-ನಾ ದಿವಾಕರ-

ಕಳೆದ ಹತ್ತು ವರ್ಷಗಳಲ್ಲಿ ಗುಪ್ತವಾಹಿನಿಯಂತಿದ್ದ ಅಭಿಪ್ರಾಯಗಳು ಈಗ ಹೊರಬರುತ್ತಿವೆ.
( ಆಧಾರ : RSS-BJP separation is official now. It’s been a long time coming under Modi decade – ದ ಪ್ರಿಂಟ್ ಆನ್ಲೈನ್ ಪತ್ರಿಕೆ 21 ಮೇ 2024)

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿರುವುದು ಇಲ್ಲಿಯವರೆಗೆ ಮಾಧ್ಮಗಳಲ್ಲಿ ವ್ಯಾಪಕವಾದ ಚರ್ಚೆಗೊಳಗಾಗುತ್ತಿತ್ತು. ಆದರೆ ಇದೀಗ ಬಿಜೆಪಿ ಅಧ್ಯಕ್ಷ ಪ್ರಸ್ತುತ ಜೆ. ಪಿ. ನಡ್ಡಾ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ ತಮ್ಮ ಪಕ್ಷವು ಆರೆಸ್ಸೆಸ್ನಿಂದ ಸ್ವತಂತ್ರವಾಗಿ ಬೆಳೆದಿದ್ದು ಇನ್ನು ಮುಂದೆ ಪೋಷಕ ಸಂಘಟನೆ ಕೈಹಿಡಿಯುವಂತಿಲ್ಲ ” ಎಂದು ಹೇಳಿರುವುದು ಈ ಚರ್ಚೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಸ್ವತಃ ಬಿಜೆಪಿ ಅಧ್ಯಕ್ಷರೇ ಈ ರೀತಿಯ ಹೇಳಿಕೆ ನೀಡಿರುವುದು , ಅದರಲ್ಲೂ 2024ರ ಲೋಕಸಭಾ ಚುನಾವಣೆಯ ನಡುವೆ ಹೇಳಿರುವುದು ಕುತೂಹಲಕಾರಿಯಾಗಿದೆ.

ಬಿಜೆಪಿ ಅಧ್ಯಕ್ಷರ ಈ ಸ್ಫೋಟಕ ಹೇಳಿಕೆ ರಾಜಕೀಯ ವಲಯಗಳಲ್ಲಿ ಅಚ್ಚರಿ ಮೂಡಿಸಲು ಕಾರಣಗಳೇನೆಂದರೆ, ಆರೆಸ್ಸೆಸ್ ಎಂದಿಗೂ ಸಹ ತಾನು ಪೋಷಿಸಿ ಬೆಳೆಸಿದ ಸಂಘಟನಾತ್ಮಕ ನೆಲೆಗಳಿಗೆ ಧಕ್ಕೆ ಉಂಟುಮಾಡುವಂತಹ ಯಾವುದೇ ಹೇಳಿಕೆಯನ್ನು ಬಹಿರಂಗವಾಗಿ ಘೋಷಿಸುವುದಿಲ್ಲ. ಆಂತರೀಕರಿಸಿದ ಆರೆಸ್ಸೆಸ್ ತಂತ್ರಗಾರಿಕೆಯನ್ನು ಭೇದಿಸುವ ರೀತಿಯಲ್ಲಿ ಜೆ.ಪಿ. ನಡ್ಡಾ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಬಿಜೆಪಿ ಆರೆಸ್ಸೆಸ್ ನಿಯಂತ್ರಣದಲ್ಲಿದೆ ಎಂಬ ಸಾರ್ವಜನಿಕ ನಂಬಿಕೆಗೆ ವ್ಯತಿರಿಕ್ತವಾಗಿ ಕಾಣುವ ಈ ಬೆಳವಣಿಗೆಗಳು ಎರಡೂ ಸಂಘಟನೆಗಳ ನಡುವೆ ಇರುವ ಹೊಂದಾಣಿಕೆಯ ಮಿಥ್ಯೆಯನ್ನು ಬಯಲು ಮಾಡಿರುವುದು ಸ್ಪಷ್ಟ. ಬಿಜೆಪಿ ಅಧ್ಯಕ್ಷರು ಸ್ಪಷ್ಟ ಮಾತುಗಳಲ್ಲಿ ಹೇಳಿರುವಂತೆ ಬಿಜೆಪಿ ಆರೆಸ್ಸೆಸ್ನಿಂದ ಸ್ವತಂತ್ರವಾಗಿರುವುದು ಮತ್ತಷ್ಟು ದೃಢವಾದಂತೆ ಕಾಣುತ್ತದೆ.
