ನಗರದಲ್ಲಿ ಕಸ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ಏಪ್ರಿಲ್ 1ರಿಂದ ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಲು ನಗರ ಆಡಳಿತ ನಿರ್ಧರಿಸಿದೆ. ಹೊಸ ನಿಯಮದಂತೆ ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿದ್ದರೆ ದಂಡ ವಿಧಿಸಲಾಗುತ್ತದೆ.ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನ್ವಯ ಈ ಕ್ರಮ ಜಾರಿಗೆ ಬರಲಿದ್ದು, ನಗರದಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಮಿಶ್ರ ಕಸದ ಪ್ರಮಾಣವನ್ನು ಕಡಿಮೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿ ₹500 ದಂಡ ವಿಧಿಸಲಾಗುತ್ತದೆ. ಅದೇ ತಪ್ಪು ಮರುಕಳಿಸಿದರೆ ₹1,000 ದಂಡ ವಿಧಿಸಲಾಗುವುದು. ಪದೇ ಪದೇ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಪ್ರತಿದಿನ ಸಾವಿರಾರು ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಹೆಚ್ಚಿನ ಮನೆಗಳಿಂದ ಮಿಶ್ರ ಕಸವೇ ನೀಡಲಾಗುತ್ತಿದೆ. ಇದರಿಂದ ಪೌರಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು, ಆರೋಗ್ಯ ಸಮಸ್ಯೆಗಳೂ ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮನೆಮಟ್ಟದಲ್ಲೇ ಕಸ ವಿಂಗಡಣೆ ಮಾಡುವುದಕ್ಕೆ ಒತ್ತು ನೀಡಲಾಗಿದೆ.

ಹೊಸ ನಿಯಮದಂತೆ, ಕಸ ಸಂಗ್ರಹಿಸುವ ವಾಹನ ಸಿಬ್ಬಂದಿ ವಿಂಗಡಿಸದ ಕಸವನ್ನು ಸ್ವೀಕರಿಸುವುದಿಲ್ಲ. ಜೊತೆಗೆ ಪೌರಕಾರ್ಮಿಕರಿಗೆ ಕೈಗವಸು, ಮುಖಗವಸು, ಗಮ್ಬೂಟ್ ಸೇರಿದಂತೆ ಸುರಕ್ಷತಾ ಉಪಕರಣಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ಮರುಬಳಕೆ ಹಾಗೂ ಕಂಪೋಸ್ಟ್ ಪ್ರಕ್ರಿಯೆ ಸುಲಭವಾಗಲಿದ್ದು, ಹಸಿ ಕಸವನ್ನು ಗೊಬ್ಬರವಾಗಿ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ.






