ಬೈಕ್ ಹಾಗೂ ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಇಬ್ಬರು ಯುವಕರ ನೆರವಿಗೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾನವೀಯತೆಯ ಮೆರೆದಿರುವ ಘಟನೆ ಸೋಮವಾರ (ಆಗಸ್ಟ್ 28) ನಡೆದಿದೆ.
ಗೃಹಲಕ್ಷ್ಮಿ ಯೋಜನೆ ಚಾಲಾನಾ ಸಮಾರಂಭದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಚಿವರು ಮಂಡ್ಯಕ್ಕೆ ತೆರಳುತ್ತಿದ್ದರು. ನಗರದ ಹೊರವಲಯದ ಸಂತೇಮರಳ್ಳಿ ಮುಖ್ಯ ರಸ್ತೆಯ ದೊಡ್ಡಪೇಟೆ ಕ್ರಾಸ್ ಬಳಿ ಬೈಕ್ ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ಆಟೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಬಿದ್ದು ನರಳುತ್ತಿದ್ದರು.
ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಕಾರನ್ನು ನಿಲ್ಲಿಸಿ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆಲಸದ ಒತ್ತಡದ ಮಧ್ಯೆಯೂ ಸಚಿವರು ಗಾಯಾಳುಗಳನ್ನು ಸಾಗಿಸಲು ಎಲ್ಲ ವ್ಯವಸ್ಥೆ ಮಾಡಿದರು.
ಈ ವೇಳೆ ಸ್ಥಳೀಯರು ದೊಡ್ಡಪೇಟೆ ಕ್ರಾಸ್ ನಲ್ಲಿ ಪದೆ ಪದೇ ಅಪಘಾತ ಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು. ಗಾಯಾಳುಗಳಿಗೆ ನೆರವಾದ ಸಚಿವರ ಮಾನವೀಯತೆ ಕಾರ್ಯ ಸ್ಥಳೀಯರು ಮೆಚ್ಚುಗೆ ಪಾತ್ರವಾಯಿತು.