ಅಣ್ಣ (ನಾವು ಅಪ್ಪನನ್ನು ಕರೆಯುತ್ತಿದ್ದುದೇ ಹೀಗೆ) ನಿಮಗೆ ಅಷ್ಟೊಂದು ಅವಸರವೇನಿತ್ತು ? ಈ ಪ್ರಶ್ನೆ ಪದೇಪದೇ ಮನದಾಳದಲ್ಲಿ ಮೂಡುತ್ತಲೇ ಇರುತ್ತದೆ. ಇಂದು ನೆನ್ನೆಯ ಪ್ರಶ್ನೆಯಲ್ಲ ಇದು, ಕಳೆದ 48 ವರ್ಷಗಳಿಂದ , ಲೋಕಜ್ಞಾನವೇ ಇಲ್ಲದಂತಹ, ಜೀವನದ ಅರ್ಥವೇ ಅರಿಯದಂತಹ ಬಾಲ್ಯಾವಸ್ಥೆಯಲ್ಲಿ , ಏಕೆ ಎಂದು ಯೋಚಿಸುವ ಗೋಜಿಗೆ ಹೋಗದೆ, ನಿಮ್ಮ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ದಿನದಿಂದಲೂ ಈ ಪ್ರಶ್ನೆ ಕಾಡುತ್ತಿದೆ. ನಿಮ್ಮ ಅಂತ್ಯವನ್ನು ಸಂಸ್ಕಾರ ಎಂಬ ಪದದೊಡನೆ ಜೋಡಿಸಿ, ʼಅಂತ್ಯ ಸಂಸ್ಕಾರʼ ಅಥವಾ ʼ ಅಂತ್ಯಕ್ರಿಯೆ ʼ ಎಂದು ವ್ಯಾಖ್ಯಾನಿಸುವ ಸಂಪ್ರದಾಯಗಳು ನಮ್ಮ ಪ್ರಜ್ಞಾವಸ್ಥೆಯನ್ನೇ ಮಸುಕಾಗಿಸುವುದೇ ಅಣ್ಣ ? ಅಥವಾ ಹಿರಿಯರಿಬ್ಬರ ಅನುಪಸ್ಥಿತಿಯಲ್ಲಿ ಕಿರಿಯನಾಗಿ ನನಗೆ ಒದಗಿದ ಈ ಅವಕಾಶವನ್ನು ಹೇಗೆ ನೋಡಲು ಸಾಧ್ಯ ?

ಹೆತ್ತ ತಂದೆಗೆ ಅಂತಿಮ ಅಗ್ನಿ ಸ್ಪರ್ಶ ಮಾಡಿದ ಪುಣ್ಯ ನನಗೆ ಒದಗುತ್ತದೆ ಎಂಬ ಅತಾರ್ಕಿಕ ಕುತರ್ಕವನ್ನು ನಂಬಲೇ ? ಇದು ಒಡಲಲ್ಲಿ ಜನಿಸಿದ ಮಗನಾಗಿ ನನ್ನ ಕರ್ತವ್ಯವಾಗಿತ್ತು ಎಂದು ಭಾವಿಸಲೇ ? ಪಾಪ ಪುಣ್ಯಗಳ ಕಲ್ಪನೆಗಳನ್ನು ಮನಸ್ಸಿನಿಂದ ಕಿತ್ತೊಗೆಯಲು ಕಾರಣವಾಗಿದ್ದೇ ಈ ಅಗ್ನಿಸ್ಪರ್ಶ. ಹಾಗೆಯೇ ಕರ್ತವ್ಯವನ್ನು ಲೌಕಿಕ ಬದುಕಿನಲ್ಲಿ ಕಾಣಲಾಗದೆ ಕಲ್ಪಿತ ಸಾಂಪ್ರದಾಯಿಕ ಆಚರಣೆಗಳಲ್ಲಿ ಕಾಣುವ ಈ ಪ್ರಾಚೀನ ಆಲೋಚನೆಯೇ ನನ್ನ ಎದೆಯೊಳಗಿದ್ದ ದೈವಭಕ್ತಿ, ದೈವತ್ವದ ಕಲ್ಪನೆ, ಅಧ್ಯಾತ್ಮದ ಛಾಯೆ ಮತ್ತು ಸಂಪ್ರದಾಯಗಳ ಇಟ್ಟಿಗೆಗಳನ್ನು ಹಂತಹಂತವಾಗಿ ಪುಡಿ ಮಾಡತೊಡಗಿದ್ದು ನಿಜ ಅಣ್ಣ. ಭೌತವಾದದ ದೃಷ್ಟಿಯಲ್ಲಿ ನಿಮ್ಮ ಅಂತ್ಯ, ಲೌಕಿಕ ಬದುಕಿನ ಭೌತಿಕ ಅಂತ್ಯ ಅಷ್ಟೇ ಅಲ್ಲವೇನಣ್ಣ ?

