ಬೆಂಗಳೂರು : ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದ ರಾಜ್ಯ ಸರ್ಕಾರಿ ನೌಕರರು ಕೇವಲ ಅರ್ಧ ದಿನದಲ್ಲಿ ತಮ್ಮ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ 17 ಪ್ರತಿಶತ ವೇತನ ಏರಿಕೆ ಮಾಡಿ ಮಧ್ಯಂತರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. .
ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಂತರ ಆದೇಶದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರಿಗೆ ವೇತನ ಏರಿಕೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ನಾವು ಮುಷ್ಕರ ವಾಪಸ್ ಪಡೆಯುತ್ತಿದ್ದೇವೆ. ಸರ್ಕಾರಿ ನೌಕರರು ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನಾನು ಸೂಚನೆ ನೀಡುತ್ತಿದ್ದೇನೆ. ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿರುವುದಕ್ಕೆ ಕ್ಷಮೆಯಾಚಿಸುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ವೇತನ ಏರಿಕೆಗೆ ಮಧ್ಯಂತರ ಆದೇಶ ನೀಡಿದ್ದಾರೆ. ನಮ್ಮ ಭರವಸೆ ಈಡೇರಿಸದೇ ಹೋದಲ್ಲಿ ಮತ್ತೆ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರು ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ತಡರಾತ್ರಿ ಖಡಕ್ ಆದೇಶವನ್ನು ಹೊರಡಿಸಿತ್ತು. ನಾಳೆ ಅನವಶ್ಯಕ ಕಾರಣದಿಂದ ಕಚೇರಿಗೆ ಹಾಜರಾಗದೇ ಇದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿತ್ತು . ಆದರೆ ಯಾವುದೇ ಬೆದರಿಕೆಗಳಿಗೆ ಮಣಿಯದ ರಾಜ್ಯ ಸರ್ಕಾರಿ ನೌಕರರು ಇಂದು ಮುಷ್ಕರ ನಡೆಸಿದ್ದಾರೆ. ಕೊನೆಗೂ ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸಿಎಂ ಬಸವರಾಜ ಬೊಮ್ಮಾಯಿ ಏಪ್ರಿಲ್ 1ನೇ ತಾರೀಖಿನಿಂದ ಅನ್ವಯವಾಗುವಂತೆ 17 ಪ್ರತಿಶತ ವೇತನ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.