~ಡಾ. ಜೆ ಎಸ್ ಪಾಟೀಲ.
ಬೆಂಗಳೂರು:ಏ.೦೫: ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಸದಾ ಭಾರತೀಯರಿಗೆ ಏನು ಬೇಡವೊ ಅದನ್ನೆ ಹೇರಲು ಪ್ರಯತ್ನಿಸುವುದು ಅವರ ಹಳೆ ಚಾಳಿ. ಭಾರತಕ್ಕೆ ಎಂದೂ ನಿಷ್ಟರಾಗಿರದ ಕೋಮುವಾದಿಗಳು ಯಾವತ್ತೂ ಭಾರತದ ಹಿತಾಸಕ್ತಿಗೆ ಧಕ್ಕೆ ತರುವ ಕೃತ್ಯಗಳನ್ನೆ ಮಾಡುತ್ತಾ ಬಂದಿದ್ದಾರೆ. ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸದ ಹಿಂದುತ್ವವಾದಿಗಳು ಸ್ವಾತಂತ್ರ ಹೋರಾಟಗಾರರ ಚಾರಿತ್ರ್ಯವಧೆಯಲ್ಲಿ ನಿರತರಾಗಿದ್ದಾರೆ. ತಮ್ಮ ಗುಂಪಿನಲ್ಲಿ ಸ್ವಾತಂತ್ರ ಹೋರಾಟಗಾರರಿಲ್ಲವಲ್ಲ ಎನ್ನುವ ಕೊರಗಿನಿಂದ ಹಿಂದೊಮ್ಮೆ ಸ್ವಾತಂತ್ರ ಹೋರಾಟಗಾರರಾಗಿದ್ದು ಆನಂತರ ಬ್ರಿಟೀಷರ ಸಮರ್ಥಕರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರನ್ನು ಹೀರೊ ಮಾಡಲು ಹವಣಿಸುತ್ತಾರೆ.
ನಾನು ಇಲ್ಲಿ ಸಾವರಕರ್ ಕುರಿತು ಹೆಚ್ಚಿಗೆ ಏನನ್ನೂ ಬರೆಯುವುದಿಲ್ಲ. ಬ್ರಿಟೀಷರಿಗೆ ಐದು ಬಾರಿ ಕ್ಷಮೆಯಾಚಿಸಿ ಬಿಡುಗಡೆಗೊಂಡ ಮೇಲಿನ ಸಾವರಕರ್ ಚರಿತ್ರೆ ಎಲ್ಲರಿಗೂ ಚಿರಪರಿಚಿತವಾದದ್ದೆ. ಇಂಗ್ಲೆಂಡಿನಲ್ಲಿನ ಕ್ರಿಮಿನಲ್ ಪ್ರಕರಣವೊಂದರಲ್ಲಿ ಕಠಿಣ ಶಿಕ್ಷೆಗೊಳಗಾಗಿದ್ದ ಸಾವರಕರ್ ಜೈಲು ಶಿಕ್ಷೆ ತಾಳಲಾರದೆ ಕ್ಷಮಾಪಣೆ ಕೇಳಿ ಬಿಡುಗಡೆಗೊಂಡ ಬಗ್ಗೆ ನಮಗೆಲ್ಲ ತಿಳಿದಿದೆ. ಅವರೊಂದಿಗೆ ಜೈಲಿನಲ್ಲಿದ್ದ ಭಗತಸಿಂಗ್ ಮುಂತಾದ ಇನ್ನಿತರ ಉತ್ಕಟ ದೇಶಭಕ್ತರು ಬ್ರಿಟೀಷರಿಗೆ ಕ್ಷಮೆಯಾಚಿಸದೆ ಸಾವರಕರ್ ಗೆ ನೀಡಿದ್ದಕ್ಕಿಂತ ಹೆಚ್ಚಿನ ಕಠಿಣ ಶಿಕ್ಷೆ ಅನುಭವಿಸಿ ನೇಣುಗಂಬಕ್ಕೆರಿದ ಸಂಗತಿ ಕೂಡ ನಾವು ಬಲ್ಲೆವು.