ಹಿಂತಿರುಗಿ ನೋಡಿದಾಗ
ಈ ಅರಿವು ಮೂಡಿದ್ದು ನನಗೆ ವಿಜ್ಞಾನದ ಪ್ರಯೋಗಾಲಯದಲ್ಲಿ ಅಲ್ಲ ಅಥವಾ ದೇಹಶಾಸ್ತ್ರದ ಪಾಠಗಳಿಂದ ಅಲ್ಲ. ಡಿಸೆಂಬರ್ 17 1977 ನಿಮ್ಮ ಉಸಿರು ನಿಂತುಹೋಯಿತು. 18ರ ಸಂಜೆ ಸೂರ್ಯಾಸ್ತದ ಸಮಯದಲ್ಲಿ ನನ್ನ ಬದುಕಿನ ಸೂರ್ಯನಂತಿದ್ದ ನಿಮ್ಮ ದೇಹವೂ ಬೂದಿಯಾಯಿತು. ಅದರ ಮರುದಿನ ಯಾರಿಗೂ ಹೇಳದೆ ಸ್ಮಶಾನಕ್ಕೆ ಹೋದೆ. (ನನ್ನ ಸಹಪಾಠಿಯ ಮನೆ ಅಲ್ಲಿಯೇ ಇತ್ತು ಅವನೊಡನೆ ಸಾಕಷ್ಟು ಸಮಯ ಕಳೆದ ದಿನಗಳೂ ಶಾಲೆಯ ದಿನಗಳಲ್ಲಿದ್ದವು ) ನಿಮ್ಮ ದೇಹವನ್ನು ಹೇಗೆ ಹುಡುಕಲಿ, ಯಾವ ಗುರುತು ಸಿಗಲು ಸಾಧ್ಯ ? ಹಿಂದಿನ ಸಂಜೆ ಅಪ್ರಜ್ಞಾವಸ್ಥೆಯಲ್ಲಿ ಬಂದು ಕೊಟ್ಟ ಕೆಲಸವನ್ನು ಮುಗಿಸಿ ಹಿಂತಿರುಗಿದ ನನಗೆ, ಜಾಗ ನೆನಪಿರಲು ಹೇಗೆ ಸಾಧ್ಯ ? ಅಲ್ಲವೇನಣ್ಣ ?

ಆ ಗೆಳೆಯ ಮುನಿರಾಜು ನನ್ನನ್ನು ಜಾಗಕ್ಕೆ ಕರೆದೊಯ್ದ. ಬೂದಿಯ ರಾಶಿಯ ನಡುವೆ ಎಲುಬಿನ ಚೂರುಗಳು ಕಂಡವು. ತಲೆ ಯಾವುದು ಕಾಲು ಯಾವುದು ಹೇಗೆ ಗುರುತಿಸುವುದು. ನಿನ್ನನ್ನು ಹೊತ್ತೊಯ್ದ ಭೀಕರ ಕಾಯಿಲೆ ಗ್ಯಾಂಗ್ರೀನ್ ಸಹ ಅಲ್ಲಿ ನೆನಪಿನ ಕೋಶದೊಳಗೆ ಹೊಕ್ಕು ಮಾಯವಾಗಿತ್ತು. ಕೆಲವು ಎಲುಬಿನ ಚೂರುಗಳನ್ನು ಹಿಡಿದು ನೋಡಿದೆ, ತಕ್ಷಣವೇ ಪುಡಿಪುಡಿಯಾಗಿ ಹೋಯಿತು.

