ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ ಬದಲಾಗುತ್ತಿಲ್ಲ. ಜಾತಿ ವ್ಯವಸ್ಥೆ, ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆಗಳಿಗೆ ಇಂದಿಗೂ ನಮ್ಮ ಸಮಾಜ ಸಾಕ್ಷಿಯಾಗುತ್ತಿರುವುದು ನಿಜಕ್ಕೂ ದುರಂತ..!

ಆದರೆ ಇಂತದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಜಿಲ್ಲೆಯ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಕುರುಬ ಸಮುದಾಯದ ಬಡ ಕುಟುಂಬದ ಜೊತೆ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಮಾತನಾಡಿದರೆ 5 ಸಾವಿರ ರೂಪಾಯಿ ದಂಡ ಹಾಗೂ ಅವರ ಮಾಹಿತಿ ನೀಡಿದರೆ 1 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಅದೇ ಸಮಾಜದ ಪಂಚರು ಘೋಷಿಸಿದ್ದಾರೆ.

ಇನ್ನೂ ಬಹಿಷ್ಕಾರ ಹಾಕಿದ 10 ಜನ ಸಮಾಜದ ಮುಖಂಡರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿ 15 ದಿನಗಳಾದರೂ ಕೂಡ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ದೇವಸ್ಥಾನ ಪೂಜೆ ಹಾಗೂ ವೈಯಕ್ತಿಕ ಸಂಬಂಧದ ವಿಚಾರವನ್ನು ನೆಪ ಮಾಡಿಕೊಂಡು, ಅದೇ ಸಮಾಜದಿಂದ ಸಾಂಬ್ರೇಕರ್ ಕುಟುಂಬವೊಂದನ್ನು ದೂರ ಇಡುವಂತೆ ಆಜ್ಞೆ ಹೊರಡಿಸಿದ್ದಾರೆ ಎಂದು ನೊಂದ ಕುಟುಂಬಸ್ಥರು ಆರೋಪಿಸಿದ್ದಾರೆ. ದೇವಸ್ತಾನ ಪೂಜೆ, ಪ್ರೀತಿ ವಿಚಾರಕ್ಕೆ ಗ್ರಾಮದ ಕುರುಬ ಸಮಾಜದ ಪಂಚರು ಬಹಿಷ್ಕಾರ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾವು ಏನು ತಪ್ಪು ಮಾಡಿದ್ದೇವೆ..?
ನನಗೂ ಬದುಕಲು ಅವಕಾಶ ಕೊಡಿ, ‘‘ನಾವು ಏನು ಅಪರಾಧ ಮಾಡಿದ್ದೇವೆ? ನಮಗೂ ಈ ಊರಿನಲ್ಲಿ ಬದುಕುವ ಹಕ್ಕಿಲ್ಲವೇ? ನಮ್ಮ ಐದು ವರ್ಷದ ಮಗುವಿನ ಜೊತೆಯೂ ಯಾರೂ ಮಾತನಾಡುತ್ತಿಲ್ಲ. ಗ್ರಾಮದಲ್ಲಿನ ಮದುವೆ, ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದೆ ನಮ್ಮ ಕುಟುಂಬ ಒಂಟಿಯಾಗಿದೆ. ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ತಡರಾತ್ರಿ ಮನೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ದುಷ್ಕರ್ಮಿಗಳ ಅಟ್ಟಹಾಸ ಮೆರೆದಿದ್ದಾರೆ. ನಾವು ಜೀವ ಭಯದಲ್ಲಿ ಬದುಕುತ್ತಿದ್ದೇವೆ ನಮಗೆ ಸೂಕ್ತ ಭದ್ರತೆ ಒದಗಿಸುವಂತೆ ಕುಟುಂಬ ಸರ್ಕಾರವನ್ನು ಒತ್ತಾಯಿಸಿದೆ.







