
ಶಿಕ್ಷಕರು ಅಂದರೆ ಭವಿಷ್ಯ ರೂಪಿಸುವ ಹೊಣೆ ಹೊತ್ತವರು ಅನ್ನೋ ಮಾತಿದೆ. ಆದರೆ ಇಂದು ಶಿಕ್ಷಕರೇ ಬೀದಿಗೆ ಇಳಿದು ಆಳುವ ಸರ್ಕಾರಗಳ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಬೇಡಿಕೆ ಈಡೇರಿಕೆಗೆ ಆಗ್ರಹ ಮಾಡಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರ ಹೋರಾಟಕ್ಕೆ ಖಾಸಗಿ ಶಾಲೆಗಳು ಕೂಡ ಬೆಂಬಲ ಸೂಚಿಸಿವೆ. ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆಗೆ ನೈತಿಕ ಬೆಂಬಲ ನೀಡುವುದಾಗಿ ಖಾಸಗಿ ಶಾಲಾ ಒಕ್ಕೂಟಗಳು ಘೋಷಣೆ ಮಾಡಿವೆ. ಶಿಕ್ಷಕರ ಪ್ರತಿಭಟನೆ ಯಶಸ್ವಿ ಆಗಲಿ, ಆದಷ್ಟು ಬೇಗ ಬೇಡಿಕೆಗಳು ಈಡೇರಲಿ ಎಂದು ಖಾಸಗಿ ಶಾಲಾ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನೂ ರಾಜ್ಯ ಸರ್ಕಾರ ಕೂಡ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸಬೇಕು.

ಶಿಕ್ಷಕರ ಕಷ್ಟ ಅರಿತು ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದೆ. ಶಿಕ್ಷಣ ಇಲಾಖೆ ವಿರುದ್ಧ ಶಿಕ್ಷಕರ ಹೋರಾಟಕ್ಕೆ ಕಾರಣ ಏನು ಅನ್ನೋದನ್ನು ನೋಡೋದಾದರೆ, 2017 ರವರೆಗೆ ನೇಮಕ ಆಗಿರುವ ಶಿಕ್ಷಕರನ್ನು 1 ರಿಂದ 7 ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು.
ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ “ಪದವೀಧರ ಶಿಕ್ಷಕರೆಂದು” ಪದನಾಮೀಕರಿಸಬೇಕು. 1 ರಿಂದ 8ನೇ ತರಗತಿಗೆ ನೇಮಕ ಹೊಂದಿದವರನ್ನು PST ಎಂದು ಪದನಾಮ ಮಾಡಿ, 1-5 ನೇ ತರಗತಿಗೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು. ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ 1 ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಮೊದಲು ಇದ್ದಂತೆ ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳು ಎಂದು ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಬೇಡಿಕೆ ಇಡಲಾಗಿದೆ. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನಾ ಕರೆಗೆ ಶಿಕ್ಷಕರು ಓಗೊಟ್ಟು ಬೆಂಗಳೂರು ಚಲೋ ಮಾಡಿದ್ದಾರೆ. ಶಾಲೆಗಳಿಗೆ ಸಾಮೂಹಿಕವಾಗಿ ಗೈರು ಹಾಜರು ಮಾಡಿ, ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಳ್ಳಗೆ 10 ಗಂಟೆಯಿಂದ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಮಾತ್ರ ಕ್ಯಾರೆ ಅಂದಿಲ್ಲ. ಅನೇಕ ಬಾರಿ ಬೇಡಿಕೆ ಈಡೇರಿಸುವಂತೆ ಶಿಕ್ಷಕರು ಮನವಿ ಕೊಟ್ಟಿದ್ದರು. ಶಿಕ್ಷಣ ಸಚಿವರ ಭೇಟಿ ಮಾಡಿದ್ದರು. ಎಲ್ಲಿಯೂ ಬೇಡಿಕೆಗೆ ಮಾನ್ಯತೆ ಸಿಗದ ಕಾರಣದಿಂದ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಪ್ರಾಥಮಿಕ ಶಾಲಾ ಶಿಕ್ಷಕರು. ಇಂದು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರ ಸ್ಪಂದಿಸದಿದ್ರೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಚಿಂತನೆ ಮಾಡಲಾಗಿದೆ.

ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡಿರುವ ಸರ್ಕಾರ ಇಂಗ್ಲಿಷ್ ಮಾಧ್ಯಮದತ್ತ ದಾಪುಗಾಲು ಇಡುವ ಯೋಜನೆಯಲ್ಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತಪಟ್ಟಿ ಸಿದ್ಧ ಮಾಡುವುದಕ್ಕೆ, ಸರ್ಕಾರಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಸರ್ವೇ ಮಾಡುವುದಕ್ಕೆ ಬಳಸಿಕೊಳ್ಳುವ ಮೂಲಕ ಕನ್ನಡ ಶಾಲೆಗಳ ಮೇಲೆ ಗಧಾ ಪ್ರಹಾರ ಮಾಡುತ್ತಿದೆ.
ತೋರಿಕೆಗೆ ಮಾತ್ರ ಕನ್ನಡ ಶಾಲೆಗಳನ್ನು ಉಳಿಸ್ತೀವಿ ಅನ್ನೋ ರಾಜಕಾರಣಿಗಳು ಸರ್ಕಾರಿ ಶಾಲಾ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಅನ್ನೋ ಕನಿಷ್ಠ ಪ್ರಜ್ಞೆಯನ್ನೂ ಮೈಗೂಡಿಸಿಕೊಂಡಿಲ್ಲ. ಇನ್ನು ಶಿಕ್ಷಣ ಸಚಿವರೋ ಕನ್ನಡ ಓದಲು ಬರೆಯಲು ತಿಣುಕಾಡುತ್ತಾರೆ. ಅವರೇ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆದವರು. ಕನ್ನಡ ಶಾಲಾ ಶಿಕ್ಷಕರ ಗೋಳು ಎಲ್ಲಿಂದ ಕೇಳಬೇಕು..?