
ಬಿಜೆಪಿಯವರು ತಮ್ಮ ಪರವಾದ ತೀರ್ಪುನ್ನು ಸುಪ್ರೀಂಕೋರ್ಟ್ ನೀಡಿದರೆ ಗ್ರೇಟ್ ಎಂದು ಹೇಳುತ್ತಾರೆ. ಅದೇ ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ತೀರ್ಪು ನೀಡಿದರೆ ಪ್ರಶ್ನೆ ಮಾಡುತ್ತಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಸೂದೆಗಳಿಗೆ ರಾಜ್ಯಪಾಲರು ವಿಳಂಬ ಮಾಡುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ಜಯ ಪಡೆದಿವೆ. ಈ ಆದೇಶ ಕೇಂದ್ರದ ಮೋದಿ ಸರ್ಕಾರಕ್ಕೆ ಇರಿಸು ಮುರಿಸು ಉಂಟು ಮಾಡಿವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಸಂವಿಧಾನದಲ್ಲಿ ತನಗಿರುವ ವಿಶೇಷ ಅಧಿಕಾರದ ಕಲಂ 142 ನ್ನು ಬಳಸಿಕೊಂಡಿದೆ. ಸುಪ್ರೀಂಕೋರ್ಟ್ ಏನಾದರೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರೆ ಬಿಜೆಪಿಯವರು ಕೋರ್ಟ್ ವಿರುದ್ಧ ಮುಗಿ ಬೀಳುತ್ತಾರೆ ಎಂದರು.

ಎಲ್ಲೆಲ್ಲಿ ರಾಜ್ಯಪಾಲರು ಮಸೂದೆಗಳನ್ನು ಹೆಚ್ಚು ಅವಧಿಗೆ ಬಾಕಿ ಇಟ್ಟುಕೊಂಡಿದ್ದಾರೋ ಅದನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಗಡುವು ನೀಡಿದೆ. ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ವಿವರಿಸಿದರು.

ಬಿಜೆಪಿಯವರು ಅಧಿಕಾರದಲ್ಲಿರುವ ಇಪ್ಪತ್ತು ರಾಜ್ಯಗಳಲ್ಲಿ ರಾಜ್ಯಪಾಲರು ಮಾತ್ರ ಯಾವುದೇ ಮಸೂದೆಗಳನ್ನು ತಡೆ ಹಿಡಿಯುವುದಿಲ್ಲ. ರಾಜ್ಯಪಾಲರಿಗೆ ಮಸೂದೆಗಳ ಮೇಲೆ ಯಾವುದೇ ಆಕ್ಷೇಪಣೆ ಇರುವುದಿಲ್ಲ. ಆದರೆ ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಮಾತ್ರವೇ ಈ ರಾಜ್ಯಪಾಲರಿಗೆ ಆಕ್ಷೇಪ ಇರುತ್ತದೆ. ಸುಪ್ರೀಂಕೋರ್ಟ್ ಎಲ್ಲವನ್ನು ಸಂವಿಧಾನಬದ್ಧವಾಗಿ ಮಾಡುತ್ತಿದೆ. ಆದರೆ ಇದು ಬಿಜೆಪಿಯವರಿಗೆ ಆಗುವುದಿಲ್ಲ. ಅವರಿಗೆ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದು ದೂರಿದರು.