ಲಖನೌ :
ಇರಾನ್ನ ಪರಮೋಚ್ಚ ನಾಯಕ ಖಮೇನಿ ಅವರ ನಿಧನದ ಹಿನ್ನೆಲೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಕಿಂತೂರ್ ಗ್ರಾಮದಲ್ಲಿ ಈದ್ ಸಂಭ್ರಮವನ್ನು ಕೈಬಿಟ್ಟು ಶೋಕಾಚರಣೆ ನಡೆಸಲಾಗಿದೆ.ಸುಮಾರು 4,000 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಖಮೇನೇಯಿ ನಿಧನದ ಸುದ್ದಿ ತಲುಪುತ್ತಿದ್ದಂತೆ ಜನರಲ್ಲಿ ಆಳವಾದ ದುಃಖದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಮಜ್ಲಿಸ್ಗಳನ್ನು ಆಯೋಜಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಹಲವೆಡೆ ಅಂಗಡಿಗಳನ್ನು ಮುಚ್ಚಿ, ಶೋಕ ಮೆರವಣಿಗೆಗಳನ್ನೂ ನಡೆಸಲಾಗಿದೆ.

ಕಿಂತೂರ್ ಗ್ರಾಮಕ್ಕೆ ಇರಾನ್ನ ಧಾರ್ಮಿಕ ನಾಯಕತ್ವದೊಂದಿಗೆ ಐತಿಹಾಸಿಕ ಸಂಬಂಧವಿದೆ ಎನ್ನಲಾಗುತ್ತದೆ. ಇರಾನ್ ಇಸ್ಲಾಮಿಕ್ ಕ್ರಾಂತಿಯ ನಾಯಕ ರುಹೊಲ್ಲಾ ಖೊಮೇನಿ ಅವರ ಪೂರ್ವಜರು ಈ ಗ್ರಾಮದಿಂದಲೇ ಇರಾನ್ಗೆ ವಲಸೆ ಹೋಗಿದ್ದರು ಎಂಬ ನಂಬಿಕೆ ಇದೆ. ಖಮೇನೇಯಿ ಅವರು ಖೋಮೇನಿಯವರ ಶಿಷ್ಯರಾಗಿದ್ದು, ಈ ಹಿನ್ನೆಲೆ ಗ್ರಾಮಸ್ಥರಿಗೆ ಈ ಸಂಬಂಧ ಭಾವನಾತ್ಮಕವಾಗಿ ಗಾಢವಾಗಿದೆ.

ಈ ಹಿನ್ನೆಲೆಯಲ್ಲಿ ಈದ್ ಹಬ್ಬದ ಆಚರಣೆಗಳನ್ನು ಸರಳಗೊಳಿಸಿ, ಬಹುತೇಕರು ಸಂಭ್ರಮವನ್ನು ಕೈಬಿಟ್ಟು ಶೋಕಾಚರಣೆ ನಡೆಸಿರುವುದು ಗಮನಾರ್ಹವಾಗಿದೆ. ಸ್ಥಳೀಯರು ಶಾಂತಿ ಕಾಪಾಡುವಂತೆ ಕರೆ ನೀಡಿದ್ದು, ಹಿಂಸೆಗೆ ಅಂತ್ಯ ಬೇಕೆಂದು ಮನವಿ ಮಾಡಿದ್ದಾರೆ.ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಪರಿಣಾಮವಾಗಿ ದೂರದ ಭಾರತದಲ್ಲಿಯೂ ಭಾವನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವುದು ಈ ಘಟನೆ ಮೂಲಕ ಸ್ಪಷ್ಟವಾಗಿದೆ.






