
ಮಡಿಕೇರಿ:ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಹಬ್ಬಾಚರಣೆಯ ಸಂದರ್ಭ ಎಂದಿನಂತೆ ಸಾಂಪ್ರದಾಯಿಕ ಕುಪ್ಯ-ಚೇಲೆ ತೊಟ್ಟು ದೇವಸ್ಥಾನಕ್ಕೆ ತೆರಳಿದ್ದ ಕೊಡವರನ್ನು ಜಾತಿಯ ಬಣ್ಣ ಲೇಪಿಸಿ, ಕುಪ್ಯ-ಚೇಲೆ ತೊಟ್ಟುಕೊಂಡು ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ, ಬರುವುದಾದರೆ ಕುಪ್ಯ- ಚೇಲೆ ಬಿಚ್ಚಿಟ್ಟು ಪಂಚೆ-ಶಲ್ಯವನ್ನು ತೊಟ್ಟು ಬರಬಹುದೆಂದು ತಾಕೀತು ಮಾಡುವುದರೊಟ್ಟಿಗೆ ಕೊಡವತಿ ಸೀರೆ ಉಟ್ಟ ಹೆಂಗಸರನ್ನೂ ಸೇರಿದಂತೆ ಈ ವರ್ಗದ ಭಕ್ತಾಧಿಗಳ ಮೇಲೆ ಹಲ್ಲೆ ನಡೆಸಿ ಹೊರಗಟ್ಟಲು ಯತ್ನಿಸಿದ ಘಟನೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಯಾವುದೇ ವರ್ಗ, ಪಂಗಡ, ಸಮುದಾಯಗಳಿರಲಿ… ದೇವನೆಲೆಗಳಿಗೆ ಹೋಗುವಾಗ ಅವರವರ ಸಾಂಪ್ರದಾಯಿಕ ಉಡುಗೆ ತೊಟ್ಟು ಹೋಗುವುದರಲ್ಲಿ ಯಾವುದೇ ಅಡ್ಡಿ-ಆತಂಕಗಳಿಗೆ ಅವಕಾಶವಿಲ್ಲ. ಕೆಲವೊಂದು ದೇವಸ್ಥಾನದಲ್ಲಿ ವರ್ಸ್ತ ಸಂಹಿತೆ ಇದ್ದರೂ ಸಾಂಪ್ರದಾಯಿಕ ಉಡುಗೆಗಳಿಗೆ ಎಲ್ಲಿಯೂ, ಯಾರೊಬ್ಬರೂ ಚಕಾರವೆತ್ತುವಂತಿಲ್ಲ, ತಡೆವೊಡ್ಡುವಂತಿಲ್ಲ. ಅದರಲ್ಲೂ ನಮ್ಮ ನೆಲ ಕೊಡಗಿನಲ್ಲಿ ಸ್ವಂತಕ್ಕೆ ಮಾಡಿಕೊಂಡಿರುವ ಬೈಲಾಗಳಿದ್ದಲ್ಲಿ ಅಂತಹವುಗಳನ್ನು ತ್ವರಿತವಾಗಿ ತಿದ್ದುಪಡಿ ಮಾಡಿಕೊಳ್ಳುವುದು ಒಳಿತು ಎಂದಿದ್ದಾರೆ.
ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೆ ಅವರವರ ಸಂಪ್ರದಾಯವನ್ನು ಪರಿಪಾಲಿಸಲು ಅನುವು ಮಾಡಿಕೊಟ್ಟಿದ್ದು ಬಹುಸಂಸ್ಕೃತಿಯಲ್ಲಿ ಏಕತೆಯನ್ನು, ಐಕ್ಯತೆಯನ್ನು, ಶಾಂತಿಯನ್ನು, ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಪ್ರಾಪ್ತವಿದ್ದು ಯಾರೊಬ್ಬರೂ ಸಾಂಪ್ರದಾಯಿಕ ಉಡುಪಿನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವಂತದ್ದು, ಅವಮಾನಿಸುವಂತದ್ದು, ಬಹಿರಂಗವಾಗಿ ಮುಜುಗರಕ್ಕೆ ಎಳೆಯುವಂತ ಪ್ರಕ್ರಿಯೆ, ಕುಯುಕ್ತಿ, ಕಿಂಚಿತ್ಬುದ್ದಿಗೆ ನಾಂದಿಯಾಡಬೇಕಾಗಿದೆ ಎಂದು ಮಹೇಶ್ ನಾಚಯ್ಯ ತಿಳಿಸಿರುತ್ತಾರೆ.