ನವದೆಹಲಿ :
ಆಮ್ ಆದ್ಮಿ ಪಕ್ಷ (AAP) ತನ್ನ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಉಪನಾಯಕ ಸ್ಥಾನದಿಂದ ತೆರವುಗೊಳಿಸಿದ್ದು, ಅವರ ಸ್ಥಾನಕ್ಕೆ ಅಶೋಕ್ ಮಿತ್ತಲ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಪಕ್ಷವು ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತವಾಗಿ ಪತ್ರ ಸಲ್ಲಿಸಿದೆ.ಇದರೊಂದಿಗೆ, ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರಿಗೆ ನೀಡಲಾಗುತ್ತಿದ್ದ ಮಾತನಾಡುವ ಅವಕಾಶವನ್ನೂ ಸೀಮಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಸಮಸ್ಯೆಗಳ ಕುರಿತು ಸದನದಲ್ಲಿ ಸಕ್ರಿಯವಾಗಿ ಧ್ವನಿ ಎತ್ತುತ್ತಿದ್ದ ಸಮಯದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗಮನಾರ್ಹ.ವಿಮಾನ ನಿಲ್ದಾಣಗಳಲ್ಲಿ ದುಬಾರಿ ಚಹಾ, ಡೆಲಿವರಿ ಬಾಯ್ಗಳ ಸಮಸ್ಯೆಗಳು, ಮಧ್ಯಮ ವರ್ಗದ ತೆರಿಗೆ ಹೊರೆ, ಆಹಾರ ಕಲಬೆರಕೆ ಮತ್ತು ಗಿಗ್ ಕೆಲಸಗಾರರ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳನ್ನು ರಾಘವ್ ಚಡ್ಡಾ ಸದನದಲ್ಲಿ ಪ್ರಸ್ತಾಪಿಸಿದ್ದರು.ಆದರೆ, ಪಕ್ಷದ ಹೈಕಮಾಂಡ್ ಅವರು ಕೆಲ ವಿಷಯಗಳಲ್ಲಿ ಪೂರ್ವ ಮಾಹಿತಿ ನೀಡದೆ ಮಾತನಾಡುತ್ತಿರುವುದಾಗಿ ಎಚ್ಚರಿಕೆ ನೀಡಿದ್ದರೂ, ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಪಕ್ಷದ ನಿಲುವನ್ನು ಸರಿಯಾಗಿ ಪ್ರತಿನಿಧಿಸದಿರುವುದು, ಇತರ ಸಂಸದರಿಗೆ ಮಾತನಾಡುವ ಅವಕಾಶ ಕಡಿಮೆಯಾಗಿರುವುದು ಸೇರಿದಂತೆ ಹಲವು ಕಾರಣಗಳು ಈ ಕ್ರಮಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ಸೂಚಿಸುತ್ತವೆ.

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಸಿಕ್ಕ ಸಂದರ್ಭದಲ್ಲಿ ರಾಘವ್ ಚಡ್ಡಾ ಮೌನವಾಗಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.ಆದಾಗ್ಯೂ, ಈ ಬೆಳವಣಿಗೆ ಕುರಿತು ರಾಘವ್ ಚಡ್ಡಾ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಈ ಘಟನೆ ಆಮ್ ಆದ್ಮಿ ಪಕ್ಷದ ಒಳಗಿನ ಅಸಮಾಧಾನ ಮತ್ತು ಆಂತರಿಕ ಕಲಹವನ್ನು ಬಹಿರಂಗಪಡಿಸಿರುವುದಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ವ್ಯಕ್ತವಾಗುತ್ತಿದೆ.