ಮುನಿರಾಜು ಹೇಳಿದೆ, ಇದು ಹೀಗೇ ಆಗೋದು ದಿವಿ (ನನ್ನನ್ನು ಪ್ರೀತಿಯಿಂದ ಗೆಳೆಯ ಕರೆಯುತ್ತಿದ್ದುದು ಹೀಗೆ). ಸುಟ್ಟ ವಸ್ತುಗಳ ಹಾಗೆಯೇ ದೇಹವೂ ಅಷ್ಟೇ ಕಣೋ ಎಂದು ಅವನು ಹೇಳಿದಾಗ, ನೀನು ಕೊನೆಯುಸಿರೆಳೆದ ಗಳಿಗೆಯ ನಂತರ ಮೊದಲ ಹನಿ ನನ್ನ ಕಣ್ಣಲ್ಲಿ ಕಾಣಿಸಿತ್ತು. ಅಲ್ಲಿಯವರೆಗೂ ಅಳು ಎನ್ನುವ ಕ್ರಿಯೆ ನನ್ನೆದೆಯಲ್ಲೇ ಹುದುಗಿತ್ತೇನೋ ಅರಿಯೆ ಹೊರಪ್ರಪಂಚಕ್ಕೆ ಕಾಣಿಸಲಿಲ್ಲ. ತುಂತುರು ಮಳೆಯ ಹಾಗೆ ನನ್ನ ಕಂಬನಿ ತೊಟ್ಟಿಕ್ಕುತ್ತಿರುವುದನ್ನು ನೋಡಿದ, ಗೆಳೆಯನ ತಾಯಿ, ಮನೆಗೆ ಕರೆದೊಯ್ದು ಒಂದು ಲೋಟ ಹಾಲು ಕೊಟ್ಟು ಸಂತೈಸಿದರು. ತಾಯಿ ಪ್ರೀತಿ ಸಾರ್ವತ್ರಿಕ ಎಂಬ ಅರಿವು ಮೂಡಿದ ಕ್ಷಣ ಅದು. ಅವರು ಸಾಕಿದ್ದ ಹತ್ತಾರು ಕುರಿಗಳ ಕೂಗು ನನಗೆ ಬೂದಿ ರಾಶಿಯೊಳಗಿಂದ ಬಂದ ಸದ್ದಿನ ಹಾಗೆ ಕೇಳತೊಡಗಿತ್ತು.
ಮನೆಯೊಳಗಿನ ಮೌನ ಸ್ಥಿತಿ
ಮಧ್ಯಾಹ್ನದ ಉರಿಬಿಸಿಲಲ್ಲಿ ಮನೆಗೆ ಬಂದಾಗ ಅಲ್ಲಿ ಕಂಡಿದ್ದು ಸ್ಮಶಾನಕ್ಕಿಂತಲೂ ಗಾಢವಾದ ಮಸಣ ಮೌನ. ಎಲ್ಲರ ಕಣ್ಣುಗಳು ಕೆಂಪಾಗಿದ್ದವು. ಮನದ ಬೇಗುದಿ ದುಗುಡ ಮತ್ತು ನಾಳೆಗಳ ಆತಂಕಗಳೊಡನೆ ಸೇರಿ ಈ ಮೌನದ ನಡುವೆಯೇ ಆವರಿಸಿಕೊಂಡಿದ್ದ ದುಃಖ ನನ್ನ ಮನದಲ್ಲಿ ಪ್ರಶ್ನೆಗಳ ಭಂಡಾರವನ್ನೇ ಸೃಷ್ಟಿಸಿದ್ದವು. ಅವುಗಳಲ್ಲಿ ಒಂದು ಪ್ರಶ್ನೆ ಈ ಬರಹದ ಆರಂಭದ ಸಾಲು “ ಅಣ್ಣ ನಿಮಗೆ ಅಷ್ಟೊಂದು ಅವಸರವೇನಿತ್ತು ? ”. ಈಗ 48 ವರ್ಷಗಳು ಕಳೆದು ಅದೇ ಪ್ರಶ್ನೆಯತ್ತ ತಿರುಗಿ ನೋಡಿದಾಗ, ಅವಸರ ನಿಮಗೆ ಇರಲಿಲ್ಲ ಆದರೆ ಹೇಗಾದರೂ ಮಾಡಿ ನಿಮ್ಮನ್ನು ಉಳಿಸಿಕೊಳ್ಳಬೇಕೆಂಬ ʼ ಅವಸರ ʼ ಅರ್ಥಾತ್ ʼ ತವಕ ʼ ನಮಗೆ ಇರಲಿಲ್ಲವೇನೋ ಎಂಬ ಜಿಜ್ಞಾಸೆ ಕಾಡುತ್ತದೆ. ಅಥವಾ ಎಂತಹುದೇ ಕಾಯಿಲೆ ಇರಲಿ ಶತಾಯಗತಾಯ ಪ್ರಯತ್ನಿಸಿ ಉಳಿಸಿಕೊಳ್ಳುತ್ತೇವೆ ಎಂಬ ಛಲ, ಜೀವ ಉಳಿಸಲೇಬೇಕೆಂಬ ಆಸ್ಥೆ ನಮ್ಮ ನಡುವೆ ಇರಲಿಲ್ಲವೇ ?

