
ಜನಾಕ್ರೋಶವೇ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲಿದೆ: ಬಸವರಾಜ ಬೊಮ್ಮಾಯಿ
ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಮಾಡುತ್ತಿರುವ ಭ್ರಷ್ಟಾಚಾರದ ಹೊರೆಯನ್ನು ಜನರ ಮೇಲೆ ಹಾಕಿ, ತೆರಿಗೆ ಏರಿಕೆ, ಬೆಲೆ ಏರಿಕೆಯ ಭಾರ ಜನಸಾಮಾನ್ಯರ ಮೇಲೆ ಹಾಕಿ ಜನರಿಂದ ಲೂಟಿ ಮಾಡುತ್ತಿದೆ. ಜನಾಕ್ರೋಶವೇ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿಯ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಕೆಟ್ಟ ಸರ್ಕಾರ ನಾವು ನೋಡಿರಲಿಲ್ಲ. ಅತ್ಯಂತ ಕೆಟ್ಟ ಸರ್ಕಾರ ಕರ್ನಾಟಕದಲ್ಲಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಅಂದರೆ ಎಲ್ಲ ಆರ್ಥಿಕ ವ್ಯವಹಾರ ಗೊತ್ತಿರುವ ಅಷ್ಟೇ ಅಲ್ಲ ಒಬ್ಬ ಹಿರಿಯ ಶಾಸಕರು ಹಿಂದಿನ ಸಂಸತ್ ಸದಸ್ಯರಾದ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ ಅಂತ ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಕಚೇರಿಯ ಆರ್ಥಿಕ ಸಲಹೆಗಾರರು ಹೇಳುತ್ತಿದ್ದಾರೆ. ಮುಖ್ಯಮಂತಿಗೆ ನೈತಿಕತೆ ಇದ್ದರೆ, ಅವರು ರಾಜೀನಾಮೆ ಕೊಡಬೇಕು ಇಲ್ಲದಿದ್ದರೆ ಆರ್ಥಿಕ ಸಲಹೆಗಾರರನ್ನು ತೆಗೆಯಬೇಕು ಎಂದು ಆಗ್ರಹಿಸಿದರು.

ನಿಮ್ಮ ಕಚೇರಿಯಲ್ಲಿ ದಿನನಿತ್ಯ ನೀವು ಮಾಡುತ್ತಿರುವ ಅವ್ಯವಹಾರ ಕಣ್ಣಿಂದ ನೋಡಿ ಕೇವಲ ರಾಯರೆಡ್ಡಿ ಅಷ್ಟೇ ಅಲ್ಲ, ಹಿರಿಯ ಶಾಸಕರು ಜನರಿಗೆ ಮುಖ ತೋರಿಸಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಮಾತನಾಡಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟೇ ಅಲ್ಲ, ನಿಮ್ಮ ಸರ್ಕಾರದ ಜೊತೆಗೆ ಕೆಲಸ ಮಾಡುವ ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ನವರು ಈ ಸರ್ಕಾರ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗುವ ಮುಂಚೆ ಕಾಂಟ್ರಾಕ್ಟರ್ ಅಸೋಸಿಯೇಷನ್ ಅವರು ಕಾಂಗ್ರೆಸ್ ಒತ್ತಡಕ್ಕೆ ಮಣಿದು ನಮ್ಮ ಸರ್ಕಾರದಲ್ಲಿ 40% ಕಮಿಷನ್ ಇದೆ ಅಂತ ಆರೋಪ ಮಾಡಿದರು. ನಾನು ದಾಖಲೆ ಕೊಡಿ ತನಿಖೆ ನಡೆಸುತ್ತೇನೆ ಎಂದು ಹೇಳಿದೆ. ಅವರು ದಾಖಲೆ ಕೊಡಲಿಲ್ಲ. ಈಗ ಎರಡು ವರ್ಷ ಆಯ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಆಗಿದೆ. ಅವರಿಗೆ ಗುತ್ತಿಗೆದಾರರ ಅಸೋಷಿಯೇಷನ್ ನವರು ಒಂದೂ ದಾಖಲೆ ಕೊಡಲಿಲ್ಲ. ನ್ಯಾ. ನಾಗಮೋಹನ ದಾಸ್ ಅವರು ವರದಿ ಕೊಟ್ಟಿದ್ದಾರೆ. ಅದರಲ್ಲಿ ಏನೂ ಇಲ್ಲ. ಯಾಕೆಂದರೆ ಅವರು ಮಾಡಿದ್ದ ಆರೋಪ ಸುಳ್ಳಾಗಿತ್ತು. ಸಿಎಂ ಗುತ್ತಿಗೆದಾರರಿಗೆ ಏನಾದರೂ ದಾಖಲೆ ಕೊಡಿ ಇಲ್ಲದಿದ್ದರೆ ಮುಖಭಂಗವಾಗುತ್ತದೆ ಎಂದು ಹೇಳಿದ್ದರಂತೆ. ಆದರೆ, ಅವರ ಬಳಿ ಯಾವುದೇ ದಾಖಲೆ ಇಲ್ಲ. ಈಗ ಅದೇ ಕಾಂಟಾಕ್ಟರ್ ಅಸೋಷಿಯಷನ್ ನವರು ಈಗಿನದು 60% ಸರ್ಕಾರ ಅಂತ ಹೇಳಿದ್ದಾರೆ. ಈಗ ಅಬಕಾರಿ ಗುತ್ತಿಗೆದಾರರೂ ಅಬಕಾರಿ ಇಲಾಖೆಯಲ್ಲಿ ಲೂಟಿಯಾಗುತ್ತಿದೆ ಅಂತ ಹೇಳಿದ್ದಾರೆ. ಎಲೆಕ್ನಿಕ್ ಕಾಂಟಾಕ್ಟರ್ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಮೀಟರ್ ಅಳವಡಿಕೆ ಮಾಡಲು 5ರಿಂದ 6 ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಲೂಟಿ ನಿಂತಿಲ್ಲ
ಈ ಸರ್ಕಾರದಲ್ಲಿ ಲೂಟಿ ಮಾಡುವುದು ನಿಂತಿಲ್ಲ. ಅಬಕಾರಿ ತೆರಿಗೆಯನ್ನು ಒಂದು ವರ್ಷದಲ್ಲಿ ಎರಡು ಬಾರಿ ಹೆಚ್ಚಿಗೆ ಮಾಡಿದರು. ಅದನ್ನು ಬಡ ಕೂಲಿಕಾರ ನೀಡಬೇಕು. ಹಾಲಿನ ದರ ಹೆಚ್ಚಳ ಮಾಡಿದರು. ಹಾಲಿನ ಪ್ರೋತ್ಸಾಹಧನ 500 ಕೋಟಿ ರೂ. ರೈತರಿಗೆ ಕೊಡಬೇಕು. ಅದರ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹಾಕಿದರು. ಎಲೆಕ್ನಿಕ್ ಮೀಟರ್ ಅಳವಡಿಕೆಗೆ ಸರ್ಕಾರ ಹಣ ಕೊಡುವುದಿಲ್ಲ. ಜನರಿಂದ ವಸೂಲಿ ಮಾಡುತ್ತಿದ್ದಾರೆ. ಜನರ ಮೇಲೆ ಭ್ರಷ್ಟಾಚಾರದ ಹೊರೆಯನ್ನು ಹಾಕಿ, ಜನರಿಂದ ಲೂಟಿ ಮಾಡುತ್ತಿದ್ದಾರೆ. ಇಡಿ ಕರ್ನಾಟಕದ ಜನತೆಗೆ ಜಾಗೃತಿ ಮೂಡಿಸಲು ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ಆರಂಭಿಸಿದೆ. ಏಪ್ರಿಲ್ 21 ರಂದು ಹಾವೇರಿಗೆ ಬರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ಹೊರಾಟ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮದು ಯಾವುದೆ ತೆರಿಗೆ ಭಾರವಿಲ್ಲದ ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿದರು. ಅದು ಪಾಸಾದ ಹತ್ತು ದಿನದಲ್ಲಿ ತೆರಿಗೆ ಹೆಚ್ಚಳ ಮಾಡಿದರು. ಜನಸಾಮ್ಯಾನರನ್ನು ತೆರಿಗೆಯಿಂದ ಕುಗ್ಗಿಸುವ ಬಜೆಟ್. ಕಳೆದ ವರ್ಷ 40 ಸಾವಿರ ಕೋಟಿ ಬಜೆಟ್ ಹೊರತಾಗಿ ತೆರಿಗೆ ಹಾಕಿದ್ದಾರೆ. ಭ್ರಷ್ಟಾಚಾರದ ಭಾರ ಜನಸಾಮಾನ್ಯರ ಮೇಲೆ, ತೆರಿಗೆ ಏರಿಕೆ, ಬೆಲೆ ಏರಿಕೆಯ ಭಾರ ಜನಸಾಮಾನ್ಯರ ಮೇಲೆ ಹಾಕಿದ್ದಾರೆ. ಇವರು ಕಳೆದ ವರ್ಷ 16ಸಾವಿರ ಈ ವರ್ಷ 26 ಸಾವಿರ ಕೋಟಿ ರೂ.ಕೊರತೆ ಬಜೆಟ್ ಮಂಡನೆ ಮಾಡಿದ್ದಾರೆ. ನಾವು ಅಧಿಕಾರ ಬಿಟ್ಟು ಹೋದಾಗ 25 ಸಾವಿರ ಕೋಟಿ ರೂ. ಖಜಾನೆಯಲ್ಲಿತ್ತು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಅಧಿಕಾರ ಬಿಟ್ಟು ಹೋದಾಗ 1 ಲಕ್ಷ ಕೋಟಿಗಿಂತ ಹೆಚ್ಚು ಯೋಜನೆಗಳನ್ನು ಬಜೆಟ್ನಲ್ಲಿ ಹಣ ನೀಡದೇ ಘೋಷಣೆ ಮಾಡಿದ್ದರು. 45 ಸಾವಿರ ಕೋಟಿ ರು. ಬಾಕಿ ಬಿಲ್ ಬಿಟ್ಟು ಹೋಗಿದ್ದರು ಎಂದು ಮಾಹಿತಿ ನೀಡಿದರು.
ಸಿಎಂ ಸಾಲದ ಎಕ್ಸ್ಪರ್ಟ್
ಈ ವರ್ಷ 1.16 ಲಕ್ಷ ಕೋಟಿ, ಕಳೆದ ವರ್ಷ 1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಒಟ್ಟು ಸಾಲ ಏಳೂವರೆ ಲಕ್ಷ ಕೋಟಿಯಾಗಿದ್ದರೆ, ಅದರಲ್ಲಿ ನಾಲ್ಕುವರೆ ಲಕ್ಷ ಕೋಟಿ ರೂ ಸಿದ್ದರಾಮಯ್ಯ ಅವರು ಪಡೆದಿದ್ದಾರೆ. ಸಿದ್ದರಾಮಯ್ಯ ಅವರು ಸಾಲದ ಎಕ್ಸ್ಪರ್ಟ್, ಸಾಲದ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ. ಸಾಲ ಹೇಗೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಂದ ಸಲಹೆ ಪಡೆಯಬೇಕು. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಒಂದು ಲಕ್ಷ ರೂ. ಸಾಲ ಇದೆ. ಈಗ ಹುಟ್ಟುವ ಮಗುವಿಗೂ ಒಂದು ಲಕ್ಷ ಸಾಲ ಬೀಳುತ್ತಿದೆ. ನಮ್ಮ ಮಕ್ಕಳನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ. ಈ ಭಾರವೂ ಕೂಡ ಡ ಜನಸಾಮಾನ್ಯರ ಮೇಲಿದೆ. ಈ ಸರ್ಕಾರವನ್ನು ಯಾಕಾದರೂ ತಂದಿದ್ದೇವೆ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಈಗ ನಿಲ್ಲಿಸಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ. ಈ ಸರ್ಕಾರಕ್ಕೆ ರೈತರು ಬೇಕಿಲ್ಲ. ರೈತರು ಬೆಳೆದ ಬೆಳೆ ಬೇಕು. ಬರಗಾಲ ಬಿದ್ದರೂ ರಾಜ್ಯ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ಬರುವಂತಹ ದಿನಗಳಲ್ಲಿ ರೈತರ ಪಂಪ್ಸೆಟ್ಗಳಿಗೂ ಮೀಟರ್ ಆಳವಡಿಕೆ ಮಾಡುತ್ತಾರೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರು 10ಎಚ್ಪಿವರೆಗೂ ಮೀಟರ್ ಇಲ್ಲದೇ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಮಾಡಿದ್ದರು. ರೈತರ ಟ್ರ್ಯಾಕ್ಟರ್ ಮತ್ತು ಆಯಿಲ್ ಎಂಜಿನ್ ಗಳಿಗೆ ಆಗುತ್ತಿರುವ ಭಾರ ಕಡಿಮೆ ಮಾಡಲು ನಮ್ಮ ಅವಧಿಯಲ್ಲಿ ಡಿಸೇಲ್ ಸಬ್ಸಿಡಿ ನೀಡುತ್ತಿದ್ದೇವು. ಅದನ್ನು ಇವರು ನಿಲ್ಲಿಸಿದ್ದಾರೆ. ಬೀಜ, ಗೊಬ್ಬರಕ್ಕೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ್ದಾರೆ. ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ಪ್ರವಾಹ ಬಂದಾಗ ನಾವು ಕೇಂದ್ರ ಸರ್ಕಾರ ನೀಡುತ್ತಿದ್ದ ಪರಿಹಾರದ ಎರಡು ಪಟ್ಟು ಹಣ ನೀಡಿದ್ದೇವೆ. ಸುಮಾರು 17 ಸಾವಿರ ಕೋಟಿ ರೂ. ರೈತರಿಗೆ ಪರಿಹಾರ ನೀಡಿದ್ದೇವೆ. ನಾವು ರೈತರ ಮೇಲಿನ ಭಾರ ಕಡಿಮೆ ಮಾಡಿದ್ದೇವು. ಇವರು ಮತ್ತೆ ರೈತರ ಮೇಲೆ ಭಾರ ಹಾಕಿದ್ದಾರೆ.

