ಮಂಗಳೂರು : ಮಂಗಳೂರಿನಲ್ಲಿ ನಡೆದ ಫಲಾನುಭವಿ ಸಮಾವೇಶದಲ್ಲಿ ಇಂದು ಭಾಗಿಯಾದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ್ದಾರೆ . ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಸರ್ಕಾರದಲ್ಲಿ ದುಡಿಮೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದೇನೆ. 22 ಕಾಯಕಗಳಿಗೆ ಕಾಯಕಯೋಜನೆ ಮಾಡಿದ್ದೇನೆ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ದುಡ್ಡೇ ದೊಡ್ಡಪ್ಪ ಅಂತಾ ಹೇಳ್ತಿದ್ರು. ಆದರೆ ಈಗ ದುಡಿಮೆಯೇ ದೊಡ್ಡಪ್ಪ ಆಗಿದೆ ಎಂದು ಹೇಳಿದರು.
ಹಿಂದಿ ಸರ್ಕಾರವು ಕೇವಲ ಭಾಷಣ ಮಾಡಿ ಜನರನ್ನು ಹಿಂದೆಯೇ ಇಟ್ಟಿದ್ದರು. ಆದರೆ ನಾವು ಭಾಷಣದ ಮೇಲೆ ನಂಬಿಕೆ ಇಟ್ಟಿಲ್ಲ. ಕಾಯಕದಲ್ಲಿ ನಂಬಿಕೆ ಇಟ್ಟಿದ್ದೇವೆ. 40 ವರ್ಷಗಳ ಕಾಲ ಹಿಂದುಳಿದ ವರ್ಗವನ್ನು ಕೆಳಗೆಯೇ ಇಟ್ಟಿದ್ದರು. ಐದು ವರ್ಷ ಬಾವಿಯಲ್ಲಿ ಇಡೋದು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಿಂದುಳಿದ ವರ್ಗದವರನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡ್ತಿದ್ರು. ಆದರೆ ನಾವು ಜೇನುಗೂಡಿಗೆ ಕೈ ಹಾಕಿದ್ದೇವೆ. ಜೇನು ನೊಣ ಕೈಗೆ ಕಡಿದರೂ ಪರವಾಗಿಲ್ಲ. ಸಿಹಿ ಹಿಂದುಳಿದ ವರ್ಗಕ್ಕೆ ಸಿಗಲಿ ಅನ್ನೋದೇ ನಮ್ಮ ಆಶಯ ಎಂದು ಬೊಮ್ಮಾಯಿ ಹೇಳಿದರು.

ನಾರಾಯಣ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರದಲ್ಲಿ ಕೆಲವರು ರಾಜಕೀಯ ಮಾಡಿದ್ದರು. ಆದರೆ ನಾವು ನಾರಾಯಣ ಅಭಿವೃದ್ಧಿ ನಿಗಮ ಹಾಗೂ ನಾರಾಯಣ ಗುರು ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದೇವೆ ಎಂದು ಮಂಗಳೂರಿನಲ್ಲಿ ನಡೆದ ಫಲಾನುಭವಿಗಳ ಭಾಷಣದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯಾದ್ಯಂತ ಕಾಂಗ್ರೆಸ್ ಹಂಚುತ್ತಿರುವ ಗ್ಯಾರಂಟಿ ಕಾರ್ಡ್ಗಳ ಬಗ್ಗೆಯೂ ಇದೇ ವೇಳೆ ಲೇವಡಿ ಮಾಡಿದ ಸಿಎಂ ಬೊಮ್ಮಾಯಿ, ಆಗದೇ ಇರೋದನ್ನು ಜನರಿಗೆ ಹೇಳಿ ನಂಬಿಸುವ ಯತ್ನ ನಡೆಯುತ್ತಿದೆ. ಜನರಿಗೆ ತುಪ್ಪದ ವಾಸನೆಯನ್ನು ತೋರಿಸುತ್ತಿದ್ದಾರೆ. ಎರಡು ಸಾವಿರ ಅನುದಾನಕ್ಕೆ ತಿಂಗಳಿಗೆ 20 ಸಾವಿರ ಕೊಡಬೇಕಾಗುತ್ತದೆ . ಈ ರೀತಿ ಹಣ ಕೊಡುತ್ತಾ ಕೂತರೆ ಎಲ್ಲಾ ಯೋಜನೆಗಳು ಬಂದ್ ಆಗುತ್ತದೆ. ಛತ್ತೀಸಗಢದಲ್ಲಿಯೂ ಇದೇ ರೀತಿ ಆಸೆ ತೋರಿಸಿದ್ದರು. ಆದರೆ ಸರ್ಕಾರ ಬಂದು ನಾಲ್ಕು ವರ್ಷ ಕಳೆದರೂ ಯಾವುದೇ ಯೋಜನೆ ಜಾರಿಗೆ ಬರಲಿಲ್ಲ. ಇವರು ವಿದ್ಯುತ್ ಕೊಡಲ್ಲ, ಹಣ ಕೊಡಲ್ಲ ಸುಮ್ಮನೇ ಜನರನ್ನು ಯಾಮಾರಿಸುತ್ತಾರೆ ಎಂದು ಹೇಳಿದರು.