ಬೆಂಗಳೂರು (Bengaluru): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನಾನಾ ಹುದ್ದೆಗಳಿಗೆ, ಸ್ಥಾನಗಳಿಗೆ ಮತ್ತು ನಿಗಮ, ಮಂಡಳಿಗಳಿಗೆ ನೇಮಕಗೊಂಡ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳಿಂದ ಸನ್ಮಾನ ಸ್ವೀಕರಿಸಿದರು.
ವಿಧಾನಸಭೆಗೆ, ವಿಧಾನಪರಿಷತ್ತಿಗೆ, ಲೋಕಸಭೆಗೆ, ರಾಜ್ಯಸಭೆಗೆ, ರಾಜ್ಯ ನೀತಿ ಆಯೋಗಕ್ಕೆ, ಯೋಜನಾ ಆಯೋಗಕ್ಕೆ, ಅನಿವಾಸಿ ಭಾರತೀಯ ಸಂಘಕ್ಕೆ ರಾಜ್ಯದ ಪ್ರತಿನಿಧಿಯಾಗಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿ ಪ್ರಮುಖ ನಿಗಮ ಮಂಡಳಿಗಳಿಗೆ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳನ್ನು ಆದ್ಯತೆ ಮೇಲೆ ನೇಮಕ ಮಾಡಿಕೊಂಡಿದ್ದಕ್ಕಾಗಿ ನೇಮಕಗೊಂಡವರು ಒಟ್ಟಾಗಿ ಸಿದ್ದರಾಮಯ್ಯ ಅವರನ್ನು ಸನ್ಮಾನಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ಪಕ್ಷವನ್ನು ಗಟ್ಟಿಯಾಗಿ ಬೆಳೆಸಿ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಗೊಳಿಸಲು ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ, ಕೆ.ವೆಂಕಟೇಶ್, ನೀತಿ ಆಯೋಗದ ಉಪಾಧ್ಯಕ್ಷರಾದ ರಾಜೀವ್ ಗೌಡ, ರಾಜ್ಯಸಭೆಗೆ ಎರಡನೇ ಬಾರಿ ಆಯ್ಕೆಗೆ ಸಜ್ಜಾಗಿರುವ ಜಿ.ಸಿ.ಚಂದ್ರಶೇಖರ್, ಶಿಕ್ಷಕರ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನಪರಿಷತ್ ಗೆ ಐದನೇ ಬಾರಿ ಪ್ರವೇಶ ಪಡೆದ ಪುಟ್ಟಣ್ಣ ಸೇರಿ ಒಕ್ಕಲಿಗ ಸಮುದಾಯದ ಹಾಲಿ, ಮಾಜಿ ಶಾಸಕರು, ಸಚಿವರುಗಳು, ನಾಯಕರುಗಳು ಉಪಸ್ಥಿತರಿದ್ದರು.
#Karnataka #bengaluru #siddaramaiah #congress #mpelection