ಕೇಂದ್ರದ ಯೋಜನೆ ತಲುಪಿಸುತ್ತಿಲ್ಲ
ನಮ್ಮ ನಾಯಕರಾದ ಪಧಾನಿ ನರೇಂದ್ರ ಮೋದಿಯವರು ಕೊಡುತ್ತಿರುವ ಯೋಜನೆಗಳನ್ನು ರಾಜ್ಯ ಸರ್ಕಾರ ಜನರಿಗೆ ತಲುಪಿಸುತ್ತಿಲ್ಲ. ಕೇಂದ್ರ ಸರ್ಕಾರ 17 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದಾರೆ. ಅದನ್ನು ಜನರಿಗೆ ತಲುಪಿಸುತ್ತಿಲ್ಲ. ಈಗ ಬರುತ್ತಿರುವ ಐದು ಕೆಜಿ ಅಕ್ಕಿಯೂ ಕೇಂದ್ರ ಸರ್ಕಾರದಿಂದಲೇ ಬರುತ್ತಿದೆ. ಅನ್ನಭಾಗ್ಯ ಎಂದು ಕೇವಲ ಹೆಸರು ಕೊಟ್ಟರೆ ಮುಗಿಯಿತೇ. ರಾಜ್ಯ ಸರ್ಕಾರದ ಒಂದು ಅಗಳು ಅಕ್ಕಿಯೂ ಇಲ್ಲ. ಬ್ಲಾಕ್ ಮಾರ್ಕೆಟ್ನಲ್ಲಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಹಾವೇರಿಯಲ್ಲಿ ಅಕ್ಕಿ ಕಳ್ಳತನ ಮಾಡುವವರನ್ನು ಹಿಡಿಯಲು ಹೋದರೆ ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ. ದುರ್ದೈವ ಯಾರೂ ಕೂಡ ಬಂಧನವಾಗಿಲ್ಲ. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ನಡೆಯುತ್ತಿದೆ. ಕಾನೂನಿನ ಭಯ ಇಲ್ಲ. ಪೊಲೀಸರ ಭಯ ಇಲ್ಲ. ವರ್ಗಾವಣೆ ದಂಧೆ ಇರುವುದರಿಂದ ಒಸಿ, ಮಟ್ಕಾ ಓಪನ್ನಾಗಿ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕ್ಲಬ್ಗಳನ್ನು ಹೆಚ್ಚಿಗೆ ಮಾಡುವಂತೆ ಕೇಳುತ್ತಿದ್ದಾರೆ. ಸಮಾಜದಲ್ಲಿ ಜನರಿಗೆ ದುಶ್ಚಟ ಹಚ್ಚಿದರೂ ಚಿಂತೆಯಿಲ್ಲ ನಮಗೆ ದುಡ್ಡು ಬೇಕು ಎಂದು ಕಾಂಗ್ರೆಸ್ ನವರು ಬಯಸುತ್ತಿದ್ದಾರೆ. ಗೃಹ ಸಚಿವರು ಹೆನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆದರೆ, ದೊಡ್ಡ ಸಿಟಿಯಲ್ಲಿ ಇದು ಸಾಮಾನ್ಯ ಅಂತ ಹೇಳುತ್ತಾರೆ. ಗೃಹ ಸಚಿವರೇ ಈ ರೀತಿ ಹೇಳಿದರೆ, ಹೆಣ್ಣು ಮಕ್ಕಳ ಬಗ್ಗೆ ಈ ಸರ್ಕಾರದ ಧೋರಣೆ ಏನಿದೆ ಅಂತ ಗೊತ್ತಾಗುತ್ತದೆ ಎಂದು ಹೇಳಿದರು.
ಗಾಳಿಗೂ ತೆರಿಗೆ ಬಾಕಿ
ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ ಹಾಕಿದ್ದಾರೆ. ಸ್ಮಶಾನದಲ್ಲಿ ಹೆಣ ಸುಡುವುದಕ್ಕೂ ಭ್ರಷ್ಟಾಚಾರ ನಡೆಯುತ್ತಿದೆ. ಉಸಿರಾಡುವ ಗಾಳಿಗೆ ತೆರಿಗೆ ಹಾಕುವುದು ಒಂದೇ ಇದೆ. ಇಷ್ಟೆಲ್ಲಾ ಆದರೂ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಕೇಳುತ್ತಾರೆ. ಕೇಂದ್ರ ಸರ್ಕಾರ ಪ್ರತಿ ವರ್ಷ 63 ಸಾವಿರ ಕೋಟಿ ರೂ. ತೆರಿಗೆ ಹಂಚಿಕೆಯಲ್ಲಿ ಕೊಟ್ಟಿದೆ. ರೈಲ್ವೆಗೆ 7 ಸಾವಿರ ಕೋಟಿ. 50 ಸಾವಿರ ಕೋಟಿ ರೂ. ಶೂನ್ಯ ಬಡಿ ದರದಲ್ಲಿ ಐವತ್ತು ವರ್ಷ ನೀಡಿದೆ. ಸ್ಮಾರ್ಟ್ ಸಿಟಿಗೆ 6 ಸಾವಿರ ಕೊಟಿ. ಪಿಎಂಜಿಎಸ್ವೈ, ಗರೀಬ್ ಕಲ್ಯಾಣ ಯೋಜನೆ, ಗೊಬ್ಬರಕ್ಕೆ ಸಬ್ಸಿಡಿ, ಜಲಜೀವನ್ ಮಿಷನ್ ಅಡಿಯಲ್ಲಿ ಶೇ 50 ರಷ್ಟು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಹೇಳಿದರು.
ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ವಕ್ಪ್ ತಿದ್ದುಪಡಿ
ಅಲ್ಪ ಸಂಖ್ಯಾತ ವರ್ಗದವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ವಕ್ಸ್ ಕಾನೂನು ತಿದ್ದುಪಡಿ ಮಾಡಿದೆ. ಸಂಸತ್ತು. ವಿಧಾನಸೌಧವೂ ಅವರದೇ ಅಂತ ಹೇಳುತ್ತಾರೆ. ವಕ್ಪ್ ಕಾಯಿದೆ ಸಂವಿಧಾನಕ್ಕಿಂತ ಮೇಲೆ ಎನ್ನುತ್ತಾರೆ. ತುಷ್ಟ್ರೀಕರಣದ ರಾಜಕಾರಣ ಪರಾಕಾಷ್ಠೆ ಮುಟ್ಟಿರುವುದರಿಂದ ಅದನ್ನು ಸರಿಪಡಿಸುವ ಕೆಲಸವನ್ನು ನಮ್ಮ ಪಧಾನಿ ನರೇಂದ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಮಾಡಿದ್ದಾರೆ. ಅವರಿಗೆ ಸಂಪೂರ್ಣ ಬೆಂಬಲ ಕೊಡಬೇಕು ಎಂದರು. ಈ ದುಷ್ಯ ಭಷ್ಟ, ಅನಿಷ್ಠ, ಕನಿಷ್ಠ ಸರ್ಕಾರದ ವಿರುದ್ಧ ಜನಾಕ್ರೋಶ ಇವತ್ತು ಮುಗಿಲು ಮುಟ್ಟಿದೆ. ಆ ಜನಾಕ್ರೋಶವೇ ಈ ಸರ್ಕಾರವನ್ನು ಕಿತ್ತೊಗೆಯಲಿದೆ. ಇದು ಅಂತ್ಯವಲ್ಲ. ಆರಂಭ ಮತ್ತೆ 2028 ರಲ್ಲಿ ಜನರಿಂದ ಜನಪರ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪೂಜಾರ ಮಾಜಿ ಸಚಿವರಾದ ಬಿ.ಸಿ ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನ, ವೀರುಪಾಕ್ಷಪ್ಪ ಬಳ್ಳಾರಿ ಯುವ ಮುಖಂಡರಾದ ಭರತ ಬೊಮ್ಮಾಯಿ, ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಸಭೆಯ ಪೂರ್ವದಲ್ಲಿ ಹುತಾತ್ಮ ಶ್ರೀ ಮೈಲಾರ ಮಹಾದೇವಪ್ಪ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.