ಭಾರತ ಅನುಸರಿಸುತ್ತಿರುವ ಆರ್ಥಿಕ ಅಭಿವೃದ್ಧಿ ಮಾದರಿಯು ʼ ಸುಸ್ಥಿರ ಸರ್ವತೋಮುಖ ಬೆಳವಣಿಗೆ ʼ ಯನ್ನು ಸೂಚಿಸುವುದಿಲ್ಲ. ಜನರ ಜೀವನ ಮತ್ತು ಜೀವನೋಪಾಯ, ಸಾರ್ವಜನಿಕ ಆರೋಗ್ಯ, ಕನಿಷ್ಠ ಪ್ರಾಥಮಿಕ ಶಿಕ್ಷಣ, ಮಾಲಿನ್ಯರಹಿತ ಜಲಸಂಪನ್ಮೂಲಗಳು ಮತ್ತು ಹವಾಮಾನ, ಕುಗ್ರಾಮದಿಂದ ದೆಹಲಿಯವರೆಗೆ ಸಾರ್ವಜನಿಕ ಸ್ವಚ್ಛತೆ ಹಾಗೂ ಸಸ್ಯ ಮತ್ತು ಪ್ರಾಣಿ ಸಂಕುಲದ ರಕ್ಷಣೆ, ಹಸಿರು ಅರಣ್ಯದ ರಕ್ಷಣೆ ಇವೆಲ್ಲವನ್ನೂ ಒಂದು ಆವರಣದಲ್ಲಿಟ್ಟು (Bracket) ನೋಡುವಾಗ ಅಲ್ಲಿ ಸರ್ವತೋಮುಖ ಬೆಳವಣಿಗೆಯ ಕಲ್ಪನೆ ಕಾಣುತ್ತದೆ. ಕಳೆದ ನಾಲ್ಕು ದಶಕಗಳ ನವ ಉದಾರವಾದಿ ಆರ್ಥಿಕತೆಯಲ್ಲಿ ಭಾರತ ಈ ಯಾವುದೇ ವಲಯದಲ್ಲೂ ಪರಿಪೂರ್ಣತೆಯನ್ನು ಸಾಧಿಸಿಲ್ಲ ಅಥವಾ ಭರವಸೆಯನ್ನು ಮೂಡಿಸಿಲ್ಲ.

ಉತ್ತರದ ಅರಾವಳಿ ಶ್ರೇಣಿಯಿಂದ ದಕ್ಷಿಣದ ಪಶ್ಚಿಮಘಟ್ಟದವರೆಗೆ ಆಧುನಿಕ ಅಭಿವೃದ್ಧಿ ಯೋಜನೆಗಳು ಮಾರುಕಟ್ಟೆ ಪ್ರೇರಿತವಾಗಿದ್ದು, ನಿಸರ್ಗ ಸಂಪನ್ಮೂಲಗಳನ್ನು ಬಳಸಿಕೊಂಡು, ಪ್ರಕೃತಿಯನ್ನೇ ವಿನಾಶದಂಚಿಗೆ ಒಯ್ಯುವ ಒಂದು ಮಾದರಿಯನ್ನು ಅನುಸರಿಸಲಾಗುತ್ತಿದೆ. ಸಣ್ಣ ಪಟ್ಟಣಗಳಿಂದ ಮೆಟ್ರೋಪಾಲಿಟನ್ ನಗರಗಳವರೆಗೂ ವಿಸ್ತರಿಸುವ ʼ ಅಭಿವೃದ್ಧಿ ʼಯ ಕಲ್ಪನೆಯಲ್ಲಿ ಮೊದಲು ಬಲಿಯಾಗುತ್ತಿರುವುದು ಬೆಳೆದು ನಿಂತ ಮರಗಳು, ಸುತ್ತಲಿನ ಕೃಷಿ ಭೂಮಿ ಮತ್ತು ಹಸಿರು ಸಂಪತ್ತಿನ ಭಂಡಾರಗಳಾದ ಬೆಟ್ಟಗುಡ್ಡಗಳು ಮತ್ತು ಸಾವಿರಾರು ಕೆರೆಗಳು. ಆಧುನಿಕ ಜೀವನಶೈಲಿಗೆ ಪೂರಕವಾದ ಐಷಾರಾಮಿ ಮೂಲ ಸೌಕರ್ಯಗಳ ನಿರ್ಮಾಣಕ್ಕಾಗಿ ಶಾಶ್ವತವಾಗಿ ನೆರಳು ನೀಡುವ ಮರಗಳನ್ನು ಕಡಿಯುವುದು ಮತ್ತು ಜನವಸತಿಗಾಗಿ ಕೆರೆಗಳನ್ನು ಮುಚ್ಚಿಹಾಕುವುದು ಒಂದು ಪದ್ಧತಿಯಾಗಿ ಜಾರಿಯಾಗುತ್ತಿದೆ.

