• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಾಹಿತ್ಯ ಸಮ್ಮೇಳನ – ಮಹಿಳೆಗೆ ಏಕೆ ದಕ್ಕುವುದಿಲ್ಲ ?

ನಾ ದಿವಾಕರ by ನಾ ದಿವಾಕರ
December 7, 2024
in Top Story, ಕರ್ನಾಟಕ, ವಿಶೇಷ
0
ಸಾಹಿತ್ಯ ಸಮ್ಮೇಳನ – ಮಹಿಳೆಗೆ ಏಕೆ ದಕ್ಕುವುದಿಲ್ಲ ?
Share on WhatsAppShare on FacebookShare on Telegram

—-ನಾ ದಿವಾಕರ—-

ADVERTISEMENT

ಸಾಂದರ್ಭಿಕ ನೆಲೆಯಲ್ಲಾದರೂ ಮಂಡ್ಯದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಹಿಳೆ ಇರಬಹುದಿತ್ತಲ್ಲವೇ  ?

=====

ಗಂಡು ಮೆಟ್ಟಿದ ಭೂಮಿ ಎಂದು ಎದೆಬಡಿದುಕೊಳ್ಳುವ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಡಿಸೆಂಬರ್‌ 20 ರಿಂದ 23ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕೊನೆಗೂ ಸಂಪನ್ನವಾಗಿದೆ. ಖ್ಯಾತ ಸಾಹಿತಿ ಗೊ.ರು. ಚನ್ನಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯ ವಿಚಾರದಲ್ಲಿ ಯಾವುದೇ ಭಿನ್ನಮತ ಇರಲು ಸಾಧ್ಯವಿಲ್ಲ. ಕನ್ನಡದ ಮೇರು ಸಾಹಿತಿಗಳಲ್ಲೊಬ್ಬರಾದ ಗೊರುಚ ಅವರು ಸಮ್ಮೇಳನಾಧ್ಯಕ್ಷರಾಗಿರುವುದು ಸ್ವಾಗತಾರ್ಹವೇ. ಆದರೆ ಮೂರು ದಶಕಗಳ ನಂತರ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡಬೇಕೆಂಬ ಸದಾಗ್ರಹಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಯ್ಕೆ ಸಮಿತಿ ಮನ್ನಣೆ ನೀಡದಿರುವುದು, ಸಾಹಿತ್ಯ ವಲಯದ ಗಂಡಾಳ್ವಿಕೆಯನ್ನು ಮತ್ತೊಮ್ಮೆ ಪುಷ್ಟೀಕರಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮ್ಮೇಳನದ ಜ್ಯೋತಿ ರಥವನ್ನು ಸ್ವಾಗತಿಸುವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದ್ದು ಸಮ್ಮೇಳನದ ಯಶಸ್ಸಿಗೆ ಮುನ್ನುಡಿ ಬರೆದಂತೆ ಕಾಣುತ್ತಿದೆ.

ಪ್ರತಿ ಸಲ ಸಾಹಿತ್ಯ ಸಮ್ಮೇಳನ ನಡೆಯುವಾಗಲೂ ಸಮ್ಮೇಳನಾಧ್ಯಕ್ಷ ಸ್ಥಾನ ತನಗೆ ಲಭಿಸಬಹುದು ಎಂಬ ಕನಸು ಕರ್ನಾಟಕದ ಮಹಿಳೆಯರಲ್ಲಿ, ಸಾಹಿತ್ಯಾಸಕ್ತರಲ್ಲಿ, ಲಿಂಗ ಸೂಕ್ಷ್ಮತೆಯುಳ್ಳವರಲ್ಲಿ ಇದ್ದೇ ಇರುತ್ತದೆ. ಆದರೆ ಕಳೆದ 25 ವರ್ಷಗಳಲ್ಲಿ ನಡೆದ 19  ಸಮ್ಮೇಳನಗಳಲ್ಲಿ ಈ ಕನಸು ಮೂರು ಬಾರಿ ಮಾತ್ರ , 68, 71 ಮತ್ತು 76ನೇ ಸಮ್ಮೇಳನಗಳಲ್ಲಿ , ಕೈಗೂಡಿದೆ. 2010ರ ನಂತರ ನಡೆದಿರುವ 11 ಸಮ್ಮೇಳನಗಳಲ್ಲಿ ಈ ಪ್ರಾತಿನಿಧ್ಯದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇಷ್ಟಕ್ಕೂ ಮಹಿಳಾ ಸಮ್ಮೇಳನಾಧ್ಯಕ್ಷರ ಆಗ್ರಹ ಏತಕ್ಕಾಗಿ ಕೇಳಿಬರುತ್ತದೆ ? ಮೂರು ದಿನದ ಅಕ್ಷರ ಜಾತ್ರೆಯಲ್ಲಿ ಅಧ್ಯಕ್ಷರಾಗಿ ವಿಜೃಂಭಿಸಿದ ಮಾತ್ರಕ್ಕೆ ಮಹಿಳೆಯರನ್ನು ಕಾಡುತ್ತಿರುವ ಜಟಿಲ-ಸಂಕೀರ್ಣ ಸವಾಲುಗಳಿಗೆ ಉತ್ತರ ಕೊಟ್ಟಂತಾಗುತ್ತದೆಯೇ ? ಈ ಪ್ರಶ್ನೆಗಳೂ ಉದ್ಭವಿಸಬಹುದು. ನಿಜ, ಈ ಆಡುಂಬೊಲದಲ್ಲಿ ಎಲ್ಲವೂ ಇತ್ಯರ್ಥವಾಗುವುದಿಲ್ಲ.

