ಬೆಳಗಾವಿ : ಡಿವೈಎಸ್ಪಿಯೊಬ್ಬರು ಬಹಿರಂಗವಾಗಿ ಕನ್ನಡಪರ ಹೋರಾಟಗಾರರ ಜೊತೆ ವಾಗ್ವಾದ ಮಾಡಿಕೊಂಡು ಸೆಡ್ಡು ಹೊಡೆದು ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ.

ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮೂರು ದಿನಗಳ ಹಿಂದೆ ನಡೆದಿರುವ ಈ ಘಟನೆ ವಿಡಿಯೋ ಈಗ ಸದ್ದು ಮಾಡುತ್ತಿದೆ.
ಬೈಲಹೊಂಗಲದಲ್ಲಿ ಚನ್ನಮ್ಮ ಸ್ಮಾರಕ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಹೋರಾಟ ಮಾಡುತ್ತಿದ್ದ ಕನ್ನಡಪರ ಹೋರಾಟಗಾರರನ್ನು ತಡೆಯಲು ಡಿವೈಎಸ್ಪಿ ಮುಂದಾಗಿದ್ದರು ಎಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ.
ಇದನ್ನೂ ಓದಿ : ದೇಹಕ್ಕೆ ಅಂಗವೈಕಲ್ಯ ಇರಬಹುದು, ಆದರೆ ಕನಸುಗಳಿಗಲ್ಲಾ : ನಿತೀಶ್ ಸರ್ಕಾರದ ವೈಫಲ್ಯತೆ ಬಿಚ್ಚಿಟ್ಟ ನೆಟ್ಟಿಗರು..
ಅಲ್ಲದೆ ಹೋರಾಟ ಹತ್ತಿಕ್ಕಲು ಪೊಲೀಸರು ಯತ್ನ ಮಾಡ್ತಿದ್ದಾರೆಂದು ಹೋರಾಟಗಾರರು ದೂರಿದ್ದು, ಇದಕ್ಕೆ ಪ್ರತಿಯಾಗಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುವ ಆರೋಪವನ್ನು ಪೊಲೀಸರು ಹೋರಾಟಗಾರರ ಮೇಲೆ ಹೇರಿದ್ದಾರೆ.
ಹೋರಾಟದ ಸಮಯದಲ್ಲಿ ತಹಶೀಲ್ದಾರ್ ಕಚೇರಿ ಬಂದ್ ಮಾಡಲು ಹೋರಾಟಗಾರರು ಮುಂದಾಗಿದ್ದ ವೇಳೆ ಡಿವೈಎಸ್ಪಿ ಅದನ್ನು ಮಾಡದಂತೆ ತಡೆಹಿಡಿದಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೋರಾಟ ಮಾಡುವಂತೆ ಡಿವೈಎಸ್ಪಿ ವೀರಯ್ಯ ಮನವಿ ಮಾಡಿಕೊಂಡಿದ್ದಾರೆ.
ಬಳಿಕ ಪೊಲೀಸರ ಮನವಿಗೂ ಮನ್ನಣೆ ನೀಡದೆ ಅದನ್ನು ಧಿಕ್ಕರಿಸಿ ಮುನ್ನಗ್ಗಲು ಯತ್ನಿಸಿದ್ದಾರೆ. ನಾವು ಮುಂದೆ ನುಗ್ಗುತ್ತೇವೆ ನೀವೇನು ಮಾಡ್ಕೋಳ್ತೀರಾ ಎಂದು ಅವಾಜ್ ಹಾಕಿದ್ದಾರೆ. ಆಗ ಪರಸ್ಪರ ಸೆಡ್ಡು ಹೊಡೆದು ಬಾ ನೋಡಿಕೊಳ್ತೀನಿ ಎಂದು ಡಿವೈಎಸ್ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕನ್ನಡಪರ ಹೋರಾಟಗಾರ ಶಿವಾನಂದ ಪೊಲೀಸರ ಮೇಲೆ ಮುಗಿಬಿದ್ದು ತಳ್ಳಾಟ ನೂಕಾಟದ ಬಳಿಕ ಹೋರಾಟಗಾರರನ್ನ ಪೊಲೀಸರು ವಾಪಸ್ ಕಳುಹಿಸಿದ್ದಾರೆ.






