ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆಗೆ ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಈಗಾಗಲೇ ಇದೇ ಸಭೆಗಾಗಿ ಹೈಕಮಾಂಡ್ ಕರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿದ್ದಾರೆ.

ಹೀಗಾಗಿ ಇಂದು ಇಂದಿರಾಭವನದಲ್ಲಿ ಸಿದ್ದರಾಮಯ್ಯ ಹೈವೋಲ್ಟೇಜ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಮೀಟಿಂಗ್ನಲ್ಲಿ ಉಪಸ್ಥಿತರಿದ್ದಾರೆ.
ಪ್ರಮುಖವಾಗಿ ನಾಯಕತ್ವ ಬದಲಾವಣೆಯ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆಯಿದ್ದು, ಅದರಂತೆ ರಾಜ್ಯಸಭಾ ಸ್ಥಾನಗಳ ಹಂಚಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತೂ ಮಾತುಕತೆ ನಡೆಯಲಿದೆ. ಒಟ್ಟು ಮೂರು ಸುತ್ತಿನ ಸಭೆಗಳು ನಡೆಯುವ ಸಾಧ್ಯತೆಯಿದ್ದು, ಮೊದಲು ಸಿದ್ದರಾಮಯ್ಯ, ಎರಡನೇ ಸಭೆಯಲ್ಲಿ ಡಿಕೆ ಶಿವಕುಮಾರ್ ಜೊತೆ ನಂತರ ಇಬ್ಬರ ಜೊತೆಯೂ ನೇರಾ ನೇರ ಮಾತುಕತೆ ನಡೆಸಲು ವರಿಷ್ಠರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್ಐಆರ್
ಹೀಗಾಗಿ ಪಟ್ಟದ ಪಗಡೆಯಾಟ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ವಿಚಾರ ಚರ್ಚೆಯಲ್ಲಿತ್ತು. ಆದರೆ ಅಂತಿಮವಾಗಿ ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆಯಿದೆ. ಸಭೆಯಲ್ಲಿ ಇಬ್ಬರೂ ನಾಯಕರು ತಪ್ಪದೇ ಆದ ಪ್ರತ್ಯೇಕ ದಾಳಗಳನ್ನು ಉರುಳಿಸಲು ಸಿದ್ದವಾಗಿದ್ದಾರೆ, ಅದೇ ದಾಳಗಳನ್ನು ಸಭೆಯಲ್ಲಿ ಪಕ್ಷದ ನಾಯಕರ ಮುಂದೆ ಇಡಲು ತೀರ್ಮಾನಿಸಿದ್ದಾರೆ.
ಸಿದ್ದರಾಮಯ್ಯ ದೆಹಲಿಗೆ ಹೋಗುವಾಗಲೇ ತಮ್ಮ ಆಪ್ತ ಸಚಿವ ಹಾಗೂ ಶಾಸಕರೊಂದಿಗೆ ತೆರಳಿದ್ದಾರೆ. ಯಾವುದೇ ಸಮಯದಲ್ಲಿ ಎಂತದ್ದೇ ನಿರ್ಧಾರ ಬಂದರೂ ಎಲ್ಲದಕ್ಕೂ ಸಿದ್ದವಾಗಿರುವ ನಿಟ್ಟಿನಲ್ಲಿ ತಮ್ಮ ದಂಡು ಹಿಂಡನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲದೆ ಸಚಿವಾಕಾಂಕ್ಷಿ ಶಾಸಕರು ಸಹ ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗುವ ನಿರೀಕ್ಷೆಯಲ್ಲಿ ಶಾಸಕರಿದ್ದಾರೆ. ಸಿದ್ದರಾಮಯ್ಯ ಕೂಡ ಕೇವಲ ಒಂದೇ ಒಂದು ಅಜೆಂಡಾವನ್ನು ಸಭೆಯಲ್ಲಿ ಪ್ರಾಥಮಿಕವಾಗಿ ಮಂಡಿಸಲಿದ್ದಾರೆ. ಸಚಿವ ಸಂಪುಟದ ವಿಚಾರದಲ್ಲಿ ಗಟ್ಟಿ ನಿಲುವು ತಾಳುವಂತೆ ಮನವರಿಕೆ ಮಾಡಿಕೊಡಲಿದ್ದಾರೆ. ಇದು ಸಾಧ್ಯವಾಗದೇ ಇದ್ದರೆ ನಾಯಕತ್ವದ ಬದಲಾವಣೆಯ ಬಗ್ಗೆ ಒತ್ತಡ ಬಂದರೆ ಎಲ್ಲ ರೀತಿಯ ತಮ್ಮ ಪ್ಲ್ಯಾನ್ಗಳನ್ನು ಒಂದೊಂದಾಗಿ ಬಿಚ್ಚಿಡಲಿದ್ದಾರೆ ಎನ್ನಲಾಗಿದೆ.