Siddaramaiah:  ಬಾಣಂತಿ ಸಾ** ಬಗ್ಗೆ ಚೆಕ್‌ ಮಾಡಿ ಹೇಳುತ್ತೇನೆ ಸಿಎಂ..! #ballari #hospital #congress

ಆದರೆ ತನ್ನ 110 ವರ್ಷಗಳ ಇತಿಹಾಸದಲ್ಲಿ 26 ಅಧ್ಯಕ್ಷರನ್ನು ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆ ಒಮ್ಮೆಯೂ ಮಹಿಳಾ ಸಾಹಿತಿಯೊಬ್ಬರಿಗೆ ಆದ್ಯತೆ ನೀಡದಿರುವುದನ್ನು ಗಮನಿಸಿದಾಗ, ಭಾರತದ ಸಾಂಸ್ಕೃತಿಕ ಜಗತ್ತಿನ ಗಂಡಾಳ್ವಿಕೆಯ ಮನಸ್ಥಿತಿ ಈ ಸೃಜನಶೀಲ ಲೋಕದಲ್ಲೂ ಅಷ್ಟೇ ಗಟ್ಟಿಯಾಗಿ ಬೇರೂರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕೊರತೆಯನ್ನು ನೀಗಿಸಿಕೊಳ್ಳುವ ನೈತಿಕ ಪ್ರಜ್ಞೆಯಿಂದಾದರೂ ಸಾಹಿತ್ಯ ಪರಿಷತ್ತು ತಾನು ನಡೆಸುವ ವಾರ್ಷಿಕ-ದ್ವೈವಾರ್ಷಿಕ ಸಮ್ಮೇಳನಗಳಿಗೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಬಹುದಲ್ಲವೇ ? ಇದು ಕೇವಲ ಹುದ್ದೆಯನ್ನಲಂಕರಿಸುವ ಅಥವಾ ಸಮ್ಮಾನ-ಸನ್ಮಾನಗಳ ಪ್ರಶ್ನೆಯಲ್ಲ, ಮೂಲತಃ ಇದು ಪ್ರಾತಿನಿಧ್ಯದ ಪ್ರಶ್ನೆ. ಶತಮಾನ ಕಳೆದರೂ ನಮ್ಮೊಳಗಿನ ಅಂತರ್‌ ಪ್ರಜ್ಞೆಯಲ್ಲಿ ಲಿಂಗ ಸಮಾನತೆಯ ಬೀಜ ಬಿತ್ತನೆ ಆಗಿಲ್ಲವೇ ಎಂಬ ಪ್ರಶ್ನೆ ಪುರುಷಾಧಿಪತ್ಯದ ನೆಲೆಗಳಲ್ಲಿ ಚರ್ಚೆಯಾಗಬೇಕಲ್ಲವೇ ?

