ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಶುರುವಾಗಿದೆ ಅನ್ನೋ ಸಂತಸ ಒಂದು ಕಡೆಯಾದರೆ, ಮಳೆಯಾಗುವ ವೇಳೆ ಗುಡುಗು ಸಿಡಿಲು ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನವ ಮಧುಮಗ ಸಿಡಿಲಿಗೆ ಬಲಿಯಾಗಿದ್ದಾನೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಘಟನೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ 34 ವರ್ಷದ ಸೋಮಸುಂದರ್ ಸಾವನ್ಬಪ್ಪಿರುವ ದುರ್ದೈವಿ. ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ರಾಶಿ ಮಾಡುವ ವೇಳೆ ಸಿಡಿಲು ಬಡಿದ ಪರಿಣಾಮ ಸಾವು ಸಂಭವಿಸಿದೆ.
ಸೋಮಸುಂದರ್ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದು, ಮಾರ್ಗ ಮಧ್ಯೆ ಜೀವ ಹೋಗಿದೆ. 10 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸೋಮಸುಂದರ್ ಸಿಡಿಲಿನಿಂದ ಅಸುನೀಗಿದ್ದಾರೆ. ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸುತ್ತಿದ್ದ ಸೋಮ ಸುಂದರ್ ಸಿಡಿಲಿಗೆ ಬಲಿಯಾಗಿದ್ದಾರೆ.