ಬೆಳಗಾವಿ : ನನ್ನ ಸಾವು ಬಯಸುತ್ತಿದ್ದಾರೆ, ನನಗೆ ಕೆಲವರು ಗುಂಡಿ ತೋಡುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪಂಥಕುದ್ರಿಯಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇದೆಲ್ಲ ಅವರೇ ಸೃಷ್ಟಿ ಮಾಡಿಕೊಂಡಿರುವ ಮಾತುಗಳು. ನಾವ್ಯಾರೂ ಆ ರೀತಿ ಹೇಳಿಲ್ಲ. ಪ್ರಧಾನಿಗಳು ಬದುಕಿರಲಿ, ಅವರು ಆರೋಗ್ಯವಾಗಿರಲಿ., ಅವರು ಜನಪರ ಕೆಲಸ ಮಾಡುತ್ತಿಲ್ಲ ಎಂದಷ್ಟೇ ನಾವು ಹೇಳಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪಾಪ ಯಡಿಯೂರಪ್ಪರಿಗೆ ಈ ಬಾರಿ ಬಿಜೆಪಿ ಸೋತರೆ ಸಾಕು ಎಂಬಂತಾಗಿದೆ. ಅವರಿಗೆ ಒಳಗೊಳಗೆ ಕುದಿಯುತ್ತಿದೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಅಲ್ಲ. ಬಿರುಗಾಳಿ ಬೀಸುತ್ತಿದೆ. ಕಾಂಗ್ರೆಸ್ನ ಬಿರುಗಾಳಿಗೆ ಬಿಜೆಪಿ ಹಾರಿ ಹೋಗಲಿದೆ ಎಂದು ಹೇಳಿದರು. ಕಾಂಗ್ರೆಸ್ ಗೆಲ್ಲೋಕೆ ಬಿಡಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಅವನೊಬ್ಬ ಹುಂಬ . ರಮೇಶ್ ಮಾತಿಗೆ ಕಿಮತ್ತು ಕೊಡೋದೇ ಬೇಡ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಇದೇ ವೇಳೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮುರುಳಿ ಮನೋಹರ್, ಎಲ್. ಕೆ ಅಡ್ವಾಣಿಯನ್ನು ಸೈಡ್ಲೈನ್ ಮಾಡಿದ್ಯಾರು..? ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕಿತ್ತು ಬಿಸಾಡಿದ್ದು ಯಾರು..? ಇದೇ ಮೋದಿ , ಅಮಿತ್ ಶಾ ಈ ಎಲ್ಲಾ ಕೆಲಸಗಳನ್ನು ಮಾಡಿ ಈಗ ನಾಟಕ ಮಾಡುತ್ತಿದ್ದೀರಾ..? ಇವರೆಲ್ಲ ಬಹಳ ಚೆನ್ನಾಗಿ ನಾಟಕ ಮಾಡ್ತಾರೆ . ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದು ರೋಡ್ ಶೋ ಮಾಡೋರು ಇವರು. ಪ್ರವಾಹ ಬಂದಾಗ ರಾಜ್ಯಕ್ಕೆ ಬರಲಿಲ್ಲ, ಆಕ್ಸಿಜನ್ ಕೇಳಿದಾಗ ಕೊಡಲಿಲ್ಲ. ಬೆಡ್ಗಳನ್ನು ಪೂರೈಸಲಿಲ್ಲ. ರೈತರು ಸತ್ತಾಗ ರಾಜ್ಯದ ಕಡೆ ಮುಖ ಹಾಕಲಿಲ್ಲ. ಈಗ ಚುನಾವಣೆ ಬಂದಿದೆ ಅಂತಾ ರಾಜ್ಯಕ್ಕೆ ಬಂದು ವಾರಕ್ಕೊಂದು ರೋಡ್ ಶೋ ಮಾಡ್ತಾರೆ. ಇಂಥವರು ಇರಬೇಕಾ..? ಎಂದು ಪ್ರಶ್ನೆ ಮಾಡಿದ್ದಾರೆ .
ರಾಜ್ಯದ ಹೆಣ್ಣು ಮಕ್ಕಳು ಬೆಲೆ ಏರಿಕೆಯಿಂದ ಹೈರಾಣಾಗಿ ಹೋಗಿದ್ದಾರೆ. ಇಂದು ಕೂಡ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಂಡಿದೆ. ರೈತರಿಗೆ ಆರು ಸಾವಿರ ರೂಪಾಯಿ ಕೊಟ್ಟಿದ್ದಾಗಿ ಪ್ರಧಾನಿ ಮೋದಿ ಹೇಳುತ್ತಾರೆ. ರೈತರ ರಕ್ತ ಹೀರಿ, ಸುಲಿಗೆ ಮಾಡುವ ನೀವು ಇಂಥಹ ಸುಳ್ಳು ಯಾಕೆ ಹೇಳುತ್ತೀರಿ..? ಮಜ್ಜಿಗೆ, ಪೆನ್ಸಿಲ್, ಗೊಬ್ಬರದ ಮೇಲೆಲ್ಲ ಟ್ಯಾಕ್ಸ್ ಹಾಕಿ ರೈತರ ರಕ್ತ ಕುಡಿಯುತ್ತಿದ್ದೀರಿ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ಕೇಂದ್ರದಿಂದ ಬರುತ್ತಿದ್ದ ಅನುದಾನವೇ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಕರ್ನಾಟಕ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ಗುಡುಗಿದರು.






