*ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ*
ನ್ಯಾಯವಾಗಿ ಇವರೇ ಭಾರತದ ಮೊಟ್ಟಮೊದಲ Chief of Defence Staff (CDS) ಆಗಬೇಕಿತ್ತು, ಅದೂ 1959 ರಲ್ಲಿ. ಆದರೆ ಅಂದಿನ ಪ್ರಧಾನಿ ನೆಹರೂ ಮತ್ತು ಆಗಿನ ರಕ್ಷಣಾ ಸಚಿವ ವಿ. ಕೆ. ಮೆನನ್ ಅವರ ಕುತಂತ್ರ, ಸೈನ್ಯದ ಬಗ್ಗೆ ಇದ್ದ ಅಸಡ್ಡೆ ಮತ್ತು ಸೈನ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟರೆ ಎಲ್ಲಿ ತಮ್ಮ ಪದವಿಗಳಿಗೆ, ಅಸ್ತಿತ್ವಕ್ಕೇ ಕುತ್ತು ಬರುತ್ತೋ, ಎಲ್ಲಿ ಮಿಲಿಟರಿ ಆಡಳಿತ ಜಾರಿಗೊಳಿಸುತ್ತಾರೋ ಎನ್ನುವ ಪುಕ್ಕುಲುತನದಿಂದಾಗಿ ಹಾಗಾಗಲಿಲ್ಲ.

ಅಸಲಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಜನರಲ್ ಕಾರಿಯಪ್ಪ ಮತ್ತು ಮೇಜರ್ ಜನರಲ್ ತಿಮ್ಮಯ್ಯನವರಂತ ಧೀಮಂತ ಅಧಿಕಾರಿಗಳು ನಮ್ಮ ಸೈನ್ಯದ ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಮನಸ್ಸು ಮಾಡಿದ್ದರೆ ರಾಜಕೀಯ ಸರ್ಕಾರವನ್ನು ಕೆಳಗಿಳಿಸಿ ಸೈನ್ಯದ ಆಡಳಿತವನ್ನು ತರಬಹುದಿತ್ತು. ನೆರೆಯ ದೇಶ ಪಾಕಿಸ್ತಾನದಲ್ಲಿ ಆಗಾಗಲೇ ಇದು ನಡೆದು ಹೋಗಿತ್ತು. ಆದರೆ ಪರಂಪರಾಗತವಾಗಿ ನಮ್ಮ ಸೈನ್ಯಾಧಿಕಾರಿಗಳಿಗೆ ಈ ತರಹದ ಆಲೋಚನೆಯೇ ಇರಲಿಲ್ಲ ಈಗಲೂ ಇಲ್ಲ ಆದರೆ ಅಂದಿನ ರಾಜಕೀಯ ನಾಯಕತ್ವಕ್ಕೆ ಇಂತಹದೊಂದು ಹೆದರಿಕೆ ಆಗಾಗ ಕಾಡುತ್ತಿತ್ತು. ಇದರಿಂದ ನೆಹರು ಮತ್ತು ಕೃಷ್ಣ ಮೆನನ್ ಸೈನ್ಯದ ಬಗ್ಗೆ ಮತ್ತು ಹಿರಿಯ ಸೈನ್ಯಾಧಿಕಾರಿಗಳ ಬಗ್ಗೆ ಒಂದು ಮಟ್ಟದ ತಿರಸ್ಕೃತ ಮನೋಭಾವವನ್ನು ಹೊಂದಿದ್ದರು.

