ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan) ಮಾರ್ಚ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಬಹುದು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ನಟಿ ರಚಿತಾ ರಾಮ್ (Rachitha Ram) ಪ್ರತಿಕ್ರಿಯಿಸಿದ್ದು, ಈ ಸುದ್ದಿ ನಿಜವಾದರೆ ನಾನು ಎಲ್ಲರಿಗಿಂತ ಹೆಚ್ಚು ಖುಷಿಪಡುತ್ತೇನೆ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಚಿತಾ ರಾಮ್, ʼದರ್ಶನ್ ಸರ್ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂಬ ಸುದ್ದಿ ನಿಜವಾದರೆ ನಾನು ಎಲ್ಲರಿಗಿಂತ ಹೆಚ್ಚು ಖುಷಿಪಡುತ್ತೇನೆ.

ನಾನು ಕೂಡ ಈ ವಿಚಾರವನ್ನು ಈಗಷ್ಟೇ ಕೇಳಿಪಟ್ಟೆ. ಅವರ ಬರುವಿಕೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಅವರು ಮತ್ತೆ ಬಂದರೆ ಕನ್ನಡ ಚಿತ್ರರಂಗಕ್ಕೆ ಒಂದು ಕಳೆ ಬರುತ್ತದೆʼ ಎಂದಿದ್ದಾರೆ.

ದರ್ಶನ್ ಜೊತೆ ಮತ್ತೆ ನಟಿಸುವ ಆಸೆ ವ್ಯಕ್ತಪಡಿಸಿದ ರಚಿತಾ ರಾಮ್, ʼನಾವು ಭೇಟಿಯಾದಾಗಲೆಲ್ಲಾ ಹೆಚ್ಚಾಗಿ ಸಿನಿಮಾಗಳ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆವು. ಅದೇ ಅವರ ದೊಡ್ಡ ಗುಣ. ಮುಂದಿನ ದಿನಗಳಲ್ಲಿ ಮತ್ತೆ ಅವರ ಜೊತೆ ತೆರೆ ಹಂಚಿಕೊಳ್ಳುವ ಆಸೆ ನನಗಿದೆ ಎಂದಿದ್ದಾರೆ. ಇತ್ತ ದರ್ಶನ್ ಜೈಲಿನಿಂದ ಬಿಡುಗಡೆ ಕುರಿತ ಸುದ್ದಿಗಳು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹೆಚ್ಚು ವೈರಲ್ ಆಗುತ್ತಿದೆ.











