ಹಾವೇರಿ ಬಳಿ ನಡೆದ ಅಪಘಾತದಲ್ಲಿ ಟಿಟಿ ವಾಹನ ಡಿಕ್ಕಿಯಾಗಿ 13 ಜನರ ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆ. ಅಪಘಾತದಲ್ಲಿ ತಾಯಿ ಅಂಜಲಿ ಸಾವನ್ನಪ್ಪಿದ ಬಳಿಕ ಮಕ್ಕಳಾದ 4 ವರ್ಷದ ಆರ್ಯನ್ ಹಾಗೂ 2 ವರ್ಷದ ನಂದನ್ ನರಳಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಎಮ್ಮೆಹಟ್ಟಿ ಗ್ರಾಮದಿಂದ ಬಿರೂರಿಗೆ ಅಂಜಲಿಯನ್ನ ಮದುವೆ ಮಾಡಿಕೊಟ್ಟಿದ್ರು. ಸೊಸೆ, ಮೊಮ್ಮಕ್ಕಳನ್ನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..
![](https://pratidhvani.com/wp-content/uploads/2024/06/42097885_8bc1_4046_943e_5ae1aa0b6705.jpg)
ಹಾವೇರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತದಲ್ಲಿ ಅಂಧರ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ್ದ ಮಾನಸಾ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿಯ ಮಾನಸಾ, ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯಾಗಿದ್ರು. ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲೂ ಭಾಗಿಯಾಗಿದ್ರು. ಮಾನಸಾರನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
![](https://pratidhvani.com/wp-content/uploads/2024/06/IMG-20240628-WA0011-1024x768.jpg)
ಅಪಘಾತದಲ್ಲಿ ಮೃತಪಟ್ಟ 13 ಮೃತದೇಹಗಳ ಪೋಸ್ಟ್ ಮಾರ್ಟಮ್ ಮಾಡಿದ ಸಿಬ್ಬಂದಿಯೇ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಪೋಸ್ಟ್ ಮಾರ್ಟಂ ಮಾಡಿದ ರವಿ, ಹನುಮಂತ, ಕುಮಾರ ಎಂಬುವರು ಮಾಧ್ಯಮಗಳ ಜೊತೆಗೆ ಮಾತಾಡಿ, ಅಪಘಾತದ ತೀವ್ರತೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ ತಲಾ ಮೃತರ ಕುಟುಂಬಸ್ಥರಿಗೆ ₹50 ಸಾವಿರ ನೀಡಿದ್ದಾರೆ.
![](https://pratidhvani.com/wp-content/uploads/2024/06/Karnataka-chief-minister-Siddaramaiah-with-state-d_1707247857221_1711084642722-2-1024x576.jpg)
ಅಪಘಾತಕ್ಕೆ ಟಿಟಿ ವಾಹನ ಚಾಲಕ ಜೋಶ್ ಹಾಗು ಅತೀ ವೇಗದ ಚಾಲನೆ ಕಾರಣ ಎನ್ನಲಾಗಿದೆ. 15 ದಿನದ ಹಿಂದಷ್ಟೇ ಟಿಟಿ ವಾಹನ ಖರೀದಿ ಮಾಡಿದ್ದ ಆದರ್ಶ್, ಕುಟುಂಬಸ್ಥರ ಜತೆ ತುಳಜಾ ಭವಾನಿ ದೇಗುಲಕ್ಕೆ ಭೇಟಿ ನೀಡಿದ್ದರು. ಸವದತ್ತಿ ಬಳಿಕ ಚಿಂಚೋಳಿ ಮಾಯಮ್ಮ ದೇವರ ದರ್ಶನ ಪಡೆದು ವಾಪಸ್ ಆಗುವಾಗ ದುರ್ಘಟನೆ ಸಂಭವಿಸಿದೆ. ಈ ಅಪಘಾತದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದಾರೆ. ಯಾತ್ರಾರ್ಥಿಗಳ ಸಾವಿನ ಸುದ್ದಿ ಕೇಳಿ ಬೇಸರವಾಯ್ತು. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಗೊಂಡವರು ಬೇಗನೇ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದಿದ್ದಾರೆ.
![](https://pratidhvani.com/wp-content/uploads/2024/06/IMG-20240628-WA0011-1-1024x768.jpg)