ಲಿಂಗ ಸೂಕ್ಷ್ಮತೆಯ ಸಾಹಿತ್ಯಕ ದನಿ

ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯಕ ಸಂವಾದ ಅಥವಾ ಒಣ ಚರ್ಚೆಗಳಲ್ಲಿ ಸಂಪನ್ನವಾಗುವ ಬೌದ್ಧಿಕ ಕಸರತ್ತುಗಳಾಗಕೂಡದು. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೊಮ್ಮೆ ನಡೆಯುವ ಅಖಿಲ ಭಾರತ ಸಮ್ಮೇಳನಗಳಿಗೆ ʼ ಅಖಿಲ ಭಾರತ ಆಯಾಮ ʼ (Pan Indian dimension) ಇರುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯವಾದದ್ದು ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಕನ್ನಡಿಗರನ್ನು, ಕರ್ನಾಟಕವನ್ನು ಕಾಡುವಂತಹ ಜ್ವಲಂತ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಸಮಸ್ಯೆಗಳು ಅದರ ಪರಿಹಾರೋಪಾಯಗಳು.  ಪ್ರಸಕ್ತ ಸನ್ನಿವೇಶದಲ್ಲಿ, ಮಂಡ್ಯ ಸಮ್ಮೇಳನಕ್ಕೆ ಮಹಿಳೆಯೇ ಏಕೆ ಆಗಬೇಕಿತ್ತು ಎನ್ನಲೂ ಕೆಲವು ಕಾರಣಗಳಿವೆ ಎನ್ನುವುದನ್ನು ಸಾಹಿತ್ಯ ವಲಯ ಗಮನಿಸಬೇಕಿತ್ತಲ್ಲವೇ ? ಈ ಒತ್ತಾಸೆ ಮತ್ತು  ಆಗ್ರಹ ಮಹಿಳಾ ಸಂಘಟನೆಗಳಿಂದ, ಮಹಿಳಾ ಪರ ದನಿಗಳಿಂದ ಕೇಳಿಬಂದರೂ, ಸಾಹಿತ್ಯಲೋಕದಿಂದ ಗಟ್ಟಿಯಾದ ಗಂಡುದನಿ ಹೊರಬರಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಕನ್ನಡದ ಹಿರಿಯ ಸಾಹಿತಿಗಳಾದರೂ ದನಿಗೂಡಿಸಬಹುದಿತ್ತು.

ಇರಲಿ, ಗಂಡು ಮೆಟ್ಟಿದ ಭೂಮಿ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ತನ್ನ ಈ ಗುಣವಿಶೇಷಣವನ್ನು ಉಳಿಸಿಕೊಂಡಿದೆ ಎಂದೇ ಭಾವಿಸೋಣ. ಆದರೆ ಮಂಡ್ಯದ ಸಮ್ಮೇಳನದ ಸಂದರ್ಭದಲ್ಲೇ ಈ ಹೆಣ್ಣುದನಿ ಏಕೆ ಗಟ್ಟಿಯಾಗಿತ್ತು ? ಸಾಹಿತ್ಯ ತನ್ನ ಬೇರುಗಳನ್ನು ಸಮಾಜದ ನಡುವೆಯೇ ಗುರುತಿಸಿಕೊಳ್ಳುವುದಾದರೆ, ಸಾಹಿತ್ಯ ಸಮ್ಮೇಳನ ಎನ್ನುವ ಅಕ್ಷರ ಜಾತ್ರೆಯಲ್ಲಿ ಈ ಸಮಾಜವನ್ನು ಕಾಡುವ ಜಟಿಲ ಸಿಕ್ಕುಗಳು ಪ್ರಧಾನ ವಿಷಯವಾಗಬೇಕು. ಇಲ್ಲಿ ಚರಿತ್ರೆಗಿಂತಲೂ ಹೆಚ್ಚು ಚರ್ಚೆಗೊಳಗಾಗಬೇಕಿರುವುದು ವರ್ತಮಾನ ಮತ್ತು ಭವಿಷ್ಯ. ಹಾಗಾಗಿ ಸಮ್ಮೇಳನ ನಡೆಯುವ ಸಂದರ್ಭ, ಸ್ಥಳ ಮತ್ತು ಸಾಂಸ್ಕೃತಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಚಾರಗಳು ಮತ್ತು ಅಲ್ಲಿ ಇರಬೇಕಾದ ಲಿಂಗ ಸಮಾನತೆ ಮತ್ತು ಲಿಂಗ ಪ್ರಾತಿನಿಧ್ಯವೂ ಮುಖ್ಯವಾಗಬೇಕು.

