ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಇತ್ತೀಚೆಗೆ ನೀಡಿದ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣದ ಪೋಸ್ಟ್ಗಳ ಹಿನ್ನೆಲೆಯಲ್ಲಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಡಾ. ರಾಜ್ಕುಮಾರ್ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳು ಚೇತನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿವೆ. ಆದರೆ ಈ ಬೇಡಿಕೆಗೆ ಚೇತನ್ ಮಣಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಚೇತನ್ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದು, ನಿರ್ಮಾಪಕ ಸಾ.ರಾ. ಗೋವಿಂದು, ಅಖಿಲ ಕರ್ನಾಟಕ ರಾಜ್ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಸೇರಿದಂತೆ ಹಲವು ಗಣ್ಯರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ವಿರುದ್ಧ ಟೀಕೆಗಳು ಹೆಚ್ಚಾಗಿವೆ.ಈ ನಡುವೆ, ಎರಡು ವರ್ಷಗಳ ಹಿಂದೆ ಚೇತನ್ ನೀಡಿದ್ದ ಹಳೆಯ ಸಂದರ್ಶನದ ಹೇಳಿಕೆಗಳು ಮತ್ತೆ ವೈರಲ್ ಆಗಿವೆ. ‘ಮಸ್ತ್ ಮಗಾ’ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನದ ಬಗ್ಗೆ ಮಾತನಾಡಿದ ಅವರು, “ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಅಲ್ಲ, ಪಕ್ಕದ ರಾಷ್ಟ್ರ” ಎಂದು ಹೇಳಿದ್ದರು.

“’ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ದೇಶದ್ರೋಹ ಎಂದು ಪರಿಗಣಿಸಲಾಗುವುದಿಲ್ಲ” ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಈ ಹೇಳಿಕೆಗಳು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿವೆ.ಇತ್ತೀಚೆಗೆ, ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಸ್ಮಾರಕ ಕುರಿತು ಚೇತನ್ ಮಾಡಿದ್ದ ಪೋಸ್ಟ್ ಕೂಡ ತೀವ್ರ ವಿವಾದ ಹುಟ್ಟಿಸಿದೆ. “ರಾಜ್ಕುಮಾರ್ ಮಹಾನ್ ಕಲಾವಿದರಾದರೂ, 2006ರಲ್ಲಿ ಸ್ಮಾರಕಕ್ಕಾಗಿ ನೀಡಿದ ಭೂಮಿ ನಿರ್ಧಾರವನ್ನು ಪ್ರಶ್ನಿಸಬೇಕಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದರು. ಈ ಹೇಳಿಕೆ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಚೇತನ್ ಅಹಿಂಸಾ ಅವರ ಹೇಳಿಕೆಗಳು ಮತ್ತು ಹಳೆಯ ಅಭಿಪ್ರಾಯಗಳು ಮತ್ತೆ ಬೆಳಕಿಗೆ ಬಂದಿರುವುದರಿಂದ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.






