ವಿಶೇಷ ಲೇಖನ : ಭವ್ಯಶ್ರೀ, ಪತ್ರಕರ್ತೆ ಬೆಂಗಳೂರು
ಬೆಂಗಳೂರು : ಇಷ್ಟು ದಿನಗಳ ಕಾಲ ಗ್ರಾಮೀಣ ಭಾಗದ ಬಡವರ ಆಸರೆಯಾಗಿದ್ದ ಮನ್ರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಆ ಜಾಗದಲ್ಲಿ ನೂತನವಾಗಿ ವಿಬಿಜಿ- ರಾಮ್ ಜಿ ಕಾಯ್ದೆಯನ್ನು ಪ್ರತಿಷ್ಠಾಪಿಸಿದ್ದು, ಇದು ದೇಶದ ಬಡವರ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆಯೇ ಇದೀಗ ಒಂದೊಂದಾಗಿಯೇ ಮನ್ರೇಗಾದ ಯಶೋಗಾಥೆಗಳು, ಬಡ ಕುಟುಂಬಗಳು ದಿನಗೂಲಿಯ ಈ ಮಹತ್ವದ ಯೋಜನೆಯಿಂದ ನೆಮ್ಮದಿಯ ಬದುಕು ಸಾಗಿಸಿದ್ದರ ಸಂಗತಿಗಳು ಬಯಲಾಗುತ್ತಿವೆ. ಅವುಗಳು ಮನ್ರೇಗಾದ ಪರಿಕಲ್ಪನೆ ಹಾಗೂ ದೂರದೃಷ್ಟಿಯನ್ನು ಎತ್ತಿ, ಒತ್ತಿ ಹೇಳುತ್ತಿವೆ.

ಮನ್ರೇಗಾ ಕೇವಲ ಯೋಜನೆಯಲ್ಲ ಅದೊಂದು ಸಂಜೀವಿನಿ ರೀತಿಯಲ್ಲಿ ಹಸಿದ ಹೊಟ್ಟೆಯನ್ನು ತಣಿಸುವ ಕೆಲಸವನ್ನು ಮಾಡುತ್ತಿತ್ತು. ಈ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕು ಜಿಲ್ಲೆ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಹೊನ್ನಿಗನಹಳ್ಳಿನ ಬಡ ಕುಟುಂಬ ಮನ್ರೇಗಾವನ್ನು ಅಪ್ಪಿಕೊಂಡ ರೀತಿ ನಿಜಕ್ಕೂ ಮೆಚ್ಚುಗೆಯನ್ನು ತರಿಸುತ್ತದೆ. ತನ್ನ ಚಿಕ್ಕ ಕುಟುಂಬದ ಜೊತೆ ವಾಸವಿದ್ದ ಬಸಮ್ಮ ಎಂಬ ಮಹಿಳೆ ಸುಮಾರು ಆರು ತಿಂಗಳಿಂದ ನರೇಗಾ ಯೋಜನೆ ಅಡಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ 100 ದಿನದಲ್ಲಿ 77 ದಿನ ಕೆಲಸ ಪೂರೈಸಿರುವ ಬಸಮ್ಮ 28,000 ವರೆಗೆ ಸಂಪಾದಿಸಿರುವುದು ಯೋಜನೆಯ ಯಶಸ್ಸು ತಿಳಿಸುತ್ತದೆ.
ಇದನ್ನೂ ಓದಿ : ಪ್ರಜೆಗಳೇ ದೇವರು: ಹೊಸ ಪ್ರಧಾನಮಂತ್ರಿ ಕಚೇರಿ ʼಸೇವಾ ತೀರ್ಥʼ ಉದ್ಘಾಟನೆ
80ರ ವಯಸ್ಸು, ವಿಶ್ರಮಿಸಬೇಕಾದ ಹೊತ್ತು, ಗಂಡ ಇಲ್ಲ ಕುಟುಂಬದ ಬಡತನ, ಮಗ, ಸೊಸೆ ಹಾಗೂ ಮೊಮ್ಮಕ್ಕಳಿಗೆ ಆಸರೆಯಾಗಿರಬೇಕಾದ ಜೀವವದು. ಆದರೆ ಇರುವಷ್ಟು ದಿನ ಯಾರ ಹತ್ತಿರ ಬೇಡದೆ ಬದುಕಬೇಕೆಂಬ ಗಟ್ಟಿ ಹೃದಯದ ಮಹಿಳೆ ಬಸ್ಸಮ್ಮ. ಇಳಿ ವಯಸ್ಸಿನಲ್ಲಿಯೂ ಆರ್ಥಿಕವಾಗಿ ಈ ಹಿರಿ ಜೀವಕ್ಕೆ ಆಸರೆಯಾಗಿ ನಿಂತದ್ದು ಮಾತ್ರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಂದರೆ ನಂಬಲೇಬೇಕು.

