾದರೂ, ಅಡ್ಡ ಮತದಾನ ಮಾಡಿದವರ ಹೆಸರು ಹೇಳುವುದು ಕಷ್ಟ ಎನ್ನಲಾಗಿದೆ.

ಬಿಜೆಪಿ ಶಾಸಕರಿಂದ ಅಡ್ಡಮತದಾನ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ದೆಹಲಿಗೆ ಬರಮಾಡಿಕೊಂಡಿದ್ದ ಹೈಕಮಾಂಡ್ ಸೂಚನೆಯೊಂದನ್ನು ನೀಡಿದೆ. ಕ್ರಾಸ್ ವೋಟಿಂಗ್ ಸಂಬಂಧ ಜೂನ್ 25ರ ಒಳಗೆ ಸಂಪೂರ್ಣ ವರದಿ ನೀಡಲು ಸಿ.ಟಿ.ರವಿ ಸಮಿತಿಗೆ ಸೂಚಿಸಿದ್ದು, ಈ ಕುರಿತು ಅಶೋಕ್ ಮತ್ತು ವಿಜಯೇಂದ್ರ ಅವರಿಗೆ ಬಿಜೆಪಿ ರಾಷ್ಟ್ರ ಅಧ್ಯಕ್ಷ ನಿತಿನ್ ನಬಿನ್ ವಿಷಯ ಮುಟ್ಟಿಸಿದ್ದಾರೆ.

ಅಂದಹಾಗೆ, ಆ ವರದಿಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ಹೆಸರು ಸಮೇತ ಮಾಹಿತಿ ನೀಡುವ ಜೊತೆಗೆ ಕ್ರಾಸ್ ವೋಟಿಂಗ್ ಮಾಡಿದ ಕಾರಣವನ್ನೂ ವಿವರವಾಗಿ ನೀಡುವಂತೆ ನಿತಿನ್ ನಬಿನ್ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.

ಮತ್ತೊಂದೆಡೆ ಸಾಂದರ್ಭಿಕ ಸಾಕ್ಷಿ ಮತ್ತು ಹೇಳಿಕೆ ಪರಾಮರ್ಶಿಸಿ ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸಲಿದ್ದು, ದೆಹಲಿಯಿಂದ ಸೂಚನೆ ಬಂದರೆ ಇಂದೇ ಪ್ರಾಥಮಿಕ ಮಾಹಿತಿ ರವಾನೆ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿವೈ ವಿಜಯೇಂದ್ರ ದೆಹಲಿಯಿಂದ ಹಿಂತಿರುಗಿದ ಬಳಿಕ ವರದಿ ಸಲ್ಲಿಕೆಯಾಗಲಿದೆ. ನಡೆಯಲಿದೆ. ಆದರೆ ಅಡ್ಡ ಮತದಾನ ಮಾಡಿದವರ ಹೆಸರು ಉಲ್ಲೇಖ ಮಾಡುವುದು ಕಷ್ಟ. ಆದರೂ ಬಹುತೇಕ ಎಲ್ಲಾ ಶಾಸಕರನ್ನು ದೂರವಾಣಿ ಮೂಲಕ ಅದಾಗಲೇ ಸಮಿತಿ ಸಂಪರ್ಕಿಸಿದೆ. ಜೂನ್ 25ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಈ ಹಿಂದೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದರು.

ಈ ಮಧ್ಯೆ, ಕೆಲ ನಾಯಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದಲೂ ಬಿಜೆಪಿ ಹಿಂದೆ ಸರಿದಿದೆ. ಎಂಎಲ್ಸಿ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಧರ್ಮಸ್ಥಳವನ್ನು ರಾಜಕೀಯ ಕ್ಷೇತ್ರ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದಿದ್ದಾರೆ.