ಆಧುನಿಕತೆ ಮತ್ತು ನಗರೀಕರಣ
ನಗರೀಕರಣ ಮತ್ತು ನಗರಗಳ ಆಧುನಿಕೀಕರಣವನ್ನು ನಿರಾಕರಿಸದ ಹಿತವಲಯದ ವರ್ಗಗಳೇ ಹಸಿರು ಸಂಪತ್ತಿನ ಉಳಿವಿಗಾಗಿಯೂ ಹೋರಾಟಗಳನ್ನು ನಡೆಸುವ ಒಂದು ದ್ವಂದ್ವವನ್ನೂ ಕಾಣುತ್ತಿದ್ದೇವೆ. ಬಂಡವಾಳಶಾಹಿ ಮಾರುಕಟ್ಟೆಯ ಆರ್ಥಿಕ ಫಲಾನುಭವಿ ವರ್ಗಗಳು ತಮ್ಮ ಮುಂದುವರೆದ ಜೀವನಶೈಲಿಗೆ ಒಪ್ಪುವಂತಹ ಮೂಲ ಸೌಕರ್ಯಗಳನ್ನು ಅಪೇಕ್ಷಿಸುತ್ತವೆ. ಸ್ವತಂತ್ರ ಭಾರತದ ವಿಕಾಸದ ಹಾದಿಯಲ್ಲಿ ಈ ವರ್ಗಗಳೇ ರಾಜಕೀಯವಾಗಿಯೂ ನಿರ್ಣಾಯಕವಾಗಿರುತ್ತವೆ. ಮಧ್ಯಮ ವರ್ಗಗಳು, ಶ್ರೀಮಂತರು ಮತ್ತು ಸಾಂವಿಧಾನಿಕ ಉಪಕ್ರಮಗಳ ಫಲಾನುಭವಿ ಸಮಾಜಗಳು, ಪ್ರಸ್ತುತ ವಿಕಾಸದ ಮಾರ್ಗವನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತವೆ. ಆದರೆ ಈ ಮಾರ್ಗದಲ್ಲಿ ತಮ್ಮ ಸುತ್ತಲಿನ ಹಸಿರು ಸಂಪತ್ತು ವಿನಾಶದತ್ತ ಸಾಗುವುದರಿಂದ ಆತಂಕಕ್ಕೊಳಗಾಗುತ್ತವೆ.

ಆಧುನಿಕತೆ ಮತ್ತು ತಂತ್ರಜ್ಞಾನ ಆಧಾರಿತ ಆಧುನಿಕ ಜೀವನ ಶೈಲಿ ಒಂದು ಹಂತದ ನಂತರ ಪರಿಸರ ವಿರೋಧಿ-ಜೀವ ವಿರೋಧಿ ಗುಣಲಕ್ಷಣಗಳನ್ನೇ ಪೋಷಿಸುತ್ತದೆ. 1990ರ ಜಾಗತೀಕರಣ ಮತ್ತು ನಗರೀಕರಣ ಪ್ರಕ್ರಿಯೆ ಜನಮಾನ್ಯತೆಯನ್ನು ಪಡೆದ ನಂತರದಲ್ಲಿ ನಮ್ಮ ಸರ್ಕಾರಗಳ ನಗರಾಭಿವೃದ್ಧಿ ನೀತಿ ಮತ್ತು ಮೂಲ ಸೌಕರ್ಯಗಳ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಾಸ್ತವ ಅರ್ಥವಾಗುತ್ತದೆ. ಹೊಸ ತಂತ್ರಜ್ಞಾನಗಳು ಜೀವನ ವಿಧಾನವನ್ನು ನಿರ್ದೇಶಿಸುತ್ತಿರುವಂತೆಲ್ಲಾ ಹಳೆಯ ಕಸುಬುಗಳು, ವೃತ್ತಿ ಮತ್ತು ಉದ್ಯೋಗಗಳು ನಶಿಸುತ್ತಲೇ ಹೋಗುತ್ತವೆ. ಇದನ್ನು ತಮ್ಮ ವೈಯುಕ್ತಿಕ ಹಿತಾಸಕ್ತಿಯ ದೃಷ್ಟಿಯಿಂದ ಸ್ವೀಕರಿಸಿ, ಅನುಕರಿಸುವ ಹಿತವಲಯದ ಜನತೆ, ರಸ್ತೆ ಅಗಲೀಕರಣಕ್ಕಾಗಿ ಒತ್ತಾಯಿಸುವುದು, ಹೊಸ ಬಡಾವಣೆಗಳನ್ನು ಅಪೇಕ್ಷಿಸುವುದು, ನಗರ ವಿಸ್ತರಣೆಯಲ್ಲಿ ಗ್ರಾಮಗಳನ್ನು ನುಂಗಿಹಾಕುವ ಬೃಹತ್ ನಗರಗಳನ್ನು ಉತ್ತೇಜಿಸುವುದು ಸಾಮಾನ್ಯವಾಗಿ ಕಾಣಬಹುದು. ಈ ಪ್ರಕ್ರಿಯೆಯಲ್ಲಿ ಸಸ್ಯ-ಜಲ-ಜೀವ ವೈವಿಧ್ಯ ಸಂಪತ್ತು ಹರಣವಾಗುವುದು ಖಚಿತ.

ಈ ವಿನಾಶದ ಅರಿವು ಮೂಡಿದ ಕೂಡಲೇ ಪರಿಸರ ರಕ್ಷಣೆಯ ಕೂಗು ಕೇಳಿಬರುತ್ತದೆ. ಸಾರ್ವಜನಿಕ ಸಾರಿಗೆ (Public Transport), ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳು, ಮೂಲ ಸೌಕರ್ಯಗಳ ಸಾರ್ವಜನಿಕ ನಿರ್ವಹಣೆ (Public Management) ಸ್ಥಳೀಯ ಕೈಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರಗಳ ರಕ್ಷಣೆ, ನಗರಗಳ ಸುತ್ತಲಿನ ಕೃಷಿ ಭೂಮಿ ಮತ್ತು ಅರಣ್ಯಗಳ ರಕ್ಷಣೆ ಈ ಯಾವುದೇ ನಿರ್ಣಾಯಕ ವಿಚಾರಗಳಲ್ಲೂ ಹಿತವಲಯದ ಸಮಾಜದ ಉಸಿರೆತ್ತುವುದಿಲ್ಲ. ನಗರಗಳ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ರಸ್ತೆಬದಿ ವ್ಯಾಪಾರವನ್ನು ನಿಷೇಧಿಸುವ ಒಂದು ಕ್ರೂರ ಮನಸ್ಥಿತಿಯ ಆಗ್ರಹವನ್ನೂ ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ಇದೇ ಮೇಲ್ವರ್ಗದ ದನಿಗಳೇ ಚಾಮುಂಡಿ ಬೆಟ್ಟದ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲುತ್ತದೆ. ಸಾಮಾಜಿಕ-ಆರ್ಥಿಕ ಪ್ರಾಬಲ್ಯ ಇರುವ ವರ್ಗಗಳು ಸಮಾಜದ ಆದ್ಯತೆಗಳನ್ನು ಹೇಗೆ ನಿರ್ವಚಿಸುತ್ತವೆ ಎನ್ನುವುದಕ್ಕೆ ಇದು ಸಾಕ್ಷಿ .

ನಿಸರ್ಗದ ಮಕ್ಕಳ ನಿತ್ಯ ಸಂಘರ್ಷ
ನೂರಾರು ವರ್ಷಗಳಿಂದ ಅರಣ್ಯಗಳಲ್ಲಿ, ಅಲ್ಲಿನ ಉತ್ಪಾದನೆಯನ್ನೇ ಅವಲಂಬಿಸಿ , ಬದುಕು ಕಟ್ಟಿಕೊಳ್ಳುವ ಆದಿವಾಸಿ ಸಮುದಾಯಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಅಥವಾ ವನ್ಯಜೀವಿ ಸಂರಕ್ಷಣೆಯ ನೆಪದಲ್ಲಿ ಒಕ್ಕಲೆಬ್ಬಿಸಿದಾಗ ಸರ್ಕಾರಗಳು ಆ ಜನತೆಗೆ ಪರ್ಯಾಯ ವಸತಿ ಸೌಕರ್ಯಗಳನ್ನು ಕಲ್ಪಿಸುತ್ತವೆ. ಹಾಗೆಯೇ ಹಣಕಾಸಿನ ಪರಿಹಾರವನ್ನೂ ನೀಡುತ್ತವೆ. ಇದು ನಿಸರ್ಗದ ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡುವ ಒಂದು ಕ್ರೂರ ಬಂಡವಾಳಶಾಹಿ ಮಾದರಿ. ಇದಕ್ಕೆ ಸಮಾನಾಂತರವಾಗಿ ನಗರೀಕರಣದತ್ತ ನೋಡಿದಾಗ, ಫಲವತ್ತಾದ ಕೃಷಿ ಭೂಮಿಯನ್ನು ವಸತಿ ಬಡಾವಣೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಸರ್ಕಾರಗಳು/ರಿಯಲ್ ಎಸ್ಟೇಟ್ ಉದ್ಯಮಿಗಳು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಧನ ನೀಡುತ್ತವೆ. ನಿರ್ಮಿತ ಬಡಾವಣೆಗಳಲ್ಲಿ ನಿವೇಶನಗಳನ್ನೂ ನೀಡುತ್ತವೆ. ಆದರೆ ಈ ಭೂಮಿಯಲ್ಲೇ ತಮ್ಮ ವ್ಯವಸಾಯ ವೃತ್ತಿಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ನೂರಾರು ಕೃಷಿ ಕಾರ್ಮಿಕರು ಈ ಪರಿಹಾರಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಸ್ವಂತ ಭೂ ಆಸ್ತಿ ಇಲ್ಲದ ಈ ಶ್ರಮಿಕರು ಪುನಃ ನಗರಗಳಲ್ಲಿ ಪರಾವಲಂಬಿ ಕಾರ್ಮಿಕರಾಗಿಯೇ ಬದುಕು ಸವೆಸಬೇಕಾಗುತ್ತದೆ.

