ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹುಲಿ ಉಗುರು ಪೆಂಡೆಂಟ್ ಪ್ರಕರಣ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಬಾಗಿಲಿಗೂ ಬಂದು ನಿಂತಿದೆ.
ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವರ್ತೂರು ಅವರು ಹುಲಿ ಉಗುರು ಧರಿಸಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸುತ್ತಿದ್ದಂತೆಯೇ ನೆಟ್ಟಿಗರು ಹಲವು ರಾಜಕಾರಣಿಪುತ್ರರು, ನಟರ ಬಳಿ ಇರುವ ಹುಲಿ ಉಗುರು ಬಗ್ಗೆ ಪೋಸ್ಟ್ ಹಾಕಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಅವರ ಬಳಿ ಹುಲಿ ಉಗುರು ಇದೆ ಎಂದು ಆರೋಪ ಕೇಳಿ ಬರುತ್ತಿದ್ದಂತೆ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಹುಲಿ ಉಗುರು ವಶಕ್ಕೆ ಪಡೆದು ಕೊಂಡಿದ್ದಾರೆ. ನಿಖಿಲ್ ಬಳಿ ಇರುವುದು ನಕಲಿ ಉಗುರು ಎಂದು ಹೆಚ್ ಡಿಕೆ ಸ್ಪಷ್ಟನೆ ನೀಡಿದ್ದಾರೆ.
ಇದೀಗ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ರಜತ್ ಉಳ್ಳಾಗಡ್ಡಿಮಠ ಮತ್ತು ಪುತ್ರ ಮೃಣಾಲ್ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಇರುವುದನ್ನು ನೆಟ್ಟಿಗರು ಗಮನ ಸೆಳೆದಿದ್ದಾರೆ.
ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಈ ಚಿತ್ರಗಳನ್ನು ತಮ್ಮ ಮಗಳ ಮದುವೆ ಸಂದರ್ಭದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಹುಲಿ ಉಗುರು ಪೆಂಡೆಂಟ್ ಧರಿಸಿರುವುದನ್ನು ನೆಟ್ಟಿಗರು ಗಮನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.