KRS ಡ್ಯಾಂನಿಂದ ಕಾವೇರಿ ನದಿಗೆ (Cauvery river) 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನಲೆ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಮುಂದುವರಿದಿದೆ. ಕಾವೇರಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು,ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಾತ್ರವಲ್ಲದೇ ಯಾವುದೇ ಅಹಿತಕರ ಘಟನೆಯಾಗದಂತೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣದ (Srirangapattana) ಸೇತುವೆ ಮೇಲೆ ವಾಹನ ಮತ್ತು ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಕೆಆರ್ಎಸ್ ಡ್ಯಾಂನಿಂದ (KRS dam) ನೀರು ಬಿಡುಗಡೆಯಾಗಿದ್ದು, ಕಾವೇರಿ ನದಿ ನೀರು ನಿಮಿಷಾಂಭೆ ಪಾದ ಸ್ಪರ್ಶ ಮಾಡುತ್ತಿದೆ. ನಿಮಿಷಾಂಭ ದೇಗುಲದ (Nimishamba temple) ಮೆಟ್ಟಿಲವರೆಗು ನದಿ ನೀರು ತಲುಪಿದೆ. ನಿನ್ನೆ ಸ್ನಾನಘಟ್ಟ ಮಾತ್ರ ಮುಳುಗಡೆಯಾಗಿತ್ತು. ಇಂದು ಡ್ಯಾಂನಿಂದ ಹೊರಹರಿವು ಮತ್ತಷ್ಟು ಹೆಚ್ಚಿಸಿದ ಹಿನ್ನಲೆ ಮೆಟ್ಟಿಲವರೆಗೂ ನೀರು ಬಂದಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆ,ಮಂಡ್ಯದ ಮುತ್ತತ್ತಿ ಪ್ರವಾಸಿ ತಾಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದ್ರಿಂದಾಗಿ ಕಾವೇರಿ ತಟದಲ್ಲಿರುವ ಮುತ್ತತ್ತಿ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತೆರಳುತ್ತಿದ್ದು,ಮುಂಜಾಗ್ರತಾ ಕ್ರಮವಾಗಿ,ಮಳವಳ್ಳಿ ತಹಶೀಲ್ದಾರ್ ಕೆ.ಎನ್.ಲೋಕೇಶ್ ನಿಶೇಧಾಜ್ಞೆ ಆದೇಶ ಹೊರಡಿಸಿದ್ದಾರೆ.