ಮೂರು ದಶಕಗಳು ಕಳೆದು, ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ನೀಡುತ್ತಿರುವ ಸಕ್ಕರೆ ಜಿಲ್ಲೆ ಮಂಡ್ಯ ಈಗ ಕಬ್ಬು-ಭತ್ತ-ಸಕ್ಕರೆಗಿಂತಲೂ ಹೆಚ್ಚು (ಅಪ)ಖ್ಯಾತಿ ಪಡೆದಿರುವುದು ಹೆಣ್ಣು ಭ್ರೂಣ ಹತ್ಯೆಗೆ ಮತ್ತು ಕುಸಿಯುತ್ತಿರುವ ಲಿಂಗಾನುಪಾತಕ್ಕೆ.  ಇತ್ತೀಚಿನ ಅಧಿಕೃತ ವರದಿಯ ಅನುಸಾರ ಮಂಡ್ಯ ಜಿಲ್ಲೆಯಲ್ಲಿ 1000 ಗಂಡುಮಕ್ಕಳಿಗೆ 875 ಹೆಣ್ಣು ಮಕ್ಕಳು ಹುಟ್ಟುತ್ತಿದ್ದಾರೆ. ಈ 1000:875 ಅನುಪಾತ ಯಾವುದೇ ಸಮಾಜವನ್ನಾದರೂ ಬಡಿದೆಬ್ಬಿಸುವಂತಹುದು. ಇದರೊಟ್ಟಿಗೆ ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಈ ವರ್ಷದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯಲ್ಲಿ 70 ಬಾಲ್ಯ ವಿವಾಹಗಳು ವರದಿಯಾಗಿದ್ದು, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯಾಗುತ್ತಿರುವುದು ಇನ್ನೂ ಆಘಾತಕಾರಿಯಾಗಿದೆ. ಇಷ್ಟು ಸಾಲದೆಂಬಂತೆ ಮಂಡ್ಯ ಜಿಲ್ಲೆಯಲ್ಲೇ ನಡೆದಿರುವ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗಳು ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಮಾಡಿವೆ.

ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಸಾಹಿತ್ಯ ವಲಯವು ಗುರುತಿಸಲೇಬೇಕಾದ ಅಂಶ ಎಂದರೆ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇರುವ ಮಹಿಳಾ ದೌರ್ಜನ್ಯಗಳು. ಅಧಿಕೃತ ವರದಿಗಳ ಅನುಸಾರ ರಾಜ್ಯದಲ್ಲಿ 2022ರಲ್ಲಿ 2630 ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು,  2023ರಲ್ಲಿ 3260 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 1135 ಲೈಂಗಿಕ ಕಿರುಕುಳದ ಪ್ರಕರಣಗಳಿವೆ. ಪೊಲೀಸ್‌ ಇಲಾಖೆಯ ದತ್ತಾಂಶದ ಪ್ರಕಾರ ಬೆಂಗಳೂರಿನಲ್ಲಿ 2024ರ ಜೂನ್‌ ವೇಳೆಗೆ 298 ಪೋಕ್ಸೋ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿರುವುದಾದರೂ, ಲೈಂಗಿಕ ಅಪರಾಧಗಳಿಗೆ ತುತ್ತಾಗುತ್ತಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆಗೆ ಅಗತ್ಯವಾದ ಉಪಕ್ರಮಗಳನ್ನು ಸರ್ಕಾರಗಳು ಕೈಗೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಂಕಿ ಸಂಖ್ಯೆಗಳಿಂದಾಚೆ ನೋಡಿದಾಗ, ದೇಶವ್ಯಾಪಿಯಾಗಿ ಕಾಣುವಂತೆ ರಾಜ್ಯದಲ್ಲೂ ಮಹಿಳಾ ಸಂಕುಲ ಅತ್ಯಾಚಾರ, ಅಪಮಾನ, ಕಿರುಕುಳಗಳನ್ನು ಎದುರಿಸುತ್ತಲೇ ಇರುವುದು ಸುಸ್ಪಷ್ಟ.