ಸೊಸೆ ರಾಜೇಶ್ವರಿ ಗಾರ್ಮೆಂಟ್ ಕೆಲಸದಲ್ಲಿದ್ದರೆ, ಮಗ ಪುಟ್ಟರಾಜು ಸಣ್ಣ ಪುಟ್ಟ ಜಮೀನು ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದನು, ಮೊಮ್ಮಕ್ಕಳಾದ ಬಿಂದುಶ್ರೀ ಪಿಯುಸಿ ಹಾಗೂ ಅಭಿಷೇಕ್ ಡಿಗ್ರಿ ಓದುತ್ತಿದ್ದು, ಹೇಗೋ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಒಂದು ದಿನ ಈ ಬಡ ಪುಟ್ಟ ಕುಟುಂಬಕ್ಕೆ ಬರ ಸಿಡಿಲು ಬಡಿದಂಗೆ ಆಗಿತ್ತು. ಮಗ ಪುಟ್ಟರಾಜುಗೆ ಹೃದಯಘಾತವಾಗಿ ತೀರಿ ಹೋಗುತ್ತಾರೆ. ಈ ವಯಸ್ಸಾದ ಕಾಲದಲ್ಲಿ ಮಗನ ಜೊತೆ ಕಾಲ ಕಳೆಯಬೇಕಿದ್ದ ಬಸಮ್ಮ ಮಗನನ್ನೇ ಕಣ್ಣೀರಿನಲ್ಲೇ ಕೈ ತೊಳೆಯುವಂತಾಯಿತು. ಜೀವನ ನಡೆಸುವುದು ಅನಿವಾರ್ಯ, ಕೈಯಲ್ಲಿ ಬಿಡಿಗಾಸಿಲ್ಲ, ಸೊಸೆ ಗಾರ್ಮೆಂಟ್ಸ್ ಹೋಗಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕುಟುಂಬವನ್ನು ನಿರ್ವಹಿಸುವುದು ತುಂಬಾ ಕಷ್ಟ ಸಾಧ್ಯವಾಗಿತ್ತು.
ಅಲ್ಲದೆ ಮನೆಯಲ್ಲಿ ಇದ್ದರೆ ಮಗನನ್ನು ನೆನೆದು ದುಃಖ ಹೆಚ್ಚಾಗುತ್ತದೆ ಎಂದು ಕೂಲಿಕಾರರ ಗುಂಪು ಅವರನ್ನು ಆದಷ್ಟು ಕೆಲಸದಲ್ಲಿ ತೊಡಗಿಸಿ, ಬಸಮ್ಮಳ ದುಃಖ ಮರೆಮಾಚಿಸಲು ತಮ್ಮ ಜೊತೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ವಿಧಿಯಾಟ ಹೇಗಿದೆ ನೋಡಿ! ಮೊಮ್ಮಗ ಡಿಗ್ರಿ ಓದುತ್ತಿದ್ದಾಗಲೇ ತನ್ನ ತಂದೆಗೆ ಹೃದಯಘಾತ, ಅದೇ ದಿನ ಪರೀಕ್ಷೆ ಬರೆಯಬೇಕಾಗಿತ್ತು, ಆ ತಂದೆಯಿಲ್ಲದ ಸಮಯದಲ್ಲಿ ಪರೀಕ್ಷೆ ಬರೆಯದೇ ಆತ ಅನುತ್ತೀರ್ಣರಾಗಿರುತ್ತಾನೆ.

