ಲಕ್ನೋ: ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ರೂಪದಲ್ಲಿ ಬಂದ ಹಣ ನಾಪತ್ತೆ ಪ್ರಕರಣದ ತನಿಖೆ ತೀವ್ರ ಚುರುಕುಗೊಂಡಿದ್ದು, ರಾಮಮಂದಿರ ಟ್ರಸ್ಟ್ನ ಕೆಲ ನೌಕರರು ಹಾಗೂ ಹಣದ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದವರು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಬಲವಾಗುತ್ತಿದೆ.

ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಪ್ರಕರಣದ ಪ್ರಮುಖ ಶಂಕಿತರ ನಿವಾಸದಿಂದ ಪೊಲೀಸರು ಕೋಟಿ ಕೋಟಿ ನಗದು ವಶ ಪಡಿಸಿಕೊಳ್ಳುತ್ತಿದ್ದು, ಅಯೋಧ್ಯೆಯ ರುಡೌಲಿ ಪ್ರದೇಶದ ದೇವಾಲಯದ ಉದ್ಯೋಗಿಯೊಬ್ಬರ ನಿವಾಸದಿಂದ ಪೊಲೀಸರು 10 ಲಕ್ಷದಿಂದ 12 ಲಕ್ಷ ರೂಪಾಯಿ ವರೆಗಿನ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣ ಸಂಬಂಧ 50ಕ್ಕೂ ನೌಕರರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಈ ನೌಕರರು ಅತ್ಯಂತ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಸಂಪತ್ತು ಗಳಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ದುರುಪಯೋಗವಾದ ಕಾಣಿಕೆ ಹಣದ ಮೌಲ್ಯ ₹200 ಕೋಟಿಯಷ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ಇಲ್ಲಿಯವರೆಗೆ ಐವರು ಶಂಕಿತ ಆರೋಪಿಗಳ ಬಳಿಯಿಂದ ಬರೋಬ್ಬರಿ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರಕರಣದ ಪ್ರಮುಖ ಶಂಕಿತರಲ್ಲಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಒಬ್ಬರಾಗಿದ್ದು, ಇವರು ರಾಮಮಂದಿರ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಯ್ ಅವರ ಕಾರಿನ ಚಾಲಕ ಎಂದು ಹೇಳಲಾಗಿದೆ. ಅವರು ಕಡಿಮೆ ಅವಧಿಯಲ್ಲಿ 50 ಕೋಟಿಯಷ್ಟು ಸಂಪತ್ತು ಗಳಿಸಿದ್ದಾರೆ ಎನ್ನುವ ಆರೋಪ ಜೋರಾಗಿದೆ.
ದೇಣಿಗೆ ಹಣ ನಾಪತ್ತೆಗೆ ಟಿನ್ನು ಯಾದವ್ ಹಾಗೂ ಚಂಪತ್ ರಾಯ್ ಅವರೇ ಕಾರಣ ಅವರನ್ನು ಕೂಡಲೇ ಟ್ರಸ್ಟ್ನಿಂದ ವಜಾ ಮಾಡುವಂತೆ ಅನೇಕರು ಆಗ್ರಹಿಸಿದ್ದಾರೆ. ಸದ್ಯ ಪ್ರಕರಣದ ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡವು ಅಯೋಧ್ಯೆಯಲ್ಲಿ ತನಿಖೆ ತೀವ್ರಗೊಳಿಸಿದೆ.







