
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಹಿಂದೂಗಳನ್ನೇ ಗುರಿಯಾಗಿಸಿ ದಾಳಿ ಮಾಡಿ ಹತ್ಯೆ ಮಾಡುತ್ತಿದ್ದ ಸಂಗತಿ ಮಾಧ್ಯಮಗಳಲ್ಲಿ ಬರ್ತಿದ್ದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತುರ್ತು ಸಭೆ ನಡೆಸಿ ಶ್ರೀನಗರಕ್ಕೆ ತೆರಳಿದ್ರು. ಶ್ರೀನಗರದಲ್ಲಿ ರಾಜ್ಯಪಾಲರ ರಾಜಭವನದಲ್ಲಿ ವಾಸ್ತವ್ಯ ಹೂಡಿದ ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸೇರಿದಂತೆ ಸೇನಾ ನಾಯಕರು ಹಾಗು ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದರು. ಉಗ್ರರ ಯೋಜನೆ ಸೇರಿದಂತೆ ಉಗ್ರರನ್ನು ಮಟ್ಟ ಹಾಕಲು ಬೇಕಿರುವ ತಂತ್ರಗಳ ಬಗ್ಗೆ ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ನಡೆಸಿದರು.

ಉಗ್ರರ ದಾಳಿ ಆಗ್ತಿದ್ದ ಹಾಗೆ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉಗ್ರರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಉಗ್ರರಿಗೆ ತಕ್ಕ ಪಾಠ ಕಲಿಸೋ ಕೆಲಸಗಳು ಆಗುತ್ತವೆ. ದಾಳಿ ನಡೆಸಿದ ಯಾರನ್ನೂ ಬಿಡುವುದಿಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಸೌಧಿಯ ಜೆಡ್ಡಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಮಿತ್ ಷಾಗೆ ಕರೆ ಮಾಡಿ ದಾಳಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸುವಂತೆ ಪ್ರಧಾನಿ ಸೂಚನೆ ಕೊಟ್ಟ ಬೆನ್ನಲ್ಲೇ ಅಮಿತ್ ಷಾ ಶ್ರೀನಗರದತ್ತ ತೆರಳಿದ್ದಾರೆ.

ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರ್ಶಮೀರದಲ್ಲಿ ಉಗ್ರರ ದಾಳಿ ಬಳಿಕ ಸೌಧಿ ಪ್ರವಾಸವನ್ನೇ ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಮಂಗಳವಾರ ರಾತ್ರಿಯೇ ಹೊರಟ ಪ್ರಧಾನಿ ಮೋದಿ ಬುಧವಾರ ಮುಂಜಾನೆಗೆ ದೆಹಲಿಗೆ ವಾಪಸ್ ಆಗಿ ಅಜಿತ್ ದೋವಲ್ ಸೇರಿದಂತೆ ಪ್ರಮುಖರ ಜೊತೆಗೆ ಮಹತ್ವದ ಸಭೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಆಗಿದ್ರೆ ಪ್ರಧಾನಿ ಮೋದಿ ಸೌದಿ ಅರೇಬಿಯಾ ದೊರೆಗಳ ಆತಿಥ್ಯ ಸ್ವೀಕಾರ ಮಾಡ್ತಿದ್ದಾರೆ ಎನ್ನುವ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದಂತೆ ಎಚ್ಚೆತ್ತುಕೊಂಡ ಪ್ರಧಾನಿ ಭಾರತಕ್ಕೆ ವಾಪಸ್ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ವಾಪಸ್ ಆಗ್ತಿದ್ದ ಹಾಗೆ ಹೈಲೆವೆಲ್ ಮೀಟಿಂಗ್ ನಡೆಸಿದ್ದು, ಉಗ್ರರನ್ನ ಮಟ್ಟ ಹಾಕುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ನಡುವೆ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡನೆ ವ್ಯಕ್ತಪಡಿಸಿದ್ದು, ಭಾರತದೊಂದಿಗೆ ಅಮೆರಿಕ ಬಲವಾಗಿ ನಿಲ್ಲುತ್ತದೆ. ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲ ಎಂದಿದ್ದಾರೆ. ಕಾಶ್ಮೀರದಿಂದ ಹೊರಬಂದಿರುವ ಸುದ್ದಿ ತೀವ್ರ ಕಳವಳಕಾರಿ.. ಮೃತಪಟ್ಟವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ಭಾರತ ಪ್ರವಾಸದಲ್ಲಿ ಇರುವ ಅಮೆರಿಕ ಉಪಾಧ್ಯಕ್ಷರು ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನ್ಯಾತನ್ಯಾವು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ನಾಯಕರು ಭಾರತದ ಪರವಾಗಿ ದನಿಗೂಡಿಸಿದ್ದಾರೆ. ಉಗ್ರರನ್ನು ಮಟ್ಟ ಹಾಕಲು ನಾವು ಭಾರತದ ಜೊತೆಗೆ ಕೈಜೋಡಿಸುತ್ತೇವೆ ಎಂದಿದ್ದಾರೆ. ಪ್ರಧಶಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ಅಂಶಗಳ ಬಗ್ಗೆ ಚರ್ಚೆ ನಡೆದಿರುತ್ತದೆ. ಆದರೆ ಅದನ್ನುಯ ಬಹಿರಂಗವಾಗಿ ಹೇಳುವುದಿಲ್ಲ. ಭಾರತ ಒಂದು ಘಟನೆಗೆ ಪ್ರತಿರೋಧವಾಗಿ ಬೇರೊಂದು ಘಟನೆಗೆ ಸಾಕ್ಷಿಯಾದಾಗ ಮಾತ್ರ ಆ ಸಭೆಯ ಉದ್ದೇಶ ಅರ್ಥ ಆಗಲಿದೆ.