ಚೀನಾದ ವಿಷಯದ ಬಗ್ಗೆ ಜನರಲ್ ತಿಮ್ಮಯ್ಯ ಅನೇಕ ಸಲ ರಕ್ಷಣಾ ಮಂತ್ರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು ಆದರೆ ಅದಕ್ಕೆ ಅವರು ಕಿವಿಗೊಡಲೇ ಇಲ್ಲ. 1957 ರಲ್ಲಿ ಜನರಲ್ ತಿಮ್ಮಯ್ಯ ಸೇನಾ ಮುಖ್ಯಸ್ಥರಾಗಿ ಕಾರ್ಯವಹಿಸಿಕೊಂಡರು. ರಕ್ಷಣಾ ಮಂತ್ರಿ ಕೃಷ್ಣಾ ಮೆನನ್ ಅವರ ದುರ್ವರ್ತನೆಯಿಂದ ಬೇಸತ್ತು ಹೋಗಿದ್ದ ತಿಮ್ಮಯ್ಯನವರು ನೇರವಾಗಿ ನೆಹರೂರವರ ಬಳಿ ಹೋಗಿ ಸೈನ್ಯದ ಮತ್ತು ಸೈನಿಕರ ದಯಾನೀಯ ಪರಿಸ್ಥಿತಿಯ ಬಗ್ಗೆ ಪ್ರಸ್ತಾವಿಸತೊಡಗಿದರು. ಇದರಿಂದ ಇನ್ನೂ ಕುಪಿತಗೊಂಡ ರಕ್ಷಣಾ ಸಚಿವ ಕೃಷ್ಣ ಮೆನನ್ ಜನರಲ್ ತಿಮ್ಮಯ್ಯನವರನ್ನು ಬಹಿರಂಗವಾಗಿ ಅವಮಾನಿಸಿದರು. ಇದರಿಂದ ಬೇಸತ್ತ ಜನರಲ್ ತಿಮ್ಮಯ್ಯ ರಾಜೀನಾಮೆ ನೀಡಿದರು. ನೀವು ರಾಜೀನಾಮೆ ನೀಡಿದರೆ ನಾವೂ ನೀಡುತ್ತೇವೆ ಎಂದು ವಾಯುಸೇನೆಯ ಮತ್ತು ನೌಕಾಪಡೆಯ ಮುಖ್ಯಸ್ಥರು ನಿಲುವು ತೆಗೆದುಕೊಂಡರು. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ನೆಹರೂ ಜನರಲ್ ತಿಮ್ಮಯ್ಯನವರನ್ನು ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರು. ಸಂಭಾವಿತ ತಿಮ್ಮಯ್ಯನವರು ರಾಜೀನಾಮೆಯನ್ನು ಹಿಂಪಡೆದ ಕೂಡಲೇ ನೆಹರು ಸಂಸತ್ತಿನಲ್ಲಿ ಅವಮಾನಗೊಳಿಸಿಬಿಟ್ಟರು.

1959 ರಲ್ಲಿ ಚೀನಾ ಟಿಬೆಟ್ಟನ್ನು ಆಕ್ರಮಿಸಿಕೊಂಡ ನಂತರ ಅಲ್ಲಿನ ಧರ್ಮಗುರು ದಲೈಲಾಮಾ ಸುಮಾರು ಎಂಭತ್ತು ಸಾವಿರ ಅನುಯಾಯಿಗಳೊಂದಿಗೆ ಭಾರತಕ್ಕೆ ಬಂದು ಆಶ್ರಯ ಪಡೆದರು. ಆಗ ಭೂಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ತಿಮ್ಮಯ್ಯ ಒಂದು ಸಲಹೆ ನೀಡಿದ್ದರು, ಅದೇನೆಂದರೆ ಈ ಟಿಬೆಟಿಯನ್ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಂಡು ತರಬೇತಿ ನೀಡಿದರೆ ಮುಂದೊಂದು