ಸಾಹಿತ್ಯಾಭಿವ್ಯಕ್ತಿಯ ಸಾಮಾಜಿಕ ನೆಲೆ

ಇಲ್ಲಿ ಮುಖ್ಯವಾಗಿ ಕಾಡಬೇಕಾದ್ದು ಹೆಣ್ತನದ ಘನತೆಯ ಪ್ರಶ್ನೆ. ಲಿಂಗಾನುಪಾತ, ಬಾಲ್ಯ ವಿವಾಹ, ಭ್ರೂಣ ಹತ್ಯೆ ಮತ್ತು ಮಹಿಳಾ ದೌರ್ಜನ್ಯಗಳು,  ಈ ವಿದ್ಯಮಾನಗಳಲ್ಲಿ ನಾವು ಗುರುತಿಸಬೇಕಿರುವುದು ಸತತ ಆಘಾತಕ್ಕೊಳಗಾಗುತ್ತಿರುವ  ಹೆಣ್ತನದ ಘನತೆಯನ್ನು. ರಾಜಕೀಯವಾಗಿ ಇದನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸರ್ಕಾರಗಳ ನಿರಾಸಕ್ತಿ  ಎದ್ದು ಕಾಣುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ದೇಶಿಸುವ ಪುರುಷಾಧಿಪತ್ಯ ಮತ್ತು ಪಿತೃಪ್ರಧಾನ ಧೋರಣೆ ಮಹಿಳೆಯರ ರಕ್ಷಣೆಗೆ ಕಾನೂನಾತ್ಮಕ-ಶಾಸನಾತ್ಮಕ ಕೋಟೆಗಳನ್ನೂ ಸಡಿಲಗೊಳಿಸುತ್ತದೆ. ಸಂವಿಧಾನವನ್ನು ನಿತ್ಯ ಪಠಿಸುವ ರಾಜ್ಯ ಸರ್ಕಾರವು ರಾಜ್ಯ ಮಹಿಳಾ ಆಯೋಗಕ್ಕೆ ಸದಸ್ಯರನ್ನು ನೇಮಿಸುವುದರಲ್ಲಿ ವಿಳಂಬ ನೀತಿಯನ್ನು ಅನಸರಿಸುವುದೇ ಇದನ್ನು ಸೂಚಿಸುತ್ತದೆ. ಆದರೆ ಸೃಜನಶೀಲತೆ ಮತ್ತು ಮನುಜ ಸೂಕ್ಷ್ಮತೆಯನ್ನೇ ತನ್ನ ಆಧಾರ ಸ್ತಂಭವಾಗಿ ಪರಿಗಣಿಸಬೇಕಾದ ಸಾಹಿತ್ಯ ಪರಿಷತ್ತು-ಸಮ್ಮೇಳನಗಳು ತಮ್ಮೊಳಗೆ ಲಿಂಗ ಸಮಾನತೆಯ ಆಶಯವನ್ನಾದರೂ ಹೊಂದಿರಬೇಕಲ್ಲವೇ ?

ಪುರುಷಾಧಿಪತ್ಯವೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನೂ ಪ್ರಭಾವಿಸುವುದಾದರೆ, ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಲೋಕ ಯಾವ ರೀತಿಯಲ್ಲಿ ತನ್ನ ಸೂಕ್ಷ್ಮ ಸಂವೇದನೆಯನ್ನು ಭಿನ್ನ ನೆಲೆಯಲ್ಲಿ ಬಿಂಬಿಸಲು ಸಾಧ್ಯ ? ಗಂಡು ಮೆಟ್ಟಿದ ಭೂಮಿ ಎಂಬ ಪುರುಷಾಹಮಿಕೆಯ ಧ್ವನಿಯನ್ನು ಸಾಕ್ಷೀಕರಿಸುವ ಹಾಗೆ ಸಮ್ಮೇಳನದಲ್ಲಿ ಮಹಿಳೆಯ ಧ್ವನಿಗೆ ಅವಕಾಶವನ್ನು ನಿರಾಕರಿಸಿರುವುದು ಎಷ್ಟರ ಮಟ್ಟಿಗೆ ಸಮರ್ಥನೀಯ ? ಈ ಪ್ರಶ್ನೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಉತ್ತರಿಸಬೇಕಿದೆ. ಈ ಬಾರಿಯ ಸಮ್ಮೇಳನದ ಪೂರ್ವ ಸಿದ್ಧತೆಗಳ ನಡುವೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂಬ ಗಟ್ಟಿ ದನಿ ಕೇಳಿಬಂದಿದ್ದಂತೂ ಹೌದು. ರಾಜ್ಯದ ಹಲವು ಮೂಲೆಗಳಿಂದ ಪ್ರಗತಿಪರ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ನಾಗರಿಕ ಸಂಘಟನೆಗಳು ಹಕ್ಕೊತ್ತಾಯದಂತೆ ಆಗ್ರಹಿಸಿವೆ. ಆದರು ಅಂತಿಮ ಆಯ್ಕೆಯ ಪ್ರಶ್ನೆ ಎದುರಾದಾಗ ಈ ದನಿಗಳೆಲ್ಲವನ್ನೂ ನಿರ್ಲಕ್ಷಿಸಲಾಗಿದೆ.

ಮಂಡ್ಯ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಎದುರಿಸುತ್ತಿರುವ ಮಹಿಳಾ ಕೇಂದ್ರಿತ ಸಮಸ್ಯೆಗಳನ್ನು ಸ್ತ್ರೀವಾದಿ ನೆಲೆಯಲ್ಲಿ ನಿಂತು ವಸ್ತುನಿಷ್ಠವಾಗಿ ಚರ್ಚಿಸುವ ಒಂದು ಸಾಹಿತ್ಯ ಭೂಮಿಕೆಯಾಗಿ ಸಾಹಿತ್ಯ ಸಮ್ಮೇಳನವನ್ನು ನೋಡಬೇಕಿದೆ. ಇದನ್ನು ಪುರುಷ ಸಾಹಿತಿ ಮಾಡಲಾರರು ಎಂದೇನೂ ಇಲ್ಲ ಆದರೆ, ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಇಲ್ಲಿ ಅವಶ್ಯವಾಗಿ ಬೇಕಾಗುವಂತಹ ಸ್ತ್ರೀ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಗಳಿಗೆ ಮಾನವೀಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ಮಹಿಳಾ ಸಾಹಿತಿಯ ಅಂತರಾಳದಿಂದ ಹೊರಸೂಸುವ ಒಳದನಿಗೂ, ಅನ್ಯರಿಂದ ಮೂಡುವ ಅಭಿವ್ಯಕ್ತಿಗೂ ಅಪಾರ ಅಂತರ ಇರುತ್ತದೆ. ಈ ಸೂಕ್ಷ್ಮವನ್ನು ಸಮ್ಮೇಳನದ ಆಯೋಜಕರು ಮತ್ತು ಆಯ್ಕೆ ಸಮಿತಿಯ ಸದಸ್ಯರು ಗಮನಿಸಿದ್ದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಸಾಹಿತಿಯೇ ಆಯ್ಕೆಯಾಗಬಹುದಿತ್ತು. ಇದು ಕೇವಲ ಪ್ರಾತಿನಿಧ್ಯ ʼ ನೀಡುವ ʼ ಪ್ರಶ್ನೆಯೂ ಅಲ್ಲ. ಸಹಜವಾಗಿಯೇ ಹೊರಬರಬೇಕಾದ ಅಂತರಂಗದ ಅಭಿವ್ಯಕ್ತಿಯ ಪ್ರಶ್ನೆ.

ಗ್ರಹಿಕೆ ಅರಿವು ಮತ್ತು ಅಭಿವ್ಯಕ್ತಿ

Ashok on Siddaramaiah: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷ ನಾಯಕ ಅಶೋಕ್ #pratidhvani

ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರಿಗೆ ಸೇರಿದ ಒಂದು ಸಾಂಸ್ಕೃತಿಕ ಸಂಸ್ಥೆ. ಮಹಿಳಾ ಸಾಹಿತಿಗಳು ಪರಿಷತ್ತಿನ ಅಧ್ಯಕ್ಷತೆ ಪಡೆಯುವುದನ್ನು ನಿರೀಕ್ಷಿಸಲೂ ಆಗದಷ್ಟು ಮಟ್ಟಿಗೆ ಪರಿಷತ್ತು ರಾಜಕೀಕರಣಕ್ಕೊಳಗಾಗಿದೆ. ಬಾಹ್ಯ ಸಮಾಜದ ರಾಜಕೀಯ ಮತ್ತು ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸುವ ಜಾತಿ ಮತ್ತು ಹಣಬಲದೊಂದಿಗೆ, ಇಡೀ ಸಮಾಜವನ್ನು ನಿರ್ದೇಶಿಸುವ ಪಿತೃಪ್ರಧಾನತೆಯೇ ಪರಿಷತ್ತನ್ನೂ ಆಕ್ರಮಿಸಿಕೊಂಡಿದೆ. ಈ ದಿಕ್ಕಿನಲ್ಲಿ ಯೋಚಿಸುವಾಗ ನಮ್ಮ ಇಡೀ ಸಾಮಾಜಿಕ ಆಲೋಚನಾ ಕ್ರಮವನ್ನೇ ಮರುಪರಿಷ್ಕರಿಸಬೇಕೆನಿಸುತ್ತದೆ. ಏಕೆಂದರೆ ಇನ್ನೂ ನಮ್ಮ ಸಮಾಜವು ಮಹಿಳೆಗೆ ʼಪ್ರಾತಿನಿಧ್ಯ–ಅವಕಾಶ-ಹುದ್ದೆ ನೀಡುವ ʼ ಪರಿಭಾಷೆಯನ್ನೇ ಬಳಸುತ್ತಿದೆ. ಅಂದರೆ ಒಂದು ಆಳ್ವಿಕೆಯಲ್ಲಿ ತಮಗೂ ಒಂದು ಸ್ಥಾನ ಕೊಡಿ ಎಂದು ಮಹಿಳಾ ಸಂಕುಲ ಕೋರಬೇಕಾಗಿದೆ. ಈ ಮನಸ್ಥಿತಿಯನ್ನು ಹೋಗಲಾಡಿಸಿ, ಸಮಾನತೆಯ ನೆಲೆಯಲ್ಲಿ ನಿಂತು ಯೋಚಿಸಿದರೆ ಬಹುಶಃ ಅರಿವಿನ ವಿಕಾಸ ಸಾಧ್ಯ ಎನಿಸುತ್ತದೆ.

ಇತ್ತೀಚೆಗೆ ಮೈಸೂರಿನಲ್ಲಿ ಸಂವಿಧಾನ ದಿನದಂದು ನಡೆದ ಎರಡು ದಿನಗಳ ಅಧ್ಯಯನ ಶಿಬಿರದಲ್ಲೂ ಇದೇ ವ್ಯತ್ಯಯವನ್ನು ಕಾಣಬಹುದಿತ್ತು. ಆರು ಪ್ರಧಾನ ಗೋಷ್ಠಿಗಳಲ್ಲಿ ಒಂದರಲ್ಲಿ ಮಾತ್ರ ಅದೂ ಸಂವಿಧಾನ ಮತ್ತು ಮಹಿಳೆ ಗೋಷ್ಠಿಯಲ್ಲಿ ಮಹಿಳೆಯನ್ನು ಕಾಣಬಹುದಿತ್ತು. ಉಳಿದಂತೆ ಮತ್ತೊಂದರಲ್ಲಿ ನಿರ್ವಹಣೆಯ ಜವಾಬ್ದಾರಿ ನೀಡಲಾಗಿತ್ತು. ನೂರಾರು ಶಿಬಿರಾರ್ಥಿಗಳನ್ನೊಳಗೊಂಡ, ಸಂವಿಧಾನದ ಓದು-ಅಧ್ಯಯದ ಒಂದು ಶಿಬಿರದಲ್ಲಿ ಚರ್ಚೆ ಮಾಡಲಾದ ಉಳಿದ ಗಂಭೀರ ವಿಚಾರಗಳನ್ನು ಮಂಡಿಸಲು ಮಹಿಳಾ ವಿದ್ವಾಂಸರು ಇರಲಿಲ್ಲವೇ ? ಅಥವಾ ಸಂವಿಧಾನದ ಮಹಿಳಾ ದೃಷ್ಟಿಕೋನವನ್ನು ಮಹಿಳೆ ಮಾತ್ರ ವಿಶ್ಲೇಷಿಸಲು ಸಾಧ್ಯ ಎಂಬ ಧೋರಣೆಯೇ ? ಮುನ್ನೂರು ಯುವ ಶಿಬಿರಾರ್ಥಿಗಳನ್ನೊಳಗೊಂಡಿದ್ದ ಈ ಕಾರ್ಯಕ್ರಮ ಮುಂದಿನ ತಲೆಮಾರಿಗೆ ಯಾವ ಸಂದೇಶವನ್ನು ನೀಡಲಿಕ್ಕೆ ಸಾಧ್ಯ ? ಆಯೋಜಕರು ಯೋಚಿಸಬೇಕಾದ ವಿಚಾರ ಇದು.

ಮೂಲತಃ ಪಿತೃಪ್ರಧಾನ ವ್ಯವಸ್ಥೆಯಲ್ಲೇ ನಡೆದಿರುವ ನಮ್ಮ ಸಮಾಜವು ತನ್ನ ಚಿಂತನಾ ಕ್ರಮಗಳನ್ನೇ ಮರು ನಿರ್ವಚಿಸಬೇಕಿದೆ. ಲಿಂಗ ಸಮಾನತೆ ಅಥವಾ ಸಮಾನ ಪ್ರಾತಿನಿಧ್ಯ ಎಂಬ ಉದಾತ್ತ ಚಿಂತನೆಗಳನ್ನು ಶಾಸನಾತ್ಮಕವಾಗಿಯೇ ವಿಧಿಸಬೇಕು ಎಂಬ ನಿರೀಕ್ಷೆಯೇ ಅಪ್ರಜಾಸತ್ತಾತ್ಮಕವಾದ ಧೋರಣೆ. ಸಮ ಸಮಾಜದ ಕನಸು ಕಾಣುವವರಲ್ಲಿ ಇದು ಸಹಜವಾಗಿಯೇ ಮೂಡಬೇಕು. ಈ ಸಮ ಸಮಾಜದ ಕನಸಿಗೆ ಬೌದ್ಧಿಕ ರೆಕ್ಕೆಗಳನ್ನು ಜೋಡಿಸುವ, ಸಂವೇದನಾಶೀಲ ಚಲನೆಯನ್ನು ನೀಡುವ, ಮನುಜ ಸೂಕ್ಷ್ಮತೆಯ ಉಸಿರನ್ನು ಗಟ್ಟಿಗೊಳಿಸುವ, ಲಿಂಗ ಸಮಾನತೆಯ ಸೃಜನಶೀಲ ಔದಾತ್ಯವನ್ನು ಕಲ್ಪಿಸುವ ನೈತಿಕ ಕರ್ತವ್ಯ ಸಾಹಿತ್ಯ ಲೋಕದ್ದಾಗಿರುತ್ತದೆ. ಈ ಲೋಕವನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತು ಅದರ ನಿರ್ದೇಶನದಲ್ಲೇ ನಡೆಯುವ ಸಾಹಿತ್ಯ ಸಮ್ಮೇಳನ ಇದನ್ನು ಬಿಂಬಿಸುವಂತಿರಬೇಕು ಎನ್ನುವುದು ಪ್ರಜ್ಞಾವಂತ ಸಮಾಜದ ಸಹಜವಾದ ಅಪೇಕ್ಷೆ ಮತ್ತು ನಿರೀಕ್ಷೆ.

ಈ ನಿರೀಕ್ಷೆಯನ್ನು ಹುಸಿಯಾಗಿಸಿ, ಮಂಡ್ಯದ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಸಮಿತಿಯಲ್ಲಿ ಇದ್ದಿರಬಹುದಾದ ಮಹಿಳಾ ಪರ ದನಿಗಳನ್ನು ಅಲಕ್ಷಿಸಿರುವ ಸಾಧ್ಯತೆಗಳನ್ನು ಮನಗಾಣುತ್ತಲೇ  ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪಿತೃಪ್ರಧಾನ-ಊಳಿಗಮಾನ್ಯ ಲಕ್ಷಣಗಳಿಂದ ಮುಕ್ತವಾಗಿಲ್ಲ ಎನ್ನುವುದನ್ನು ವಿಷಾದದಿಂದಲೇ  ಗುರುತಿಸಬೇಕಿದೆ. ಕನಿಷ್ಠ ಗೋಷ್ಠಿಗಳಲ್ಲಾದರೂ ಹೆಣ್ತನದ ಘನತೆ ಧ್ವನಿಸುವುದೋ ಅಥವಾ ಅಲಂಕಾರಿಕ ಮಹಿಳಾ  ಪ್ರಾತಿನಿಧ್ಯಕ್ಕೇ ಸೀಮಿತವಾಗುವುದೋ ಕಾದು ನೋಡೋಣ.

-೦-೦-೦-೦-

Tags: 84th kannada sahitya sammelana85 kannada sahitya sammelana85th kannada sahitya sammelana86th kannada sahitya sammelanaKannadakannada sahitya sammelan adhyakshkannada sahitya sammelan shahapurKannada Sahitya Sammelanakannada sahitya sammelana 2020kannada sahitya sammelana 2022kannada sahitya sammelana 2024kannada sahitya sammelana mandysahitya sammelanashahapur kannada sahitya sammelanzee kannada news
Previous Post

ಚಿತ್ರತಂಡದ ಮೇಲೆ ಹಾಕಿದ ಕೇಸ್ ಹಿಂಪಡೆದ ಡ್ರೋನ್ ಟೆಕ್ನೀಷಯನ್ ಸಂತೋಷ್.

Next Post

ರಾಜಕೀಯ ಪಕ್ಷಗಳ ಸದಸ್ಯರಾಗಿರುವ ವಕೀಲರು ಸಂಘದ ಚುನಾವಣೆಯಲ್ಲಿ ಸ್ಪರ್ದಿಸಲು ನಿರ್ಬಂಧವಿಲ್ಲ; ಸುಪ್ರೀಂ ಕೋರ್ಟ್‌

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post

ರಾಜಕೀಯ ಪಕ್ಷಗಳ ಸದಸ್ಯರಾಗಿರುವ ವಕೀಲರು ಸಂಘದ ಚುನಾವಣೆಯಲ್ಲಿ ಸ್ಪರ್ದಿಸಲು ನಿರ್ಬಂಧವಿಲ್ಲ; ಸುಪ್ರೀಂ ಕೋರ್ಟ್‌

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada