• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಜನದನಿಯ ಬೇರುಗಳೂ ವ್ಯವಸ್ಥೆಯ ಸವಾಲುಗಳೂ ಸಾಂಸ್ಕೃತಿಕ ಮನ್ವಂತರದ ಘಟ್ಟದಲ್ಲಿ ಜನಪರ ಹೋರಾಟಗಳಿಗೆ ಹೊಸ ಆಯಾಮ ಬೇಕಿದೆ

ನಾ ದಿವಾಕರ by ನಾ ದಿವಾಕರ
January 19, 2024
in ಅಂಕಣ
0
ಜನದನಿಯ ಬೇರುಗಳೂ ವ್ಯವಸ್ಥೆಯ ಸವಾಲುಗಳೂ ಸಾಂಸ್ಕೃತಿಕ ಮನ್ವಂತರದ ಘಟ್ಟದಲ್ಲಿ ಜನಪರ ಹೋರಾಟಗಳಿಗೆ ಹೊಸ ಆಯಾಮ ಬೇಕಿದೆ
Share on WhatsAppShare on FacebookShare on Telegram

ಭಾರತ ಮನ್ವಂತರದ ಹಾದಿಯಲ್ಲಿದೆ. ಖಚಿತವಾಗಿಯೂ ತಾನು ನಡೆದು ಬಂದ ಏಳು ದಶಕಗಳ ಪಯಣದ ಪ್ರಜಾಸತ್ತಾತ್ಮಕ ಮಾರ್ಗದಿಂದ ವಿಮುಖವಾಗುತ್ತಾ ಒಂದು ಹೊಸ ಸಾಮಾಜಿಕ ವಾತಾವರಣವನ್ನು, ಸಾಂಸ್ಕೃತಿಕ ಪರಿಸರವನ್ನು ಹಾಗೂ ರಾಜಕೀಯ ಚಹರೆಯನ್ನು ಕಟ್ಟಿಕೊಳ್ಳುತ್ತಿದೆ. ರೂಪಾಂತರಗೊಳ್ಳುತ್ತಿರುವ ಭಾರತೀಯ ಸಮಾಜ ಮೇಲ್ನೋಟಕ್ಕೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಂತೆಯೇ ಕಾಣುತ್ತಿದ್ದರೂ ಒಳಹೊಕ್ಕು ನೋಡಿದಾಗ, ಮೂರು-ನಾಲ್ಕು ದಶಕಗಳ ಹಿಂದೆ ಕಾಣಬಹುದಾಗಿದ್ದ ಮನುಜ ಸಂಬಂಧಗಳ ಸೂಕ್ಷ್ಮ ಸಂವೇದನಾಶೀಲ ಎಳೆಗಳು ಮರೆಯಾಗುತ್ತಿರುವುದನ್ನು ಗುರುತಿಸಬಹುದು. ಆಳುವ ವ್ಯವಸ್ಥೆ ಮತ್ತು ಆಳ್ವಿಕೆಗೊಳಪಡುವ ತಳಮಟ್ಟದ ಸಮಾಜದ ನಡುವಿನ ಅಂತರ ಹೆಚ್ಚಾಗುತ್ತಿರುವುದು ಒಂದು ಅಪಾಯವಾದರೆ ಮತ್ತೊಂದೆಡೆ ಇದೇ ತಳಮಟ್ಟದ ಸಾಮಾಜಿಕ ನೋವಿಗೆ, ಸಾಂಸ್ಕೃತಿಕ ವೇದನೆಗೆ, ರಾಜಕೀಯ ಆಶಯಗಳಿಗೆ ಮೇಲ್ಪದರದ ಸಮಾಜ ವಿಮುಖವಾಗುತ್ತಿರುವುದು ಆತಂಕಕಾರಿಯಾಗಿ ಕಾಣುತ್ತದೆ.

ADVERTISEMENT

ಮನುಜ ಸಂಬಂಧಗಳನ್ನು ಬೆಳೆಸಲು ಬೇಕಾದ ನಿಸ್ಪೃಹತೆ ಮತ್ತು ಪಾರದರ್ಶಕ ಪ್ರಾಮಾಣಿಕತೆಯ ಎಲ್ಲ ನೆಲೆಗಳನ್ನೂ ಆವರಿಸಿರುವ ಮಾರುಕಟ್ಟೆ ಸಂಸ್ಕೃತಿಯು ಎಲ್ಲ ವಲಯಗಳಲ್ಲೂ ಹರಡಿರುವುದರಿಂದ, ಮಾನವ ಸಮಾಜವನ್ನು ಮೂಲತಃ ನಿರ್ದೇಶಿಸುವ ಶ್ರದ್ಧೆ, ನಂಬಿಕೆ, ವಿಶ್ವಾಸ ಹಾಗೂ ಜೀವಪ್ರೀತಿಯೂ ಇಂದು ಲಾಭಗಳಿಕೆಯ-ಅನುಕೂಲತೆಗಳ ತಂತ್ರಗಾರಿಕೆಗೆ ಬಲಿಯಾಗುತ್ತಿದೆ. ಸಾಂಸ್ಕೃತಿಕ ರಾಜಕಾರಣ ಮತ್ತು ಧರ್ಮ ರಾಜಕಾರಣದ ಪ್ರತಿಫಲವಾಗಿ ಅಡ್ಡಡ್ಡಲಾಗಿ ಸೀಳಲ್ಪಟ್ಟಿರುವ ನಾಗರಿಕ ವಲಯದಲ್ಲಿ ಮನುಷ್ಯನನ್ನು ಯಾವುದಾದರೊಂದು ಅಸ್ಮಿತೆಯ ಚೌಕಟ್ಟಿನೊಳಗಿಟ್ಟು ನೋಡುವ ವಿಕೃತ ಪರಂಪರೆಗೆ ಬಲಿಯಾಗಿರುವ ಸಮಾಜದ ದೊಡ್ಡ ವರ್ಗ ತನ್ನ ಹೃದಯವೈಶಾಲ್ಯವನ್ನು ಕಳೆದುಕೊಂಡು, ಸಹಜ ಸ್ಪಂದನೆಯ ಸಂವೇದನಾಶೀಲತೆಯಿಂದ ಸಂಪೂರ್ಣ ವಿಮುಖವಾಗಿದೆ.

