ಬೆಂಗಳೂರು : ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್ ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಮೊದಲ ಆದ್ಯತೆ ಅವರಿಗೆ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಬಿಜೆಪಿ ಮುಖಂಡನಿಗೆ ಸಚಿವ ಸ್ಥಾನಮಾನ ನೀಡಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಎಲ್ಲರನ್ನು ಗೌರವಿಸುತ್ತದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗಳಿಗೆ ಇರುವುದರಿಂದ ಮಾಡಿರಬಹುದು. ಇದರಲ್ಲಿ ತಪ್ಪೇನಿಲ್ಲ. ಡಿಕೆ ಶಿವಕುಮಾರ್ ದೆಹಲಿ ಪ್ರವಾಸಕ್ಕೆ ಹೋಗುವಾಗ ಚುನಾವಣೆ ವಿಚಾರವಾಗಿ ಸಭೆ ಮಾಡಲು ಕರೆದಿದ್ದಾರೆ ಎಂದು ನಿಮಗೆ ಮಾಹಿತಿ ನೀಡಿದ್ದಾರೆ. ಅವರು ಉಪಮುಖ್ಯಮಂತ್ರಿ ಆದಾಗ ಮಾತ್ರ ದೆಹಲಿಗೆ ಹೋಗುತ್ತಿಲ್ಲ. ಕಳೆದ 40 ವರ್ಷಗಳಿಂದ ನಿರಂತರವಾಗಿ ದೆಹಲಿಗೆ ಹೋಗುತ್ತಿದ್ದಾರೆ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೋಗುತ್ತಾರೆ. ಈಗ ಅವರು ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದ ಕೆಲಸಗಳು ಇರುತ್ತವೆ. ಇನ್ನು ದೆಹಲಿಗೆ ಹೋದಾಗ, ರಾಜಕೀಯವಾಗಿ ಅಲ್ಲದಿದ್ದರೂ ಕುಶಲೋಪರಿ ಚರ್ಚೆಗೆ ಭೇಟಿ ಮಾಡುತ್ತಾರೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗ ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಮಾಡಲು ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರಿನ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಹೀಗಾಗಿ ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ ಎಂದು ಡಿಸಿಎಂ ದೆಹಲಿ ಭೇಟಿಯ ಗುಟ್ಟನ್ನು ಸುರೇಶ್ ಬಿಟ್ಟುಕೊಟ್ಟಿಲ್ಲ.
ಸಿಎಂ ಬದಲಾವಣೆಯ ವಿಚಾರದಲ್ಲಿ ಯತೀಂದ್ರ ಸಿದ್ದಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಈ ವಿಚಾರವಾಗಿ ಡಿಸಿಎಂ ಅವರು ಈಗಾಗಲೇ ಹೇಳಿದ್ದಾರೆ. ಅವರಷ್ಟು ತಿಳುವಳಿಕೆ ಇಲ್ಲ. ಅವರಷ್ಟು ದೊಡ್ಡವರು ನಾವಲ್ಲ. ಅವರು ಏನು ಹೇಳುತ್ತಾರೋ ಅದೇ ವೇದವಾಕ್ಯ ಎಂದು ವ್ಯಂಗ್ಯವಾಡಿದ್ದಾರೆ.
