
ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ರಣವಿಳ್ಯ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿ ಆಗಬೇಕಿದ್ದ ಯೋಗೇಶ್ವರ್ ಕಾಂಗ್ರೆಸ್ ಸೇರುವ ಮೂಲಕ ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡ ರಂಗೇರಿದೆ.. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ ಆಗಿ ಇವತ್ತು ನಾಮಪತ್ರ ಸಲ್ಲಿಸಿದ್ದಾರೆ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ ಸುರೇಶ್ ಹಾಜರಿದ್ದುಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಚನ್ನಪಟ್ಟಣದ ಮಂಗಳವಾರಪೇಟೆ ಸರ್ಕಲ್ನಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಕಾಂಗ್ರೆಸ್ ನಾಯಕರು, ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ಶಕ್ತಿಪ್ರದರ್ಶನ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಯೋಗೇಶ್ವರ್ಗೆ ಪರಿಷತ್ ಸದಸ್ಯ ರವಿ, ಡಿ.ಎಂ. ವಿಶ್ವನಾಥ್ ಸೇರಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರದೆ ಇನ್ನೆರಡು ದಿನ ಕಾದಿದ್ರೆ ನನ್ನ ಪರಿಸ್ಥಿತಿ ಅತಂತ್ರ ಆಗ್ತಿತ್ತು. ಜೆಡಿಎಸ್ ನಾಯಕರು ಹೇಗೆ ಎಂದು ನನಗೆ ಗೊತ್ತಿದೆ. ಹೊರಗಿನವರ ದಬ್ಬಾಳಿಕೆಯಿಂದ ಒಂದಾಗಿದ್ದೇವೆ. ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಆದ್ಯತೆ ಎಂದು ನಾನು ಸ್ಥಳೀಯ ಅನ್ನೋ ಕಾರ್ಡ್ ಪ್ಲೇ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ರೋಡ್ ಶೋನಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ, ತೆರೆದ ವಾಹನ ಏರಿ ಸಿಪಿ ಯೋಗೇಶ್ವರ್ ಪಕ್ಕದಲ್ಲಿ ನಿಂತು ಕೈ ಮುಗಿಯುತ್ತ ಜನರ ಕಡೆ ಕೈ ಬೀಸಿ ಮತಬೇಟೆ ಮಾಡಿದ್ದಾರೆ. ಯೋಗೇಶ್ವರ್ ಅಕ್ಕಪಕ್ಕ ನಿಂತು ಡಿಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಶಕ್ತಿ ತುಂಬಿದ್ದಾರೆ. ನಮ್ಮ ಅಭ್ಯರ್ಥಿ ಯೋಗೇಶ್ವರ್ ಗೆದ್ದೆ ಗೆಲ್ತಾರೆ, ಯೋಗೇಶ್ವರ್ ಗೆಲ್ಲುವ ಕುದುರೆ, ಅವರನ್ನು ನೀವೆಲ್ಲರ ಗೆಲ್ಲಿಸಿ ಎಂದು ಸಿಎಂ ಕರೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕರಕ್ಕೆ ಬಂದು ಎರಡು ವರ್ಷ ಆಗ್ತಿದೆ. ಇನ್ನೂ ಮೂರು ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತೇವೆ. ಕುಮಾರಸ್ವಾಮಿ ಶಾಸಕರಾಗಿ ಏನು ಅಭಿವೃದ್ಧಿ ಮಾಡಿಲ್ಲ, ನಾವು ಅಭಿವೃದ್ಧಿ ಮಾಡ್ತೀವಿ, ಹಾಗಾಗಿ ನೀವು ಯೋಗೇಶ್ವರ್ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಲು ನಾನೇ ಸ್ವತ ಬಂದಿದ್ದೇನೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಮಾತನಾಡಿ, 85 ಸಾವಿರ ಮತಗಳು ಕೊಟ್ಟು ಡಿಕೆ ಸುರೇಸ್ಗೆ ಆಶೀರ್ವಾದ ಮಾಡಿದ್ರಿ. ಆದರೂ ಕೂಡ ಚುನಾವಣೆಯಲ್ಲಿ ಹಿನ್ನಡೆ ಆಯ್ತು. ಈಗ ಸಿಪಿ ಯೋಗೇಶ್ವರ್ ನಮ್ಮ ಜೊತೆ ಸೇರಿದ್ದಾರೆ. ನಾವೆಲ್ಲರೂ ಸೇರಿ ಕ್ಷೇತ್ರ ಜಿಲ್ಲೆ ರಾಜ್ಯ ಅಭಿವೃದ್ಧಿ ಮಾಡೋಣ. ನಮ್ಮ ಜೊತೆ ಬಂದ ಯಾರಿಗೂ ಅನ್ಯಾಯ ಮಾಡಲ್ಲ. ಚನ್ನಪಟ್ಟಣಕ್ಕೆ ಹೊಸ ರೂಪ ಕೊಡಲು ಯೋಜನೆ ಮಾಡಿದ್ದೇವೆ. ನಾನು ಸಿಎಂ ಜೊತೆ ಮಾತಾಡಿದ್ದೇನೆ, 500 ಕೋಟಿ ರೂಪಾಯಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡ್ತಿದ್ದೇವೆ ಎಂದಿದ್ದಾರೆ. ತೆನೆ ಹೊಲದಲ್ಲಿ ಇದ್ದರೆ ಚೆಂದ, ಕಮಲ ಕೆರೆಯಲ್ಲಿ ಇದ್ದರೆ ಚೆಂದ, ಈ ದಾನ ಧರ್ಮ ಮಾಡೋ ಹಸ್ತ ಅಧಿಕಾರದಲ್ಲಿ ಇದ್ದರೆ ಚೆಂದ ಎನ್ನುವ ಮೂಲಕ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ಕೊಟ್ಟಿದ್ದಾರೆ.

ಇದೀಗ ಅಳೆದೂ ತೂಗಿ ನಿಖಿಲ್ ಕುಮಾರಸ್ವಾಮಿಯನ್ನು ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ನಾನು ಚಕ್ರವ್ಯೂಹ ಭೇದಿಸಿಕೊಂಡು ಬರ್ತೇನೆ ಎಂದು ನಿಖಿಲ್ ಕುಮಾರಸ್ವಾಮಿಯೂ ಹೇಳಿದ್ದಾರೆ. ಆದರೆ ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಹೊರಗಿನವರು ಅನ್ನೋ ಭಾವನೆ ಬಿತ್ತಲು ಕಾಂಗ್ರೆಸ್ ಸಜ್ಜಾಗಿದೆ. ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆ ಹಾಗು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲುಂಡಿರುವ ನಿಖಿಲ್ ಕುಮಾರಸ್ವಾಮಿ, ಬಂಡೆಗಳ ಎದುರಿಗೆ ನಿಲ್ಲುವ ದುಸ್ಸಾಸ ಮಾಡಿದ್ದಾರೆ. ಆದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಡಿಕೆ ಬ್ರದರ್ಸ್ ಹಾಗು ಯೋಗೇಶ್ವರ್ ಚುನಾವಣಾ ದಾಳಗಳು ಪ್ರಬಲವಾಗಿವೆ ಅನ್ನೋದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತು.