
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ನಾಡದೇವತೆಗೆ ವರ್ಷದ ಮೊದಲ ಪೂಜೆ ಸಲ್ಲಿಸಿದ್ರು.. ಚಾಮುಂಡೇಶ್ವರಿಗೆ ಅರ್ಚನೆ ಮಾಡಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಕಾಂಗ್ರೆಸ್ ಅವಧಿಯಲ್ಲಿ ಶೇಕಡ 60ರಷ್ಟು ಲಂಚ ಪಡೀತಿದ್ದಾರೆ ಅನ್ನೋದು ಕಾಂಗ್ರೆಸ್ ಕಾರ್ಯಕರ್ತರೆ ಒಪ್ಪಿಕೊಂಡಿದ್ದಾರೆ.ಮನೆ ಹಂಚಿಕೆಯಲ್ಲೂ ಲಂಚ ಪಡೆಯಲಾಗ್ತಿದೆ.ಈ ಮೊದಲು ಪಿಡಿಒ ಲಂಚ ಪಡೀತಿದ್ದ.ಆದ್ರೆ ಈಗ ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೀತಿದ್ದಾರೆ.ಹಣ ಲೂಟಿ ಮಾಡೋದಕ್ಕೆ ಇತಿ ಮಿತಿ ಇಲ್ವಾ..? ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರರು ಕೂಡಾ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಅಂತ ಎಲ್ಲರೂ ಹೇಳ್ತಿದ್ದಾರೆ. ಹಣ ಲೂಟಿ ಮಾಡೋದಕ್ಕೂ ಇತಿಮಿತಿ ಇಲ್ವಾ ಎಂದಿರುವ ಕುಮಾರಸ್ವಾಮಿ, ಬಸ್ ಟಿಕೆಟ್ ದರ ಏರಿಕೆ ಬಗ್ಗೆಯೂ ಟೀಕಿಸಿದ್ದಾರೆ. ಗ್ಯಾರಂಟಿ ಯೋಜನೆ ನಿಲ್ಲಿಸಲು ಸರ್ಕಾರ ಕಾರಣ ಹುಡುಕುತ್ತಿದೆ. ಜನರಿಂದಲೇ ಕಿತ್ತು ಮತ್ತೆ ಜನರಿಗೆ ಕೊಡುವ ಕೆಲಸ ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಜೊತೆ ಸರ್ಕಾರ ಚೆಲ್ಲಾಟ ಆಡ್ತಿದೆ. ಬಸ್ ಟಿಕೆಟ್ ದರ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ದಿನಕ್ಕೆ 10 ರೂಪಾಯಿ ಏರಿಕೆಯಾದ್ರೂ ಜನರಿಗೆ ಕಷ್ಟವೇ ಆಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ತಗೋತಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅವರ ಬಳಿ ದಾಖಲೆಗಳಿದ್ದರೆ, ದಾಖಲೆ ಸಮೇತ ಸಾಬೀತು ಮಾಡಲಿ. ಅವರ ಆರೋಪವನ್ನ ದಾಖಲೆ ಸಮೇತ ಪ್ರೂವ್ ಮಾಡ್ಲಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಬಸ್ ಪ್ರಯಾಣದ ದರ ಶೇಕಡಾ 15ರಷ್ಟು ಏರಿಕೆ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ ಏರಿಕೆ ಮಾಡಿದ್ದೇವೆ. ಹಿಂದಿನವರು ಕೂಡ ಬಸ್ ದರವನ್ನ ಏರಿಕೆ ಮಾಡಿಲ್ವಾ..? ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ವ..? ಅಂತ ಪ್ರಶ್ನಿಸಿದ್ದಾರೆ.
ಸಾರಿಗೆ ಬಸ್ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂತೋಷ್ ಲಾಡ್, ಸಾರಿಗೆ ಬಸ್ ದರ ಏರಿಕೆ ಅನಿವಾರ್ಯವಿತ್ತು.ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ ಡೀಸೆಲ್ನ್ನ 30 ರಿಂದ 40 ರೂಪಾಯಿಗೆ ಕೊಡಬಹುದಲ್ವಾ..? ನಾವು ಉಚಿತವಾಗಿ ಏನನ್ನಾದ್ರೂ ಕೊಡ್ತಾ ಇದ್ದೇವೆ. ಬಿಜೆಪಿಯವರು ಏನು ಕೊಟ್ಟಿದ್ದಾರೆ.. ಅಂತ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಆರೋಪಗಳಿಗೆ ನೇರವಾಗಿ ತಿರುಗೇಟು ನೀಡಿದ್ದಾರೆ.