ಆದರೆ ಕೋಮುವಾದಿಗಳು ತಮ್ಮ ದೇಶದ್ರೋಹದ ಕೃತ್ಯಗಳನ್ನು ಮರೆಮಾಚಿಕೊಳ್ಳಲು ತಾವು ಮಾತ್ರ ದೇಶಭಕ್ತರೆನ್ನುವ ನಾಟಕ ಮಾಡುತ್ತಿರುವುದು ಈಗ ಹಳೆಯ ಸಂಗತಿ. ರಾಹುಲ್ ಗಾಂಧಿಯವರು ಮಾನನಷ್ಟ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದಾಗ ‘ನಾನು ಕ್ಷಮೆ ಕೇಳಲು ಸಾವರಕರ್ ಅಲ್ಲ ˌ ರಾಹುಲ್ ಗಾಂಧಿ’ ಎನ್ನುವ ಮಾತನಾಡಿದ್ದು ಅದು ತೀರ ಸಾಂದರ್ಭಿಕ ಮತ್ತು ಸತ್ಯ ಕೂಡ. ಅದರಿಂದ ನೋವಾಗಿದ್ದು ಮಾತ್ರ ಮಹಾರಾಷ್ಟ್ರದ ಪೇಶ್ವೆ ಸಂತತಿಗಳಿಗೆ ಎನ್ನುವುದೂ ಕೂಡ ಆಶ್ಚರ್ಯದ ಸಂಗತಿಯಲ್ಲ. “ಸಾವರಕರ್ ಗೆ ಭಾರೀ ಕಠಿಣ ಶಿಕ್ಷೆ ವಿಧಿಸಿದ್ದರುˌ ಅವರಷ್ಟು ಕಠಿಣ ಶಿಕ್ಷೆ ರಾಹುಲ್ ಗೆ ನೀಡಿದರೆ ಅರ್ಧ ರಾತ್ರಿ ಜೈಲಿನಲ್ಲಿರುತ್ತಿರಲಿಲ್ಲ” ಎನ್ನುವ ದ್ವೇಷಪೂರಿತ ಟ್ವೀಟ್ ಮಾಡಿದವರು ಒಂದು ಕಾಲಕ್ಕೆ ಮಹಾರಾಷ್ಟ್ರದ ಅದೃಷ್ಟದ ಮುಖ್ಯಮಂತ್ರಿಯಾಗಿ ಆಮೇಲೆ ಅಧಿಕಾರದಾಶೆಗೆ ಉಪ ಮುಖ್ಯಮಂತ್ರಿಯಾಗಿರುವ ಅದೇ ಪೇಶ್ವೆ ಸಂತತಿ ದೇವೇಂದ್ರ ಫಡ್ನವಿಸ್ ಅವರು.

ಫಡ್ನವಿಸ್ ಅವರ ಟ್ವೀಟ್ ನಲ್ಲಿನ ನೋವುˌ ಹತಾಷೆˌ ಮತ್ತು ಕೀಳರಿಮೆ ಸುಲಭವಾಗಿ ಅರ್ಥವಾಗುವಂತದ್ದು. ಏಕೆಂದರೆ ಸಾವರಕರ್ ಕುರಿತು ಕಳೆದ ೭೦ ವರ್ಷಗಳಿಂದ ಬಿತ್ತಿಕೊಂಡು ಬಂದಿರುವ ಸುಳ್ಳು ಸಂಗತಿಗೆ ಪೆಟ್ಟುಕೊಡುವ ಯಾವ ಬೆಳವಣಿಗೆಗಳನ್ನು ಕೂಡ ಕೋಮುವಾದಿಗಳು ಸಹಿಸಲಾರರು. ಈಗಾಗಲೆ ಬ್ರಿಟೀಷರ ಪರವಾಗಿ ಸಾವರಕರ್ ಮಾಡಿದ ಕಾರ್ಯಗಳುˌ ದೇಶ ವಿಭಜನೆಗೆ ಕಾರಣವಾಗಿದ್ದ ಜಿನ್ನಾರ ಮುಸ್ಲಿಮ್ ಲೀಗ್ ನೊಂದಿಗಿನ ಅವರ ಒಡನಾಟˌ ನೇತಾಜಿಯವರ ಅಜಾದ್ ಹಿಂದ್ ಫೌಜ್ ಗೆ ಸಾವರಕರ್ ಮಾಡಿದ ದ್ರೋಹ್ˌ ಇವೆಲ್ಲವುಗಳನ್ನು ಅನೇಕ ಜನ ವಿದ್ವಾಂಸರು ಪುಸ್ತಕ ಮತ್ತು ಅಂಕಣಗಳ ರೂಪದಲ್ಲಿ ಜನರ ಎದುರಿಗೆ ಇಟ್ಟಿದ್ದಾರೆ. ಸ್ವತಃ ಸಾವರಕರ್ ತಮ್ಮ ಚರಿತ್ರೆಯನ್ನು ಅನಾಮಿಕ ಹೆಸರಿನಲ್ಲಿ ತಾವೇ ಬರೆದುಕೊಂಡುˌ ತಮ್ಮನ್ನು ತಾವು ವೀರ್ ಎಂದು ಘೋಷಿಸಿಕೊಂಡ ಕತೆ ಕೂಡ ಈಗಾಗಲೆ ಜಗಜಾಹೀರು ಗೊಂಡಿದೆ. ಹಾಗಾಗಿ ಸಾವರಕರ್ ಮೊಮ್ಮಗನಾಗಲಿˌ ಫಡ್ನವಿಸ್ ಆಗಲಿ ರಾಹುಲ್ ಗಾಂಧಿಯವರನ್ನು ಹೆದರಿಸುವ ಕಾರ್ಯದಲ್ಲಿ ಯಶಸ್ವಿಯಾಗಲಾರರು ಎಂದು ಮಾತ್ರ ನಾನು ಇಲ್ಲಿ ಹೇಳಬಯಸುತ್ತೇನೆ.
~ಡಾ. ಜೆ ಎಸ್ ಪಾಟೀಲ.