ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ(MLA Ashok Kumar Rai) ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ(BJP) ಪುತ್ತೂರು ಗ್ರಾಮಾಂತರ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಫೆಬ್ರವರಿ 16ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ರಾಜ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣ ಸ್ವಾಮಿ ಅವರನ್ನು ನಿಂದಿಸಿರುವುದಾಗಿ ಹಾಗೂ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯವನ್ನು ಅವಹೇಳನಕಾರಿಯಾಗಿ ಉಲ್ಲೇಖಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಸಮುದಾಯಗಳ ನಡುವೆ ದ್ವೇಷ ಉಂಟಾಗುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್, ʼ ವಿಬಿ ಜಿರಾಮ್ಜಿ ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಮಾಡಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಪಾದಯಾತ್ರೆಗಳು ನಡೆದ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿಯವರು ಆ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅವರು ಮಾತನಾಡಿರುವುದನ್ನು ಶಾಸಕರು ಅಪಾರ್ಥ ಮಾಡಿಕೊಂಡು, ಅವರ ಕುರಿತು ಅಗೌರವಯುತವಾಗಿ ಮಾತನಾಡಿದ್ದಾರೆ.ʼ

ʼಶಾಸಕರು ಅವರದೇ ಪಕ್ಷದ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಇರುವಾಗ ಅವರಿಗೆ ತಿಳಿಹೇಳುವುದನ್ನು ಬಿಟ್ಟು ಪೊಲೀಸರು, ಸರಕಾರಿ ಅಧಿಕಾರಿಗಳನ್ನು ನಿಂದಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇದೀಗ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದೇವಸ್ಥಾನಕ್ಕೆ ಬರುವಾಗ ರಾಜಕೀಯವನ್ನು ಚಪ್ಪಲಿಯಂತೆ ಹೊರಗಿಟ್ಟು ಬನ್ನಿ ಎಂದವರೇ ಅಲ್ಲಿ ನಿಂತು ರಾಜಕೀಯ ಮಾತನಾಡಿದರು. ಇದನ್ನು ಬಿಜೆಪಿ ಖಂಡಿಸುತ್ತದೆʼ.

ʼಶಾಸಕರಾಗಿ ಅವರು ಎರಡೂವರೆ ವರ್ಷದಲ್ಲಿ ಅವರ ಕೆಲಸ ಸರಿಯಾಗಿ ಮಾಡುತ್ತಿದ್ದಾರೆ. ಆದರೆ ಅವರ ಕೆಲಸಗಳು ಈ ರೀತಿಯ ಕೆಟ್ಟ ಪದಗಳ ಪ್ರಯೋಗದಿಂದಾಗಿ ಗೋಡೆಯ ಬಣ್ಣವನ್ನು ಮಸಿ ನುಂಗಿದಂತೆ ಆಗುತ್ತಿದೆ. ಅವರು ಬಹುಮತದಿಂದ ಆಯ್ಕೆಯಾಗಿರುವ ಶಾಸಕರಲ್ಲ. ಅವರ ವಿರುದ್ಧ 1 ಲಕ್ಷ ಹಿಂದೂ ಮತಗಳಿವೆ ಎನ್ನುವುದನ್ನು ಗಮನಿಸಿಕೊಂಡು ಕೆಲಸ ಮಾಡಬೇಕು. ಶಾಸಕರ ಇಂತಹ ವರ್ತನೆಯಿಂದ ಪುತ್ತೂರಿನ ಇತಿಹಾಸಕ್ಕೂ ಕಳಂಕ ಬರುತ್ತದೆ. ಅವರು ಮಾಡಿರುವ ತಪ್ಪನ್ನು ಸರಿಪಡಿಸುವ ಕೆಲಸವನ್ನು ಅವರೇ ಮಾಡಬೇಕು. ಈ ಹಿನ್ನೆಲೆಯಲ್ಲಿ ಎಸ್ಸಿ ಮೋರ್ಚಾದ ವತಿಯಿಂದ ಪೊಲೀಸರಿಗೆ ದೂರು ನೀಡುತ್ತಿದ್ದೇವೆʼ ಎಂದು ಹೇಳಿದರು.

ದಲಿತ ಮುಖಂಡ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ʼಪರಿಶಿಷ್ಟ ಜಾತಿಗೆ ಸೇರಿದ ನಾಯಕನನ್ನು ಪ್ರಾಣಿಗೆ ಹೋಲಿಸಿ ಶಾಸಕರು ಮಾತನಾಡಿದ್ದಾರೆ. ಇದು ಸಮುದಾಯಕ್ಕೆ ಸಲ್ಲದ ಮಾತು. ಬಿಜೆಪಿ-ಕಾಂಗ್ರೆಸ್ನವರು ರಾಜಕೀಯಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿಕೊಳ್ಳಬಹುದು. ಆದರೆ ಶಾಸಕರ ಈ ಹೇಳಿಕೆ ಇಡೀ ಪರಿಶಿಷ್ಟ ಜಾತಿಗೆ ಅನ್ವಯವಾಗುತ್ತದೆ. ಇದರಿಂದ ಇಡೀ ಸಮುದಾಯಕ್ಕೆ ನೋವಾಗಿದೆ. ಎಂದು ಹೇಳಿದರು.