ಇದನ್ನೆಲ್ಲಾ ನೆನೆದ ಬಸಮ್ಮ ನರೇಗಾ ನನ್ನಂತ ವಯಸ್ಸಾದ ಬಡಜೀವಕ್ಕೆ ಜೀವನ ನೀಡಿ, ಮರುಭೂಮಿಯಲ್ಲಿ ನೀರು ಸಿಕ್ಕಂತೆ ಸಾಕಿ ಸಲುಹಿದೆ, ವಯಸ್ಸಾದ ನನಗೆ ಎಲ್ಲೂ ಸ್ಕೂಲಿಗೆ ಕರೆಯುತ್ತಿರಲಿಲ್ಲ, ಕರೆದರೂ ಅನುಕಂಪದಿಂದಷ್ಟೇ.

ಆದರೆ ನರೇಗಾ ಯೋಜನೆ ವಿಭಿನ್ನವಾಗಿದೆ. ಎಲ್ಲರೂ ಸಮಾನರು ಎಲ್ಲರಿಗೂ ಸಮಾನ ಕೂಲಿ ಎಂಬ ಪರಿಕಲ್ಪನೆ ಇದರದ್ದಾಗಿದೆ. ಹೀಗಾಗಿ ನನ್ನಂತ ವಯಸ್ಸಾದವರಿಗೆ ಅರ್ಧ ಕೆಲಸ, ಪೂರ್ತಿ ಸಂಬಳ ನೀಡುವ ಮಹತ್ವದ ಯೋಜನೆಯಾಗಿದೆ, ನನ್ನ ದುಃಖ ಮರೆತು ಎಲ್ಲರೂ ಜೊತೆಗೂಡಿ ಕೆಲಸ ಮಾಡಬಹುದು. ಇಂತಹ ಉತ್ತಮ ಯೋಜನೆ ತಂದಿರುವುದು ನಮ್ಮಂತ ಎಷ್ಟೋ ವಯಸ್ಸಾದ ಮುದಿ ಜೀವಕ್ಕೆ ಆಸರೆಯಾಗಿದೆ.

ಇಂದು ಇಲ್ಲ ನಾಳೆ ಹೋಗುವ ಜೀವ ನನ್ನದು. ಮುಂದಿನ ದಿನದಲ್ಲಿ ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ಇಲ್ಲೇ ಕೆಲಸ ಮಾಡಿ ಅನ್ನ ಹುಟ್ಟಿಸಿಕೊಂಡು ಬದುಕುತ್ತೇನೆ ಇಂತಹ ಯೋಜನೆಗೆ ಯಾವುದೇ ಕಂಟಕ ಬರಬಾರದು ಎಂಬ ಸಾರ್ಥಕ ಮಾತುಗಳನ್ನು ಕೇಳಿ ಎಂತವರ ಕರುಳು ಮಿಡಿಯುವುದಿಲ್ಲವೇ..?

ಈ ಬಸಮ್ಮಳ ಬದುಕಿನ ಬವಣೆ ನೀಗಿಸಿ, ಜೀವನದ ಕಷ್ಟದ ಕಾಲದಲ್ಲಿ ಕೈ ಹಿಡಿದು ನಡೆಸಿದ ನರೇಗಾ ಯೋಜನೆಯು ಅಂದಿಗೂ, ಇಂದಿಗೂ ಹಾಗೂ ಎಂದೆಂದಿಗೂ ಪ್ರಸ್ತುತವಾಗಿರುತ್ತದೆ. ಹೀಗೆ ಬಸಮ್ಮಳಂತ ಕೋಟ್ಯಾಂತರ ಹಸಿದ ಹೊಟ್ಟೆಗಳ, ಆರ್ಥಿಕವಾಗಿ ನೊಂದ ಜೀವಗಳ ಪಾಲಿಗೆ ಈ ಯೋಜನೆಯು ಸಾರ್ವಕಾಲಿಕ ಸ್ಮರಣೀಯವಾಗಿರುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.






