ಭಾರತದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದು ಬರೆಯಲ್ಪಡುತ್ತಿದೆ. ಜನರಿಂದ ಆಯ್ಕೆಯಾದ ಒಬ್ಬ ಮುಖ್ಯಮಂತ್ರಿಯನ್ನು ಯಾವುದೇ ಭದ್ರ ಸಾಕ್ಷಾಧಾರಗಳಿಲ್ಲದೆ ತಿಂಗಳುಗಟ್ಟಲೆ ಜೈಲಿನಲ್ಲಿಡುವುದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದೌರ್ಜನ್ಯವಲ್ಲ, ಅದು ಇಡೀ ಸಂವಿಧಾನಕ್ಕೆ ಮೇಲೆ ನಡೆಸಲಾಗುತ್ತಿರುವ ದಾಳಿ. ಅರವಿಂದ್ ಕೇಜ್ರಿವಾಲ್ ಅವರು ಕಣ್ಣೀರಿಟ್ಟು “ನಾನು ಭ್ರಷ್ಟನಲ್ಲ” ಎಂದು ಹೇಳಿದ ಮಾತುಗಳು ಇಂದು ಪ್ರತಿಯೊಬ್ಬ ಪ್ರಾಮಾಣಿಕ ಮತದಾರನ ಕಿವಿಯಲ್ಲಿ ಮೊಳಗುತ್ತಿದೆ. ಅಕ್ರೋಶ ಸ್ಫೋಟಗೊಳ್ಳಲು ಕಾಲದ ನಿರೀಕ್ಷೆಯಿದೆ.

ದೆಹಲಿ ಅಬಕಾರಿ ಹಗರಣದ ವಿಚಾರದಲ್ಲಿ ಸಿಬಿಐ ಮತ್ತು ಇಡಿ ಸಂಸ್ಥೆಗಳನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿರುವುದು ಸಣ್ಣ ವಿಷಯವಲ್ಲ. “ಸಾಕ್ಷಾಧಾರಗಳ ಕೊರತೆ” ಮತ್ತು “ತನಿಖೆಯ ವಿಳಂಬ”ದ ಬಗ್ಗೆ ಕೋರ್ಟ್ ವ್ಯಕ್ತಪಡಿಸಿದ ಅಸಮಾಧಾನವು ಈ ಕೇಸಿನ ಹಿಂದಿನ ಅಸಲಿ ಸಂಚನ್ನು ಬಯಲು ಮಾಡಿದೆ.

ವರ್ಷಗಟ್ಟಲೆ ತನಿಖೆ ನಡೆಸಿದರೂ ಒಂದು ರೂಪಾಯಿಯ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲು ಇವರಿಂದ ಸಾಧ್ಯವಾಗಿಲ್ಲ. ಎದುರಾಳಿಗಳನ್ನು ಚುನಾವಣಾ ಕಣದಲ್ಲಿ ಎದುರಿಸಲಾಗದ ಬಿಜೆಪಿ, ತನಿಖಾ ಸಂಸ್ಥೆಗಳನ್ನು ‘ಪಂಜರದ ಗಿಳಿ’ಯಂತೆ ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಮಟ್ಟಹಾಕಲು ನೋಡುತ್ತಿದೆ.

ಈ ಸುಳ್ಳು ಪ್ರಕರಣದ ಸರಣಿಯಿಂದಾಗಿ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಒಂದು ಸುಸಂಸ್ಕೃತ ಆಡಳಿತವನ್ನು ಹಳಿತಪ್ಪಿಸಲು ಕೇಂದ್ರ ಸರ್ಕಾರ ಹೂಡಿದ ಸಂಚು ಯಶಸ್ವಿಯಾದಂತೆ ಕಂಡರೂ, ನ್ಯಾಯಾಲಯದ ತೀರ್ಪು ಸತ್ಯಕ್ಕೆ ಜಯ ತಂದುಕೊಟ್ಟಿದೆ. ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರಬಹುದು, ಆದರೆ ಜನರ ಮನಸ್ಸಿನಲ್ಲಿ ಬಿಜೆಪಿಯ ಈ ‘ಅಟ್ಟಹಾಸ’ದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿರುವುದು ಸುಳ್ಳಲ್ಲ.

ಅಧಿಕಾರದ ಮದದಿಂದ ವಿರೋಧಿಗಳನ್ನು ಜೈಲಿಗೆ ಅಟ್ಟುವ ‘ಮೋದಿ ಗ್ಯಾಂಗ್’ನ ಈ ನಡೆಯನ್ನು ಜನತೆ ಗಮನಿಸುತ್ತಿದ್ದಾರೆ. ಇತಿಹಾಸ ಸಾಕ್ಷಿಯಾಗಿದೆ, ಅಹಂಕಾರ ಮತ್ತು ದ್ವೇಷದ ರಾಜಕಾರಣ ಯಾವತ್ತೂ ಶಾಶ್ವತವಲ್ಲ. ಇಂದು ಕೇಜ್ರಿವಾಲ್ ಅವರಂತಹ ನಾಯಕರ ಕಣ್ಣೀರು ನಾಳೆ ಬಿಜೆಪಿಯ ಪತನಕ್ಕೆ ನಾಂದಿಯಾಗಲಿದೆ. ತನಿಖಾ ಸಂಸ್ಥೆಗಳ ದುರುಪಯೋಗ ನಿಲ್ಲದಿದ್ದರೆ, ಈ ದೇಶದ ಜನರು ಬೀದಿಗಿಳಿದು ತಕ್ಕ ಪಾಠ ಕಲಿಸುವುದು ನಿಶ್ಚಿತ.
ವಿಶೇಷ ವರದಿ-ರಾ.ಚಿಂತನ್