ಯಾರನ್ನು ದೂಷಿಸಲಿ ಅಣ್ಣ. ನಿಮ್ಮ ಹಣೆಯ ಮೇಲೆ ಮೂರು ಗೆರೆಗಳು ವಿಭೂತಿಯ ಹಾಗೆ ಸದಾ ಕಾಣುತ್ತಿದ್ದುದು ಈಗಲೂ ನೆನಪಿದೆ. ಅದು ಸುಕ್ಕುಗಟ್ಟಿದ ಚರ್ಮವೋ ಅಥವಾ ಸಹಜವಾಗಿದ್ದ ಗೆರೆಗಳೋ ಅರಿಯೆ. ಆದರೆ ಅಲ್ಲಿ ನೀವು ನಂಬಿದ್ದ ಭಗವಂತ ಏನೋ ಬರೆದುಬಿಟ್ಟಿದ್ದಾನೆ, ಅದರಂತೆಯೇ ಎಲ್ಲವೂ ನಡೆಯುತ್ತದೆ ಎಂದು ಗಾಢವಾಗಿ ನಂಬಿದ್ದ ನಿಮಗೆ, ನೀವೇ ಬದುಕು ಕಟ್ಟಿಕೊಟ್ಟ ಜೀವಗಳಿಗೆ ಅದನ್ನು ಸುಳ್ಳು ಮಾಡುವ ಸಾಮರ್ಥ್ಯ ಇತ್ತು ಎಂದು ಯೋಚಿಸಲೇ ಇಲ್ಲ ಅಲ್ಲವೇ ? ಅಂತಿಮವಾಗಿ ನಿಮ್ಮ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿದ್ದ ಹಿರಿಯ ಕುಡಿ, ಮರುದಿನ ಬೂದಿಯನ್ನು ನೋಡಲು ಮರುದಿನ ಬಂದಾಗ ಅಮ್ಮನ ದುಃಖತಪ್ತ ಕಂಗಳಲ್ಲಿ ನಾನು ಕಂಡ ಪ್ರಶ್ನೆ ಇದು.

ಇಲ್ಲಿ ನಾನು ಋಣದ ಮಾತಾಡುತ್ತಿಲ್ಲ ಅಣ್ಣ. ಮನುಷ್ಯನ ನೈತಿಕ ಕರ್ತವ್ಯದ ಬಗ್ಗೆ ಹೇಳುತ್ತಿದ್ದೇನೆ. ನೀವು ಅಂತಿಮ ಉಸಿರೆಳೆದ ದಿನ ಬೆಳಿಗ್ಗೆ ನಿಮ್ಮನ್ನು ನೋಡಲು ಆಸ್ಪತ್ರೆಗೆ ಬಂದಾಗ, ಮಂಚಗಳು ಖಾಲಿ ಇಲ್ಲ ಎಂಬ ಕಾರಣಕ್ಕೆ ನಿಮ್ಮನ್ನು ನೆಲದ ಮೇಲಿದ್ದ ಹಾಸಿಗೆಯ ಮೇಲೆ ಮಲಗಿಸಿದ್ದರು. ಅದನ್ನು ಪ್ರತಿಭಟಿಸುವ ಬಲವಾಗಲೀ, ಬುದ್ಧಿಮತ್ತೆಯಾಗಲೀ ನನ್ನೊಳಗೆ ಇರಲಿಲ್ಲವೋ ಏನೋ, ಸಹಜ ಎನ್ನುವಂತೆ ನಿಮ್ಮ ಪಕ್ಕದಲ್ಲಿ ಬಂದು ಕುಳಿತಾಗ ನೀನಾಡಿದ ಮಾತುಗಳು ಇಂದಿಗೂ ಧ್ವನಿಸುತ್ತವೆ ಅಣ್ಣ. ʼ ಮರಿ ಎದ್ದುಹೋಗಲು ಆಗಲಿಲ್ಲ ನರ್ಸ್ ಸಹ ಬರಲಿಲ್ಲ, ನನ್ನ ಪಂಚೆ ಗಲೀಜಾಗಿದೆ ತೆಗೆದು ಬೇರೆ ಉಡಿಸುತ್ತೀಯಾ ? ʼ ಎಂಬ ನಿಮ್ಮ ಪ್ರಶ್ನೆ ನನ್ನೊಳಗಿನ ಅಂತಃಕರಣ ಎಂಬ ಸಹಜ ಭಾವನೆಗೆ ಘಾಸಿ ಮಾಡಿತ್ತು. ಒಬ್ಬ ವಾರ್ಡ್ ಬಾಯ್ನನ್ನು ಕರೆದು ನಿನ್ನನ್ನು ಎಬ್ಬಿಸಿಕೊಂಡು ಬಚ್ಚಲಿಗೆ ಕರೆದೊಯ್ದು ಎಲ್ಲವನ್ನೂ ಶುಚಿಗೊಳಿಸಿ, ಮತ್ತೆ ಬೇರೆ ಹಾಸಿಗೆಯ ಮೇಲೆ ಮಲಗಿಸಿದೆ.
