ಪಾಟ್ನಾ:ರವಿದಾಸ್ ಮತ್ತು ಮಾಂಝಿ ಪರಿಶಿಷ್ಟ ಜಾತಿಯ ಸದಸ್ಯರಿಗೆ ಸೇರಿದ (21 thatched houses)ಹುಲ್ಲಿನ ಮನೆಗಳಿಗೆ ಬೆಂಕಿ (fire)ಇಟ್ಟಿರುವ ಆಘಾತಕಾರಿ ಘಟನೆ ಬಿಹಾರದ (Bihar)ನವಾಡ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.ಭೂಕಬಳಿಕೆ ಆರೋಪದ ಮೇಲೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ. ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಜಮೀನು ಖಾಲಿ ಮಾಡುವಂತೆ ನಿವಾಸಿಗಳಿಗೆ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.ಮುಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣನಗರ ಮಹಾದಲಿತ ಬಡಾವಣೆಯಲ್ಲಿ ಬುಧವಾರ ಸಂಜೆ 6:45ರ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ನಾವಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಬೆಂಕಿ ಸುಮಾರು 80 ದಲಿತರ ಮನೆಗಳಿಗೆ ಹರಡಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಸತತ ಪ್ರಯತ್ನ ನಡೆಸಿ ರಾತ್ರಿ 11 ಗಂಟೆ ವೇಳೆಗೆ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಗಿದ್ದಾರೆ.
ಮನೆಗಳು ಧ್ವಂಸಗೊಂಡವರಿಗೆ ಜಿಲ್ಲಾಡಳಿತ ಆಶ್ರಯದ ವ್ಯವಸ್ಥೆ ಮಾಡುತ್ತಿದೆ. ಕೃಷ್ಣ ನಗರ ಮಹಾದಲಿತ್ ಪ್ರದೇಶ ಸುಮಾರು 400 ಜನರಿಗೆ ನೆಲೆಯಾಗಿದೆ. ಇದು ಸುಮಾರು 70 ರಿಂದ 80 ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ.