ಮಹಾರಾಷ್ಟ್ರ ಥಾಣೆ ಜಿಲ್ಲೆಯ ಶಹಪುರ ತಹಸಿಲ್ನ ಸರ್ಲಾಂಬೆ ಗ್ರಾಮದ ಬಳಿ ‘ಸಮೃದ್ಧಿ ಎಕ್ಸ್ಪ್ರೆಸ್ ವೇ’ ಮೂರನೇ ಹಂತದ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್ ಕುಸಿದು17 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ (ಆಗಸ್ಟ್ 1) ಮುಂಜಾನೆ ಸಂಭವಿಸಿದೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಮೃದ್ಧಿ ಎಕ್ಸ್ಪ್ರೆಸ್ ವೇ ಕಾಮಗಾರಿ ನಡೆಯುವ ವೇಳೆ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಕ್ರೇನ್ ಕುಸಿದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಗಾಯಗೊಂಡಿದ್ದು ಅವರನ್ನು ಸನಿಹದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಹಪುರದ ಗ್ರಾಮದ ಬಳಿ ಮಂಗಳವಾರ ನಸುಕಿನ ಜಾವ ದೊಡ್ಡ ಉಕ್ಕಿನ ಸರಳುಗಳನ್ನು ರವಾನಿಸುವ ಮತ್ತು ಬೃಹತ್ ಕಟ್ಟಡಗಳ ನಿರ್ಮಾಣದಲ್ಲಿ ಬಳಸುವ ಬೃಹತ್ ಕ್ರೇನ್ ಮೂಲಕ ಸಮೃದ್ಧಿ ಕಾಮಗಾರಿಯ ಮೂರನೇ ಹಂತದ ನಿರ್ಮಾಣದಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾಗ ಅವಘಡ ಸಂಭವಿಸಿದೆ.
ಮಹಾರಾಷ್ಟ್ರ ಪೊಲೀಸ್, ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪ್ರಧಾನಿ ನರೇಂದ್ ಮೋದಿ ಅವರು ಮೃತರಿಗೆ ಸಂತಾಪ ಸೂಚಿಸಿದ್ದು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಸಂಸತ್ತು | ಮಣಿಪುರ ವಿಚಾರ ಚರ್ಚೆಗೆ ವಿಪಕ್ಷಗಳ ಪಟ್ಟು, ಸರ್ಕಾರ ಸಮ್ಮತಿ ; ಉಭಯ ಸದನಗಳ ಕಲಾಪ ಮುಂದೂಡಿಕೆ
ಮುಂಬೈ- ನಾಗುರ ಸಂಪರ್ಕಿಸುವ 701 ಕಿ.ಮೀ ಉದ್ದದ ಸಮೃದ್ಧಿ ಎಕ್ಸ್ಪ್ರೆಸ್ ವೇ ನಾಗುರ, ವಾಶಿಮ್, ವಾರ್ಧಾ, ಅಹ್ಮದ್ನಗರ, ಬುಲ್ದಾನ, ಔರಂಗಾಬಾದ್, ಅಮರಾವತಿ, ಜಲ್ನಾ, ನಾಸಿಕ್ ಮತ್ತು ಥಾಣೆ ಸೇರಿದಂತೆ ಹತ್ತು ಜಿಲ್ಲೆಗಳನ್ನು ಹಾದು ಹೋಗುತ್ತದೆ.
ಇತ್ತೀಚೆಗೆ ಈ ಮಾರ್ಗವನ್ನು ʼಹಿಂದೂ ಹೃದಯ ಸಾಮ್ರಾಟ್ ಬಾಬಾ ಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗʼ ಎಂದು ಹೆಸರಿಸಲಾಗಿದ್ದು, ಮಾರ್ಗದ ಮೂರನೇ ಮತ್ತು ಕೊನೆಯ ಹಂತದ ಕಾಮಗಾರಿಯನ್ನು ಈ ವರ್ಷದ ಕೊನೆಯಲ್ಲಿ ಮುಗಿಸಲು ಸರ್ಕಾರ ನಿರ್ಧರಿಸಿತ್ತು. ಮಾರ್ಗದ ನಿರ್ಮಾಣ ಜವಾಬ್ದಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ವಹಿಸಿಕೊಂಡಿದೆ.