ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯ ಬಿಜೆಪಿ ನಾಯಕತ್ವವನ್ನು ಬಿ.ವೈ ವಿಜಯೇಂದ್ರ ಅವರ ಹೆಗಲಿಗೆ ಕೊಟ್ಟಿದೆ. ಇನ್ನು ವಿರೋಧ ಪಕ್ಷದ ಸ್ಥಾನವನ್ನು ಆರ್ ಅಶೋಕ್ ಅವರ ಕೈಗಿಡಲಾಗಿದೆ. ಇದ್ರಿಂದ ಕುಪಿತಗೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ನಾಐಕತ್ವದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಈ ಮುನಿಸಿಗೆ ಮದ್ದು ಕೊಡುವುದಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಚಿಂತನೆ ನಡೆಸಿದ್ದಾರೆ. ಇಂದು ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರು ಚರ್ಚೆ ನಡೆಸಿದ ಬಳಿಕ ಯತ್ನಾಳ್ ಅವರಿಗೆ ದೆಹಲಿ ಮಟ್ಟದಲ್ಲೇ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆಗಳು ದಟ್ಟವಾಗಿವೆ.
ಯತ್ನಾಳ್ ಮನವೊಲಿಕೆಗೆ ಹೈಕಮಾಂಡ್ ಯತ್ನ
ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಿಂದಲೂ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿದ್ದ ಯತ್ನಾಳ್, ಬಿಎಸ್ ಯಡಿಯೂರಪ್ಪ ಹಾಗು ಅವರ ಮಗ ವಿಜಯೇಂದ್ರ ವಿರುದ್ಧ ಗುಡುಗಿದ್ರು. ಇದೀಗ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆದ್ಮೇಲೆ ಸ್ವಪಕ್ಷದ ನಾಯಕರ ವಿರುದ್ಧವೇ ಗುಡುಗಿದ್ದಾರೆ. ಯತ್ನಾಳ್ ಹೆಸರಿನ ಬಿಸಿ ತುಪ್ಪವನ್ನ ನುಂಗಲೂ ಆಗದೆ, ಉಗುಳಲೂ ಆಗದೆ ಯೋಚನೆಯಲ್ಲಿ ಸಿಲುಕಿದ್ದ ಬಿಜೆಪಿ ಹೈಕಮಾಂಡ್ ನಾಯಕರು ಕೊನೆಗೂ ಯತ್ನಾಳ್ಗೆ ಮೂಗುದಾರ ಹಾಕಲು ಹೊಸ ಯೋಜನೆ ಸೂಪಿಸಿದ್ದಾರೆ ಎನ್ನಲಾಗ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಿ.ಟಿ.ರವಿ ಅವರಿಂದ ತೆರವಾದ ಸ್ಥಾನಕ್ಕೆ ಯತ್ನಾಳ್ ಅವರನ್ನು ನೇಮಕ ಮಾಡಲಿದ್ದಾರೆ ಎನ್ನವ ಮಾತುಗಳು ಕೇಳಿಬಂದಿವೆ.
ಉನ್ನತ ಸ್ಥಾನ ನೀಡಿ ಸಿಟ್ಟು ಶಮನ ಮಾಡೋ ತಂತ್ರ!
ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ. ಹಿಂದುತ್ವದ ಆಧಾರದಲ್ಲಿ ಮತ ಸೆಳೆಯುವ ಸಾಧ್ಯತೆಗಳೂ ಇವೆ. ಇದೇ ಕಾರಣಕ್ಕೆ ಯತ್ನಾಳ್ ಎಷ್ಟು ಬಾರಿ ಮಾತನಾಡಿದರತೂ ಬಿಜೆಪಿ ಹೈಕಮಾಂಡ್ ನಾಯಕರು ಕಠಿಣ ನಿರ್ಧಾರ ತೆಗೆದುಕೊಳ್ಳದೆ ಸಮಾಧಾನ ಮಾಡುವ ಕೆಲಸವನ್ನೇ ಮಾಡುತ್ತಾ ಬಂದಿದ್ದಾಋಎ. ಇದೀಗ ಯತ್ನಾಳ್ ಅವರನ್ನು ಸೈಲೆಂಟ್ ಮಾಡ್ಬೇಕು ಅಂದ್ರೆ ರಾಷ್ಟ್ರ ಮಟ್ಟದ ಬಿಜೆಪಿಯಲ್ಲಿ ಉನ್ನತ ಅಧಿಕಾರ ಕೊಡ್ಬೇಕು.. ಆ ಮೂಲಕ ಎದುರಾಗು ಬಿಕ್ಕಟ್ಟಿಗೆ ಶಮನ ಮಾಡಬಹುದು ಎಂದು ಹೈಕಮಾಂಡ್ ನಾಯಕರು ಚಿಂತಿಸಿದ್ದಾರೆ ಎನ್ನಲಾಗ್ತಿಉದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಯತ್ನಾಳ್ ಸಿಟ್ಟನ್ನು ಶಮನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಯತ್ನಾಳ್ಗೆ ಬುದ್ಧಿವಾದ ಹೇಳಿ ಕಳುಹಿಸುತ್ತಾ ಹೈಕಮಾಂಡ್..!?
ಯತ್ನಾಳ್ ಅವರಿಗೆ ಉನ್ನತ ಹುದ್ದೆ ಕೊಡಲಾಗುತ್ತದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದಲೇ ಹೊರ ಬೀಳುತ್ತಿವೆ. ಇಂದೇ ದೆಹಲಿಗೆ ತೆರಳುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಬುದ್ಧಿವಾದ ಹೇಳಿ ವಾಪಸ್ ಕಳುಹಿಸುವ ಸಾಧ್ಯತೆ ಇದೆಯಾ..? ಅನ್ನೋ ಬಗ್ಗೆಯೂ ಅನುಮಾನ ಕಾಡುತ್ತಿವೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಎದುರಾಳಿಗಳ ಮನವೊಲಿಕೆ ಮಾಡಿಕೊಂಡು ಹುಟ್ಟೂರು ಶಿಕಾರಿಪುರಕ್ಕೆ ಇಂದು ಪ್ರವೇಶ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಇದೇ ಮೊದಲ ಬಾರಿ ವಿಜಯೇಂದ್ರ ತವರು ಜಿಲ್ಲೆ ಶಿವಮೊಗ್ಗಕ್ಕೆ ನಿನ್ನೆ ತೆರಳಿದ್ದು, ವಿಜಯೇಂದ್ರಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಅಭಿನಂದನಾ ಕಾರ್ಯಕ್ರಮದಲ್ಲಿ ಮಾತಾಡಿದ ವಿಜಯೇಂದ್ರ, ಲೋಕಸಭಾ ಚುನಾವಣೆಗೆ ಎಲ್ಲರೂ ಒಟ್ಟಾಗಿ ಪಕ್ಷವನ್ನ ಬಲಪಡಿಸೋಣ ಎಂದಿದ್ದಾರೆ. ಅದಕ್ಕೂ ಮೊದಲು ಕೆ.ಎಸ್ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ನಿವಾಸಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇಂದು ಸಂಜೆ ಒಳಗೆ ಯತ್ನಾಳ್ ಭವಿಷ್ಯವನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ.






