
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಜೀವ ಬೆದರಿಕೆ ಮೇಲ್ ಸಂದೇಶ ಬಂದಿದೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ನಿಮ್ಮನ್ನು ಕೊಲೆ ಮಾಡಿ ದೇಹವನ್ನು ಪೀಸ್ ಪೀಸ್ ಮಾಡ್ತೀವಿ ಅಂತ ಬೆದರಿಕೆ ಮೇಲ್ನಲ್ಲಿ ಬರೆಯಲಾಗಿದೆ. ಪೀಸ್ ಪೀಸ್ ಮಾಡಿ ಫ್ರಿಡ್ಜ್ಗೆ ತುಂಬೋದಾಗಿಯೂ ಬೆದರಿಕೆ ಮೇಲ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಬೆದರಿಕೆ ಮೇಲ್ ಬಂದಿದ್ದು, ಸಿಂದಾರ್ ರಜಪೂತ್ ಹೆಸರಿನಲ್ಲಿ ಬೆದರಿಕೆ ಮೇಲ್ ಕಳುಹಿಸಲಾಗಿದೆ. ವಿಧಾನಸೌಧ ಠಾಣೆ ಪೊಲೀಸರು IP ಅಡ್ರೆಸ್ ಪಡೆದು ಮೇಲ್ ಬಂದಿರುವ ಕಂಪ್ಯೂಟರ್ ಲೊಕೇಷನ್ ಟ್ರೇಸ್ ಮಾಡುವ ಪ್ರಯತ್ನದಲ್ಲಿ ಇದ್ದಾರೆ.

ಇಬ್ಬರನ್ನು ಕೊಲೆ ಮಾಡಿ ಫ್ರಿಡ್ಜ್ ಹಾಗೂ ಟ್ರ್ಯಾಲಿ ಬ್ಯಾಗ್ಗೆ ತುಂಬ್ತೀನಿ. ರಾಮಪುರ ಪ್ರಭಾಕರ್ಗೆ ಒಂದು ಕೋಟಿ ಸಾಲ ಕೊಟ್ಟಿದ್ದೇನೆ. ಆತ ಇದುವರೆಗೂ ಸಾಲ ವಾಪಸ್ ಕೊಟ್ಟಿಲ್ಲ. ಪ್ರಭಾಕರ್ಗೆ ಬೇಗ ಸಾಲ ವಾಪಸ್ ಕೊಡೋಕೆ ಹೇಳಿ. ಪ್ರಭಾಕರ್ ಹಣವನ್ನು ತನ್ನ ನಾದಿನಿ ಹಾಗೂ ಪೋಷಕರ ಮನೆಯಲ್ಲಿ ಇಟ್ಟಿದ್ದಾನೆ. ಪ್ರಭಾಕರ್ಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಒಬ್ಬ ಮಗನಿಗೆ ಮದುವೆ ಮಾಡಿದ್ದಾನೆ ಅನ್ನೋ ಮಾಹಿತಿಯನ್ನೂ ನೀಡಿದ್ದಾನೆ.

ಸಾಲದ ಹಣವನ್ನು ವಾಪಸ್ ನೀಡಲು ಪ್ರಭಾಕರ್ಗೆ ಆದಾಯ ಮೂಲ ಇಲ್ಲ. ಹೀಗಾಗಿ ಪ್ರಭಾಕರ್ನ ಕೊಲೆ ಮಾಡ್ತೀನಿ. ನೀವು ಹಣ ಕೊಡಿಸಿಲ್ಲ ಅಂದ್ರೆ ನಿಮ್ಮನ್ನು ಕೊಲೆ ಮಾಡ್ತೀನಿ ಅಂತ ಇಮೇಲ್ ಮಾಡಿದ್ದಾನೆ. ಸದ್ಯ ಇ ಮೇಲ್ ಆಧರಿಸಿ ದೂರು ದಾಖಲಿಸಿರೋ ಪೊಲೀಸರು, ಎಫ್ಐಆರ್ ದಾಖಲಿಸಿ ಸಿಂದಾರ್ ರಜಪೂತ್ ಎಲ್ಲಿದ್ದಾನೆ ಎಂದು ಹುಡುಕಾಟ ನಡೆಸಿದ್ದಾರೆ. ಆದರೆ ಇದು ವೈಯಕ್ತಿಕ ವಿಚಾರದಲ್ಲಿ ಸಿಎಂ, ಡಿಸಿಎಂ ಹೆಸರು ಉಲ್ಲೇಖ ಮಾಡಿ ಸ್ವಯಂ ಲಾಭ ಮಾಡಿಕೊಳ್ಳಲು ಮಾಡಿರುವ ಕುತಂತ್ರ ಎನ್ನಲಾಗ್ತಿದೆ.