ಸಾಮಾಜಿಕ ತರತಮಗಳ ರೂಪಾಂತರ : ಇದರ ಪರಿಣಾಮವಾಗಿ ಚಾರಿತ್ರಿಕ, ಸಮಕಾಲೀನ ಹಾಗೂ ವರ್ತಮಾನದ ಸತ್ಯಗಳೆಲ್ಲವೂ ಸದ್ದಿಲ್ಲದೆ ಸಮಾಧಿಯಾಗುತ್ತಿದ್ದು, ಸುಳ್ಳುಗಳು ವಿಜೃಂಭಿಸುತ್ತಿವೆ. ವಿಪರ್ಯಾಸವೆಂದರೆ ಈ ಸುಳ್ಳುಗಳನ್ನು ನಿಜವೆಂದೇ ನಂಬುವ ಒಂದು ಬೃಹತ್‌ ಸುಶಿಕ್ಷಿತ ಮೇಲ್ವರ್ಗವೇ ಸಾರ್ವಜನಿಕ ಸಂಕಥನಗಳನ್ನು, ಸಂವಹನದ ಸಾಧನಗಳನ್ನು ಹಾಗೂ ಸುದ್ದಿಪ್ರಸರಣದ ವಾಹಿನಿಗಳನ್ನು ನಿರ್ದೇಶಿಸುತ್ತಿದೆ. ಕಾರ್ಪೋರೇಟ್‌ ಮಾರುಕಟ್ಟೆಯ ಶಕ್ತಿಗಳ ಸಂವಹನ ಸಾಮರ್ಥ್ಯವನ್ನು ಸರಿಗಟ್ಟಲು ಸಾಧ್ಯವಾಗದ ಹಾಗೆ ತಳಮಟ್ಟದ ಸಮಾಜವನ್ನು ಕಲ್ಪಿತ ಇತಿಹಾಸದ ನೆಲೆಗಳಲ್ಲಿ, ಕೃತ್ರಿಮ ಸಮಕಾಲೀನತೆಯಲ್ಲಿ, ಭ್ರಮಾಧೀನ ಭವಿತವ್ಯದಲ್ಲಿ ಕೂಡಿಹಾಕಲಾಗಿದೆ. ಶತಮಾನಗಳಿಂದಲೂ ಭಾರತೀಯ ಸಮಾಜವನ್ನು ಕೆಳಗಿನಿಂದ ಮೇಲಿನವರೆಗೂ ವಿವಿಧ ಸ್ತರಗಳಲ್ಲಿ ವಿಭಜಿಸುತ್ತಲೇ ಬಂದಿರುವ ಜಾತಿ ವ್ಯವಸ್ಥೆ ಇಂದಿಗೂ ತನ್ನ ಪ್ರಾಚೀನ ಅಸ್ತ್ರಗಳನ್ನೇ ಬಳಸುತ್ತಾ, ಬಹಿರ್ಮುಖಿ ಸಮಾಜವನ್ನು ಹೆಚ್ಚು ಹೆಚ್ಚು ಅಂತರ್ಮುಖಿಯಾಗಿ ಮಾಡುತ್ತಿದೆ.

ಈ ಅಂತರ್ಮುಖಿಯಾದ ಸಮಾಜದಲ್ಲಿ ಬಂದಿಯಾಗಿರುವ ಬಹುಸಂಖ್ಯೆಯ ಯುವ ಸಂಕುಲ, ಪೂರ್ವಸೂರಿಗಳು ಪೋಷಿಸಿ ಬೆಳೆಸಿದ ಸಂವೇದನೆಯ ಬೇರುಗಳಿಂದ ದೂರವಾಗುತ್ತಾ, ಭಾರತದ ನೆಲ ಮೂಲ ಸಂಸ್ಕೃತಿಗೆ ವಿಮುಖವಾಗುತ್ತಿರುವುದು ಈ ಕಾಲದ ದುರಂತ. ತನ್ನ ಸುತ್ತಲಿನ ಅಮಾನುಷ ಶೋಷಣೆಯನ್ನು ವಿರೋಧಿಸುತ್ತಲೇ, ಆ ಶೋಷಣೆಯ ಮೂಲ ಧಾತುವನ್ನು ಗುರುತಿಸಲು ನಿರಾಕರಿಸಿ, ಶೋಷಕ ವರ್ಗಗಳೊಡನೆ ನಡೆಯುವ ಒಂದು ವೈಚಿತ್ರ್ಯ ಭಾರತಕ್ಕೇನೂ ಹೊಸತಲ್ಲ. ಆದರೆ ಠಾಗೂರ್-ಗಾಂಧಿ-ಕುವೆಂಪು-ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯಪೂರ್ವದ ಮಹಾನ್‌ ಚಿಂತಕರು ಕಟ್ಟಿಕೊಟ್ಟ ವಿಶ್ವಮಾನವ ಸೇತುವೆಯ ಮೇಲೆ ಏಳು ದಶಕಗಳ ಕಾಲ ಪಾದಸವೆಸಿದ ಶೋಷಿತ ಸಮುದಾಯಗಳು ಈ ವೇಳೆಗೆ ಶೋಷಣೆಯ ಚಾರಿತ್ರಿಕ ಮೂಲಗಳನ್ನು-ಸಮಕಾಲೀನ ಭೂಮಿಕೆಗಳನ್ನು ಗುರುತಿಸಲು ಸಾಧ್ಯವಾಗಬೇಕಿತ್ತಲ್ಲವೇ ?

ಒಂದು ಶತಮಾನದ ಎಡಪಂಥೀಯ ಚಳುವಳಿ, ಅದರೊಂದಿಗೇ ಬೆಳೆದುಬಂದ ಒಂದು ಸಾಂಸ್ಕೃತಿಕ-ಸಾಹಿತ್ಯಕ-ಕಲಾಭಿವ್ಯಕ್ತಿಯ ಸಾರ್ವತ್ರಿಕ ಸಾಧನಗಳು, ಏಳೆಂಟು ದಶಕಗಳ ಶೋಷಿತರ ಸಂಘರ್ಷ, ಐದು ದಶಕಗಳ ಮಹಿಳಾ ಹೋರಾಟ ಹಾಗೂ ವಿದ್ಯಾರ್ಥಿ ಯುವಜನ ಸಂಘರ್ಷಗಳು, ರೈತ ಹೋರಾಟಗಳು ಈ ಎಲ್ಲ ಜನದನಿಯ ಕಣಜಗಳನ್ನೂ ಬರಿದು ಮಾಡಿ, ಅಪಹಾಸ್ಯ ಮಾಡುವ ರೀತಿಯಲ್ಲಿ ಮತೀಯವಾದ, ಮತಾಂಧತೆ, ಧರ್ಮ ರಾಜಕಾರಣ ಹಾಗೂ ಮೂಲಭೂತವಾದ ಭಾರತೀಯ ಸಮಾಜವನ್ನು ಸುತ್ತುವರೆದಿದೆ. ತತ್ವ ಸಿದ್ಧಾಂತಗಳ ಚೌಕಟ್ಟುಗಳನ್ನು ಭೇದಿಸುತ್ತಾ ಎಲ್ಲ ಚಿಂತನಾವಾಹಿನಿಗಳನ್ನೂ ಅಪಮೌಲ್ಯಗೊಳಿಸುವ ಮೂಲಕ ಜಾತಿ ಶ್ರೇಷ್ಠತೆ ಮತ್ತು ಮತ ಪಾರಮ್ಯದ ಶಕ್ತಿಗಳು ಸಮಾಜದೊಳಗಿನ ಬೌದ್ಧಿಕ ನೆಲೆಗಳನ್ನು ಆವರಿಸಿಕೊಂಡಿದೆ. ತತ್ಪರಿಣಾಮವಾಗಿ ಅಂಬೇಡ್ಕರರನ್ನು ಆರಾಧಿಸುವ ಒಂದು ಬೃಹತ್‌ ಸಮೂಹವೇ ಅಸಮಾನತೆ ಮತ್ತು ಶೋಷಣೆಯ ಪೋಷಕ ಶಕ್ತಿಗಳಿಗೆ ಬೆನ್ನೆಲುಬಾಗಿ ನಿಂತಿವೆ.

ವಾಸ್ತವಗಳಿಗೆ ಮುಖಾಮುಖಿಯಾಗಿ: ವರ್ತಮಾನದ ಈ ನೆಲೆಯಲ್ಲಿ ನಿಂತು ನಾವು ಜನಪರ ಅಥವಾ ಪ್ರಗತಿಪರ ಹೋರಾಟಗಳ ಪುನರಾವಲೋಕನ ಮಾಡುವಾಗ, ಸಾಂಸ್ಕೃತಿಕವಾಗಿ ಪ್ರಾಚೀನತೆಯತ್ತ ಹೊರಳುತ್ತಿರುವ ಒಂದು ಸುಶಿಕ್ಷಿತ-ಹಿತವಲಯದ ಸಮಾಜಕ್ಕೆ ಮುಖಾಮುಖಿಯಾಗಬೇಕಾಗುತ್ತದೆ. ಹಾಗೆಯೇ ಜನಾಂದೋಲನಗಳ ದೀರ್ಘ ಪರಂಪರೆಯನ್ನು ಹೊಂದಿರುವ ಭಾರತದ ಪ್ರಸ್ತುತ ಸ್ಥಿತಿಗತಿಗಳತ್ತ ನೋಡಿದಾಗ ನಿಸ್ಸಂದೇಹವಾಗಿ 1970ರ ದಶಕದತ್ತ ಮರಳಿ ನೋಡಬೇಕಾಗುತ್ತದೆ. 1960-70ರ ದಶಕಗಳಲ್ಲಿ ರೂಪುಗೊಂಡ ಜನಾಂದೋಲನಗಳು ಎದುರಿಸಿದ್ದು ಬಡತನ-ಹಸಿವು, ಬಡವ ಶ್ರೀಮಂತರ ನಡುವಿನ ಅಪಾರ ಅಂತರ, ಬೆಲೆ ಏರಿಕೆ, ನಿರುದ್ಯೋಗ, ಆಹಾರ ಕೊರತೆ, ಶಿಕ್ಷಣ-ಆರೋಗ್ಯಸೇವೆ-ವಸತಿ ಕೊರತೆ, ಆಡಳಿತ ಭ್ರಷ್ಟಾಚಾರ, ಜಾತಿಶೋಷಣೆ-ದೌರ್ಜನ್ಯ-ತಾರತಮ್ಯ-ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ-ಅತ್ಯಾಚಾರಗಳು ಮತ್ತು ಅಪಾರದರ್ಶಕ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿದ್ದ ಸ್ವಜನಪಕ್ಷಪಾತ. ಇದರೊಟ್ಟಿಗೆ ಹಸಿರು ಕ್ರಾಂತಿಯ ಹೊರತಾಗಿಯೂ ಕೃಷಿ ಕ್ಷೇತ್ರದಲ್ಲಿ ನಿರ್ಲಕ್ಷಿಸಲ್ಪಟ್ಟ ರೈತಾಪಿ ವರ್ಗದ ಒಂದು ಬೃಹತ್‌ ಸಂಕುಲ.

