ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಈಗಾಗಲೇ ಆರಂಭವಾಗಿದ್ದು, ಅವಳಿ ನಗರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಮಾರ್ಪಾಟ್ಟಿದೆ. ಈ ಸಲದ ಚುನಾವಣೆ ಹಿಂದಿಗಿಂತ ಹೆಚ್ಚು ಕುತೂಹಲ ಕೆರಳಿಸಿದ್ದು, ಪಾಲಿಕೆ ಗದ್ದುಗೆ ಯಾರ ಪಾಲಾಗಲಿದೆ ಎಂಬುದು ಇಂದು ನಿರ್ಧಾರವಾಗಲಿದೆ.
ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ ಪ್ರತಿತಂತ್ರ ಹೆಣೆದಿದ್ದು, ಹು-ಧಾ ಮಹಾನಗರ ಪಾಲಿಕೆಯ 22ನೇ ಅವಧಿಗೆ ಮಹಾಪೌರ, ಉಪ ಮಹಾಪೌರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ಧಾರವಾಡ ಪಾಲಿಕೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ.
ಈಗಾಗಲೇ ಸಭೆ ಆರಂಭವಾಗಿದ್ದು, ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪ ಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ. ಒಟ್ಟು 82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 39 ಸದಸ್ಯರು, ಕಾಂಗ್ರೆಸ್ನ 33 ಸದಸ್ಯರು, ಎಐಎಂಐಎಂ 3, ಜೆಡಿಎಸ್ 1 ಹಾಗೂ 6 ಪಕ್ಷೇತರ ಸದಸ್ಯರಿದ್ದಾರೆ. ಸಂಸದ, ಶಾಸಕರು, ಪರಿಷತ್ ಸದಸ್ಯರು ಸೇರಿ 89 ಸದಸ್ಯರು ಮತಹಕ್ಕು ಹೊಂದಿದ್ದಾರೆ.
ಸದ್ಯ ಹು-ಧಾ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಬಾರಿ ಹು-ಧಾ ಪಾಲಿಕೆಯನ್ನು ವಶಕ್ಕೆ ಪಡೆಯಲು ಎಲ್ಲ ರಣತಂತ್ರ ರೂಪಿಸಿದೆ
ಇನ್ನೂ ಮಹಾನಗರ ಪಾಲಿಕೆಯ 82 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಬಿಜೆಪಿ ಗೆದ್ದು ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 33 ಸ್ಥಾನ ಗೆದ್ದಿದೆ. ಮೂವರು ಎಐಎಂಐಎಂ, ಜೆಡಿಎಸ್ ಒಬ್ಬರು, 6 ಜನ ಪಕ್ಷೇತರರಿದ್ದಾರೆ. ಪಕ್ಷೇತರರಲ್ಲಿಮೂವರು ಬಿಜೆಪಿಗೆ ಬೆಂಬಲಿಸಿದರೆ, ಮೂವರು ಕಾಂಗ್ರೆಸ್ಗೆ ಬೆಂಬಲಿಸಿದ್ದಾರೆ.
ಚುನಾವಣೆ ಸ್ಥಳಕ್ಕೆ ಕೇಸರಿ ಶಾಲು ಹಾಕಿಕೊಂಡು ಬಂದ ಬಿಜೆಪಿ ಅಭ್ಯರ್ಥಿ
ಚುನಾವಣೆ ನಡೆಯುವ ಸ್ಥಳಕ್ಕೆ ಬಿಜೆಪಿಯ ಉಪಮೇಯರ್ ಅಭ್ಯರ್ಥಿ ಸತೀಶ ಹಾನಗಲ್ ಓಂ ಚಿಹ್ನೆ ಇರುವ ಶಾಲು ಹಾಕಿಕೊಂಡು ಬಂದಿದ್ದು, ‘ಕೈ’ ಸದಸ್ಯರು ಸತೀಶ ಹಾನಗಲ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಸರಿ ಶಾಲು ಧರಿಸಿ ನಾಮಪತ್ರ ಸಲ್ಲಿಸಿದ ಸತೀಶ ಹಾನಗಲ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಸುವರ್ಣ ಕಲ್ಲಕುಂಟ್ಲ ಮತ್ತು ದೊರೆರಾಜ ಮಣಿಕುಂಟ್ಲ ಆಗ್ರಹಿಸಿದ್ದು, ನಾಮಪತ್ರ್ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.
ಘಟನೆ ಕುರಿತು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ ಪ್ರತಿಕ್ರಿಯಿಸಿದ್ದು, ಚುನಾವಣೆ ಅಧಿಕಾರಿ ಆದೇಶದ ಆಧಾರದ ಮೇಲೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.