ಇಲ್ಲಿ ಗಮನಿಸಬೇಕಾದ ಒಂದು ದ್ವಂದ್ವತೆ (Dichotomy) ಎಂದರೆ, ಒಕ್ಕಲೆಬ್ಬಿಸಲ್ಪಟ್ಟ ಆದಿವಾಸಿಗಳಿಗೆ ಮತ್ತು ಅಲೆಮಾರಿ ಸಮುದಾಯಗಳಿಗೆ ಒದಗಿಸುವ ಪುನರ್ವಸತಿ/ಪರಿಹಾರಧನಕ್ಕೂ, ಭೂಮಿ ಕಳೆದುಕೊಂಡ ರೈತರಿಗೆ ನೀಡುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಸಾಮಾಜಿಕವಾಗಿ ಈ ರೈತರಲ್ಲಿ ಕೆಲವರಾದರೂ ಸಾಮಾಜಿಕವಾಗಿ ಮೇಲ್ದರ್ಜೆಗೆ ಏರುತ್ತಾರೆ. ಆರ್ಥಿಕವಾಗಿ ಸಬಲರಾಗುತ್ತಾರೆ. ಆದರೆ ಆದಿವಾಸಿಗಳು, ಕೃಷಿ ಕಾರ್ಮಿಕರು ಯಥಾಸ್ಥಿತಿಯಲ್ಲಿರುತ್ತಾರೆ ಅಥವಾ ಇನ್ನೂ ಕೆಳಸ್ತರಕ್ಕೆ ಜಾರುತ್ತಾರೆ. ಇಲ್ಲಿ ಸೃಷ್ಟಿಯಾಗುವ ಆರ್ಥಿಕ ಅಸಮಾನತೆಯನ್ನು ನಿರ್ವಚಿಸುವುದು ಹೇಗೆ ? ಇದು ಪರಿಸರ ಹೋರಾಟಗಳನ್ನು ಕಾಡಬೇಕಾಗಿರುವ ಪ್ರಶ್ನೆ.

ಈ ದ್ವಂದ್ವತೆಗಳ (Dichotomies) ನಡುವೆಯೇ ಪರಿಸರ ರಕ್ಷಣೆಯ ವಿಧಾನ, ಮಾರ್ಗ ಮತ್ತು ಮಾದರಿಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಸ್ವತಂತ್ರ ಭಾರತದಲ್ಲಿ ನೂರಾರು ಪರಿಸರ ರಕ್ಷಣಾ ಹೋರಾಟಗಳು ನಡೆದಿವೆ, ಈಗಲೂ ನಡೆಯುತ್ತಲೇ ಇವೆ. ಈ ಹೋರಾಟಗಳಿಂದಲೇ ದೇಶದ ಸಸ್ಯ ಸಂಪತ್ತು, ಜಲಸಂಪನ್ಮೂಲಗಳು ಸುರಕ್ಷಿತವಾಗಿವೆ. ಆದಾಗ್ಯೂ ತಳಸ್ತರದ ಸಮಾಜವನ್ನು ಗಮನಿಸಿದಾಗ, ಬಹುಪಾಲು ಸುಶಿಕ್ಷಿತರಲ್ಲೂ ಸಹ ಪರಿಸರ ಪ್ರಜ್ಞೆ ಕಾಣುವುದಿಲ್ಲ. ಸಂಘಟನೆಗಳ ಚೌಕಟ್ಟಿನಿಂದ ಹೊರನಿಂತು ನೋಡಿದಾಗ, ವಿಶಾಲ ಸಮಾಜದ ನಾಗರಿಕರಲ್ಲಿ ʼ ಪರಿಸರ ರಕ್ಷಣೆ ʼ ಕೊನೆಯ ಆದ್ಯತೆಯಾಗಿರುತ್ತದೆ. ಪರಿಸರ ಹೋರಾಟಗಳಲ್ಲಿ ಎಲ್ಲ ವರ್ಗಗಳ ಜನರನ್ನೂ ಸಂಘಟಿಸಲಾದರೂ, ನಗರ ಬದುಕಿಗೆ ಹೊಂದಿಕೊಂಡಿರುವ ಸಾಮಾನ್ಯ ನಾಗರಿಕರಲ್ಲಿ ಈ ಆಸಕ್ತಿಯನ್ನೇ ಕಾಣಲಾಗುವುದಿಲ್ಲ.