ಈ ಎಲ್ಲ ಜಟಿಲ ಸಿಕ್ಕುಗಳ ವಿರುದ್ಧ ಮೂಡಿದ ಜನದನಿಯನ್ನು ಮಣಿಸುವ ಸಲುವಾಗಿಯೇ 1975ರ ತುರ್ತುಪರಿಸ್ಥಿತಿಯನ್ನೂ ಹೇರಲಾಗಿತ್ತು. ಭಾರತದ ಆಡಳಿತ ವ್ಯವಸ್ಥೆಯನ್ನು ಜನಸಾಮಾನ್ಯರ ಹಕ್ಕೊತ್ತಾಯಗಳ ಧ್ವನಿಗಳನ್ನು ಹತ್ತಿಕ್ಕಲು ಕಠಿಣ- ಕರಾಳ ಕಾನೂನುಗಳನ್ನು ಬಳಸುವ ಪರಂಪರೆಗೆ ನಾಂದಿ ಹಾಡಿದ್ದೂ ಇದೇ ತುರ್ತುಪರಿಸ್ಥಿತಿಯೇ. ಕಳೆದ ಐದು ದಶಕಗಳಲ್ಲಿ ಈ ಆಳ್ವಿಕೆಯ ಮಾದರಿ ಮತ್ತಷ್ಟು ಬಿಗಿಯಾಗುತ್ತಲೇ ಹೋಗುತ್ತಿದ್ದು ಇಂದು ಮತ್ತಷ್ಟು ಜನಸಮ್ಮತಿ ಗಳಿಸಿದಂತೆ ಕಾಣುತ್ತದೆ. ಈ ಐದು ದಶಕಗಳ ಫಲಾನುಭವಿಗಳೇ ಇಂದು ಕರಾಳ ಶಾಸನಗಳನ್ನು, ಸರ್ಕಾರಗಳ ದಮನಕಾರಿ ನೀತಿಗಳನ್ನು, ಪ್ರತಿರೋಧಗಳನ್ನು ಹತ್ತಿಕ್ಕುವ ಹೊಸ ಮಾದರಿಗಳನ್ನು ಅನುಮೋದಿಸುವುದರಲ್ಲಿ ಮುಂಚೂಣಿಯಲ್ಲಿರುವುದು ಇತಿಹಾಸದ ಚೋದ್ಯ. ಆದರೆ ಇದು ವಾಸ್ತವ. ಇಂದು ಸರ್ಕಾರ ಯಾವುದೇ ಇದ್ದರೂ ಆಳ್ವಿಕೆಯ ಅನುಮತಿ ಇಲ್ಲದೆ ಜನದನಿಯನ್ನು ಸಾರ್ವಜನಿಕವಾಗಿ ಮೊಳಗಿಸಲಾಗುವುದಿಲ್ಲ. ಪ್ರತಿಭಟನೆಯ ಹಕ್ಕುಗಳನ್ನೂ ಸಹ ಆಳ್ವಿಕೆಯ ಅನುಮತಿ/ಸಮ್ಮತಿಯ ವಿವೇಚನೆಗೆ ಒಳಪಡಿಸಲಾಗಿರುವುದು ವಾಸ್ತವ.

ಆದರೆ ಇಲ್ಲಿ ಗಮನಿಸಬೇಕಿರುವುದು ವಸ್ತುಸ್ಥಿತಿಯನ್ನು. ಐದು ದಶಕಗಳ ಹಿಂದೆ ಜನಾಂದೋಲನಗಳಿಗೆ ಕಾರಣವಾದ ಜಟಿಲ ಜೀವನ-ಜೀವನೋಪಾಯದ ಸಮಸ್ಯೆಗಳೇ ಇಂದಿಗೂ ಸಹ ಮತ್ತೊಂದು ರೂಪದಲ್ಲಿ ತಳಸಮಾಜವನ್ನು ಕಾಡುತ್ತಿದೆ. ಫಲಾನುಭವಿ ವರ್ಗವನ್ನು ಹೊರತುಪಡಿಸಿ ದೇಶದ ಬಹುಸಂಖ್ಯೆಯ ಜನತೆ ತಮ್ಮ ಮೂಲಭೂತ ಬದುಕುವ ಹಕ್ಕುಗಳಿಗಾಗಿ ಹೋರಾಡುತ್ತಲೇ ಇದ್ದಾರೆ. ಅಭಿವೃದ್ಧಿಯ ಮಾದರಿ ಬದಲಾಗಿದ್ದರೂ, ಆರ್ಥಿಕತೆಯ ಮೂಲ ಆಶಯಗಳು ಇಂದಿಗೂ ಬಂಡವಾಳಶಾಹಿಯ ಚೌಕಟ್ಟಿನಲ್ಲೇ ವ್ಯಕ್ತವಾಗುತ್ತಿವೆ. 70 ವರ್ಷಗಳಲ್ಲಿ ಏನೂ ಸಾಧನೆಯಾಗಿಲ್ಲ ಎಂಬ ಮಿಥ್ಯಾರೋಪಗಳನ್ನು ಮಾಡುತ್ತಲೇ ಆ ಸಾಧನೆಯ ಫಲಾನುಭವಿ ಮಧ್ಯಮ ವರ್ಗಗಳನ್ನು ಮತದ್ವೇಷ, ಕೋಮುವಾದ, ಜಾತಿ ಶ್ರೇಷ್ಠತೆಯ ವಕ್ತಾರರನ್ನಾಗಿ ಮಾಡುವ ಮೂಲಕ ಅವಕಾಶವಂಚಿತ ತಳಸಮುದಾಯಗಳನ್ನು ಮತ್ತಷ್ಟು ನಿರ್ಗತಿಕತೆಯತ್ತ ತಳ್ಳುವ ಒಂದು ರಾಜಕೀಯ ಪ್ರಕ್ರಿಯೆಗೆ ನಾವು ಸಾಕ್ಷಿಯಾಗಿದ್ದೇವೆ.