ನಮಗೆ ಸಿಗುವ ನೋಟೀಸ್ ಯತೀಂದ್ರ ಅವರಿಗೆ ಏಕಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು. ಅವರೇ ಹೈಕಮಾಂಡ್ ಆಗಿರುವುದರಿಂದ ಏನೂ ಸಮಸ್ಯೆ ಇಲ್ಲ. ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಹಾಗೂ ಸರ್ಕಾರದ ತೀರ್ಮಾನದಂತೆ ಆಗುತ್ತದೆ. ಇದರಲ್ಲಿ ಲಾಭಿ ಮಾಡಿ ಗಿಟ್ಟಿಸಿಕೊಳ್ಳುವಂತಹದ್ದು ಏನೂ ಇಲ್ಲ. ಇದು ರಾಜ್ಯದ ರೈತರ ಜವಾಬ್ದಾರಿಯುತ ಸಂಸ್ಥೆ. ರೈತರ ಹಿತ ಕಾಯುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಹಾಗೂ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ನಾನು ಯಾರಿಗೂ ಈ ಜವಾಬ್ದಾರಿ ಬೇಕು ಎಂದು ಕೇಳುವುದಿಲ್ಲ, ಅದರ ಅಗತ್ಯವಿಲ್ಲ. ಸಂಸದನಾಗಿ ನಾನು ಕೆಲಸ ಮಾಡಿದ್ದೇನೆ, ನನಗೆ ನನ್ನದೇ ಆದ ಜವಾಬ್ದಾರಿ ಇತಿ ಮಿತಿಗಳಿವೆ. ನಾನು ಯಾವುದನ್ನು ಆಸೆಪಟ್ಟು ಕೇಳುವುದಿಲ್ಲ, ಅದರ ಹಿಂದೆ ಹೋಗುವವನೂ ಅಲ್ಲ ಎಂದು ತ್ಯಾಗದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ : ಅಮುಲ್, ಕಂಟ್ರಿ ಡಿಲೈಟ್, ಮದರ್ ಡೈರಿ ಹಾಲು ಗುಣಮಟ್ಟ ಪರಿಶೀಲನೆ: ಎಷ್ಟು ಸುರಕ್ಷಿತ?
“ನನಗೆ ಯಾವ ಆಸೆ, ಆಕಾಂಕ್ಷೆ ಇಲ್ಲ. ಇರುವ ಜವಾಬ್ದಾರಿ ನಿಭಾಯಿಸುವುದೇ ಕಷ್ಟ. ನನಗೆ ಈಗಾಗಲೇ ಅನೇಕ ಜವಾಬ್ದಾರಿಗಳಿವೆ. ನನಗೆ ವಿಶ್ರಾಂತಿ ಬೇಕು ಎಂದು ಕೇಳಿದವನು ನಾನು. ಜವಾಬ್ದಾರಿ ಬಂದಾಗ ಅದನ್ನು ನಿಭಾಯಿಸುವ ದೃಷ್ಟಿಕೋನ ಬಹಳ ಮುಖ್ಯ. ರೈತರ ಹಿತ, ನಂದಿನ ಬ್ರ್ಯಾಂಡ್ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಯಾವುದೋ ಖುಷಿಗಾಗಿ ಹೋಗಿ ಕೂರುವ ಸ್ಥಾನವಲ್ಲ. ದೆಹಲಿಯಲ್ಲಿ ಡೈರಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ನಡೆಯುತ್ತಿದ್ದು, ಅಧಿಕಾರಿಗಳು ಆಡಳಿತ ಮಂಡಳಿ ಸೇರಿ 20 ಜನರನ್ನು ಕರೆದುಕೊಂಡು ಹೋಗುತ್ತಿದ್ದೇನೆ. ರಾಜ್ಯದ ನಂದಿನಿಯನ್ನು ಭವಿಷ್ಯದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿ ರಾಜಕಾರಣ ಏನಿಲ್ಲ. ಎಲ್ಲಾ ರಾಜಕಾರಣ ಕರ್ನಾಟಕದಲ್ಲಿ ಮಾಧ್ಯಮಗಳ ಬಳಿಯೇ ಇದೆ. ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್ ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿರುವುದು, ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರವಾಗಿ ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಶಾಸಕರ ಪ್ರವಾಸ ವೈಯಕ್ತಿಕವಾಗಿಯೂ ಇರಬಹುದು, ಬೇರೆಯವರ ಪ್ರಯೋಜಕತ್ವವೂ ಇರಬಹುದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ. ಈ ರೀತಿ ಏನಾದರೂ ಹುಟ್ಟಾಕುತ್ತಿದ್ದರೆ, ಅದು ರಾಜಕೀಯ ದುರುದ್ದೇಶದಿಂದ ಮಾತ್ರ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ನಮ್ಮ ಪಕ್ಷದ ಕೆಲವರು ಮಾಡುತ್ತಿರಬಹುದು. ನಮ್ಮ ಪಕ್ಷದವರು ಮಾಡುತ್ತಿದ್ದಾರೋ, ವಿರೋಧ ಪಕ್ಷದವರು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದರಲ್ಲಿ ಶಿವಕುಮಾರ್ ಅವರು ಪಾಲುದಾರರಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ನೀವು ಹಾಗೂ ಶಿವಕುಮಾರ್ ಅವರು ತಾಳ್ಮೆ ಬಗ್ಗೆ ಮಾತನಾಡುತ್ತಿದ್ದಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ನಾನು ಹಾಗೆ ಭಾವಿಸಿದ್ದು, ನೀವುಗಳೂ ಹಾಗೇ ಭಾವಿಸಿಕೊಳ್ಳಿ, ನಾನು ಉಡುಗೊರೆ ಕೊಟ್ಟಿದ್ದು ಅದು ಸಾಹೇಬರಿಗೆ ಅಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಮ್ಮ ಕ್ಷೇತ್ರಗಳಲ್ಲಿ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಫಲಿತಾಂಶ ಒಳ್ಳೆಯದಾಗುತ್ತದೆಯೋ, ಕೆಟ್ಟದಾಗುತ್ತದೋ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡಲೇ ಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸುರೇಶ್ ಹೇಳಿದ್ದಾರೆ.
ನಾನು ಹಾಗೂ ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ, ಹೈಕಮಾಂಡ್ ನಾಯಕರ ಮುಂದೆ ಮಾತನಾಡುತ್ತಿದ್ದೇವೆ ಎಂಬ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೇಳಿರುವುದು ಶಿವಕುಮಾರ್ ಅವರು, ನನ್ನನ್ನು ಕೇಳಿದರೆ, ನಾನು ಏನು ಹೇಳಲಿ?. ಸಿಎಂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ನೀವು ಹೇಳಿದ್ದಿರಿ ಎಂದು ಕೇಳಿದಾಗ, “ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಇವತ್ತಿಗೂ ನನಗೆ ಭರವಸೆ ಇದೆ ಎಂದು ತಮ್ಮ ನಿರೀಕ್ಷೆಯನ್ನು ಹೊರಗೆಡವಿದ್ದಾರೆ.
ನಾವು ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರು ಸಿಕ್ಕಾಗೆಲ್ಲ ಭೇಟಿ ಮಾಡುತ್ತಲೇ ಇರುತ್ತೇವೆ. ಕೆಲವು ವಿಚಾರ ಚರ್ಚೆ ಮಾಡುತ್ತಲೇ ಇರುತ್ತೇವೆ. ಅದು ನಮ್ಮ ಹಾಗೂ ಅವರ ಬಾಂಧವ್ಯದ ವಿಚಾರ. ಪಕ್ಷ, ಕ್ಷೇತ್ರ ಹಾಗೂ ಇತರೆ ವಿಚಾರ ಚರ್ಚೆ ಮಾಡುತ್ತೇವೆ. ಕೆಲವರು ನಿರ್ದಿಷ್ಟ ಕೆಲಸಕ್ಕಾಗಿ ದೆಹಲಿಗೆ ಹೋಗುತ್ತಾರೆ. ಶಿವಕುಮಾರ್ ಅವರು ಆ ವರ್ಗಕ್ಕೆ ಸೇರುವುದಿಲ್ಲ. ಶಾಸಕರ ವಿದೇಶ ಪ್ರವಾಸದ ಬಗ್ಗೆ ನಮಗೆ ಗೊತ್ತಿಲ್ಲ. ಈ ವಿಚಾರವನ್ನು ಯಾರು ಪ್ರವಾಸಕ್ಕೆ ಹೋಗುತ್ತಿದ್ದಾರೆ ಹಾಗೂ ಈ ಪ್ರವಾಸದ ಆಯೋಜಕರನ್ನು ಕೇಳಬೇಕು. ಶಿವಕುಮಾರ್ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅಷ್ಟನ್ನು ಮಾತ್ರ ನಾನು ಸ್ಪಷ್ಟಪಡಿಸುತ್ತೇನೆ” ಎಂದು ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಹಗರಣ: ಕೇಂದ್ರ ಉತ್ತರಿಸಬೇಕು..

ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿನ ಹಗರಣ ನಡೆದಿದೆ ಎಂಬ ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಿ, ಇದು ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ. ಇದರಲ್ಲಿ ಯಾವುದೇ ಹೊಣೆಗಾರಿಕೆ ನಿಗದಿಪಡಿಸದೇ, ಕೇಂದ್ರ ಸರ್ಕಾರ ತನಗೆ ಬೇಕಾದ ಸಂಸ್ಥೆಗಳನ್ನು ಗುರುತಿಸಿತ್ತು. ಯುವಕರ ಕೌಶಲ್ಯ ವೃದ್ಧಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗ ನೀಡುವ ಉದ್ದೇಶ ಈ ಯೋಜನೆಯದ್ದಾಗಿತ್ತು. ಆದರೆ ಇಲ್ಲಿ ಕೌಶಲ್ಯ ಪಡೆದವರು, ಉದ್ಯೋಗ ಪಡೆದವರು ಇಲ್ಲ. ಹಣ ಮಾತ್ರ ಖಾಲಿಯಾಗಿದೆ. ಈ ಹಣ ಎಲ್ಲಿ ಹೋಗಿದೆ ಎಂದು ಹುಡುಕಬೇಕಿದೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಈ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಇದಕ್ಕಾಗಿ ಲಕ್ಷಾಂತರ ಕೋಟಿ ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ಇಷ್ಟೆಲ್ಲಾ ಖರ್ಚು ಮಾಡಿದ್ದರೂ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ಯಾಕೆ ಇದೆ ಎಂದರೆ ಈ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಇದರಲ್ಲಿ ಬಿಜೆಪಿ ನಾಯಕ ಕೈವಾಡವಿದೆ. ಆರ್ ಎಸ್ಎಸ್ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ.
“ಕೇಂದ್ರ ಸರ್ಕಾರ ಏನೇ ಮಾಡಿದರೂ ಯಾರು ಕೇಳುವಂತಿಲ್ಲ. ದೇಶದಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕರ್ನಾಟಕ ಮಾತ್ರವಲ್ಲ, ದೇಶವ್ಯಾಪ್ತಿ ಈ ಪರಿಸ್ಥಿತಿ ಇದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಅವರ ಸರ್ಕಾರ ಇದನ್ನು ಮುಚ್ಚಿಹಾಕಿಕೊಂಡಿದೆ. ಕರ್ನಾಟಕದಲ್ಲಿ ಸಿಎಜಿ ವರದಿ ಇದನ್ನು ಬಹಿರಂಗಪಡಿಸಿದೆ. ಈ ವಿಚಾರದಲ್ಲಿ ತನಿಖೆ ಆಗಬೇಕು, ಕೇಂದ್ರ ಸರ್ಕಾರ ಉತ್ತರ ನೀಡಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂದು ಬಯಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ಮೇಲೆ ಮಹಿಳಾ ಸಂಸದರ ಹಲ್ಲೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವುದು ಸದಸ್ಯರ ಹಕ್ಕು. ಸಂಸತ್ತಿನಲ್ಲೇ ಆಗಲಿ, ವಿಧಾನಮಂಡಲ ಅಧಿವೇಶನದಲ್ಲೇ ಆಗಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಾವಿಗಿಳಿದು ಹೋರಾಟ ಮಾಡಲು ಅವಕಾಶವಿದೆ. ಬಾವಿಗಿಳಿದು ಪ್ರಧಾನಿಮುಂದೆ ನಿಂತರು ಎಂದ ಮಾತ್ರಕ್ಕೆ ಪ್ರಧಾನಮಂತ್ರಿ ಮೇಲೆ ಹಲ್ಲೆ ಮಾಡುವ ಸಹೋದರಿ ಸಂಸದೆಯರು ಯಾರು ಇಲ್ಲ. ನಾನು ಲೋಕಸಭೆಯಲ್ಲಿ 11 ವರ್ಷ ಕೆಲಸ ಮಾಡಿದ್ದೇವೆ. ಪ್ರಧಾನಿ ಮುಂದೆ ನಿಂತಿದ್ದೇವೆ. ಅವರ ಮುಂದೆ ನಿಂತ ಮಾತ್ರಕ್ಕೆ ಹಲ್ಲೆ ಮಾಡಿದಂತೆ ಅಲ್ಲ. ವಿಧಾನಸಭೆಯಲ್ಲೂ ಮುಖ್ಯಮಂತ್ರಿಗಳ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತಾರೆ. ಆಗ ಸ್ಪೀಕರ್ ಅವರು ಪಕ್ಕಕ್ಕೆ ಬರುವಂತೆ ಸೂಚನೆ ನೀಡುತ್ತಾರೆ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯಾವುದೇ ಯೋಜನೆಗಳು ಇಲ್ಲವಾದ ಕಾರಣ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಮಹಿಳಾ ಸಂಸದರು ಪ್ರಧಾನಿಗಳ ಮೇಲೆ ಹಲ್ಲೆ ಮಾಡುವ ಪರಿಸ್ಥಿತಿ ಇದೆಯಾ? ಇಲ್ಲವೇ ಎಂದು ಆಲೋಚಿಸಬೇಕು. ಸ್ಪೀಕರ್ ಅವರು ನಿಷ್ಪಕ್ಷಪಾತವಾಗಿ ನ್ಯಾಯ ಸಮ್ಮತವಾಗಿ ತೀರ್ಪು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಲೋಕಸಭಾ ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿ. ಇಲ್ಲಿ ನೈತಿಕತೆ ಮುಖ್ಯ. ಅವಿಶ್ವಾಸ ನಿರ್ಣಯದಲ್ಲಿ ಏನೂ ಆಗುವುದಿಲ್ಲ. ಅವರಿಗೆ ಬಹುಮತವಿದೆ. ಹೀಗಾಗಿ ಅವಿಶ್ವಾಸ ನಿರ್ಣಯ ಸೋಲಲಿದೆ. ಹಾಗೆಂದ ಮಾತ್ರಕ್ಕೆ ಅವರ ಆರೋಪ ವಸ್ತು ಸ್ಥಿತಿಯೇ ಅಲ್ಲವೇ ಎಂಬುದು ಮುಖ್ಯ. ಅದು ವಸ್ತುಸ್ಥಿತಿಯಲ್ಲವಾದರೆ ಅವರು ಸುಳ್ಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕ್ಷಮೆ ಕೋರಬೇಕು. ಲೋಕಸಭೆ ಘನತೆ ಎತ್ತಿ ಹಿಡಿಯಬೇಕಾಗಿರುವುದು ಸ್ಪೀಕರ್ ಅವರ ಕರ್ತವ್ಯ. ರಾಷ್ಟ್ರಪತಿ ಭಾಷಣ ವಂದನಾ ನಿರ್ಣಯವನ್ನು ಪ್ರಧಾನಮಂತ್ರಿಗಳ ಉತ್ತರ ವಿಲ್ಲದೇ ಅಂಗೀಕಾರ ಮಾಡಿರುವ ಬಗ್ಗೆ ಕೇಳಿದಾಗ, “ಅದಕ್ಕೆ ಇನ್ನು ಸಮಯವಿದೆ. ಅವರು ಲೋಕಸಭೆಯಲ್ಲಿ ತಮಗೆ ಬೇಕಾದ ಬಿಲ್ ಅನುಮೋದನೆ ನೀಡುತ್ತಾರೆ. ಮಹಿಳಾ ಸಂಸದೆಯರ ಮೇಲೆ ಮಾಡಿರುವ ಆರೋಪ ನಿರಾಧಾರ, ರಾಜಕೀಯ ಪ್ರೇರಿತ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ತಿಳಿಸಿದ್ದಾರೆ.