ತತ್ವ ಸಿದ್ದಾಂತ-ರಾಜಕಾರಣ
2024ರ ಚುನಾವಣೆಗಳಲ್ಲಿ ಒಂದು ವೇಳೆ ನರೇಂದ್ರ ಮೋದಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಲ್ಲಿ ಸೂಕ್ತ ಸಮಯದಲ್ಲಿ ಈ ಘೋಷಣೆಯನ್ನು ಅಧಿಕೃತವಾಗಿಸುವ ಆಲೋಚನೆಯೂ ಪಕ್ಷದೊಳಗಿರುವುದು ಸ್ಪಷ್ಟವಾಗುತ್ತದೆ. ಇದಕ್ಕೂ ಮುನ್ನವೇ ಜೆ. ಪಿ. ನಡ್ಡಾ ದ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿರುವ ಸಂದರ್ಶನದ ಅವಕಾಶವನ್ನು ಬಳಸಿಕೊಂಡು ಈ ಮಾತುಗಳನ್ನಾಡಿದ್ದಾರೆ. ತನ್ಮೂಲಕ ಕೆಲವು ಸಮಯದಿಂದ ಬಿಜೆಪಿಯ ಮೇಲ್ಮಟ್ಟದ ನಾಯಕತ್ವದಲ್ಲಿ ಬೆಳೆಯುತ್ತಿರುವ ಭಾವನೆಗೆ ಇಂಬು ನೀಡಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ. ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಅವಿನಾಭಾವ ಹೊಂದಾಣಿಕೆಯಿದೆ , ಎರಡರ ನಡುವೆ ಯಾವುದೇ ಅಸಮಾಧಾನಗಳಿಲ್ಲ ಎಂಬ ಮಿಥ್ಯೆಯನ್ನು ಬಿಜೆಪಿ ಅಧ್ಯಕ್ಷರ ಹೇಳಿಕೆ ಒಮ್ಮೆಲೆ ಅಳಿಸಿಹಾಕಿದಂತೆ ಕಾಣುತ್ತದೆ.

ಇನ್ನು ಕೆಲವು ರಾಜಕೀಯ ವಿಶ್ಲೇಷಕರು, ಬಿಜೆಪಿ ಅಥವಾ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಲು ಅಥವಾ ಭಿನ್ನ ಆಲೋಚನೆ ಮಾಡಲು ಆರೆಸ್ಸೆಸ್ಗೆ ಏನೂ ಉಳಿದಿಲ್ಲ ಎಂದೂ ಹೇಳುತ್ತಾರೆ. ಏಕೆಂದರೆ ತಮ್ಮ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಆರೆಸ್ಸೆಸ್ನ ಪ್ರಮುಖ ಕಾರ್ಯಸೂಚಿಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮೇಲ್ನೋಟಕ್ಕೆ ಕಂಡುಬರುವ ತಿಳುವಳಿಕೆಯಾಗಿರುವುದರಿಂದ, ಆರೆಸ್ಸೆಸ್ನ ಮೂಲಭೂತ ತಾತ್ವಿಕ ಚಿಂತನೆಗಳನ್ನೂ ಗಂಭೀರವಾಗಿ ಪರಿಶೀಲಿಸಬೇಕಾಗಿದೆ. ತನ್ನ ಹಿಂದುತ್ವ ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಸೈದ್ಧಾಂತಿಕ ಕಾರ್ಯಸೂಚಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಆರೆಸ್ಸೆಸ್ ಸಂತೃಪ್ತವಾಗಿದೆ ಎನ್ನುವುದು ವಾಸ್ತವವೇ ಆದರೂ, ಇದನ್ನೂ ಮೀರಿದ ಕೆಲವು ಅಂಶಗಳ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ.

ಆರೆಸ್ಸೆಸ್ ಮೂಲತಃ ಭಾರತದ ಪ್ರಜಾಸತ್ತಾತ್ಮಕ ಆಳ್ವಿಕೆಯ ನೆಲೆಯಲ್ಲೇ ತನ್ನ ಪ್ರಧಾನ ಕಾರ್ಯಸೂಚಿಗಳು ಕಾರ್ಯಗತವಾಗುವುದನ್ನು ಬಯಸುತ್ತದೆ. ಆದರೆ ಇದರಿಂದ ಸಂಘಪರಿವಾರದ ಸಾಂಸ್ಥಿಕ ಕಾರ್ಯಚಟುವಟಿಕೆಗಳನ್ನು ನಿರ್ದೇಶಿಸುವ ಮೂಲ ಚಿಂತನಾ ಕ್ರಮಗಳನ್ನು ಯಾವುದೇ ಕಾರಣಕ್ಕೂ ಶಿಥಿಲವಾಗಲು ಅವಕಾಶ ನೀಡುವುದಿಲ್ಲ. ಈ ಮೂಲ ಚಿಂತನಾಕ್ರಮದ ಪ್ರಧಾನ ಅಂಶವೆಂದರೆ ಆರೆಸ್ಸೆಸ್ ತನ್ನ ಸರ್ವೋಚ್ಛ ಸ್ಥಾನವು ಯಾವುದೇ ವ್ಯಕ್ತಿ ಅಥವಾ ವ್ಯಕ್ತಿತ್ವದ ಪ್ರಭಾವಕ್ಕೊಳಗಾಗಿ ಕುಬ್ಜವಾಗಬಾರದು ಎಂಬ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಆರೆಸ್ಸೆಸ್ನ ಆಂತರಿಕ ವಾತಾವರಣದಲ್ಲಿ ಸಂಭವಿಸಿರುವ ಪಲ್ಲಟಗಳು ಸಂಘಟನೆಯನ್ನು ವಿಚಲಿತಗೊಳಿಸಿರುವುದು ಸ್ಪಷ್ಟ.
ಅಧಿಕಾರ ರಾಜಕಾರಣದ ನೆಲೆಯಲ್ಲಿ

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೆಸ್ಸೆಸ್ ಸಂಘಟನೆಯನ್ನು ಬದಿಗಿಟ್ಟು ಹಿಂದುತ್ವ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವಲ್ಲಿ ನಿರತರಾಗಿದ್ದರು. ಮೂಲತಃ ಯಾರ ನಿರ್ದೇಶನಕ್ಕೂ ಒಳಪಡದ ವ್ಯಕ್ತಿತ್ವ ಹೊಂದಿರುವ ನರೇಂದ್ರ ಮೋದಿ ಯಾರಿಂದಲೂ ನಿರ್ದೇಶಿಸಲ್ಪಡಲು ಅಪೇಕ್ಷಿಸುವುದಿಲ್ಲ. ಅದು ಆರೆಸ್ಸೆಸ್ ಆದರೂ ಇದೇ ನೀತಿಯನ್ನು ಅನುಸರಿಸುವುದನ್ನು ಅವರ ಆಳ್ವಿಕೆಯ ಶೈಲಿಯಲ್ಲಿ ಗುರುತಿಸಬಹುದು. ಇದಕ್ಕೆ ಪೂರ್ವನಿದರ್ಶನವಾಗಿ ನೋಡುವುದಾದರೆ ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿ ಯಾವುದೇ ಹಂತದಲ್ಲೂ ಆರೆಸ್ಸೆಸ್ನೊಡನೆ ಸಮಾಲೋಚನೆ ನಡೆಸಿದ ಉದಾಹರಣೆಗಳೇ ಕಾಣುವುದಿಲ್ಲ. ಆರೆಸ್ಸೆಸ್ನ ಒಳಗಿನವರು ಹೇಳುವ ಪ್ರಕಾರ ಸಂಘಟನೆಯ ರಾಯಭಾರಿಗಳು ಸರ್ಕಾರಕ್ಕೆ ಯಾವುದೇ ಸಲಹೆ, ಸೂಚನೆ ಕೊಡಲು ಮುಂದಾದಾಗಲೂ ಪ್ರಧಾನಿ ಮೋದಿ ವೈಯುಕ್ತಿಕವಾಗಿ ಸ್ಪಂದಿಸುವುದಿಲ್ಲ

ತಾವು ಪ್ರಧಾನಿಯಾದ ನಂತರ ಮೋದಿ ಆರೆಸ್ಸೆಸ್ ಸಂಸ್ಥಾಪಕ ಕೆ. ಬಿ. ಹೆಡ್ಗೆವಾರ್ ಮತ್ತು ಅವರ ಉತ್ತರಾಧಿಕಾರಿ ಎಂ. ಎಸ್. ಗೋಲ್ವಾಲ್ಕರ್ ಅವರ ಸಮಾಧಿಗಳಿಗೆ ಭೇಟಿ ನೀಡಲು ನಿರಾಕರಿಸಿದ್ದು, ತದನಂತರದಲ್ಲಿ ತಾವು ಪ್ರಧಾನಿಯಾಗಲು ಸಹಾಯ ಮಾಡಿದ್ದಕ್ಕಾಗಿ ಆರೆಸ್ಸೆಸ್ ಸಂಘಟನೆಗೆ ಕೃತಜ್ಞತೆ ಸಲ್ಲಿಸಲು ನಿರಾಕರಿಸಿದ್ದು ಈ ಸಂದರ್ಭದಲ್ಲಿ ಮುಖ್ಯವಾಗಿ ಕಾಣುತ್ತದೆ. ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಪ್ರಧಾನಿ ಮೋದಿ ಸ್ವತಃ ತಮ್ಮನ್ನೇ ಕೇಂದ್ರಬಿಂದುವಾಗಿ ಭಾವಿಸಿಕೊಂಡಿರುವುದೇ ಅಲ್ಲದೆ ಬಿಜೆಪಿ ವಲಯದಲ್ಲೂ ಸಹ ಇದೇ ಅಭಿಪ್ರಾಯ ದಟ್ಟವಾಗಿರುವುದನ್ನು ಗಮನಿಸಿದಾಗ, ಆರೆಸ್ಸೆಸ್ ಸಂಘಟನೆ ಅಥವಾ ಅದರ ಮುಖ್ಯಸ್ಥರೂ ಸಹ ಮುಖ್ಯವಲ್ಲ ಎಂಬ ಅಭಿಪ್ರಾಯವನ್ನೂ ಮೂಡಿಸಿದ್ದಾರೆ. ಇದು ಆರೆಸ್ಸೆಸ್ನ ಮೂಲ ತಾತ್ವಿಕ ಚಿಂತನೆಗೆ ತದ್ವಿರುದ್ಧವಾಗಿದೆ.

ಸ್ಥಾಪನೆಯಾದ ದಿನದಿಂದಲೂ ಆರೆಸ್ಸೆಸ್ ಯಾವುದೇ ವ್ಯಕ್ತಿಗೆ ಉನ್ನತ ಸ್ಥಾನ ನೀಡುವುದನ್ನು ತಡೆಗಟ್ಟುತ್ತಲೇ ಕೇಸರಿ ಧ್ವಜವನ್ನೇ ಸರ್ವೋಚ್ಛ ಎಂದು ಪರಿಗಣಿಸುತ್ತಾ ಬಂದಿದೆ. ನಿಜವಾದ ಶಕ್ತಿ ಸಂಘಟನೆಯಲ್ಲಿದೆ ಎಂಬ ಸಂಘಪರಿವಾರದ ಘೋಷವಾಕ್ಯವನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದೆ. ತಮ್ಮ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಪ್ರಧಾನಿ ಮೋದಿ ಈ ಮೂಲ ತತ್ವವನ್ನು ಉಲ್ಲಂಘಿಸಿ ಮುನ್ನಡೆದಿದ್ದಾರೆ ಎಂಬ ಭಾವನೆ ದಟ್ಟವಾಗಿದೆ. ಹಾಗಾಗಿಯೇ ಇಂದು ಬಿಜೆಪಿ-ಆರೆಸ್ಸೆಸ್ ನಡುವೆ ಅಸಮಾಧಾನದ ಗೆರೆಗಳು ಮೂಡಿವೆ. ಸಂಘಟನಾತ್ಮಕ ಧ್ಯೇಯಗಳ ದೃಷ್ಟಿಯಿಂದ ನೋಡಿದಾಗ ಆರೆಸ್ಸೆಸ್ನ ಆಂತರಿಕವಾದ ಒಂದು ದ್ವಂದ್ವವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಮೂಲತಃ ಸೈದ್ಧಾಂತಿಕ ನೆಲೆಯಲ್ಲಿ ದಯಾಪರ ಸರ್ವಾಧಿಕಾರದ ಪರಿಕಲ್ಪನೆಯನ್ನು ಉತ್ತೇಜಿಸುವ ಆರೆಸ್ಸೆಸ್ , ಆಂತರಿಕವಾಗಿ ಸಂಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಆ ರೀತಿಯಾದ ನಿರಂಕುಶಾಧಿಕಾರವನ್ನು ನೀಡಲು ಬಯಸುವುದಿಲ್ಲ. ಸಂಘಟನೆ ಯಾವುದೇ ವ್ಯಕ್ತಿಗೆ ಅಧೀನವಾಗಕೂಡದು ಎಂಬ ಮೂಲ ತತ್ವಕ್ಕೆ ಇಂದಿಗೂ ಬದ್ಧವಾಗಿದೆ.
ಚುನಾಯಿತ ಸರ್ಕಾರಗಳು ಬರುತ್ತವೆ, ಹೋಗುತ್ತವೆ ಹಾಗೆಯೆ ಅದನ್ನು ನಿರ್ವಹಿಸುವ ವ್ಯಕ್ತಿಗಳೂ ಬಂದು ಹೋಗುತ್ತಾರೆ ಆದರೆ ಇದರಿಂದ ಸಂಸ್ಥೆಯ ಉಳಿವಿಗೆ, ಅಸ್ತಿತ್ವಕ್ಕೆ ಧಕ್ಕೆಯಾಗುವುದನ್ನು ಆರೆಸ್ಸೆಸ್ ಬಯಸುವುದಿಲ್ಲ ಈ ನೆಲೆಯಲ್ಲೇ ಪ್ರಸ್ತುತ ಬೆಳವಣಿಗೆಗಳನ್ನೂ ನೋಡಬೇಕಿದೆ. ಈ ಮೂಲಭೂತ ಆರ್ಎಸ್ಎಸ್ ಪ್ರಮೇಯದಲ್ಲಿ ಅಂತರ್ಗತ ವಿಪರ್ಯಾಸವಿದೆ – ಆರ್ಎಸ್ಎಸ್ ದಯಾಪರ ಸರ್ವಾಧಿಕಾರದ ಕಲ್ಪನೆಯನ್ನು ಸೈದ್ಧಾಂತಿಕವಾಗಿ ಆದರೆ ಸರಳವಾಗಿ ಉತ್ತೇಜಿಸುತ್ತದೆ, ಆದರೆ ದೊಡ್ಡ ಸಂಘ ಪರಿವಾರದ ಸಂಘಟನೆಯೊಳಗೆ ಯಾವುದೇ ವ್ಯಕ್ತಿಯು ಆ ಪಾತ್ರವನ್ನು ವಹಿಸುವುದನ್ನು ಅದು ಸಹಿಸುವುದಿಲ್ಲ. ಮತ್ತೊಂದೆಡೆ ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ, ಪಕ್ಷದ ಸಂಘಟನೆಯ ನೆಲೆಗಳಲ್ಲಿ ಹಲವಾರು ಆರೆಸ್ಸೆಸ್ ಕಾರ್ಯಕರ್ತರಿಗೆ ನಿರ್ಣಾಯಕ ಸ್ಥಾನಗಳನ್ನು ಕಲ್ಪಿಸುವ ಮೂಲಕ ಆಕರ್ಷಿಸುತ್ತದೆ. ತತ್ಪರಿಣಾಮವಾಗಿ ಆರಂಭದಿಂದಲೂ ಆರೆಸ್ಸೆಸ್ ತನ್ನ ಕಾರ್ಯಕರ್ತರಲ್ಲಿ ಬೆಳೆಸಿಕೊಂಡು ಬಂದಿರುವ ನಿಸ್ವಾರ್ಥತೆಯ ಮೌಲ್ಯಗಳು ಕ್ರಮೇಣವಾಗಿ ಭ್ರಷ್ಟವಾಗುತ್ತಿವೆ.