ಹೋರಾಟ-ಸಂಘರ್ಷದ ಹೊಸದಾರಿ !
ಇದಕ್ಕೆ ಪರಿಹಾರವೇನು ? ರಾಜಕೀಯ ಪಕ್ಷಗಳಿಗೆ ಇದು ಆದ್ಯತೆಯಾಗುವುದಿಲ್ಲ. ರಾಜಕೀಯವಾಗಿ ಪರಿಸರ ಮತ್ತು ರಕ್ಷಣೆ ಎರಡೂ ಸಹ ಚುನಾವಣಾ ದೃಷ್ಟಿಯಿಂದ ನೋಡುವ ಸೇತುವೆಗಳಾಗಿ ಮಾತ್ರ ಕಾಣುತ್ತದೆ. ಪರಿಸರ ರಕ್ಷಣೆಯನ್ನು ವಿಶಾಲ ಕ್ಯಾನ್ವಾಸ್ (Canvas) ನಲ್ಲಿಟ್ಟು ನೋಡುವ ವ್ಯವಧಾನವೂ ರಾಜಕಾರಣಿಗಳಲ್ಲಿ ಇರುವುದಿಲ್ಲ. ಟಿ ನರಸೀಪುರದ ಸಿಲ್ಕ್ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಮರಗಳನ್ನು ಕಡಿಯುವುದರ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಈ ದ್ವಂದ್ವವನ್ನು ಗುರುತಿಸಬಹುದು. ಈ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿ ಕೊನೆಯವರೆಗೂ ಕೈಜೋಡಿಸುವ ಭರವಸೆ ನೀಡುವ ಬಿಜೆಪಿ ಶಾಸಕರು/ಸಂಸದರಿಗೆ, ಹಿಮಾಲಯದ ಚಾರ್ಧಾಮ್ ದುರಂತಗಳು , ಅರಾವಳಿಗೆ ಒದಗಿರುವ ಅಪಾಯಗಳು, ಪಶ್ಚಿಮ ಘಟ್ಟದ ಅಭಿವೃದ್ಧಿ ಕಾಮಗಾರಿಗಳು ಅಭಿವೃದ್ಧಿಯ ದ್ಯೋತಕವಾಗಿಯೇ ಕಾಣುತ್ತವೆ.

ಮೂಲತಃ ಪರಿಸರ ಹೋರಾಟಗಳು ಜನಸಾಮಾನ್ಯರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುತ್ತವೆ. ನಿಸರ್ಗಕ್ಕೆ ಒದಗಿರುವ ಅಪಾಯಗಳ ಬಗ್ಗೆ ನಾಗರಿಕರನ್ನು ಎಚ್ಚರಿಸುತ್ತವೆ. ಸಾಮಾನ್ಯವಾಗಿ ಈ ಜಾಗೃತಿಯ ಸಂದೇಶ ಸಮಾಜದ ಮೇಲ್ವರ್ಗಗಳನ್ನು ತಲುಪುವಷ್ಟು ಸುಲಭವಾಗಿ, ತಳಸ್ತರದ ಜನಸಮುದಾಯಗಳನ್ನು ತಲುಪುವುದಿಲ್ಲ. ತಮ್ಮ ಜೀವನೋಪಾಯದ ರಕ್ಷಣೆಗಾಗಿಯೇ ನಿತ್ಯ ಸಂಘರ್ಷದಲ್ಲಿರುವ ಕೆಳಸ್ತರದ ಶ್ರಮಿಕ ವರ್ಗಕ್ಕೆ ಬದುಕುವ ದಾರಿ ಪ್ರಥಮ ಆಯ್ಕೆಯಾಗುವುದರಿಂದ ಪರಿಸರ ಹೋರಾಟಗಳು ಕೊನೆಯ ಆದ್ಯತೆಯಾಗುತ್ತದೆ. ಈ ಜನಸಮುದಾಯಗಳ ನಡುವೆ ಎರಡೂ ಸಮಸ್ಯೆಗಳನ್ನು ಒಂದೇ ಭೂಮಿಕೆಯಲ್ಲಿಟ್ಟು ನೋಡುವ ವ್ಯವಧಾನ ಮತ್ತು ಸಾಮಾಜಿಕ ಅರಿವು ಮೂಡಿಸಬೇಕಿದೆ.

ಸಾಂವಿಧಾನಿಕ ಉಪಕ್ರಮಗಳಿಂದ, ಆರ್ಥಿಕ ಅಭಿವೃದ್ಧಿ ಕ್ರಿಯೆಗಳಿಂದ ಬಲವರ್ಧನೆಯಾಗಿರುವ ನಗರ/ಪಟ್ಟಣ ವಾಸಿ ಸಮಾಜಗಳಲ್ಲಿ ಈ ಪರಿಸರ ಹೋರಾಟಗಳು ಕೊಂಚ ಮಟ್ಟಿಗೆ ಜಾಗೃತಿ ಮೂಡಿಸುತ್ತವೆ. ಆದರೆ ಪರಿಸರ ಜಾಗೃತಿಗೂ, ಪರಿಸರ ಸೂಕ್ಷ್ಮತೆಯ ಅರಿವಿಗೂ ಅಪಾರ ಅಂತರ ಇರುವುದನ್ನು ಇನ್ನಾದರೂ ಗುರುತಿಸಬೇಕಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಸಮಾಜದ ಎಲ್ಲ ಸ್ತರಗಳಲ್ಲೂ ನಿರಂತರವಾದ ಸಂಪರ್ಕ ಸಾಧಿಸಿ, ಅಲ್ಲಿನ ಯುವ ಸಮೂಹಗಳ ನಡುವೆ ಸಂವಾದಗಳನ್ನು ನಡೆಸುವುದು ವರ್ತಮಾನದ ತುರ್ತು ಎನ್ನಬಹುದು. ಶಾಲಾ ಕಾಲೇಜುಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಾಗರಿಕ ಸಂಘಟನೆಗಳು ಯುವ ಸಮೂಹದಲ್ಲಿ ಪರಿಸರದ ಅರಿವು ಮೂಡಿಸುವ ಪ್ರಯತ್ನಗಳನ್ನು ಮಾಡಬೇಕಿದೆ.

ಅರಿವಿನ ಪಯಣದ ನೂತನ ಮಾದರಿಗಳು
ಈ ಪ್ರಯತ್ನಗಳ ನಡುವೆಯೇ ಮೈಸೂರಿನ ಚಾಮುಂಡಿ ಪರಿಸರಕ್ಕೂ, ದೆಹಲಿ ಬಳಿಯ ಅರಾವಳಿಗೂ, ಹಿಮಾಲಯ ಪರ್ವತ ಶ್ರೇಣಿಗೂ ತಾತ್ವಿಕ ಸಂಬಂಧ ಇರುವುದನ್ನು ಯುವ ಜನತೆಗೆ ಮನದಟ್ಟು ಮಾಡಬೇಕಾಗುತ್ತದೆ. ಸೆಮಿನಾರ್ಗಳಿಗೆ, ವಿಚಾರಗೋಷ್ಠಿಗಳಿಗೆ, ಸಮಾವೇಶಗಳಿಗೆ ಲಕ್ಷಾಂತರ ರೂಗಳನ್ನು ಖರ್ಚು ಮಾಡುವುದಕ್ಕಿಂತಲೂ ಹೆಚ್ಚಾಗಿ, ಸ್ಥಳೀಯ ಮಟ್ಟದಲ್ಲಿ, ನಗರ ಬಡಾವಣೆಗಳಲ್ಲಿ, ಸಣ್ಣ ಪುಟ್ಟ ಹಳ್ಳಿಗಳಲ್ಲಿ ಯುವ ಸಮೂಹಗಳ ನಡುವೆ ಕುಳಿತು, ಪರಿಸರ ರಕ್ಷಣೆ ಮುಂದಿನ ತಲೆಮಾರಿನ ಉಳಿವಿಗೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಬೇಕಾಗುತ್ತದೆ. ಸಂವಾದಗಳನ್ನು ದಾಖಲಿಸುವ ಮೂಲಕ , ಕಿರು ಹೊತ್ತಿಗೆಗಳನ್ನು ಮುದ್ರಿಸುವ ಮೂಲಕ, ಈ ಅರಿವಿನ ಪಯಣಕ್ಕೆ ಒಂದು ತಾತ್ವಿಕ ರೂಪ ನೀಡಬಹುದು.

ತಮ್ಮ ಆಳ್ವಿಕೆ ಹಾಗೂ ಆರ್ಥಿಕ ನೀತಿಗಳಿಗನುಗುಣವಾಗಿ ಪರಿಸರವನ್ನೂ ನೋಡುವ ರಾಜಕೀಯ ಪಕ್ಷಗಳಿಗೆ ಈ ಚಟುವಟಿಕೆ ಅಪಥ್ಯವಾಗುತ್ತದೆ. ಚಾರ್ಧಾಮ್ ಯೋಜನೆಯ ವಿರೋಧವನ್ನು ʼದೇಶದ್ರೋಹʼ ಅಥವಾ ʼಅಭಿವೃದ್ಧಿ ವಿರೋಧಿʼ ಎಂದು ವ್ಯಾಖ್ಯಾನಿಸುವ ವಿಷಮ ಸನ್ನಿವೇಶದಲ್ಲಿ ನಾವಿದ್ದೇವೆ. ಹಾಗಾಗಿ ಈ ಚಟುವಟಿಕೆಗಳು ನಾಗರಿಕರ ನಡುವೆಯೇ ಚಾಲನೆ ಪಡೆಯಬೇಕಿದೆ. ಸರ್ಕಾರಗಳು ಪರಿಸರ ರಕ್ಷಣೆಯನ್ನು ಕುರಿತು ಪ್ರಕಟವಾಗಿರುವ ಸಾವಿರಾರು ಸಂಶೋಧನಾ ಗ್ರಂಥಗಳನ್ನು, ಪರಿಸರವಾದಿಗಳ ಜೀವನ ಚರಿತ್ರೆಯನ್ನು, ಹೋರಾಟಗಳ ಗಾಥೆಯನ್ನು, ವಿದ್ಯಾರ್ಥಿ ಯುವ ಸಮೂಹಕ್ಕೆ ಕೈಗೆಟುಕುವ ಬೆಲೆಯಲ್ಲಿ ಸರಬರಾಜು ಮಾಡುವ ಔದಾರ್ಯ ತೋರಿಸಬೇಕಿದೆ.
ನೆಲ, ಜಲ, ಅರಣ್ಯ, ಪರ್ವತ ಎಲ್ಲವನ್ನೂ ದೈವೀಕ ರೂಪದಲ್ಲಿ ನೋಡುವ ಸಾಂಪ್ರದಾಯಿಕ ಸಮಾಜ, ಈ ಎಲ್ಲ ಪ್ರಾಕೃತಿಕ ಸಂಪನ್ಮೂಳಗಳೂ ವಿನಾಶದ ದಾರಿಯಲ್ಲಿ ಸಾಗುತ್ತಿರುವುದನ್ನು ಗಮನಿಸುವುದೂ ಇಲ್ಲ. ಏಕೆಂದರೆ ದೈವೀಕವಾಗಿ ಕಾಣುವುದು ಅತೀತವೂ, ಅನಿರ್ವಚನೀಯವೂ ಆಗಿಬಿಡುತ್ತದೆ. ಈ ಪ್ರಾಕೃತಿಕ ತಾಣಗಳು ಆರಾಧನಾ ಕೇಂದ್ರಗಳಾಗಿ ರೂಪುಗೊಂಡಾಗ, ಅಲ್ಲಿ ಪರಿಸರ ಕಾಳಜಿಗಿಂತಲೂ ಜನಸಾಮಾನ್ಯರ ಶ್ರದ್ದಾಭಕ್ತಿಗಳು, ನಂಬಿಕೆಗಳು ಮತ್ತು ಧಾರ್ಮಿಕ ಆಚರಣೆಗಳು ಮೇಲುಗೈ ಸಾಧಿಸುತ್ತವೆ. ಪರಿಸರ ರಕ್ಷಣೆಗಾಗಿ ಈ ಚಟುವಟಿಕೆಗಳನ್ನು ವಿರೋಧಿಸುವುದು ʼ ಧರ್ಮವಿರೋಧಿ-ದೈವ ವಿರೋಧಿ ʼ ಆಗುತ್ತದೆ. ಈ ನಿಟ್ಟಿನಲ್ಲಿ ವಿದ್ವತ್ ಪೂರ್ಣ ಸಮಾಜಗಳೂ ಸಹ ಮೌಢ್ಯಕ್ಕೆ ಬಲಿಯಾಗುವುದು ಭಾರತದ ದುರಂತ.

ಪಠ್ಯಕ್ರಮದಿಂದ ಮನೆಬಾಗಿಲಿಗೆ
ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಂತದಿಂದಲೇ ಪರಿಸರದ ಲಕ್ಷಣ, ನಿರ್ವಹಣೆ, ಉಪಯುಕ್ತತೆ, ಪರಿಸರ ನಾಶದ ದುಷ್ಪರಿಣಾಮಗಳು, ಪರಿಸರ ರಕ್ಷಣೆಯ ಮಾರ್ಗಗಳು ಮುಂತಾದ ಬೌದ್ಧಿಕ ಮಾರ್ಗದರ್ಶನವನ್ನು ಪಠ್ಯಕ್ರಮವಾಗಿ ಅಳವಡಿಸಬೇಕಿದೆ. ವರ್ಷಕ್ಕೊಮ್ಮೆ ಪರಿಸರ ದಿನ, ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸುವುದಕ್ಕಿಂತಲೂ, ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಬೌದ್ಧಿಕ ಚಟುವಟಿಕೆಗಳಿಗೆ ಸರ್ಕಾರಗಳು ಉತ್ತೇಜನ, ಪ್ರೋತ್ಸಾಹ ಮತ್ತು ಹಣಕಾಸು ನೆರವು ಒದಗಿಸಬೇಕಿದೆ. ಈ ಕ್ರಮಗಳು ಅಗತ್ಯವಿಲ್ಲ ಎಂದು ಹೇಳುವ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಪರಿಸರನಾಶದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇರುವುದಿಲ್ಲ.
ಪರಿಸರ ರಕ್ಷಣೆ ಎಂದರೆ ಮೇಲ್ನೋಟಕ್ಕೆ ಚೆಂದ ಕಾಣುವಂತೆ ಕಾಪಾಡುವುದಲ್ಲ. ನಿಸರ್ಗದೊಡಲಿನ ಸಂಪನ್ಮೂಲಗಳನ್ನು ರಕ್ಷಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ʼ ಅರಿವು ʼ ಸಮಾಜದಲ್ಲಿ ಅಂತರ್ಗತವಾಗಿ ರೂಪುಗೊಳ್ಳಬೇಕಿದೆ. ಪರಿಸರ ಹೋರಾಟಗಳು ಮೂಡಿಸುವ ʼ ಪ್ರಜ್ಞೆ ʼಯನ್ನು ಮತ್ತಷ್ಟು ವಿಸ್ತರಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸಂವಾದಿಸಿದಾಗ ಅಲ್ಲಿ ಈ ʼ ಅರಿವು ʼ ಮೂಡುತ್ತದೆ. ಆಗ ಚಾರ್ಧಾಮ್ ರಸ್ತೆ ಯೋಜನೆಗಳು ಕರ್ನಾಟಕದ ಪ್ರಜ್ಞಾವಂತ ಸಮಾಜಗಳನ್ನೂ ಜಾಗೃತಗೊಳಿಸುತ್ತವೆ. ಈ ಸಾರ್ವತ್ರಿಕತೆಯನ್ನು (Universality) ಸಾಧಿಸದೆ ಹೋದರೆ, ಪರಿಸರವಾದ ಅಥವಾ ಪರಿಸರ ಹೋರಾಟಗಳು ತಾರ್ಕಿಕ ಅಂತ್ಯವನ್ನು ತಲುಪಲು ಆಗುವುದಿಲ್ಲ. ಅಥವಾ ಉತ್ತಮ, ಸ್ವಚ್ಛ, ಅವಿನಾಶಿ ಪರಿಸರದ ಭವಿಷ್ಯದ ಫಲಾನುಭವಿಗಳನ್ನು ತಲುಪಲಾಗುವುದಿಲ್ಲ.

ಈ ʼ ಪರಿಸರ ಅರಿವು ʼ ಮೂಡಿಸುವ ಕ್ರಿಯೆಯತ್ತ ಇಡೀ ಸಮಾಜ ಮುನ್ನಡೆಯಬೇಕಿದೆ. ಆರ್ಥಿಕತೆ, ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಸಮತೋಲನ ದೃಷ್ಟಿಯಿಂದ ಪರಾಮರ್ಶಿಸುವ ನಿಟ್ಟಿನಲ್ಲಿ ಸಮಾಜ ಸಾಗಬೇಕಿದೆ.
-೦-೦-೦-೦-೦-