ಎಂತಹ ಪರಿಸ್ಥಿತಿ !!! ಈಗ ನೆನೆದರೆ ಎದೆ ಝಲ್ಲೆನ್ನುತ್ತದೆ. ನಿಮ್ಮನ್ನು ಇನ್ನೂ ಉತ್ತಮ ಸೌಕರ್ಯ ಇರುವ, ಉತ್ತಮ ಚಿಕಿತ್ಸೆ ದೊರೆಯುವ ದೊಡ್ಡಾಸ್ಪತ್ರೆಗೆ ಸಾಗಿಸಬೇಕಿತ್ತಲ್ಲವೇ ಎಂದು ಹೊಳೆದಿದ್ದು, ಬೂದಿಯನ್ನು ಕಂಡಾಗಲೇ. ಇದು ಸತ್ಯ. ಆ ಸಂದರ್ಭದಲ್ಲಿ 15 ವರ್ಷದ ನನಗೆ ಇದು ಹೇಗೆ ಹೊಳೆಯಬೇಕು ಎಂದು ಈಗ ಸಮಾಧಾನ ಮಾಡಿಕೊಳ್ಳುತ್ತೇನೆ. ಇದು. ಏಕೆ ಹೊಳೆಯಬಾರದಿತ್ತು ಎಂಬ ಮರುಪ್ರಶ್ನೆಗೆ ನಿರುತ್ತರನಾಗುತ್ತೇನೆ. ಅಜ್ಞಾನವೋ, ಅರಿವಿನ ಕೊರತೆಯೋ, ಅಸಹಾಯಕತೆಯೋ ಅಥವಾ ಬಾಲ್ಯದ ಮನಸ್ಸಿನ ಸಹಜ ಪ್ರವೃತ್ತಿಯೋ, ಹೇಗೆ ಯೋಚಿಸಿದರೂ ಉತ್ತರ ದೊರೆಯುವುದಿಲ್ಲ. ಮನೆಗೆ ಬಂದು ಅಮ್ಮನ ಹತ್ತಿರ ಈ ವಿಷಯ ಹೇಳಿದಾಗ, ಆಕೆಯ ಕಣ್ಣುಗಳು ತೇವವಾಯಿತು, ಮಾತು ಕಟ್ಟಿತ್ತು, ಯಾರನ್ನು ಹಳಿದು ಏನು ಪ್ರಯೋಜನ ಎಂಬ ನಿಸ್ಸಹಾಯಕ ಭಾವ ಅವಳ ಕಂಗಳಲ್ಲಿತ್ತು.

ನೈತಿಕತೆಯ ಭ್ರಮೆಯಲ್ಲಿ
ಈಗ ಹದಿನೈದು ವರ್ಷಗಳ ಹಿಂದೆ ಅದೇ ಹಿರಿಯಣ್ನ ಮೂರು ದಶಕಗಳ ನಂತರ ನನ್ನ ಮನೆಗೆ ಬಂದಾಗ ಅವನು ಸುಡುತ್ತಿದ್ದ ಸಿಗರೇಟಿನ ಹೊಗೆಯ ನಡುವೆ, ಕಣ್ಣಂಚಿನಲ್ಲಿ ಒಂದೆರಡು ಹನಿಯನ್ನೂ ಕಂಡಾಗ ಅಚ್ಚರಿಯಾಯಿತು . “ ನಾನು ತಪ್ಪು ಮಾಡಿಬಿಟ್ಟೆ ದಿವಿ,,,,,,,,”ಎಂಬ ಅವನ ಮಾತುಗಳು ನನಗೆ ಪಶ್ಚಾತ್ತಾಪದ ನುಡಿಗಳು ಅನ್ನಿಸಲಿಲ್ಲ, ಪರಿತಾಪದಂತೆ ಕಾಣಲಿಲ್ಲ. ಆದರೂ ಅವನಿಗೆ ಏನು ಉತ್ತರ ಕೊಡಲು ಸಾಧ್ಯವಿತ್ತು ? ಅವನ ತಪ್ಪೊಪ್ಪಿಗೆ ಯಾವ ಅಪರಾಧಕ್ಕೆ ಎಂಬ ಜಿಜ್ಞಾಸೆ ಮೂಡಿತ್ತು. ನೀವು ನಿರ್ಗಮಿಸಿದ ಒಂದು ವಾರದ ನಂತರ ಅನ್ನಾಹಾರ ಇಲ್ಲದೆ ಬಳಲಿದ್ದ ಅಮ್ಮನ ಮುಂದೆ, ನಮ್ಮೆಲ್ಲರ ಸಮ್ಮುಖದಲ್ಲಿ, ನೂರರ ಐದು ನೋಟುಗಳನ್ನು ಹಿಡಿದು “ ಇದು ನನ್ನ ಬದುಕು ಕಟ್ಟಿಕೊಳ್ಳಲು ಇರುವ ಹಣ ನಿಮ್ಮ ದಾರಿ ನೀವು ನೋಡಿಕೊಳ್ಳಿ ”ಎಂದು ಹೇಳಿ ಹೊರಟ ಕಾರಣಕ್ಕೋ ಅಥವಾ “ ಅಣ್ಣನನ್ನು ನಾವು ಉಳಿಸಿಕೊಳ್ಳಬೇಕಿತ್ತು ನಾನೇ ಜವಾಬ್ದಾರಿಯಿಂದ ತಪ್ಪಿಸಿಕೊಂಡೆ” ಎಂಬ ಭಾವನೆಯ ಕಾರಣಕ್ಕೋ ?

ಎರಡೂ ಕಾರಣಗಳಿಗೆ ಅವನು ಹೌದೆಂದ. ಅವನಿಗೆ ಏನು ಉತ್ತರ ಕೊಡಲಿ ಹೇಳಿ. ಅವನ ಕಂಬನಿಗೆ ಸ್ಪಂದಿಸಿದ್ದು ನನ್ನ ಕಂಬನಿ ಹನಿಗಳಷ್ಟೆ. “ ನೀನೊಬ್ಬ ಮನಸ್ಸು ಮಾಡಿದ್ದರೆ ಅಣ್ಣ ಉಳಿಯುತ್ತಿದ್ದರು ,,,,,” ಎಂಬ ನನ್ನ ಕುಟುಕು ಮಾತಿಗೆ ಅವನು ಅವಾಕ್ಕಾದರೂ ಮರುಮಾತನಾಡದೆ ಇನ್ನೊಂದು ಸಿಗರೇಟನ್ನು ಸುಟ್ಟು ಬಿಸಾಡಿದ. ಅವನು ಕಣ್ಣೀರ ಕೋಡಿ ಹರಿಸಿದ್ದರೂ ಅದು ನಿನ್ನ ಅಕಾಲಿಕ ಅಗಲಿಕೆ, ಅದು ಸೃಷ್ಟಿಸಿದ ನಿರ್ವಾತ, ನಂತರದ ನಾಲ್ಕೈದು ವರ್ಷಗಳ ಹಸಿವು, ನಿರ್ಗತಿಕತೆ, ಸಂಕಟಗಳನ್ನು ತೊಳೆದುಹಾಕಲಾಗುತ್ತಿರಲಿಲ್ಲ. ನೀವು ಅಪರೂಪಕ್ಕೆ ಎಂದೋ ಒಮ್ಮೊಮ್ಮೆ ನೀವೇ ನಂಬಿದ ʼ ಹಣೆಬರಹವನ್ನು ʼ ಹಳಿಯುತ್ತಾ, ಗಾಢವಾಗಿ ನಂಬಿದ ದೇವರನ್ನು ಶಪಿಸುತ್ತಾ, ಆ ದಿವ್ಯ ಕಣ್ಣುಗಳಿಂದ ಹೊರಚೆಲ್ಲುತ್ತಿದ್ದ ಒಂದು ಹನಿಗಾದರೂ ಅವನು ಬೊಗಸೆ ಹಿಡಿದಿದ್ದರೆ, ಬಹುಶಃ ಈ ಪಶ್ಚಾತ್ತಾಪದ ಮಾತುಗಳು ಅನಗತ್ಯವಾಗುತ್ತಿತ್ತು.
ಈಗ ಎಲ್ಲವೂ ಇತಿಹಾಸ. ನೀವೂ ಇಲ್ಲ.. ಅವನೂ ಇಲ್ಲ. ಕೆಲವು ವರ್ಷಗಳ ಕಾಲ ಅಸಹಾಯಕತೆಯ ಬೇಗುದಿಯಲ್ಲೇ ಬದುಕು ಸವೆಸಿದ ಅಮ್ಮನೂ ಇಲ್ಲ. ಆದರೆ ಆ ಭೀಕರ ಕ್ಷಣಗಳನ್ನು ಹೇಗೆ ಮರೆಯಲಿ ? ನೆನಪಿನ ಭಂಡಾರದಲ್ಲಿ ಪ್ರತಿಯೊಂದು ಮಾತು, ಪ್ರಸಂಗ, ಘಟನೆ ದಾಖಲಾಗಿಬಿಟ್ಟಿದೆ. ನಿತ್ಯ ಮುಂಜಾನೆ 1965ರಲ್ಲಿ ತೆಗೆಸಿದ ನಿಮ್ಮ ಕಪ್ಪು ಬಿಳುಪು ಭಾವಚಿತ್ರದತ್ತ ಕಣ್ಣು ಹೊರಳಿದಾಗ , ಜೀವನದ ಕತ್ತಲು ಬೆಳಕಿನಾಟದಲ್ಲಿ ನೀವು ಎಷ್ಟು ಜನರ ಜೀವನಕ್ಕೆ ಬೆಳಕಾಗಿ, ಬದುಕು ಹಸನಾಗಿಸಿದ್ದಿರಿ ಎಂಬ ನೆನಪು ಕಾಡುತ್ತದೆ. ಹಾಗೆಯೇ ನೀವು ಕತ್ತಲ ಪ್ರಪಂಚದಲ್ಲಿ ಏಕಾಂಗಿಯಾದಾಗ, ವಾಕಿಂಗ್ ಸ್ಟಿಕ್ ಬಿಟ್ಟರೆ ನಿಮ್ಮ ಕೈಹಿಡಿಯುವವರು ಯಾರೂ ಇರಲಿಲ್ಲವೇಕೆ ಎಂಬ ಜಿಜ್ಞಾಸೆಯೂ ಕಾಡುತ್ತದೆ. ಈಗ ಉಳಿದಿರುವುದು ಪ್ರಶ್ನೆಗಳಷ್ಟೇ ಅಲ್ಲವೇನಣ್ಣ ? ನಿಮ್ಮೊಡನೆ ಬಾಳಿದ 15 ವರ್ಷಗಳಲ್ಲಿ, ನನ್ನ ನಿಮ್ಮ ನಡುವಿನ ಬಾಂಧವ್ಯ ಗಾಢವಾದುದು ಸತ್ಯ. ಆದರೆ ಈ ಅವಧಿಯಲ್ಲಿ ನನ್ನ ಅರಿವಿಗೆ ಬಾರದ ಅಥವಾ ನೆನಪಿನಲ್ಲಿ ಉಳಿಯದ ಪ್ರಸಂಗಗಳ ಬಗ್ಗೆ ಮಾತನಾಡಲು ಸಹ ಈಗ ಯಾರೂ ಇಲ್ಲ.

