ದಾವಣಗೆರೆ (Davanagere) ಜಿಲ್ಲೆಯಲ್ಲಿ ವಿವಿಧ ಸಮಸ್ಯೆಗಲು ತಾಂಡವವಾಡುತ್ತಿದೆ. ಅದ್ರಲ್ಲೂ ಜಿಲ್ಲಾ ಆರೋಗ್ಯ ಕೇಂದ್ರಗಳು (District Health Centre) ಸಮಸ್ಯೆಯ ಗೂಡು ಅಂತ ಕರೆಸಿಕೊಳ್ಳುವ ಹಾಗಾಗಿದೆ. ಇದೀಗ ಜೀವರಕ್ಷಕವಾಗಿರುವ ರಕ್ತದ (Blood) ಕೊರತೆ ಕೂಡ ದಾವಣಗೆರೆ ಜಿಲ್ಲೆಯಲ್ಲಿ ಉಂಟಾಗಿದೆ.
ಹೌದು.. ಹಿಮೋಫಿಲಿಯಾ, ಥಲಸ್ಸೇಮಿಯಾ, ಸೇರಿದಂತೆ ಇತರೆ ರೋಗಗಳಿಂದ ಬಳಲುತ್ತಿರುವ ರೋಗಿಗಳು ಇದೀಗ ರಕ್ತದ ಕೊರತೆಯಿಂದ ಪರದಾಡುವ ಹಾಗಾಗಿದೆ. ಹಾಗಂತ ಈ ಸಮಸ್ಯೆ ಇಂದು ನಿನ್ನೆಯಿಂದ ಆರಂಭವಾಗಿಲ್ಲ ಕಳೆದ ಎರಡು ತಿಂಗಳಿನಿಂದ ರಕ್ತದ ಕೊರತೆ ಹೆಚ್ಚಳವಾಗಿದ್ದು, ಚುನಾವಣೆ, ಏರುತ್ತಿರುವ ತಾಪಮಾನ ಹಾಗೂ ವಿವಿಧ ಖಾಯಿಲೆಗಳ ಕಾರಣದಿಂದ ಮತ್ತು ರಕ್ತ ನೀಡಲು ಜನರಲ್ಲಿರುವ ನಿರಾಸಕ್ತಿಯಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗಿದೆ ಎನ್ನಲಾಗ್ತಾ ಇದೆ.

ಇದೇ ಕಾರಣದಿಂದಾಗಿ ಇದೀಗ, ‘ಎ’, ‘ಬಿ’, ‘ಎಬಿ’ ಮತ್ತು ‘ಓ’ ಪಾಸಿಟಿವ್ ಮತ್ತು ನೆಗೆಟಿವ್ ರಕ್ತದ ಗುಂಪುಗಳ ರೋಗಿಗಳಿಗೆ ತೊಂದರೆ ಉಂಟಾಗಿದೆ. ಈ ಹಿಂದೆ ಚುನಾವಣೆ ಕಾಣದಿಂದಾಗಿ ರಕ್ತದಾನ ಶಿಬಿರಗಳನ್ನ ಸ್ಥಗಿತಗೊಳಿಸಲಾಗಿತ್ತು. ಇನ್ನು ಇದರ ಜೊತೆಗೆ ಏರಿಕೆಯಾದ ಬಿಸಿಲ ತಾಪಮಾನಕ್ಕೆ ಜನರು ರಕ್ತದಾನಕ್ಕೆ ನಿರಾಸಕ್ತಿಯನ್ನ ತೋರಿಸಿದ್ದರು. ಕೇವಲ ಇದು ಮಾತ್ರವಲ್ಲದೆ, ಬಿಸಿಲ ಧಗೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದಲು ಜನ ಬಳಲುತ್ತಿದ್ದ ಕಾರಣ ಸಾಕಷ್ಟು ಮಂದಿ ರಕ್ತದಾನ ಮಾಡೋದಕ್ಕೆ ಹಿಂದೇಟ ಹಾಕಿದ್ರು. ಹೀಗಾಗಿ ರಕ್ತ ಕೊಡುವುದರಿಂದ ಸುಸ್ತು, ಆಯಾಸ ಆಗಬಹುದೆನ್ನುವ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಜನ ಮುಂದೆ ಬರಲಿಲ್ಲ ಅಂತ ಹೇಳಲಾಗ್ತಾ ಇದೆ.

ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಕೇವಲ ಸ್ಥಳೀಯರು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಕೂಡ ಸಾಕಷ್ಟು ಮಂದಿ ರೋಗಿಗಳು ಆಗಮಿಸಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ 500 ಯೂನಿಟ್ ರಕ್ತದ ಅಗತ್ಯವಿದೆ. ಆದರೆ, ಇಲ್ಲಿ ಸಂಗ್ರಹವಾಗುತ್ತಿರುವುದು ಮಾತ್ರ ಕೇವಲ 200 ಯೂನಿಟ್ ರಕ್ತ ಮಾತ್ರ. ಹಾಗಾಗಿ, ಕೆಲವು ರಕ್ತಭಂಡಾರಗಳು ವಿವಿಧ ರಸ್ತೆ ಮತ್ತು ಕಾಲೇಜುಗಳಿಗೆ ತೆರಳಿ ರಕ್ತ ಸಂಗ್ರಹಕ್ಕಿಳಿದಿವೆ.
ಒಟ್ಟಾರೆಯಾಗಿ ಇದೀಗ ಜಿಲ್ಲೆಯಲ್ಲಿ ಉಂಟಾಗಿರುವ ರಕ್ತದ ಕೊರತೆಗೆ ತುರ್ತಾಗಿ ಸ್ಥಳೀಯ ಶಾಸಕರು ಹಾಗೂ ಅಧಿಕಾರಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರೋಗಿಗಳು ಇನ್ನಷ್ಟು ಪರದಾಡುವ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾಗಿ ಈ ಬಗ್ಗೆ ಜಿಲ್ಲಾ ಆರೋಗ್ಯ ಕೇಂದ್ರದ ಅಧಿಕಾರಿಗಳು ಯಾವ ರೀತಿಯಾದ ಕ್ರಮ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.