ದಿನ ಚೀನಾದ ಮೇಲೆ ಯುದ್ಧ ಮಾಡಿ ಟಿಬೆಟ್ಟನ್ನು ಮರು ವಶಪಡಿಸಿಕೊಳ್ಳುವ ಧೈರ್ಯ ಬರಬಹುದು ಎಂದು. ಅಯ್ಯೋ… ಹಾಗೆ ಮಾಡಿದರೆ ಚೀನಾ ಕೋಪಿಸಿಗೊಳ್ಳುತ್ತದೆ ಎಂದು ನೆಹರೂ ಆ ಸಲಹೆಯನ್ನು ತಳ್ಳಿ ಹಾಕಿದರು. ಈ ಒಂದು ಸಲಹೆಯನ್ನು ಒಪ್ಪಿಕೊಂಡಿದ್ದರೆ 1962 ರ ಯುದ್ಧದ ಪರಿಣಾಮವೇ ಬೇರೆಯಾಗಿರುತ್ತಿತ್ತು. ಅಷ್ಟೇ ಸಾಲದೆಂಬಂತೆ ನೀವು ಇನ್ನು ಮೇಲೆ ರಕ್ಷಣಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಿ ಎನ್ನುವ ಆದೇಶವನ್ನು ನೀಡಿದರು. ಶಸ್ತ್ರಾಸ್ತ್ರಗಳ ಕೊರತೆ ಸೈನ್ಯವನ್ನು ಕಾಡತೊಡಗಿತು. ಗಡಿಯಲ್ಲಿದ್ದ ಸೈನಿಕರು ಸೂಕ್ತ ಸಮವಸ್ತ್ರವಿಲ್ಲದೆ, ಆಧುನಿಕ ಆಯುಧಗಳಿಲ್ಲದೆ ಬಳಲಿಹೋದರು. ಇದ್ಯಾವುದೂ ನಮಗೆ ಸಂಬಂಧಿಸಿದಿಲ್ಲವೆಂಬಂತೆ ರಾಜಕೀಯ ನಾಯಕರು ವರ್ತಿಸಿದರು. ಅಂದು ಜನರಲ್ ತಿಮ್ಮಯ್ಯನವರ ಸಲಹೆಯನ್ನು ಮನ್ನಿಸಿ ಹತ್ತು ಸಾವಿರ ಟಿಬೆಟ್ಟಿನ ಯುವಕರ ಪಡೆಯನ್ನು ಸೈನ್ಯಕ್ಕೆ ಸೇರಿಸಿಕೊಂಡಿದ್ದರೆ 1962 ಚೀನಾದೊಂದಿಗಿನ ಯುದ್ಧದ ಪರಿಣಾಮವೇ ಬೇರಾಗುತ್ತಿತ್ತು.

1961 ರಲ್ಲಿ ಖಿನ್ನ ಮನಸ್ಸಿನಿಂದ ಜನರಲ್ ತಿಮ್ಮಯ್ಯನವರು ಸೈನ್ಯದಿಂದ ನಿವೃತ್ತಿ ಹೊಂದಿದರು. ಮುಂದೆ ಇವರನ್ನು ವಿಶ್ವಸಂಸ್ಥೆಯ ಶಾಂತಿಪಡೆಯ ಮುಖ್ಯಾಧಿಕಾರಿಯಾಗಿ ಸೈಪ್ರಸ್ ದೇಶಕ್ಕೆ ಕಳುಹಿಸಲಾಯಿತು. ಅಲ್ಲಿನ ಆಂತರಿಕ ಕಲಹದಲ್ಲಿ ಇವರು ಸಲ್ಲಿಸಿದ ಸ್ತುತ್ಯಾರ್ಹ ಸೇವೆಯನ್ನು ಪ್ರಶಂಸಿಸಿ ಅಂದಿನ ಸೈಪ್ರಸ್ ಸರ್ಕಾರ ಲಾರ್ನಾಕ ನಗರದ ಒಂದು ಮುಖ್ಯ ರಸ್ತೆಯನ್ನು “ ಜನರಲ್ ತಿಮ್ಮಯ್ಯ ಅವೆನ್ಯೂ “ ಎಂದು ಹೆಸರಿಟ್ಟಿದೆ. ಈಗಲೂ ಸೈಪ್ರಸ್ಸಿನಲ್ಲಿ ನಮ್ಮ ಸೈನ್ಯದ ಸುಮಾರು ಆರು ಸಾವಿರ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ.
✍️…ವಿಂಗ್ ಕಮಾಂಡರ್ ಸುದರ್ಶನ






