ರಾಮನಗರ: ರಾಮನಗರ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದಕ್ಕೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಆಸ್ಪತ್ರೆ ಮುಂದೆಯೇ ಧಿಕ್ಕಾರ ಕೂಗಿ, ತಳ್ಳಾಟ ನಡೆಸಿ ಹೈಡ್ರಾಮ ಸೃಷ್ಠಿಸಿದರು.
ಕಾರ್ಯಕ್ರಮಕ್ಕೆ ಬೆಳಗ್ಗೆ 11.12 ರ ಸುಮಾರಿಗೆ ಟೇಪು ಕತ್ತರಿಸಲು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಗಮಿಸುತ್ತಿದಂತೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಸ್ಥಳೀಯ ಶಾಸಕಿ ಅನಿತಾಕುಮಾರಸ್ವಾಮಿ, ಎಚ್.ಡಿ.ಕುಮಾರಸ್ವಾಮಿ ಅವರು ಬರುವವರೆಗು ಕಾಯಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದರು.
ವಿರೋಧದ ನಡುವೆಯು ಸಚಿವರು ಆಸ್ಪತ್ರೆಯ ಉದ್ಘಾಟನೆಯ ಟೇಪು ಕತ್ತರಿಸಿದರು. ಇತ್ತ ಜೆಡಿಎಸ್ ಕಾರ್ಯಕರ್ತರು ಸಚಿವರ ನಡೆಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ಬರುವವರೆಗು ಜೆಡಿಎಸ್ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಧಿಕ್ಕಾರ ಕೂಗಿದರು.
ಕಾರ್ಯಕರ್ತರು, ಪೊಲೀಸರ ನಡುವೆ ಮಾತಿನ ಚಕಮಕಿ
ಸಂಸದ ಡಿ.ಕೆ.ಸುರೇಶ್ ಆಗಮಿಸುತ್ತಿದ್ದಂತೆ ಅವರ ಹಿಂದೆ ಒಂದಷ್ಟು ಕಾರ್ಯಕರ್ತರು ಆಸ್ಪತ್ರೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ತಡೆಹೊಡ್ಡಿದರು. ಹೀಗಿದ್ದರೂ, ಒಂದಷ್ಟು ಕಾರ್ಯಕರ್ತರು ಆಸ್ಪತ್ರೆ ಪ್ರವೇಶಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನಡೆಯಿತು.
ನಾವೇ ಉದ್ಘಾಟನೆಗೆ ಸೂಚಿಸಿದ್ದೆವು
ಘಟನೆ ಬಳಿಕ ಸ್ಥಳಕ್ಕೆ ಬಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಆಸ್ಪತ್ರೆಯಲ್ಲಿ ಒಂದು ಸುತ್ತು ಹಾಕಿದರು. ಆನಂತರ ವೇದಿಕೆ ಮುಂಭಾಗ ಕುಳಿತುಕೊಂಡರು. ಈ ವೇಳೆ ಕುಮಾರಸ್ವಾಮಿ ಮಾತನಾಡಿ, ನಾವು ಬರುವುದು ತಡವಾಗುತ್ತದೆ. ಹೀಗಾಗಿ ಉದ್ಘಾಟನೆ ನಡೆಸಿ ಎಂದು ಹೇಳಿದ್ದೆವು. ಆದರೆ, ನಮ್ಮ ಕಾರ್ಯಕರ್ತರಿಗೆ ಈ ವಿಚಾರ ತಿಳಿದಿರಲಿಲ್ಲ ಎಂದರು.