ವರ್ತಮಾನದ ನಿರ್ವಾತದಲ್ಲಿ
ಇದು ಮತ್ತೆ ಮತ್ತೆ ನನ್ನನ್ನು ಸ್ವ-ನೆನಪಿನ ಕೋಶಕ್ಕೇ ಕರೆದೊಯ್ಯುತ್ತದೆ. ಇದರಿಂದಾಚೆಗೆ ಏನೆಲ್ಲಾ ನಡೆದಿರುಬಹುದು ? ಊಹಿಸಲಷ್ಟೇ ಸಾಧ್ಯ. ಮನಸ್ಸಿಗೆ ಘಾಸಿಯಾದಾಗ, ಹೃದಯ ಕಂಪಿಸಿದಾಗ, ದುಃಖ ಆವರಿಸಿದಾಗ, ಸಂತೈಸುವ ಒಂದು ಹೆಗಲು ಬೇಕಲ್ಲವೇ ಅಣ್ಣ ? ನಿಮ್ಮೊಡನೆ ಬಾಳಿದ ದಿನಗಳಲ್ಲಿ ಇವೆಲ್ಲವೂ ಕಾಡಲೇ ಇಲ್ಲ. ನಿಮ್ಮ ಕೊನೆಯ ದಿನಗಳಲ್ಲಿ, ಹಾಸಿಗೆ ಹಿಡಿದ ದಿನಗಳಲ್ಲಿ ಈ ಭಾವನೆಗಳನ್ನು ಹೊರಗೆಡಹುವಷ್ಟು ಪ್ರಬುದ್ಧತೆಯೂ ಬೆಳೆದಿರಲಿಲ್ಲ. ಹಾಗೊಮ್ಮೆ ಘಾಸಿಯಾದರೂ ಅಮ್ಮನ ಮಡಿಲು ಸದಾ ತೆರೆದಿರುತ್ತಿತ್ತು. ಈಗ ಅಮ್ಮನೂ ಇಲ್ಲ. ನೀವೂ ಇಲ್ಲ. ಇನ್ನು ಯಾರ ಹೆಗಲನ್ನು ಆಶ್ರಯಿಸಲಿ. ಹೀಗೇ ನಿಮ್ಮ ನಿರ್ಗಮನದ ದಿನದಂದು ನೆನಪುಗಳ ಕೋಶದ ಕದ ತೆರೆದು, ಒಳಗಿರುವುದನ್ನು ಹೊರತರುವ ಮೂಲಕ, ಮನದಾಳದಲ್ಲಿ ಮಡುಗಟ್ಟಿರುವ ನೋವನ್ನು ಅರಗಿಸಿಕೊಳ್ಳುತ್ತೇನೆ.

ವರುಷಕ್ಕೊಮ್ಮೆ ನಿಮ್ಮನ್ನು ಅಮೂರ್ತ ರೂಪದಲ್ಲಿ ಕರೆದು ಭ್ರಮಾತ್ಮಕವಾಗಿ ನಿಮ್ಮೊಡನೆ ಸಂಭಾಷಿಸುವ ಮೌಢ್ಯಗಳಿಗೆ ಒಳಗಾಗದೆ, ನಿಮ್ಮ ಅಲ್ಪ ಸಮಯದ ಒಡನಾಟವನ್ನೇ ನೆನೆಯುವ ಮೂಲಕ ನನ್ನ ಬಾಷ್ಪಾಂಜಲಿಯನ್ನು ಅರ್ಪಿಸುತ್ತೇನೆ. ಹೊರಟು ಹೋಗಿದ್ದೀರಿ, ಮತ್ತೆ ಬರಲಾರಿರಿ , ಈ ಸತ್ಯವನ್ನು ಮನಗಂಡಿರುವುದರಿಂದ, ನೆನಪುಗಳಲ್ಲೇ ನಿಮ್ಮನ್ನು ಹೊತ್ತು ಹೆಜ್ಜೆ ಇಡುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಭಾವನಾತ್ಮಕವಾಗಿ ನೀವು ಇರುತ್ತೀರಿ. ಬತ್ತಿದ ಕಣ್ಣುಗಳಿಂದಲೂ ಹನಿಯುವ ಒಂದೆರಡು ಕಂಬನಿ ನಿಮಗಾಗಿ. ಈ ಹನಿಗಳ ಹಿಂದಿರುವ ಜೀವ ನಿಮ್ಮದು ಭಾವ ನನ್ನದು. ಎರಡರ ಸಂಗಮದಲ್ಲಿ ನಿಮ್ಮ ಭಾವಚಿತ್ರವನ್ನಿಟ್ಟು ಮನದಲ್ಲೇ ನಮಿಸುವುದೊಂದೇ ನನಗೆ ಉಳಿದಿರುವ ಹಾದಿ. ಅಲ್ಲವೇ ಅಣ್ಣ ?