ಈ ಕ್ಷಣದ ಜನಾಂದೋಲನಗಳ ಅಂತರ್‌ ಧ್ವನಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದೇ ಅಸ್ಪೃಶ್ಯತೆ, ಜಾತಿ ಶೋಷಣೆ-ದೌರ್ಜನ್ಯ, ಮಹಿಳಾ ದೌರ್ಜನ್ಯ-ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ, ಮರೀಚಿಕೆಯಾಗುತ್ತಿರುವ ಶಿಕ್ಷಣ-ಆರೋಗ್ಯ, ಆಡಳಿತ ಭ್ರಷ್ಟಾಚಾರ, ಹಸಿವು ಮತ್ತು ಬಡತನ, ರೈತರ ಆತ್ಮಹತ್ಯೆ ಮತ್ತೆ ಮತ್ತೆ ಎದುರಾಗುತ್ತವೆ. ಇದರರ್ಥ ಪಿರಮಿಡ್‌ ಮಾದರಿಯ ಸಮಾಜದಲ್ಲಿ ಮೇಲ್ಪದರಕ್ಕೆ ಲಭಿಸುವಂತಹ ಅನುಕೂಲತೆಗಳು ತಳಮಟ್ಟಕ್ಕೆ ತಲುಪುತ್ತಿಲ್ಲ ಎಂದಲ್ಲವೇ ? ಇದು ಬಂಡವಾಳಶಾಹಿ ಆರ್ಥಿಕತೆಯ ಲಕ್ಷಣ. 1980ರ ನಂತರದ ನವ ಉದಾರವಾದ ಹಾಗೂ 90ರ ನಂತರದ ಜಾಗತೀಕರಣ ಪ್ರಕ್ರಿಯೆ ಇಂದು ಡಿಜಿಟಲ್‌ ಯುಗವನ್ನು ಪ್ರವೇಶಿಸಿದ್ದರೂ, ಡಿಜಿಟಲೀಕರಣಗೊಂಡ ಆರ್ಥಿಕತೆ ತಳಮಟ್ಟದ ಅಸಮಾನತೆಗಳನ್ನು ಇನ್ನೂ ಹಿಗ್ಗಿಸುತ್ತಲೇ ಇದೆ. ಆದರೆ ಈ ಅಸಮಾನತೆಯನ್ನು ವ್ಯಾಖ್ಯಾನಿಸುವ ಹೊತ್ತಿನಲ್ಲಿ ಇದರ ಕಾರಣಗಳನ್ನು ಬಂಡವಾಳಶಾಹಿ ಆರ್ಥಿಕ ನೀತಿಗಳಲ್ಲಿ ಗುರುತಿಸದೆ, ಎಲ್ಲ ಸಮಸ್ಯೆಗಳಿಗೂ ಅನ್ಯ ಕೋಮುಗಳನ್ನು ಕಾರಣಕರ್ತರನ್ನಾಗಿ ಮಾಡುವ ಮತ್ತೊಂದು ಮಿಥ್ಯೆಯನ್ನು ಎದುರಿಸಬೇಕಿದೆ. ತಳ ಸಮಾಜ ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಜನಾಂಗೀಯ ನೆಲೆಯಲ್ಲಿಟ್ಟು ನೋಡುವ ಮೂಲಕ ಹಿಂದುತ್ವ ರಾಜಕಾರಣವು ನವ ಉದಾರವಾದದ ಕರಾಳ ಸ್ವರೂಪವನ್ನು ಮರೆಮಾಚಲು ಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಪೂರಕವಾಗಿಯೇ ರಾಷ್ಟ್ರೀಯತೆಯ ಸುತ್ತಲಿನ ಭಾವೋನ್ಮಾದದ ವಿಚಾರಗಳು ಸಾರ್ವಜನಿಕ ಸಂಕಥನದಲ್ಲಿ ಕೇಂದ್ರ ಸ್ಥಾನ ಪಡೆದುಕೊಂಡಿವೆ.

ಹೋರಾಟಗಳ ಸಮಕಾಲೀನ ವಾಸ್ತವ: ಈ ಅಪಸವ್ಯಗಳ ನಡುವೆಯೇ ಭಾರತದ ಶ್ರಮಜೀವಿ ವರ್ಗಗಳು, ಮಹಿಳೆಯರು, ಆದಿವಾಸಿಗಳು, ಅಸ್ಪೃಶ್ಯರು, ಅಲ್ಪಸಂಖ್ಯಾತರು, ಅಂಚಿಗೆ ತಳ್ಳಲ್ಪಟ್ಟ ಅವಕಾಶವಂಚಿತರು 1970ರಲ್ಲಿ ಎದುರಿಸಿದ ಸಿಕ್ಕುಗಳನ್ನೇ ಮತ್ತೆ ಮತ್ತೆ ಎದುರಿಸುತ್ತಿರುವುದು ವಾಸ್ತವ. ಆ ಸಂದರ್ಭದಲ್ಲಿ ನೊಂದ ಜನರನ್ನು, ದಮನಿತ ಸಮುದಾಯಗಳನ್ನು ಒಗ್ಗೂಡಿಸಲು ನೆರವಾದ ತತ್ವ ಸಿದ್ಧಾಂತಗಳು ಇಂದಿಗೂ ನಮ್ಮ ನಡುವೆ ಉಸಿರಾಡುತ್ತಿವೆ. ಮಾರ್ಕ್ಸ್‌, ಲೋಹಿಯಾ, ಗಾಂಧಿ, ಅಂಬೇಡ್ಕರ್‌ ವಾದಗಳು ದಮನಿತರ-ಶೋಷಿತರ ಹೋರಾಟಗಳನ್ನು ಇಂದಿಗೂ ನಿರ್ದೇಶಿಸುತ್ತಿವೆ. ಅಂದಿಗಿಂತಲೂ ಹೆಚ್ಚಿನ ಸಂವಹನ ಸಾಧನಗಳನ್ನು ಹೊಂದಿರುವ ಸಮಾಜ ಕ್ಷಣಮಾತ್ರದಲ್ಲಿ ದಶದಿಕ್ಕುಗಳ ಧ್ವನಿಯನ್ನು ಒಗ್ಗೂಡಿಸುವ ಅವಕಾಶಗಳನ್ನೂ ಹೊಂದಿದೆ. ಆದರೆ ಆ ಸಂದರ್ಭದಲ್ಲಿ ಕಂಡಂತಹ ವಿಶಾಲ ತಳಹದಿಯ ಐಕ್ಯತೆ, ಸಮಗ್ರ ಹೋರಾಟದ ಚಿಂತನೆ ಹಾಗೂ ತಳಸಮಾಜಕ್ಕೆ ಸ್ಪಂದಿಸುವ ಮೇಲ್ಪದರ ಸಮಾಜದ ಸಂವೇದನೆಗಳು ಇಂದು ಮಾಯವಾಗಿವೆ. ಇದಕ್ಕೆ ಕಾರಣ ನಾವೇ ಸೃಷ್ಟಿಸಿಕೊಂಡಿರುವ ಕಲ್ಪಿತ-ಸಂಕಲಿತ ಅಸ್ಮಿತೆಗಳು ಮತ್ತು ಈ ಅಸ್ಮಿತೆಗಳನ್ನಾಧರಿಸಿ ಸಂಭವಿಸಿರುವ ವಿಘಟನೆಗಳು.

