ಬೆಂಗಳೂರು: ಡಾ.ರಾಜಕುಮಾರ ಕುಟುಂಬದ ಕುರಿತು ಹಗುರವಾಗಿ ಮಾತನಾಡಿದ್ದಾರೆಂಬ ಕಾರಣಕ್ಕೆ ನಟ ಶಿವರಾಜ್ ಕುಮಾರ್ ಅಭಿಮಾನಿಗಳು, ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ರಾಜ್ ಕುಮಾರ್ ಕುಟುಂಬದ ಬಗ್ಗೆ ಕುಮಾರ ಬಂಗಾರಪ್ಪ ಹಗುರವಾಗಿ ಮಾತನಾಡಿರುವುದು ನೋವು ತಂದಿದೆ ಎಂದು ಒಳ ನುಗ್ಗಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕುಮಾರ ಬಂಗಾರಪ್ಪ ಹೊರಗೆ ಬಂದು ಕ್ಷಮೆ ಕೇಳುವವರಿಗೆ ಕದಲಲ್ಲ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಕೂಡಲೇ ಕುಮಾರ ಬಂಗಾರಪ್ಪ ನಿವಾಸಕ್ಕೆ ಕೆಎಸ್ಆರ್ಪಿ ತುಕಡಿ ಆಗಮಿಸಿ, ಮನೆ ಬಾಗಿಲಿನಿಂದ ಹೊರಹೋಗುವಂತೆ ಪ್ರತಿಭಟನಾಕಾರರಿಗೆ ಪೊಲೀಸರು ವಾರ್ನಿಂಗ್ ಮಾಡಿದರು. ಈ ವೇಳೆ ಕೆಲವರನ್ನು ವಶಕ್ಕೆ ಪಡೆಯಲಾಯಿತು. ಆನಂತರ ಪರಿಸ್ಥಿತಿ ಹತೋಟಿಗೆ ಬಂದಿತು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಗೆಲುವು ಸಾಧಿಸಿದ್ದದ್ದರು. ಇದಕ್ಕೆ ಕುಮಾರ ಬಂಗಾರಪ್ಪ ವ್ಯಂಗ್ಯವಾಡಿದ್ದರು. ನನ್ನ ತಂಗಿಯ ಗಂಡ ಡಾ ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರು ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.