ಉಡುಪಿ (Udupi) ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರದ ಜೊತೆ ಕಡಲ ತೀರದಲ್ಲಿ ಗಾಳಿಯ ತೀವ್ರತೆಯೂ ಹೆಚ್ಚಾಗಿದೆ. ಉಡುಪಿಯ ನಾವುಂದದಲ್ಲಿ ಉಕ್ಕಿ ಹರಿಯುತ್ತಿರುವ ಕಡಲಬ್ಬರಕ್ಕೆ ತೆಂಗಿನ ಮರ ನೀರುಪಾಲಾಗಿವೆ. ಇನ್ನೂ ಜೂನ್ (June) ಆರಂಭದಲ್ಲಿ ಬಿತ್ತನೆ ಬೇಸಾಯ ಮಾಡಿದ ಗದ್ದೆಗಳೆಲ್ಲಾ ಜಲಾವೃತವಾಗಿದೆ.
ನಾಟಿ ಮಾಡಿದ ಪೈರು ಸಂಪೂರ್ಣ ಮಳೆ ನೀರಿನಿಂದ ಮುಳುಗಿ ಕೊಳೆತುಬಿಟ್ಟಿವೆ. ಬಿತ್ತನೆ ಬೀಜಕ್ಕೆ ಪರದಾಟ ಮಾಡಿದ್ದ ರೈತ, ಗದ್ದೆಗೆ ನೆರೆ ಬಿದ್ದಿರುವುದನ್ನು ನೋಡಿ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ. ನದಿಯ ಮಟ್ಟ ಇಳಿಕೆ ಆಗದಿದ್ದರೆ, ನಾಟಿ ಬಿತ್ತನೆ ಉಳುಮೆ ಮಾಡಿದ ಗದ್ದೆಗಳೆಲ್ಲ ಬೇಸಾಯ ಮಾಡಲು ಉಪಯೋಗ ಇಲ್ಲದ ಪರಿಸ್ಥಿತಿ ತಲುಪಲಿವೆ.
ಮಳೆಯ ಅಬ್ಬರದ ಜೊತೆಗೆ ಕಡಲ ತೀರದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿದೆ. ಕಡಲಬ್ಬರಕ್ಕೆ ತಡೆಗೋಡೆಗಳು ಕುಸಿಯುವ ಭೀತಿ ಎದುರಾಗಿದೆ. ಇನ್ನೂ ಉಡುಪಿಯಲ್ಲಿ ಇಂದು ಸಹ ರೆಡ್ ಅಲರ್ಟ್ (Red alert) ಸೂಚಿಸಲಾಗಿದ್ದು, ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಿ.. ಪದವಿ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು ಎಂದಿನಂತೆ ಇರಲಿದೆ ಎಂದು ಡಿಸಿ ಆದೇಶಿಸಿದ್ದಾರೆ.