ಅಂಬೇಡ್ಕರರನ್ನು ಆರಾಧಿಸುವ ನೂರಾರು ದಲಿತ ಸಂಘಟನೆಗಳು, ಮಾರ್ಕ್ಸ್‌ವಾದಕ್ಕೆ ಬದ್ಧವಾದ ಹತ್ತಾರು ಕಮ್ಯುನಿಸ್ಟ್‌ ಪಕ್ಷಗಳು-ಗುಂಪುಗಳು ಇಂದು ಏಕ ವೇದಿಕೆಯ ಮೇಲೆ ನಿಂತು ತಳಸಮಾಜದ ನೋವುಗಳತ್ತ ನೋಡಲು ಸಾಧ್ಯವಾಗುತ್ತಿಲ್ಲ. ಕಾರಣ ಶೋಷಿತ ಸಮುದಾಯಗಳನ್ನು-ದುಡಿಯುವ ವರ್ಗಗಳನ್ನು ಆವರಿಸಿರುವ ಮತೀಯ ರಾಜಕಾರಣ ಮತ್ತು ಭಾವೋನ್ಮಾದದ ಧಾರ್ಮಿಕ-ಆಧ್ಯಾತ್ಮಿಕ ಚಿಂತನೆಗಳು. ಕಳೆದ ಐದು ದಶಕಗಳಲ್ಲಿ ಉಗಮಿಸಿ ಇಂದಿಗೂ ಜೀವಂತವಾಗಿರುವ ʼ ಹೋರಾಟಗಳು ʼ ತಮ್ಮ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿರುವುದಕ್ಕೆ ಸಮಾಜದಲ್ಲಿ ಸಂಭವಿಸಿರುವ ಈ ಮನ್ವಂತರವೇ ಕಾರಣ ಎನ್ನಬಹುದು. ಹಿಂತಿರುಗಿ ನೋಡಿದಾಗ ನಮಗೆ ಕಾಣುವುದು ಸಂಘಟನಾತ್ಮಕ ವೈಫಲ್ಯವೊಂದೇ. ಆದರೆ ಇದನ್ನೂ ಮೀರಿ ಯೋಚಿಸಬೇಕಿರುವುದು ʼ ಪ್ರತಿಭಟನೆ ʼ ಮತ್ತು ʼ ಹೋರಾಟ ʼ ಇವೆರಡರ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸದ ಬಗ್ಗೆ.

ಸಾಮಾಜಿಕ ನ್ಯಾಯ-ಲಿಂಗತ್ವ ನ್ಯಾಯ-ಶ್ರಮಿಕರ ನ್ಯಾಯ-ಭೂಮಿಯ ಹಕ್ಕು ಇತ್ಯಾದಿ ಉದ್ದೇಶಗಳಿಂದ ರೂಪುಗೊಂಡ ಸಾವಿರಾರು ಪ್ರತಿಭಟನೆಗಳ ಮೂಲ ಆಶಯ ತಕ್ಷಣದ ಆಗ್ರಹಗಳ ಈಡೇರಿಕೆ ಮಾತ್ರವೇ ಆಗಿರಲು ಸಾಧ್ಯ. ಸರ್ಕಾರಗಳು ಈ ಬೇಡಿಕೆಗಳನ್ನು ಈಡೇರಿಸಿದ ಕೂಡಲೇ ಸಮಾಜವು ಮತ್ತೊಂದು ಸಮಸ್ಯೆಯತ್ತ ಹೊರಳುತ್ತದೆ. ಇದು ಪ್ರತಿಭಟನೆಗಳ ಲಕ್ಷಣ. ಆದರೆ ʼ ಹೋರಾಟ ʼ ಎನ್ನುವುದು ಇನ್ನೂ ವಿಶಾಲ Canvas ಅಥವಾ ವ್ಯಾಪ್ತಿಯನ್ನು ಹೊಂದಿರುವ ಒಂದು ವಿದ್ಯಮಾನ. ಕಳೆದ ಐದು ದಶಕಗಳ ಎಲ್ಲ ಜನಾಂದೋಲನಗಳ ಮೂಲ ಆಗ್ರಹಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಮಸ್ಯೆ ಮೂಲ ಕೇಂದ್ರವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾದೀತು. ಈ ಕೇಂದ್ರಬಿಂದು ಇರುವುದು ನಮ್ಮ ಸಮಾಜವನ್ನು ಇಂದಿಗೂ ನಿರ್ದೇಶಿಸುವ ಪಿತೃಪ್ರಧಾನತೆಯಲ್ಲಿ, ಅರೆ ಊಳಿಗಮಾನ್ಯ ಧೋರಣೆಯಲ್ಲಿ, ಜಾತಿ ಶ್ರೇಷ್ಠತೆ ಅಥವಾ ಪಾರಮ್ಯದಲ್ಲಿ ಹಾಗೂ ಇವೆಲ್ಲವನ್ನೂ ನಿಯಂತ್ರಿಸುವ ಬಂಡವಾಳಶಾಹಿ ಉತ್ಪಾದನಾ ಸಂಬಂಧಗಳಲ್ಲಿ. ಆರ್ಥಿಕ ನೆಲೆಗಟ್ಟಿನಿಂದ ದೂರವಾಗಿ ಸಾಮಾಜಿಕ ಚೌಕದಲ್ಲಿ ನಿಂತು ಶೋಷಣೆಯನ್ನು ನೋಡಿದಾಗ ಅಲ್ಲಿ ಕಾಣುವುದು ಅರ್ಧಸತ್ಯ ಮಾತ್ರ. ಏಕೆಂದರೆ ಶೋಷಣೆಯ ಪ್ರತಿಯೊಂದು ಅಸ್ತ್ರದ ಹಿಂದೆ ಸಾಮಾಜಿಕ-ಸಾಂಸ್ಕೃತಿಕ ಶಕ್ತಿಯೊಂದಿಗೇ ಆರ್ಥಿಕ ಪ್ರಾಬಲ್ಯ-ಪಾರಮ್ಯವೂ ಇದ್ದೇ ಇರುತ್ತದೆ.

ನವ ಉದಾರವಾದ-ಜಾಗತಿಕರಣದ ಡಿಜಿಟಲ್‌ ಯುಗದಲ್ಲಿ ಬಂಡವಾಳಶಾಹಿಯು ಈ ಪಾರಮ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದಕ್ಕಾಗಿಯೇ ಜಾತಿ, ಧರ್ಮ, ಮತ ಆಧರಿಸಿ ಜನರ ನಡುವೆ ಗೋಡೆಗಳನ್ನು ನಿರ್ಮಿಸುತ್ತಿದೆ. ದಲಿತ ಸಂಘಟನೆಗಳ ನಿರಂತರ ವಿಘಟನೆ, ಎಡಪಂಥೀಯ ಹೋರಾಟಗಳ ಭಿನ್ನ ನೆಲೆಗಳು, ಕಾರ್ಮಿಕ ಹೋರಾಟಗಳ ಬೌದ್ಧಿಕ ನಿಷ್ಕ್ರಿಯತೆ, ರೈತ ಹೋರಾಟಗಳ ವಿಭಜನೆ ಇವೆಲ್ಲವನ್ನೂ ನಿರ್ದೇಶಿಸುವ ಆರ್ಥಿಕ ಸಂಬಂಧಗಳು ಆಳ್ವಿಕೆಯ ಪರಿಕರಗಳನ್ನೇ ಬಳಸಿಕೊಂಡು ಜನಸಾಮಾನ್ಯರ ನಡುವೆ ಏರ್ಪಡಬೇಕಾದ ಐಕಮತ್ಯಕ್ಕೆ ಭಂಗ ತರುತ್ತಿವೆ. ಹಾಗಾಗಿಯೇ ತಮ್ಮ ಹಕ್ಕೊತ್ತಾಯಗಳಿಗಾಗಿ ಕೆಂಬಾವುಟ ಎತ್ತಿಹಿಡಿಯುವ ಶ್ರಮಜೀವಿಗಳು, ಅಂಬೇಡ್ಕರರನ್ನು ಆರಾಧಿಸುವ ತಳಸಮುದಾಯಗಳು ರಾಜಕೀಯ ನೆಲೆಯಲ್ಲಿ ನವ ಉದಾರವಾದ-ಬಂಡವಾಳಶಾಹಿಯ ಶೋಷಕ ವ್ಯವಸ್ಥೆಯನ್ನೇ ಹಿಂಬಾಲಿಸುತ್ತವೆ. ಈ ಹಾದಿಯಲ್ಲಿ ಕಳೆದುಹೋಗುವ ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಗಳು ಸಮಾಜಕ್ಕೆ ಮುಖ್ಯ ಎನಿಸುವುದೇ ಇಲ್ಲ. ಮಹಿಳಾ ದೌರ್ಜನ್ಯಗಳು ಕೇವಲ ಮಹಿಳಾ ಸಂಕುಲದ ಸಮಸ್ಯೆಗಳಾಗಿಯೇ ಉಳಿದುಹೋಗುತ್ತವೆ.

ಪ್ರಗತಿಪರತೆಯ ಮರುವ್ಯಾಖ್ಯಾನ: ಜನಪರ ಅಥವಾ ಪ್ರಗತಿಪರ ಎಂದು ವ್ಯಾಖ್ಯಾನಿಸಲ್ಪಡುವ ಜನಾಂದೋಲನಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.. ಸಂಘಟನಾತ್ಮಕವಾಗಿ ರೂಪುಗೊಳ್ಳುವ Programatic Activities ಅಂದರೆ ನಿರ್ದಿಷ್ಟ ಕಾರ್ಯಕ್ರಮಾಧಾರಿ ಚಟುವಟಿಕೆಗಳು ವಿಶಾಲ ಹೋರಾಟದ ಒಂದು ಭಾಗವಾಗಿರಬೇಕೇ ಹೊರತು ಅದನ್ನೇ ಹೋರಾಟದ ಮೂಲ ಸ್ಥಾಯಿಯಾಗಿ ಭಾವಿಸಕೂಡದು. ಸಂಘಟನಾತ್ಮಕ ಅಸ್ಮಿತೆಗಳ ವಿಭಜಕಗಳನ್ನು ದಾಟಿ, ಸಮಗ್ರತೆಯತ್ತ ಸಾಗುತ್ತಾ ಹೋದಂತೆ ನಮಗೆ ಸುತ್ತ ತಾಂಡವಾಡುತ್ತಿರುವ ಹಿಂಸೆ, ಕ್ರೌರ್ಯ, ಅಸಮಾನತೆ, ಅಸ್ಪೃಶ್ಯತೆ-ಅತ್ಯಾಚಾರ-ಸಾಮಾಜಿಕ ಬಹಿಷ್ಕಾರದಂತಹ ಹೀನಾಚರಣೆಗಳು, ಮತಾಂಧತೆ ಇವೆಲ್ಲವೂ ಸಾಮಾಜಿಕ ಅಸ್ವಸ್ಥತೆಯಾಗಿ (Social Malaise) ಕಾಣತೊಡಗುತ್ತವೆ. ಈ ಸಾಮಾಜಿಕ ಅಸ್ವಸ್ಥತೆ ಹಾಗೂ ಸಾಂಸ್ಕೃತಿಕ ವ್ಯಸನದ ವಿರುದ್ಧ ವಿಶಾಲ ತಳಹದಿಯ ಹೋರಾಟಗಳು ರೂಪುಗೊಂಡಾಗ, ಸಮ ಸಮಾಜದ ಕನಸುಗಳೂ ಸಾಕಾರಗೊಳ್ಳುವುದು ಸಾಧ್ಯ. ಇದನ್ನು ಸಾಧಿಸುವ ಮುನ್ನ ನಾವೇ ಕಟ್ಟಿಕೊಂಡಿರುವ ಅಸ್ಮಿತೆಗಳ ಗೋಡೆಗಳನ್ನು, ಕೆಡವದಿದ್ದರೂ ದಾಟಿ ಹೋಗುವ ಕ್ಷಮತೆಯನ್ನು‌ ತೋರಬೇಕಿದೆ.

ಕವಿ ಸಿದ್ಧಲಿಂಗಯ್ಯ ಅವರ “ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ” ಎಂಬ ಸಾಲು ಈ ಐವತ್ತು ವರ್ಷಗಳ ಎಲ್ಲ ಹೋರಾಟಗಳನ್ನೂ ಪ್ರಭಾವಿಸಿವೆ. ಬದಲಾದ ಸನ್ನಿವೇಶದಲ್ಲಿ ಈವರೆಗೂ ನಡೆಸಿಕೊಂಡು ಬಂದಿರುವ ಜನಾಂದೋಲನ-ಪ್ರತಿಭಟನೆಗಳನ್ನು ಕವಿ ಕಲ್ಪನೆಯ ʼ ನದಿಗಳು ʼ ಎಂದು ಭಾವಿಸಿದರೆ, ಅಸಮಾನತೆಯನ್ನು ಪೋಷಿಸುವ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತನೆಯತ್ತ ಕೊಂಡೊಯ್ಯುವ ʼಹೋರಾಟʼ ಎಂಬ ಸಾಗರವನ್ನು ತಲುಪಲು ನಾವಿನ್ನೂ ಬಹುದೂರ ಕ್ರಮಿಸಬೇಕಿದೆ. ಅಸ್ಮಿತೆಗಳನ್ನು ಬದಿಗಿಟ್ಟು, ಸಂಕುಚಿತ ಸೈದ್ಧಾಂತಿಕ ಮಡಿವಂತಿಕೆಯನ್ನು ಬದಿಗೆ ಸರಿಸಿ, ತೆರೆದ ಮನಸ್ಸಿನಿಂದ ದೂರಗಾಮಿ ದೃಷ್ಟಿಯಿಂದ ವಿಶಾಲ ತಳಹದಿಯ ಜನಾಂದೋಲನಗಳನ್ನು ರೂಪಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಆಗ ಪ್ರಗತಿಪರ ಅಥವಾ ಜನಪರ ಎನ್ನುವ ಗುಣವಿಶೇಷಣಗಳು ಹೋರಾಟಗಳನ್ನು ಸಮರ್ಪಕವಾಗಿ ಅಲಂಕರಿಸುತ್ತವೆ. ಮನ್ವಂತರದ ಹಾದಿಯಲ್ಲಿರುವ ಭಾರತಕ್ಕೆ ಇದು ಅತ್ಯವಶ್ಯ.

Previous Post

ಜ.21ರಂದು ʻನಟನ’ದಲ್ಲಿ ನಕ್ಕುನಗಿಸುವ ನಾಟಕ ‘ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನ…

Next Post

ದೇವೇಗೌಡರು ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದರು: ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಕಿಡಿ

Related Posts

Top Story

Anil Shetty: ಸ್ಟಾರ್ಟಪ್ ಉದ್ಯಮಿ ಹಾಗೂ ಯುವರಾಜಕಾರಣಿ ಅನಿಲ್ ಶೆಟ್ಟಿ ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ

by Pratidhvani
June 26, 2025
0

ವಾಣಿಜ್ಯೋದ್ಯಮದಲ್ಲಿ ಹಲವಾರು ಯಶಸ್ವಿ ಯೋಜನೆಗಳನ್ನು ರೂಪಿಸಿರುವಂತಹ ಅನಿಲ್ ಶೆಟ್ಟಿ (Anil Shetty) ರವರು ಈಗ ಚಿತ್ರೋದ್ಯಮದಲ್ಲೂ ತಮ್ಮ ಛಾಪನ್ನು ಮೂಡಿಸಲು ಮುಂದಾಗಿದ್ದಾರೆ. ಸ್ಟಾರ್ಟಪ್ ಉದ್ಯಮಿ ಆಗಿರುವುದರ ಜೊತೆಗೆ...

Read moreDetails

Santosh Lad: ಅನ್ನದಾತನಿಗೆ ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 26, 2025

Tamil Hero Surya: ತಮಿಳು ನಟ ಸೂರ್ಯ ಹೊಸ ಸಿನಿಮಾ ʼಕರುಪ್ಪುʼ..ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ

June 26, 2025

DK Shivakumar: ಎರಡು ಮೂರು ದಿನಗಳಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ಸ್ವರೂಪ ಪ್ರಕಟಣೆ: ಡಿಸಿಎಂ ಡಿ.ಕೆ. ಶಿವಕುಮಾರ್

June 25, 2025

N.S Bhosaraju: ಭಾರತದ ಮೊದಲ ಹಾಗೂ ಶಕ್ತಿಶಾಲಿ ಕ್ವಾಂಟಮ್ ಕಂಪ್ಯೂಟರ್” ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಎನ್‌ ಎಸ್‌ ಭೋಸರಾಜು..

June 25, 2025
Next Post
ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಪ್ರಧಾನಿಗಳ ಕಿವಿಮಾತು

ದೇವೇಗೌಡರು ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದರು: ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಕಿಡಿ

Please login to join discussion

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada