
ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್ ದಾಖಲಾಗ್ತಿದ್ದ ಹಾಗೆ ದೇಶ ಬಿಟ್ಟು ಜರ್ಮನಿಗೆ ಪರಾರಿ ಆಗಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ 1 ಗಂಟೆ (ಗುರುವಾರ ಮಧ್ಯರಾತ್ರಿ) ಸುಮಾರಿಗೆ ಬಂಧನಕ್ಕೆ ಒಳಪಟ್ಟಿದ್ದಾರೆ. ಬೆಂಗಳೂರಿನ ಕೆಂಪೇಗೌಡ Airport ಗೆ ಬಂದು ಇಳಿಯುತ್ತಿದ್ದ ಹಾಗೆ ವಶಕ್ಕೆ ಪಡೆದ SIT ಟೀಂ ನೇರವಾಗಿ CCB ಕಚೇರಿಗೆ ಕರೆತರುವ ಕೆಲಸ ಮಾಡಿತ್ತು. ಆ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು, ಬರೋಬ್ಬರಿ ಐವರು ಮಹಿಳಾ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಕರೆತಂದಿದ್ದರು. ಪೊಲೀಸ್ ಜೀಪ್ನಲ್ಲಿ ಕೇವಲ Driver ಹೊರತು ಪಡಿಸಿ ಉಳಿದ ಎಲ್ಲರೂ ಮಹಿಳಾ ಅಧಿಕಾರಿಗಳೇ ಆಗಿದ್ದರು. ಇದು ಹೇಗೆ ಅನ್ನೋದು ಸಾಕಷ್ಟು ಜನರ ಪ್ರಶ್ನೆಯಾಗಿದೆ.

ಬಂಧನ ಮಾಡುವಾಗ ಯಾವುದೇ ಹೈಡ್ರಾಮಾ ನಡೆಯಬಾರದು ಅನ್ನೋ ಕಾರಣಕ್ಕೆ ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದರು. ಆ ಬಳಿಕ ಎಸ್ಐಟಿ ಕಚೇರಿ ಬಳಿಯೂ ಹೆಚ್ಚುವರಿ ಭದ್ರತೆ ಮಾಡಿಕೊಳ್ಳಲಾಗಿತ್ತು. ಏರ್ಪೋರ್ಟ್ನಲ್ಲಿ ವಶಕ್ಕೆ ಪಡೆದುಕೊಂಡು ಎಸ್ಐಟಿ ಕಚೇರಿಗೆ ಕರೆತಂದಾಗ ಪ್ರಜ್ವಲ್ ಹಾಗು ಡ್ರೈವರ್ ಹೊರತುಪಡಿಸಿ ಉಳಿದ ಐವರು ಮಹಿಳಾ ಸದಸ್ಯರಾಗಿದ್ದರು. ಎಸ್ಐಟಿಯಲ್ಲಿ ಪುರುಷ ಅಧಿಕಾರಿಗಳೂ ಇದ್ದರು ಮಹಿಳಾ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಿದ್ದು ಯಾಕೆ ಅನ್ನೋದು ಬಿಸಿಬಿಸಿ ಚರ್ಚೆಯ ಭಾಗವಾಗಿದೆ. ಅದಕ್ಕೆ ಎರಡು ಪ್ರಮುಖ ಕಾರಣಗಳು ಇವೆ.

ಯಾವುದೇ ಒಂದು ಪ್ರಕರಣದಲ್ಲಿ ಮಹಿಳೆ ದೂರು ನೀಡಿದಾಗ ತನಿಖಾಧಿಯಾಗಿ ಮಹಿಳಾ ಅಧಿಕಾರಿಯನ್ನೇ ನೇಮಕ ಮಾಡಬೇಕು ಅನ್ನೋದು ನಿಯಮ. ಇದೇ ಕಾರಣಕ್ಕೆ ಈ ಪ್ರಕರಣದಲ್ಲಿ ಮಹಿಳಾ ಅಧಿಕಾರಿಗಳ ತಂಡ ಕಟ್ಟಲಾಗಿದೆ. ಸಾಕಷ್ಟು ಮಹಿಳಾ ಸಂತ್ರಸ್ತೆಯರು ಇರುವ ಕಾರಣದಿಂದ ವಿಚಾರಣೆ ಮಾಡಲು ಮಹಿಳಾ ಅಧಿಕಾರಿಗಳ ಅವಶ್ಯಕತೆ ಇದೆ. ಅದೇ ಕಾರಣಕ್ಕೆ SIT ತನಿಖಾ ತಂಡದಲ್ಲಿ ಬಹುತೇಕ ಮಹಿಳಾ ಅಧಿಕಾರಿಗಳನ್ನೇ ನಿಯೋಜನೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಒಟ್ಟು ಮೂರು ತಂಡಗಳಲ್ಲಿ ಎರಡು ತಂಡಕ್ಕೆ ಇಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅದೇ ಕಾರಣದಿಂದ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಕರೆದುಕೊಂಡು ಬರಲಾಗ್ತಿದೆ ಎನ್ನಬಹುದು. ಮತ್ತೊಂದು ಕಾರಣ ಈ ರೀತಿ ಇದೆ.

ಮಹಿಳಾ ಪೀಡಕ ಎಂದು ಈಗಾಗಲೇ ಸಮಾಜ ಮಾತನಾಡಿಕೊಳ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಛೀ ಥೂ ಎನ್ನಲಾಗ್ತಿದೆ. ಆದರೆ ಈ ಕೇಸ್ ಮುಂದಿನ ದಿನಗಳಲ್ಲಿ ಕೋರ್ಟ್ನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಶಿಕ್ಷೆ ಆಗುವ ಪ್ರಮಾಣ ತೀರಾ ಕಡಿಮೆ ಎನ್ನುವುದು ಬಹುತೇಕ ಕಾನೂನು ತಜ್ಞರ ಅಭಿಪ್ರಾಯ. ಹೀಗಿರುವಾಗ ಸಮಾಜದ ದೃಷ್ಟಿಯಲ್ಲಿ ಈಗಾಗಲೇ ಸ್ತ್ರೀ ಪೀಡಕ ಎನ್ನುವ ಪಟ್ಟ ಹೊತ್ತುಕೊಂಡಿರುವ ವ್ಯಕ್ತಿಯನ್ನು ಮಹಿಳಾ ಅಧಿಕಾರಿಗಳೇ ವಿಚಾರಣೆ ನಡೆಸಿ, ಹಾದಿ ಬೀದಿಯಲ್ಲಿ ಮಹಿಳಾ ಅಧಿಕಾರಿಗಳೇ ಈತನನ್ನು ಎಳೆದಾಡಿದರೆ ಅದರಿಂದ ಆಗುವ ಹಿಂಸೆ ಜೈಲು ಶಿಕ್ಷೆಗಿಂತಲೂ ಅಧಿಕ ಎನ್ನುವುದು ತನಿಖಾ ತಂಡದ ನಿರ್ಧಾರ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಮಹಿಳಾ ಅಧಿಕಾರಿಗಳಿಗೆ ಈ ಹೊಣೆ ವಹಿಸಿರುವ ಸಾಧ್ಯತೆಗಳಿವೆ ಎನ್ನುತ್ತದೆ ಪೊಲೀಸ್ ಮೂಲಗಳು. ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ತನಿಖಾ ಹಂತದಲ್ಲೇ ಶಿಕ್ಷೆ ಅನುಭವಿಷಬೇಕು ಎನ್ನುವ ನಿರ್ಧಾರದಂತಿದೆ.

ಕೃಷ್ಣಮಣಿ